ETV Bharat / sports

ಮೈದಾನದಲ್ಲಿ ಮತ್ತೆ ಕಾದಾಡಿದ ಕಿಂಗ್​ ಕೊಹ್ಲಿ- ಗಂಭೀರ್​: ನೋವಿನಲ್ಲೂ ಬ್ಯಾಟ್​ ಮಾಡಿದ ರಾಹುಲ್​

author img

By

Published : May 2, 2023, 8:02 AM IST

Updated : May 2, 2023, 9:08 AM IST

ನಿನ್ನೆ ರಾತ್ರಿ ನಡೆದ ಲಖನೌ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಸಾಧಿಸಿತು. ಪಂದ್ಯ ಮುಗಿದ ಬಳಿಕ ಹಲವು ಅಹಿತಕರ ಘಟನೆಗಳು ನಡೆದವು. ಲಖನೌ ಮೆಂಟರ್​ ಗೌತಮ್​ ಗಂಭೀರ್​ ಮತ್ತು ವಿರಾಟ್​ ಕೊಹ್ಲಿ ಮಧ್ಯೆ ವಾಗ್ವಾದ ನಡೆಯಿತು.

kohli-gambhir-fight
ಮೈದಾನದಲ್ಲಿ ಮತ್ತೆ ಕಾದಾಡಿದ ಕಿಂಗ್​ ಕೊಹ್ಲಿ- ಗಂಭೀರ್​

ಲಖನೌ: ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಮತ್ತು ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದೆ. ನಿನ್ನೆ ರಾತ್ರಿ ಲಖನೌ ಎದುರು ಆರ್​ಸಿಬಿ 18 ರನ್​ಗಳ ಗೆಲುವು ಸಾಧಿಸಿದ ನಂತರ ಹಸ್ತಲಾಘವದ ವೇಳೆ ಆಟಗಾರರು ಮುಖಾಮುಖಿಯಾದರು. ಈ ವೇಳೆ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದು, ಪಂದ್ಯದ ಶೇ.100 ರಷ್ಟು ದಂಡ ವಿಧಿಸಲಾಗಿದೆ.

ಪಂದ್ಯದ ವೇಳೆ ಲಖನೌ ಬೌಲರ್​ ನವೀನ್​ ಉಲ್​ ಹಕ್​ ನಡೆಗೆ ಕೋಪಗೊಂಡಿದ್ದ ವಿರಾಟ್​ ಕೊಹ್ಲಿ ಮೈದಾನದಲ್ಲೇ ಸಿಡಿಮಿಡಿಗೊಂಡಿದ್ದರು. ಬೌಂಡರಿಯಲ್ಲಿ ಕೃನಾಲ್​ ಪಾಂಡ್ಯ ಕ್ಯಾಚ್​ ಪಡೆದು ಮೂಗಿನ ಮೇಲೆ ಬೆರಳಿಟ್ಟು ಸುಮ್ಮನಿರುವಂತೆ ಸನ್ಹೆ ಮಾಡಿದ್ದರು. ಇದೆಲ್ಲವೂ ಎಲ್​ಎಸ್​ಜಿ ಮೆಂಟರ್​ ಆಗಿರುವ ಗೌತಮ್​ ಗಂಭೀರ್​ಗೆ ಅಸಮಾಧಾನ ತಂದಿತ್ತು. ಪಂದ್ಯ ಮುಗಿದ ಹಸ್ತಲಾಘವದ ವೇಳೆ ಇದು ಸ್ಫೋಟಗೊಂಡಿತು.

ನವೀನ್​ ಉಲ್​ ಹಕ್​ ಮತ್ತೊಮ್ಮೆ ವಿರಾಟ್​ ಜೊತೆ ವಾಗ್ವಾದಕ್ಕಿಳಿದರು. ಬಳಿಕ ವೆಸ್ಟ್​ ಇಂಡೀಸ್​ನ ಕೈಲ್​ ಮಿಲ್ಸ್​ ಜೊತೆ ಕೊಹ್ಲಿ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಗಂಭೀರ್​ ಮಿಲ್ಸ್​ರನ್ನು ಕರೆದೊಯ್ದರು. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ಆರಂಭಗೊಂಡಿತು.

ಪರಸ್ಪರ ಬೈದಾಡಿಕೊಳ್ಳುತ್ತಾ ಆಕ್ರೋಶದಲ್ಲಿ ಹತ್ತಿರಕ್ಕೆ ಬಂದರು. ಉಭಯ ತಂಡದ ಆಟಗಾರರು ಮಧ್ಯಪ್ರವೇಶಿಸಿ ಸಮಾಧಾನಪಡಿಸಲು ಯತ್ನಿಸಿದರು. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಜಗಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೊಹ್ಲಿ ಸನ್ಹೆ ಮೂಲಕ ತಿರುಗೇಟು: ಏಪ್ರಿಲ್​ 10 ರಂದು ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಲಖನೌ ವಿರುದ್ಧ ಆರ್​​ಸಿಬಿ ಸೋಲು ಕಂಡಿತ್ತು. ಪಂದ್ಯ ಮುಗಿದರೂ ಅಭಿಮಾನಿಗಳು ತಂಡವನ್ನು ಹುರಿದುಂಬಿಸುತ್ತಿದ್ದರು. ಇದು ಗಂಭೀರ್​ಗೆ ಕೋಪ ತರಿಸಿತ್ತು. ಪ್ರೇಕ್ಷರತ್ತ ತಿರುಗಿ ಬಾಯಿ ಮುಚ್ಚಿಕೊಂಡಿರುವಂತೆ ಸನ್ಹೆ ಮಾಡಿದ್ದರು. 1 ವಿಕೆಟ್​ ಗೆಲುವಿನ ಬಳಿಕ ಅತಿಯಾಗಿ ಸಂಭ್ರಮ ಕೂಡ ಮಾಡಿತ್ತು.

