ETV Bharat / sports

ರೋಹಿತ್​ ಆಕ್ರಮಣಕಾರಿ ಬ್ಯಾಟಿಂಗ್​ ಪ್ರದರ್ಶನ ತಂಡಕ್ಕೆ ಉಪಯುಕ್ತ: ಬ್ಯಾಟಿಂಗ್​ ಕೋಚ್​​ ವಿಕ್ರಮ್​ ರಾಥೋರ್​

author img

By PTI

Published : Nov 6, 2023, 2:01 PM IST

ರೋಹಿತ್​ ಶರ್ಮಾ ಅವರ ಆಕ್ರಮಣಕಾರಿ ಬ್ಯಾಟಿಂಗ್​ ತಂಡಕ್ಕೆ ಹೆಚ್ಚು ಉಪಯುಕ್ತವಾಗಿದೆ ಎಂದು ಟೀಂ ಇಂಡಿಯಾ ಬ್ಯಾಟಿಂಗ್​ ಕೋಚ್ ವಿಕ್ರಮ್​ ರಾಥೋರ್​ ಅಭಿಪ್ರಾಯಪಟ್ಟಿದ್ದಾರೆ.

rathour-says-rohits-attacking-batting-approach-at-top-of-order-working-well-for-team
ರೋಹಿತ್​ ಆಕ್ರಮಣಕಾರಿ ಬ್ಯಾಟಿಂಗ್​ ತಂಡಕ್ಕೆ ಉಪಯುಕ್ತವಾಗಿದೆ : ಬ್ಯಾಟಿಂಗ್​ ಕೋಚ್​​ ವಿಕ್ರಮ್​ ರಾಥೋರ್​

ಕೋಲ್ಕತ್ತಾ: ವಿಶ್ವಕಪ್ ಕ್ರಿಕೆಟ್‌​ ಟೂರ್ನಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಈವರೆಗೆ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದು, ಸೆಮಿಫೈನಲ್ ​ಪ್ರವೇಶಿಸಿದೆ. ಪ್ರಮುಖವಾಗಿ ಬ್ಯಾಟರ್ ಮತ್ತು ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸಂಘಟಿತ ಪ್ರದರ್ಶನದ ಫಲದಿಂದ ಭಾರತ ಸತತ 8 ಗೆಲುವುಗಳನ್ನು ಸಾಧಿಸಿದೆ.

ಭಾರತದ ಬ್ಯಾಟಿಂಗ್​ ಲೈನ್​ಅಪ್​ ಉತ್ತಮ ಪ್ರದರ್ಶನ ನೀಡುತ್ತಿದೆ. ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಕೆ.ಎಲ್.ರಾಹುಲ್ ಸೇರಿದಂತೆ​ ಎಲ್ಲಾ ಅಟಗಾರರು ಉತ್ತಮ ಲಯದಲ್ಲಿದ್ದಾರೆ. ಇದರೊಂದಿಗೆ ರೋಹಿತ್​ ಶರ್ಮಾರ ಸ್ಪೋಟಕ ಬ್ಯಾಟಿಂಗ್​ ಉತ್ತಮ ರನ್​ ಗಳಿಕೆ ಮಾಡುವುದರಲ್ಲಿ ಹೆಚ್ಚು ಸಹಾಯವಾಗುತ್ತಿದೆ.

ಆರಂಭಿಕ ಆಟಗಾರ ರೋಹಿತ್ ಶರ್ಮಾರ ಆಕ್ರಮಣಕಾರಿ ಬೀಸಾಟ ತಂಡಕ್ಕೆ ಹೆಚ್ಚು ಉಪಯುಕ್ತವಾಗಿದೆ ಎಂದು ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋರ್​ ಹೇಳಿದ್ದಾರೆ. ರೋಹಿತ್​ ಈ ವಿಶ್ವಕಪ್​ನಲ್ಲಿ ಆಡಿರುವ 8 ಪಂದ್ಯಗಳಲ್ಲಿ ಒಂದು ಶತಕ, ಎರಡು ಅರ್ಧಶತಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ.

