ETV Bharat / sports

IND vs NZ 1st Test: ಭಾರತದ ಗೆಲುವಿಗೆ ತಡೆಯೊಡ್ಡಿದ ಭಾರತ ಮೂಲದ ಕ್ರಿಕೆಟಿಗರು

author img

By

Published : Nov 29, 2021, 6:01 PM IST

ಅಶ್ವಿನ್, ಜಡೇಜಾ ಬೌಲಿಂಗ್‌ ದಾಳಿಗೆ ದಿಢೀರ್ ಕುಸಿದಿದ್ದ ನ್ಯೂಜಿಲ್ಯಾಂಡ್​ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ರಚಿನ್ ರವೀಂದ್ರ 91 ಎಸೆತಗಳಲ್ಲಿ ಅಜೇಯ 18 ರನ್​ ಹಾಗೂ ಅಜಾಜ್ ಪಟೇಲ್​ 23 ಎಸೆತಗಳಲ್ಲಿ ಅಜೇಯ 2 ರನ್​ಗಳಿಸಿ ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.

Indian-born cricketers
ರಚಿನ್ ರವೀಂದ್ರ ಅಜಾಜ್ ಪಟೇಲ್

ಕಾನ್ಪುರ: ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಮೊದಲ ಟೆಸ್ಟ್​ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಭಾರತೀಯ ಮೂಲದ ರಚಿನ್ ರವೀಂದ್ರ ಮತ್ತು ಅಜಾಜ್ ಪಟೇಲ್​ ಕೊನೆಯ ವಿಕೆಟ್​ಗೆ​ ಆಡಿದ ಅದ್ಭುತ ಜೊತೆಯಾಟ ಭಾರತದ ಗೆಲುವಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿತು.

ಕರ್ನಾಟಕ ಮೂಲದ ದಂಪತಿಯ ಪುತ್ರ ರಚಿನ್​ ರವೀಂದ್ರ ಮತ್ತು ಮಹಾರಾಷ್ಟ್ರದಲ್ಲಿ ಜನಿಸಿ ನ್ಯೂಜಿಲ್ಯಾಂಡ್​​ನಲ್ಲಿ ನೆಲೆಸಿರುವ ಅಜಾಜ್ ಪಟೇಲ್ ಕೊನೆಯ ವಿಕೆಟ್​ಗೆ 8.4 ಓವರ್​ ಬ್ಯಾಟಿಂಗ್ ಮಾಡಿ ಅತ್ತ ನ್ಯೂಜಿಲ್ಯಾಂಡ್​ ತಂಡದ ಸೋಲು ತಪ್ಪಿಸಿದರೆ ಇತ್ತ ಭಾರತದ ಗೆಲುವಿಗೆ ತಣ್ಣೀರೆರಚಿದರು.

ರಚಿನ್ ಯಾರು? ಆ ಹೆಸರು ಬಂದಿದ್ದು ಹೇಗೆ?

ರಚಿನ್ ತಂದೆ ರವಿ ಕೃಷ್ಣಮೂರ್ತಿ ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿದ್ದು 1990ರ ದಶಕದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದರು. ನಂತರ ನ್ಯೂಜಿಲೆಂಡ್‌ಗೆ ತೆರಳಿ ಅಲ್ಲಿಯೇ ನೆಲೆ ಕಂಡುಕೊಂಡರು. ರವಿ ಕೃಷ್ಣಮೂರ್ತಿ ಅವರು ನ್ಯೂಜಿಲ್ಯಾಂಡ್​ಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಭಾರತೀಯ ಮಾಜಿ ವೇಗಿ ಹಾಗೂ ಕನ್ನಡಿಗ ಜಾವಗಲ್ ಶ್ರೀನಾಥ್ ಜೊತೆ ಕ್ರಿಕೆಟ್ ಆಡಿದ್ದಾರೆ.

ರವಿ ಕೃಷ್ಣಮೂರ್ತಿ ಸ್ವತಃ ಕ್ರಿಕೆಟ್‌ ಪ್ರಿಯರಾಗಿದ್ದು, ಜಗತ್ತಿನ ಕ್ರಿಕೆಟ್​ ದೇವರೆಂದು ಖ್ಯಾತಿಯಾಗಿರುವ ಸಚಿನ್​ ತೆಂಡೂಲ್ಕರ್ ಅವರ ಅಭಿಮಾನಿ. ಭಾರತದ ಶ್ರೇಷ್ಠ ಕ್ರಿಕೆಟಿರಾಗಿರುವ ಕನ್ನಡಿಗ ರಾಹುಲ್​​ ದ್ರಾವಿಡ್​ ಮತ್ತು ಸಚಿನ್ ತೆಂಡೂಲ್ಕರ್​ ಅವರ ಹೆಸರು ಬಳಸಿ ತಮ್ಮ ಮಗನಿಗೆ 'ರಚಿನ್'​ ಎಂದು ನಾಮಕರಣ ಮಾಡಿದ್ದಾರೆ. ರಾಹುಲ್​ದಿಂದ 'ರ' ಅಕ್ಷರನ್ನು ಸಚಿನ್​ 'ಚಿನ್​' ಅಕ್ಷರಗಳನ್ನು ಸೇರಿಸಿಕೊಂಡಿದ್ದಾರೆ.

