ETV Bharat / sports

ಏಕದಿನ ವಿಶ್ವಕಪ್​: ಗಂಗೂಲಿ ಹೆಸರಿಸಿದ ಅಗ್ರ 4 ಬಲಿಷ್ಠ ತಂಡಗಳಿವು..

author img

By

Published : Jul 9, 2023, 12:29 PM IST

ವರ್ಷಾಂತ್ಯದಲ್ಲಿ ಆರಂಭವಾಗುವ ಏಕದಿನ ವಿಶ್ವಕಪ್​ನ ಅಗ್ರ ನಾಲ್ಕು ಬಲಿಷ್ಠ ತಂಡಗಳನ್ನು ಭಾರತದ ಮಾಜಿ ನಾಯಕ ಸೌರವ್​ ಗಂಗೂಲಿ ಹೆಸರಿಸಿದ್ದಾರೆ. ಅಚ್ಚರಿಯೆಂದರೆ..

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ

ನವದೆಹಲಿ: ಏಕದಿನ ವಿಶ್ವಕಪ್​ನಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಸೆಮಿಫೈನಲ್​ ತಲುಪಲಿವೆ. ಇದರಲ್ಲಿ ಭಾರತ- ಪಾಕಿಸ್ತಾನದ ನಡುವಿನ ಸೆಮೀಸ್​ ಸೆಣಸಾಟ ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನೋಡಲು ಬಯಸುವೆ!

ಇದು ಬಿಸಿಸಿಐ ಮಾಜಿ ಅಧ್ಯಕ್ಷ, ಭಾರತ ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಅವರ ಅಭಿಪ್ರಾಯ. ಅಕ್ಟೋಬರ್​ನಿಂದ ಆರಂಭವಾಗುವ ಏಕದಿನ ವಿಶ್ವಕಪ್​ಗೆ ಅಗ್ರ ನಾಲ್ಕು ತಂಡಗಳನ್ನು ಅವರು ಆಯ್ಕೆ ಮಾಡಿದ್ದಾರೆ. ಇದಲ್ಲದೇ, ಐದನೇ ತಂಡವಾಗಿ ನ್ಯೂಜಿಲ್ಯಾಂಡ್​ ಅನ್ನು ಕೂಡ ಅವರ ಹೆಸರಿಸಿದ್ದಾರೆ. ಕಿವೀಸ್​ ತಂಡವನ್ನೂ ಕಡೆಗಣಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಸೆಮಿಫೈನಲಿಸ್ಟ್​​​ ತಂಡಗಳನ್ನು ಹೆಸರಿಸುವುದು ಕಷ್ಟ. ಭಾರತ ಹೊರತುಪಡಿಸಿ ಅಗ್ರ ನಾಲ್ಕು ತಂಡಗಳನ್ನು ಊಹಿಸುವುದಾದರೆ, ಅದರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್​, ಪಾಕಿಸ್ತಾನ ಇರಲಿವೆ. ಜೊತೆಗೆ ನ್ಯೂಜಿಲ್ಯಾಂಡ್​ ಕೂಡ ಸ್ಥಾನ ಪಡೆದುಕೊಳ್ಳಬಹುದು. ಜೊತೆಗೆ ಭಾರತದ ಕ್ರಿಕೆಟ್​ ಕಾಶಿ ಈಡನ್​ ಗಾರ್ಡನ್​ನಲ್ಲಿ ಇಂಡಿಯಾ- ಪಾಕಿಸ್ತಾನದ ನಡುವಿನ ಸೆಮಿಫೈನಲ್​ ನಡೆಯುವ ನಿರೀಕ್ಷೆ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.

ರೋಹಿತ್​, ದ್ರಾವಿಡ್​ ಮೇಲೆ ಒತ್ತಡ: ಐಸಿಸಿ ಪ್ರಶಸ್ತಿ ಗೆದ್ದು ಭಾರತ 10 ವರ್ಷ ಕಳೆದಿದೆ. ಈ ಬಾರಿ ದೇಶದಲ್ಲೇ ವಿಶ್ವಕಪ್​ ನಡೆಯುತ್ತಿದೆ. ಹೀಗಾಗಿ ಮುಖ್ಯ ತರಬೇತುದಾರ ರಾಹುಲ್​ ದ್ರಾವಿಡ್​, ನಾಯಕ ರೋಹಿತ್​ ಶರ್ಮಾ ಅವರ ಮೇಲೆ ಹೆಚ್ಚು ಒತ್ತಡ ಇರುವುದು ಸಹಜ. ಮಾಜಿ ನಾಯಕ ಮಹೇಂದ್ರ ಸಿಂಗ್​ ದೋನಿ ಅವರ ನಂತರ ಪ್ರಶಸ್ತಿ ಬರ ನೀಗಿಸಲು ಶ್ರಮ ವಹಿಸಲಿದ್ದಾರೆ ಎಂದೂ ಅಭಿಪ್ರಾಯಿಸಿದ್ದಾರೆ.