ಭಾನುವಾರ ಇಲ್ಲಿನ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ರೋಹಿತ್​ ಅತ್ಯುತ್ತಮ ಆರಂಭ ಒದಗಿಸಿದ್ದರು. 24 ಎಸೆತದಲ್ಲಿ 40 ರನ್​ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ 5 ವಿಕೆಟ್​ ನಷ್ಟಕ್ಕೆ 326 ರನ್​ ಗಳಿಸಿತ್ತು. ದಕ್ಷಿಣ ಆಫ್ರಿಕಾ ಕೇವಲ 83 ರನ್​ಗೆ ಆಲ್​ಔಟ್​ ಆಗಿದ್ದು, ಭಾರತ 243 ರನ್​ಗಳ ಪ್ರಚಂಡ ಗೆಲುವು ದಾಖಲಿಸಿತ್ತು.

ಪಂದ್ಯದಲ್ಲಿ ರೋಹಿತ್​ ಶರ್ಮಾ ಪಾತ್ರ ಮಹತ್ವದ್ದಾಗಿತ್ತು. ದ.ಆಫ್ರಿಕಾದ ಬೌಲರ್​ಗಳಾದ ಲುಂಗಿ ಎಂಗಿಡಿ ಮತ್ತು ಮಾರ್ಕೋ ಜಾನ್ಸ್​ಸೆನ್ ಅವರನ್ನು ರೋಹಿತ್​ ಬೆಂಡೆತ್ತಿದರು. ಅಬ್ಬರದ ಬ್ಯಾಟಿಂಗ್​ನಿಂದಾಗಿ ಭಾರತವು ಪವರ್​ ಪ್ಲೇಯಲ್ಲಿ ಒಂದು ವಿಕೆಟ್​ ನಷ್ಟಕ್ಕೆ 91 ರನ್​ ಗಳಿಸಿತ್ತು. ಬಳಿಕ ವಿರಾಟ್​ ಮತ್ತು ಶ್ರೇಯಸ್​ ಅಯ್ಯರ್​ ಮಧ್ಯಮ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನಡೆಸಿದರು. ಶ್ರೇಯಸ್​ ಅಯ್ಯರ್​ 87 ಎಸೆತದಲ್ಲಿ 77 ರನ್​ ಗಳಿಸಿದರೆ, ರೋಹಿತ್​ ಶರ್ಮಾ ಜೊತೆಗೂಡಿ 134 ರನ್​ಗಳ ಜೊತೆಯಾಟವಾಡಿದರು.

ಅಯ್ಯರ್​ ಯಾವಾಗಲೂ ಹೀಗೆಯೇ ಆಡುತ್ತಾರೆ. ಅವರು ತಂಡಕ್ಕಾಗಿ ಹೆಚ್ಚು ರನ್​ ಗಳಿಸಿದ್ದಾರೆ. ಒಂದೆರಡು ಪಂದ್ಯಗಳು ಅವರ ಸಾಮರ್ಥ್ಯವನ್ನು ಅಳೆಯುವುದಿಲ್ಲ. ಖಂಡಿತವಾಗಿಯೂ ಅವರು ತಂಡಕ್ಕೆ ಹೆಚ್ಚು ಕೊಡುಗೆ ನೀಡುತ್ತಾರೆ ಎಂದು ಎಂದು ರಾಥೋಡ್ ಹೇಳಿದರು. ಅಯ್ಯರ್ ಎಂಟು ಪಂದ್ಯಗಳಲ್ಲಿ 3 ಅರ್ಧಶತಕ ಗಳಿಸಿದ್ದಾರೆ.

ನಾವು ನಮ್ಮ ಕ್ರಿಕೆಟ್​ ಆಟದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಎದುರಾಳಿಗಳ ಬಗ್ಗೆ ಚಿಂತಿಸಿಲ್ಲ. ನಾವು ತಂಡವಾಗಿ ಎಲ್ಲವನ್ನೂ ಸಾಧಿಸಿದ್ದೇವೆ. ಇದು ಬದಲಾವಣೆ ಆಗದು ಎನ್ನುತ್ತಾರೆ ರಾಥೋರ್​.

ನವೆಂಬರ್​ 12ರಂದು ಭಾರತ-ನೆದರ್ಲೆಂಡ್ಸ್ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಅಂಕಪಟ್ಟಿಯಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮುಂದಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡುವ ತವಕದಲ್ಲಿದೆ.

ಇದನ್ನೂ ಓದಿ: ವಿಶ್ವಕಪ್​ : ನಾಳೆ ಆಸ್ಟ್ರೇಲಿಯಾ - ಅಫ್ಘಾನ್​ ಪಂದ್ಯ; ಸೆಮೀಸ್​ಗೆ ಲಗ್ಗೆ ಇಡಲು ಪೈಪೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.