ETV Bharat / sports

ಭಾರತ ತಂಡದಲ್ಲಿ ವಿಶ್ವ ದರ್ಜೆಯ ಆಟಗಾರರಿದ್ದಾರೆ, ಯಾವುದೇ ಬೌಲರ್‌ಗೂ ತಮ್ಮದೇ ಯೋಜನೆ ಸಿದ್ಧಪಡಿಸಿರುತ್ತಾರೆ: ಟಿಮ್​ ಸೌಥಿ

author img

By ETV Bharat Karnataka Team

Published : Aug 22, 2023, 4:20 PM IST

ಭಾರತ ಕ್ರಿಕೆಟ್‌ ತಂಡದ ವಿಶ್ವ ದರ್ಜೆಯ ಆಟಗಾರರು ಯಾವುದೇ ಬೌಲರ್​ಗೆ ತಮ್ಮದೇ ಆದ ಯೋಜನೆ ಸಿದ್ಧಪಡಿಸಿರುತ್ತಾರೆ ಎಂದು ಟಿಮ್​ ಸೌಥಿ ಅಭಿಪ್ರಾಯಪಟ್ಟಿದ್ದಾರೆ.

Tim Southee
Tim Southee

ಮುಂಬೈ: ವಿಶ್ವಕಪ್ ಎದುರಿಸುವ ಮೊದಲು ಸಾಧ್ಯವಾದಷ್ಟು ಏಕದಿನ ಪಂದ್ಯಗಳನ್ನು ಆಡುವುದು ಉತ್ತಮ. ಏಷ್ಯಾಕಪ್ ನಮ್ಮ ಮುಂದಿದೆ. ಇದು ಭಾರತ ಹಾಗೂ ಏಷ್ಯಾ ರಾಷ್ಟ್ರಗಳ ಇತರ ತಂಡಗಳಿಗೆ ಸಹಕಾರಿಯಾಗಲಿದೆ. ಏಕದಿನ ವಿಶ್ವಕಪ್‌ ಹಿನ್ನೆಲೆಯಲ್ಲಿ ಭಾರತಕ್ಕೆ ಈ ಪಂದ್ಯಗಳು ಇನ್ನಷ್ಟು ಬೆಂಬಲ ನೀಡಲಿವೆ. ಏಕೆಂದರೆ ಪಂದ್ಯ ನಡೆಯುತ್ತಿರುವ ಸ್ಥಳ ಮತ್ತು ಎದುರಾಳಿ ತಂಡಗಳೇ ಇದಕ್ಕೆ ಕಾರಣವಾಗಿರುವ ಅಂಶಗಳು ಎಂದು ನ್ಯೂಜಿಲೆಂಡ್‌ ವೇಗದ ಬೌಲರ್‌ ಟಿಮ್​ ಸೌಥಿ ಹೇಳಿದ್ದಾರೆ.

ಇದೇ ತಿಂಗಳು 30ರಿಂದ ಆರಂಭವಾಗಲಿರುವ ಏಷ್ಯಾಕಪ್​ಗೆ 18 ಸದಸ್ಯರನ್ನು ಒಳಗೊಂಡ ಭಾರತ ತಂಡವನ್ನು ನಿನ್ನೆ (ಸೋಮವಾರ) ಬಿಸಿಸಿಐ ಪ್ರಕಟಿಸಿದೆ. ಉದಯೋನ್ಮುಖ ಕ್ರಿಕೆಟಿಗ ತಿಲಕ್​ ವರ್ಮಾಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ಸಂಜು ಸ್ಯಾಮ್ಸನ್​ ಅವರನ್ನು ಸ್ಟ್ಯಾಂಡ್-ಬೈ ಆಟಗಾರನನ್ನಾಗಿ ಆಯ್ಕೆ ಮಾಡಲಾಗಿದೆ. ಉಳಿದಂತೆ, ಗಾಯದಿಂದ ಚೇತರಿಸಿಕೊಂಡ ಕೆ.ಎಲ್.ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಮರಳಿದ್ದಾರೆ.

"ಭಾರತಕ್ಕೆ ಎಡಗೈ ಬೌಲಿಂಗ್ ಎದುರಿಸುವ ಸಮಸ್ಯೆ ಇದೆ ಎಂದು ನಾನು ಭಾವಿಸುವುದಿಲ್ಲ. ಭಾರತ ತಂಡದಲ್ಲಿರುವ ವಿಶ್ವ ದರ್ಜೆಯ ಆಟಗಾರರು ಯಾವುದೇ ಬೌಲರ್​ಗಾದರೂ ತಮ್ಮದೇ ರೀತಿಯ ಯೋಜನೆ ಸಿದ್ಧಪಡಿಸಿರುತ್ತಾರೆ" ಎಂದು ತಿಳಿಸಿದರು.

"ಕೇನ್ ವಿಲಿಯಮ್ಸನ್​ ವಿಶ್ವಕಪ್‌ ವೇಳೆಗೆ ತಂಡ ಸೇರಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರು ತಂಡದ ಭಾಗವಾಗಿರಬೇಕು ಎಂಬುದು ನಮ್ಮ ಅಪೇಕ್ಷೆ. ಒಂದು ವೇಳೆ ಸಾಧ್ಯವಾಗದೇ ಇದ್ದಲ್ಲಿ ಹೊಸಬರಿಗೆ ಅವಕಾಶ ನೀಡಬೇಕಾಗುತ್ತದೆ" ಎಂದರು.

ಐಪಿಎಲ್​ನಿಂದಾಗಿ ಪಿಚ್​ ಬಗ್ಗೆ ಅರಿವು: ಐಪಿಎಲ್​ನಲ್ಲಿ ವಿವಿಧ ದೇಶಗಳ ಆಟಗಾರರು ಪ್ರತಿನಿಧಿಸುವುದರಿಂದ ಭಾರತದ ಪಿಚ್​ಗಳ ಬಗ್ಗೆ ಅರಿವಿರುತ್ತದೆ. ಈ ವರ್ಷದ ಐಪಿಎಲ್​ನಲ್ಲಿ ನ್ಯೂಜಿಲೆಂಡ್​ನ ಕೆಲ ಆಟಗಾರರು ಭಾಗವಹಿಸಿದ್ದರು. ಅವರಿಗೆ ಮೈದಾನಗಳ ಬಗ್ಗೆ ಗೊತ್ತಿದೆ. ಇದು ತಂಡಕ್ಕೆ ಸಹಕಾರಿಯಾಗಲಿದೆ ಎಂದು ಸೌಥಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ತಿಲಕ್ ವರ್ಮಾ ಭಾರತದ ಭರವಸೆಯ ಕ್ರಿಕೆಟ್‌ ಪ್ರತಿಭೆ; ಏಷ್ಯಾಕಪ್​ ಅವರಿಗೆ ದೊಡ್ಡ ಅವಕಾಶ: ಅಜಿತ್​ ಅಗರ್ಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.