ಕೃಷ್ಣಮೂರ್ತಿ ಅವರು ನ್ಯೂಜಿಲೆಂಡ್‌ನಲ್ಲಿ 'ಹಟ್ ಹಾಕ್ಸ್ ಕ್ಲಬ್‌' ಎಂಬ ಕ್ರಿಕೆಟ್​ ಕ್ಲಬ್​ ಸ್ಥಾಪಿಸಿದ್ದು, ಈ ಕ್ಲಬ್‌ ಪ್ರತಿ ಬೇಸಿಗೆಯಲ್ಲಿ ನ್ಯೂಜಿಲೆಂಡ್‌ನ ಆಟಗಾರರನ್ನು ಭಾರತಕ್ಕೆ ಕರೆತಂದು ಇಲ್ಲಿ ಕೆಲವು ಪಂದ್ಯಗಳನ್ನಾಡಿಸುತ್ತದೆ. ಈ ತಂಡದೊಂದಿಗೆ 2011ರಿಂದಲೂ ರಚಿನ್‌ ರವೀಂದ್ರ ಭಾರತಕ್ಕೆ ಬರುತ್ತಿದ್ದು ಅನಂತಪುರ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ಕ್ರಿಕೆಟ್‌ ಆಡಿದ್ದಾರೆ.

ಅಜಾಜ್ ಪಟೇಲ್ ತಮ್ಮ 8ನೇ ವಯಸ್ಸಿನಲ್ಲಿ ಕುಟುಂಬದೊಂದಿಗೆ ನ್ಯೂಜಿಲ್ಯಾಂಡ್​ಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ ಸೆಂಟ್ರೆಲ್ ಡಿಸ್ಟ್ರಿಕ್ಟ್​ ತಂಡದ ಪರ ದೇಶಿ ಕ್ರಿಕೆಟ್​ ಆಡಿರುವ 33 ವರ್ಷದ ಸ್ಪಿನ್ನರ್​ ಇಂದು ನ್ಯೂಜಿಲ್ಯಾಂಡ್ ತಂಡವನ್ನು ಸೋಲಿನಿಂದ ಪಾರು ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ.

ಅಶ್ವಿನ್, ಜಡೇಜಾ ದಾಳಿಗೆ ದಿಢೀರ್ ಕುಸಿದಿದ್ದ ನ್ಯೂಜಿಲ್ಯಾಂಡ್​ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ರವೀಂದ್ರ 91 ಎಸೆತಗಳಲ್ಲಿ ಅಜೇಯ 18 ರನ್​ ಹಾಗೂ ಅಜಾಜ್ ಪಟೇಲ್​ 23 ಎಸೆತಗಳಲ್ಲಿ ಅಜೇಯ 2 ರನ್​ಗಳಿಸಿ ಪಂದ್ಯವನ್ನು ಡ್ರಾ ಸಾಧಿಸಲು ನೆರವಾದರು.

ಇದಕ್ಕೂ ಮುನ್ನ, ನೈಟ್​ ವಾಚ್​ಮನ್ ಆಗಿದ್ದ ಮತ್ತೊಬ್ಬ ಬೌಲರ್​ ವಿಲ್ ಸಮರ್​ವಿಲ್​ 110 ಎಸೆತಗಳಲ್ಲಿ 36 ರನ್​ಗಳಿಸಿ ಭಾರತೀಯ ಬೌಲರ್​ಗಳನ್ನು ಕಾಡಿದ್ದರು. ಆದರೆ ಜಡೇಜಾ 40ಕ್ಕೆ4 ಮತ್ತು ಅಶ್ವಿನ್ ​35ಕ್ಕೆ 3 ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಿಸಿದ್ದರು. ಆದರೂ ಒಂದು ಕಡೆ ಮಂದ ಬೆಳಕು ಮತ್ತೊಂದು ಕಡೆ ರವೀಂದ್ರ-ಪಟೇಲ್ ಆಟ ರಹಾನೆ ಪಡೆಯ ಗೆಲುವಿಗೆ ಅಡ್ಡಿಯಾಯಿತು.

ಕಿವೀಸ್​ನ 19 ವಿಕೆಟ್​ಗಳಲ್ಲಿ 17 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದ ಭಾರತೀಯ ಬೌಲರ್​ಗಳು ಈ ಬಾಲಂಗೋಚಿಗಳ ವಿಕೆಟ್​ ಪಡೆಯುವಲ್ಲಿ ವಿಫಲರಾದರು.

ಇದನ್ನೂ ಓದಿ: ಭಾರತದ ಗೆಲುವಿಗೆ ಮಂದಬೆಳಕು ಅಡ್ಡಿ: ರೋಚಕ ಡ್ರಾನಲ್ಲಿ ಮೊದಲ ಟೆಸ್ಟ್ ಅಂತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.