IPL-2021: KKR ವಿರುದ್ಧ ಸೋತು ಹೊರಬಿದ್ದ RCB... ಮತ್ತೆ ಭಗ್ನಗೊಂಡ ಕಪ್​ ಗೆಲ್ಲುವ ಕನಸು

author img

By

Published : Oct 11, 2021, 11:20 PM IST

Updated : Oct 12, 2021, 12:51 AM IST

ipl-2021-kolkata-won-by-4-wickets-in-eliminator-bangalore-knocked-out
IPL 2021: KKR ವಿರುದ್ಧ 4 ವಿಕೆಟ್​ಗಳ ಸೋಲು... ಐಪಿಎಲ್​ನಿಂದ ಹೊರಬಿದ್ದ RCB ()

ಎಲಿಮಿನೇಟರ್​ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಸೋಲನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್​ನಿಂದ ಹೊರಬಿದ್ದಿದೆ. ಐಪಿಎಲ್​ನ 14ನೇ ಆವೃತ್ತಿಯಲ್ಲೂ ಕೂಡ ಆರ್​ಸಿಬಿ ಕಪ್​ ಗೆಲ್ಲಲಿದೆ ಎಂಬ ಅಭಿಮಾನಿಗಳ ಆಸೆ ಈಡೇರಲಿಲ್ಲ. ವಿರಾಟ್​ ಕೊಹ್ಲಿ ಸೋಲಿನೊಂದಿಗೆ, ಕಪ್​ ಗೆಲ್ಲದೆ ಐಪಿಎಲ್​ ನಾಯಕತ್ವದಿಂದ ನಿರ್ಗಮಿಸಿದಂತಾಗಿದೆ.

ಶಾರ್ಜಾ: ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 4 ವಿಕೆಟ್​ಗಳ ಜಯ ಸಾಧಿಸಿದೆ. ಈ ಸೋಲಿನೊಂದಿಗೆ 2021ರ ಐಪಿಎಲ್​ನಿಂದ ಆರ್​ಸಿಬಿ ಹೊರಬಿದ್ದಿದ್ದು, ಕಪ್​ ಗೆಲ್ಲುವ ಕನಸು ಮತ್ತೆ ಭಗ್ನಗೊಂಡಂತಾಗಿದೆ.

14ನೇ ಐಪಿಎಲ್​ನ ಎರಡನೇ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ಸುನಿಲ್ ನರೈನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 138 ರನ್​ಗಳಿಸಿತ್ತು. ಈ ಗುರಿಯನ್ನು ಕೋಲ್ಕತ್ತಾ 6 ವಿಕೆಟ್​ ನಷ್ಟಕ್ಕೆ 19.4ನೇ ಓವರ್​ನಲ್ಲಿ ತಲುಪುವಲ್ಲಿ ಯಶಸ್ವಿಯಾಗಿದೆ.

139 ರನ್​ ಗುರಿ ಪಡೆದ ಕೋಲ್ಕತ್ತಾಗೆ ಮೊದಲ ವಿಕೆಟ್​ಗೆ ಶುಬ್ಮನ್​ ಗಿಲ್​ (29) ಹಾಗೂ ವೆಂಕಟೇಶ್​ ಅಯ್ಯರ್​(26) 41 ರನ್​ಗಳ ಉತ್ತಮ ಆರಂಭ ನೀಡಿದರು. 29 ರನ್​ ಗಳಿಸಿದ್ದ ಗಿಲ್​ ವಿಕೆಟ್​ ಪತನದ ಬಳಿಕ ಬಂದ ರಾಹುಲ್​ ತ್ರಿಪಾಠಿ (6) ಕೆಲ ಹೊತ್ತಲ್ಲೇ ಪೆವಿಲಿಯನ್​ಗೆ ಮರಳಿದರು. ನಂತರ ಐಯ್ಯರ್​ ಕೂಡ ಹರ್ಷಲ್​ ಪಟೇಲ್​ಗೆ ವಿಕೆಟ್​ ಒಪ್ಪಿಸಿದರು. ಆಗ ಕೋಲ್ಕತ್ತಾ ಮೊತ್ತ 3 ವಿಕೆಟ್​ಗೆ 79 ರನ್​ ಆಗಿತ್ತು.

ಆರ್​​ಸಿಬಿಗೆ ಮುಳುವಾದ ನರೈನ್​:

ಐಯ್ಯರ್​ ಬಳಿಕ ಕ್ರೀಸ್​ಗೆ ಬಂದ ನರೈನ್​, ಡೇನಿಯಲ್ ಕ್ರಿಶ್ಚಿಯನ್​ ಎಸೆದ ಪಂದ್ಯದ 11ನೇ ಓವರ್​ನಲ್ಲಿ 3 ಸಿಕ್ಸರ್​ ಬಾರಿಸಿ ಕೋಲ್ಕತ್ತಾ ಗೆಲುವನ್ನು ಸುಲಭಗೊಳಿಸಿದರು. ನರೈನ್​ 15 ಎಸೆತಗಳಲ್ಲಿ 26 ರನ್​ ಬಾರಿಸಿ ಔಟ್​ ಆದರು. ಇದಕ್ಕೂ ಮುನ್ನ ನರೈನ್​ಗೆ ಉತ್ತಮ ಸಾಥ್​ ನೀಡಿದ ನಿತೀಶ್​ ರಾಣಾ 23 ರನ್​ ಪೇರಿಸಿ ಚಹಲ್​ ಬೌಲಿಂಗ್​ನಲ್ಲಿ ವಿಲ್ಲಿಯರ್ಸ್​ಗೆ ಕ್ಯಾಚ್​ ನೀಡಿ ಹೊರನಡೆದರು.