ಇದಕ್ಕೆ ಪ್ರತ್ಯುತ್ತರವಾಗಿ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ಲಖನೌ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ಸನ್ಹೆ ಮಾಡಿದ್ದರು. ಅಲ್ಲದೇ, ಆರ್​ಸಿಬಿ ಅಭಿಮಾನಿಗಳಿಗೆ ಸುಮ್ಮನಿರಬೇಡಿ ಎಂದು ಟೀಶರ್ಟ್​ ಮೇಲಿದ್ದ ಲೋಗೋ ತೋರಿಸಿ, ಸಂಭ್ರಮಿಸಲು ಸೂಚಿಸಿದ್ದರು.

ಶೇ 100ರಷ್ಟು ದಂಡ: ಮೈದಾನದಲ್ಲೇ ಕಿತ್ತಾಡಿಕೊಂಡು ಐಪಿಎಲ್​ನ ನೀತಿ ಸಂಹಿತೆ ಉಲ್ಲಂಘಿಸಿದ ಗಂಭೀರ್​ ಮತ್ತು ಕೊಹ್ಲಿ ಪಂದ್ಯದ ಶೇ.100 ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್‌ನ ನೀತಿ ಸಂಹಿತೆಯ ಲೆವೆಲ್ 2 ಅಪರಾಧದಡಿ ಆಟಗಾರರಿಗೆ ದಂಡ ಹಾಕಲಾಗಿದೆ. ಇದನ್ನು ಇಬ್ಬರೂ ಆಟಗಾರರು ಒಪ್ಪಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ನವೀನ್ ಉಲ್ ಹಕ್​ಗೂ ಪಂದ್ಯದ ಶುಲ್ಕದ ಶೇ.50 ರಷ್ಟು ದಂಡ ವಿಧಿಸಲಾಗಿದೆ.

ಗಾಯಗೊಂಡರೂ ಬ್ಯಾಟ್​ ಬೀಸಿದ ರಾಹುಲ್​: ಲಖನೌ ತಂಡದ ನಾಯಕ ಕೆ.ಎಲ್.ರಾಹುಲ್​ ಗಾಯಗೊಂಡರೂ ಕೊನೆಯಲ್ಲಿ ಬ್ಯಾಟಿಂಗ್​ ಮಾಡಿ ಗಮನ ಸೆಳೆದರು. ಮಾರ್ಕಸ್ ಸ್ಟೋಯಿನಿಸ್ ಎಸೆದ ಇನಿಂಗ್ಸ್​ನ 2ನೇ ಓವರ್​ನಲ್ಲಿ ಫಾಫ್ ಡುಪ್ಲೆಸಿಸ್ ಬೌಂಡರಿ ಬಾರಿಸುವ ಯತ್ನ ಮಾಡಿದ್ದರು. ಚೆಂಡನ್ನು ತಡೆಯಲು ಓಡುವ ವೇಳೆ ರಾಹುಲ್ ಕಾಲು ನೋವಿನಿಂದ ಹಠಾತ್ ಕುಸಿತಬಿದ್ದರು.

ತೀವ್ರ ನೋವಿನಿಂದ ಒದ್ದಾಡಿದ ರಾಹುಲ್​ರನ್ನು ಫಿಸಿಯೋಗಳು ಮೈದಾನದಿಂದ ಕರೆದೊಯ್ದರು. ಇದರಿಂದ ಕೃನಾಲ್​ ಪಾಂಡ್ಯ ತಂಡವನ್ನು ಮುನ್ನಡೆಸಿದರು. ತಂಡ ಸೋಲುವ ಹಂತವಿದ್ದರೂ, ಇನಿಂಗ್ಸ್​ನ ಕೊನೆಯ 9 ಎಸೆತಗಳಿರುವಾಗ ನೋವಿನ ನಡುವೆಯೂ ತಂಡವನ್ನು ಗೆಲ್ಲಿಸಲು ಬ್ಯಾಟಿಂಗ್​ಗೆ ಇಳಿದ ಕೆಎಲ್ ರಾಹುಲ್ ಅವರ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: IPL 2023 : 108 ರನ್​ಗೆ ಲಖನೌ ಆಲೌಟ್​... ಆರ್​ಸಿಬಿಗೆ ಶರಣಾದ ರಾಹುಲ್​ ಪಡೆ

Last Updated :May 2, 2023, 9:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.