ETV Bharat / sports

ಭಾರತ ವಿರುದ್ಧದ ಪಂದ್ಯದ ಹಿಂದಿನ ರಾತ್ರಿ ನಮಗೆ ನಿದ್ರೆ ಬರುತ್ತಿರಲಿಲ್ಲ: ಶಾಹೀದ್ ಅಫ್ರಿದಿ

author img

By

Published : Dec 26, 2021, 3:57 PM IST

ಪಾಕಿಸ್ತಾನ ಮತ್ತು ಭಾರತ ಕಳೆದ ತಿಂಗಳು ಮುಗಿದ ಟಿ20 ವಿಶ್ವಕಪ್​ನ ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದವು. ಭಾರತ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. ಪಾಕಿಸ್ತಾನ ಪೇಸರ್​ ಶಾಹೀನ್​ ಶಾ ಅಫ್ರಿದಿ 31 ರನ್​ಗಳಿಗೆ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು..

India vs Pakistan match
ಭಾರತ vs ಪಾಕಿಸ್ತಾನ ಪಂದ್ಯ

ಹೈದರಾಬಾದ್​(ಡೆಸ್ಕ್​) : ವಿಶ್ವ ಕ್ರಿಕೆಟ್​ನಲ್ಲಿ ಬದ್ಧ ಎದುರಾಳಿಗಳಾಗಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳೆಂದರೆ ಈ ಎರಡು ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳಲ್ಲದೆ, ಇಡೀ ವಿಶ್ವವೇ ಕಾದುಕುಳಿತಿರುತ್ತದೆ. ಅದರಲ್ಲೂ ವಿಶ್ವಕಪ್​ನಂತಹ ದೊಡ್ಡ ವೇದಿಕೆಯಲ್ಲಿ ಮುಖಾಮುಖಿ ಎಂದರೆ ಕೇಳಬೇಕೆ? ಎರಡೂ ರಾಷ್ಟ್ರಗಳ ಆಟಗಾರರು ಭಾರಿ ಒತ್ತಡದಲ್ಲಿರುತ್ತಾರೆ. ಈ ವಿಚಾರವನ್ನು ಸ್ವತಃ ಪಾಕಿಸ್ತಾನದ ಮಾಜಿ ಆಲ್​ರೌಂಡರ್​ ಶಾಹೀದ್ ಅಫ್ರಿದಿ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ಮತ್ತು ಭಾರತ ಕಳೆದ ತಿಂಗಳು ಮುಗಿದ ಟಿ20 ವಿಶ್ವಕಪ್​ನ ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದು, ಭಾರತ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. ಪಾಕಿಸ್ತಾನ ಪೇಸರ್​ ಶಾಹೀನ್​ ಶಾ ಅಫ್ರಿದಿ 31 ರನ್​ಗಳಿಗೆ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಆದರೆ, ಅವರು ಇದೇ ಮೊದಲ ಬಾರಿಗೆ ಭಾರತದೆದುರು ಆಡುತ್ತಿದ್ದರಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಹಾಗಾಗಿ, ಶಾಹೀನ್​ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ದಿಗ್ಗಜ ಶಾಹೀದ್​ ಅಫ್ರಿದಿಗೆ ಕರೆ ಮಾಡಿ ಮಾತನಾಡಿದ್ದರೆಂದು ಸ್ವತಃ ಅಫ್ರಿದಿ ಖಾಸಗಿ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಟಿ20 ವಿಶ್ವಕಪ್​ನ ಮೊದಲ ಪಂದ್ಯಕ್ಕೂ ಮುನ್ನ ಶಾಹೀನ್​ ನನಗೆ ವಿಡಿಯೋ ಕರೆ ಮಾಡಿದ್ದರು. ನಾನು ಸ್ವಲ್ಪ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ತಿಳಿಸಿದರು. ನಾವಿಬ್ಬರು 11-12 ನಿಮಿಷ ಮಾತನಾಡಿದೆವು, ನಾನು ಆತನಿಗೆ, ಆ ದೇವರು ನಿನಗೆ ಉತ್ತಮ ಪ್ರದರ್ಶನ ನೀಡಲು ಈ ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿ ಕೆಲವು ವಿಕೆಟ್​ ಪಡೆದುಕೊಂಡು ಹೀರೋ ಆಗು ಎಂದು ತಿಳಿಸಿದೆ ಎಂದು ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ನಾವೂ ಕೂಡ ನಿದ್ದೆ ಮಾಡುತ್ತಿರಲಿಲ್ಲ : ನೀವು ನನ್ನನ್ನು ಕೇಳಿದರೆ, ನಾವೆಲ್ಲಾ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ನಿದ್ದೆ ಮಾಡಲಾಗುತ್ತಿರಲಿಲ್ಲ. ಕೆಲವು ಆಟಗಾರರು ಅತ್ತಿಂದಿತ್ತ ಓಡಾಡುತ್ತಿದ್ದರೆ, ಮತ್ತೆ ಕೆಲವರು ಪಂದ್ಯಕ್ಕಾಗಿ ಕಾಯುತ್ತಾ ಕುಳಿತಿರುತ್ತಿದ್ದರು.

ವೈಯಕ್ರಿಕವಾಗಿ ನನ್ನ ಅಭಿಪ್ರಾಯವೆಂದರೆ, ಕ್ರಿಕೆಟ್ ಅಭಿಮಾನಿಗಳು ತಮ್ಮೆಲ್ಲಾ ಕೆಲಸ ಬಿಟ್ಟು ಭಾರತ-ಪಾಕಿಸ್ತಾನ ಪಂದ್ಯಕ್ಕಾಗಿ ಎದುರು ನೋಡುವ ಕಾರಣ ನಾನೂ ಕೂಡ ಅಂತಹ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದ್ದೆ ಎಂದು ಅಫ್ರಿದಿ ಹೇಳಿದ್ದಾರೆ.

ಲೀಗ್​ನಲ್ಲಿ ಸೋಲಿಲ್ಲದೆ ಪಾಕ್‌ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ, ಸೆಮಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಭಾರತ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿತ್ತು.

ಇದನ್ನೂ ಓದಿ:ದಾದಾ ಪರಂಪರೆಯ ಸೃಷ್ಟಿಕರ್ತ, ಅದನ್ನು ಯಶಸ್ವಿಯಾಗಿ ಕೊಂಡೊಯ್ದ ಧೋನಿ ಒಬ್ಬ ಅದ್ಭುತ ನಾಯಕ: ಹರ್ಭಜನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.