ಬಳಿಕ ಒಂದು ಬೌಂಡರಿ ಸಹಿತ 10 ರನ್​ ಬಾರಿಸಿದ್ದ ಕಾರ್ತಿಕ್​ರನ್ನು ಸಿರಾಜ್​ ಔಟ್​ ಮಾಡಿದರಾದರೂ ಅದಾಗಲೇ ಕೋಲ್ಕತ್ತಾ ಗೆಲುವಿನ ಸಹಿಹ ಬಂದಿತ್ತು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದ ಮೋರ್ಗನ್​ 5 ಹಾಗೂ ಅಂತಿಮ ಓವರ್​ನಲ್ಲಿ ಬೌಂಡರಿ ಬಾರಿಸಿದ ಶಕಿಬ್​ ಉಲ್​ ಹಸನ್ 9 ರನ್​ ಬಾರಿಸಿ ಅಜೇಯರಾಗುಳಿದರು. 19.4ನೇ ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು ಕೆಕೆಆರ್​ ಗೆಲುವಿನ ದಡ ಸೇರಿತು.

ಆರ್​ಸಿಬಿ ಪರ ಸಿರಾಜ್​, ಹರ್ಷಲ್​ ಪಟೇಲ್​, ಚಹಲ್​ ತಲಾ 2 ವಿಕೆಟ್​ ಪಡೆದರು. ಕ್ರಿಶ್ಚಿಯನ್​ ಕೇವಲ 1.4 ಓವರ್​ಗಳಲ್ಲಿ 29 ರನ್​ ನೀಡಿ ದುಬಾರಿಯಾದರು.

ಟಾಸ್​ ಗೆದ್ದು ಬ್ಯಾಟಿಂಗ್:

ಇದಕ್ಕೂ ಮುನ್ನ ಟಾಸ್​ ಗೆದ್ದರೂ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ದೇವದತ್​ ಪಡಿಕ್ಕಲ್ ಮತ್ತು ಕೊಹ್ಲಿ ಮೊದಲ ವಿಕೆಟ್​ಗೆ 49 ರನ್​ಗಳ ಉತ್ತಮ ಜೊತೆಯಾಟ ನೀಡಿದರು. ಆದರೆ, ಪಡಿಕ್ಕಲ್ 21 ರನ್​ಗಳಿಸಿ ಔಟಾಗುತ್ತಿದ್ದಂತೆ ಕೆಕೆಆರ್​ ಹಿಡಿತ ಸಾಧಿಸಿತು.

ಕಳೆದ ಪಂದ್ಯದ ಹೀರೋ ಶ್ರೀಕರ್ ಭರತ್​ 16 ಎಸೆತಗಳನ್ನು ಎದುರಿಸಿ ಒಂದೂ ಬೌಂಡರಿಯಿಲ್ಲದೇ ಕೇವಲ 9 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ 33 ಎಸೆತಗಳಲ್ಲಿ 39 ರನ್​ಗಳಿಸಿದ್ದ ಕೊಹ್ಲಿ ನರೈನ್ ಓವರ್​ನಲ್ಲಿ ಕ್ಲೀನ್ ಬೌಲ್ಡ್ ಆದರು. ಕೊಹ್ಲಿ ಔಟಾಗುತ್ತಿದ್ದಂತೆ ಆರ್​ಸಿಬಿ ಪತನದ ಹಾದಿ ಹಿಡಿಯಿತು.

ನಂತರ ಬಂದ ಎಬಿ ಡಿ ವಿಲಿಯರ್ಸ್ ಕೇವಲ 11 ರನ್​ಗಳಿಸಿ ನರೈನ್​ಗೆ ವಿಕೆಟ್ ಒಪ್ಪಿಸುವ ಮೂಲಕ ಎಲಿಮಿನೇಟರ್​ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದರು. ಇದುವರೆಗೆ ಆರ್​ಸಿಬಿಯ ಆಪತ್ಬಾಂಧವನಾಗಿದ್ದ ಗ್ಲೇನ್ ಮ್ಯಾಕ್ಸ್​ವೆಲ್(15) ಕೂಡ ನರೈನ್ ಓವರ್​ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್​ ಒಪ್ಪಿಸಿದರು. ಬಳಿಕ ಡೇನಿಯಲ್ ಕ್ರಿಶ್ಚಿಯನ್ 9, ಮೊಹಮ್ಮದ್ ಶಹ್ಬಾಜ್ 13, ಹರ್ಷಲ್ ಪಟೇಲ್ 8 ರನ್​ಗಳಿಸಿದರು.

ಸುನಿಲ್ ನರೈನ್ 21 ರನ್​ ನೀಡಿ 4 ವಿಕೆಟ್ ಪಡೆದರೆ, ಲಾಕಿ ಫರ್ಗುಸನ್ 30ಕ್ಕೆ 2 ವಿಕೆಟ್ ಪಡೆದು ಮಿಂಚಿದರು. ಈ ಗೆಲುವಿನ ಮೂಲಕ ಕೆಕೆಆರ್​ ಮುಂದಿನ ಹಂತ ತಲುಪಿದ್ದು, ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆದ್ದವರು ಅ.15ರಂದು ದುಬೈನಲ್ಲಿ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಕಪ್​ಗಾಗಿ ಕಾದಾಡಲಿದ್ದಾರೆ.

Last Updated :Oct 12, 2021, 12:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.