ಕಳೆದ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 5 ಶತಕಗಳನ್ನು ಗಳಿಸಿದ್ದಾರೆ. ಅದೇ ನಿರೀಕ್ಷೆ ಈ ಬಾರಿಯೂ ಇದೆ. ಇದನ್ನು ಒತ್ತಡವಾಗಿ ತೆಗೆದುಕೊಳ್ಳಬಾರದು. ಕೋಚ್​ ರಾಹುಲ್ ದ್ರಾವಿಡ್ ಅವರು ಆಟಗಾರನಾಗಿ ಮೈದಾನದಲ್ಲಿದ್ದಾಗಲೂ ಹಲವು ಬಾರಿ ಒತ್ತಡಕ್ಕೆ ಒಳಗಾಗಿದ್ದಾರೆ. ಈ ಬಾರಿ ಅವರು ಮುಖ್ಯ ಕೋಚ್ ಆಗಿರುವುದರಿಂದ ಪ್ರಶಸ್ತಿ ಗೆಲ್ಲಿಸಿಕೊಡುವ ಹೊಣೆ ಹೊತ್ತಿದ್ದಾರೆ. ಇಬ್ಬರೂ ಇದನ್ನು ನಿಭಾಯಿಸುವ ನಿರೀಕ್ಷೆ ಇದೆ ಎಂದರು.

ರೋಹಿತ್​ ಶರ್ಮಾ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್​ ಮಾಡಿದ್ದಾರೆ. 2018 ರ ಏಷ್ಯಾ ಕಪ್​ನಲ್ಲೂ ಭಾರತವನ್ನು ಮುನ್ನಡೆಸಿದ್ದಾರೆ. ಇದು ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸಲು ನೆರವಾಗಬಹುದು. ದೇಶದ ಕ್ರಿಕೆಟ್​ ಪ್ರೇಮಿಗಳ ನಿರೀಕ್ಷೆಯನ್ನು ಇಬ್ಬರೂ ಅರ್ಥ ಮಾಡಿಕೊಂಡಿದ್ದಾರೆ ಎಂದು ಭಾವಿಸುತ್ತೇನೆ ಎಂದರು.

ವೆಸ್ಟ್​ ಇಂಡೀಸ್​ ನಿರ್ಗಮನ ಆಘಾತ: 2 ಬಾರಿಯ ಚಾಂಪಿಯನ್​ ಮತ್ತು ದೈತ್ಯ ಆಟಗಾರರನ್ನು ಹೊಂದಿರುವ ವೆಸ್ಟ್​ ಇಂಡೀಸ್​ ತಂಡ ವಿಶ್ವಕಪ್​ ಅರ್ಹತಾ ಅಭಿಯಾನದಿಂದಲೇ ಹೊರಬಿದ್ದಿದ್ದು ಆಘಾತಕಾರಿಯಾಗಿದೆ. ಬರಿಯ ಚುಟುಕು ಕ್ರಿಕೆಟ್​ಗೆ ಸೀಮಿತವಾಗದೇ ತಂಡ ಏಕದಿನ, ಟೆಸ್ಟ್​ನಂತಹ ಕ್ರಿಕೆಟ್​ಗೂ ಸಿದ್ಧವಾಗಬೇಕು. ಆಟಗಾರರು ಟಿ20 ಕ್ರಿಕೆಟ್​ ಕಡೆ ಹೆಚ್ಚಿನ ಗಮನ ನೀಡಿದ್ದರಿಂದ ಅವರು ವಿಶ್ವಕಪ್​ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ನೀಗುತ್ತಾ ಐಸಿಸಿ ಕಪ್​ ಬರ?: ಭಾರತ ತಂಡ, ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ನೇತೃತ್ವದಲ್ಲಿ ದೇಶದಲ್ಲಿ 2011 ರಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್​ ಗೆಲುವು ಸಾಧಿಸಿತ್ತು. ಮರುವರ್ಷ ಚಾಂಪಿಯನ್ ​ಟ್ರೋಫಿ ಗೆದ್ದಿತ್ತು. ಇದರ ನಂತರ 10 ವರ್ಷಗಳಿಂದ ಸತತವಾಗಿ ಐಸಿಸಿ ಟ್ರೋಫಿಗಳಲ್ಲಿ ವೈಫಲ್ಯ ಕಂಡಿದೆ. ಧೋನಿ, ವಿರಾಟ್​ ಕೊಹ್ಲಿ, ರೋಹಿತ್​ ನಾಯಕತ್ವದಲ್ಲೂ ಹಿನ್ನಡೆ ಅನುಭವಿಸಿದೆ. ಕಪ್​ ಬರ ನೀಗಿಸಿಕೊಳ್ಳಲು ಮತ್ತೊಂದು ಅವಕಾಶ ಬಂದೊದಗಿದೆ. ತವರಿನಲ್ಲೇ ವಿಶ್ವಕಪ್​ ಆಯೋಜನೆಯಾಗಿದ್ದರಿಂದ 2011 ಕರಾಮತ್ತು ಈ ಬಾರಿ ನಡೆಯುತ್ತಾ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

ಇದನ್ನೂ ಓದಿ: ದುಲೀಪ್​ ಟ್ರೋಫಿ: ದಕ್ಷಿಣ-ಪಶ್ಚಿಮ ವಲಯ ಫೈನಲ್​ಗೆ, ಸತತ 2ನೇ ಬಾರಿಗೆ ಪ್ರಶಸ್ತಿಗೆ ಪೈಪೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.