ETV Bharat / sports

ವಿಶ್ವಕಪ್: ವಿಕೆಟ್​ ಕೀಪಿಂಗ್​ಗೆ ಕೆ.ಎಲ್‌.ರಾಹುಲ್ ಅಲ್ಲ! ನಯನ್ ಮೊಂಗಿಯಾ ಆಯ್ಕೆ ಯಾರು ಗೊತ್ತೇ?

author img

By ETV Bharat Karnataka Team

Published : Oct 3, 2023, 8:05 PM IST

Nayan Mongia
Nayan Mongia

Cricket World Cup 2023: ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್​ ಕೀಪರ್​ ನಯನ್ ಮೊಂಗಿಯಾ ಈಟಿವಿ ಭಾರತಕ್ಕೆ ವಿಶೇಷ ಸಂದರ್ಶನ ನೀಡಿದ್ದು, ಮುಂಬರುವ ವಿಶ್ವಕಪ್​ ಟೂರ್ನಿಯಲ್ಲಿ ಕೆ.ಎಲ್.ರಾಹುಲ್ ಅವರಿಗಿಂತ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ನೋಡ ಬಯಸುವುದಾಗಿ ಹೇಳಿದ್ದಾರೆ.

ಅಹಮದಾಬಾದ್ (ಗುಜರಾತ್​): ವಿಶ್ವಕಪ್ ಕ್ರಿಕೆಟ್ ಅಕ್ಟೋಬರ್ 5ರಂದು ಪ್ರಾರಂಭವಾಗಲಿದೆ. ಭಾರತ ಪ್ರತಿಷ್ಟಿತ ಟ್ರೋಫಿ ಗೆಲ್ಲವು ನೆಚ್ಚಿನ ತಂಡವಾಗಿದೆ. 2011ರಲ್ಲಿ ವಿಶ್ವಕಪ್​ ಗೆಲುವಿನ ಕ್ಷಣವನ್ನು ಮೆನ್ ಇನ್ ಬ್ಲೂ ಮತ್ತೆ ಮರುಕಳಿಸುತ್ತದೆ ಎಂಬುದು ಅಭಿಮಾನಿಗಳ ನಿರೀಕ್ಷೆ. ಈಗಾಗಲೇ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಸೇರ್ಪಡೆಯಾಗಿರುವ ಕೆ.ಎಲ್.ರಾಹುಲ್​ ವಿಕೆಟ್ ಕೀಪಿಂಗ್​ ಮಾಡ್ತಾರಾ ಅಥವಾ ಇಶಾನ್​ ಕಿಶನ್​ಗೆ ವಿಕೆಟ್​ ಹಿಂದಿನ ಸ್ಥಾನ ಸಿಗುತ್ತಾ ಎಂಬುದು ಸದ್ಯದ ಕುತೂಹಲ.

ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಾಹುಲ್,​ ಕೆಲವು ಪಂದ್ಯಗಳಿಗೆ ಕೀಪಿಂಗ್​ ಮಾಡಿದ್ದರು. ಕಿಶನ್​ ಅವರು ತಂಡಕ್ಕೆ ಎರಡನೇ ಕೀಪರ್ ಆಗಿ ಆಯ್ಕೆಯಾದರೂ ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಕಿಶನ್​ ಇಂತಹದ್ದೇ ಬ್ಯಾಟಿಂಗ್​ ಆರ್ಡರ್‌ ಸಮಸ್ಯೆ ಇಲ್ಲ. ಆರಂಭಿಕರಾಗಿ, ನಾಲ್ಕು, ಐದು, ಆರು ಹೀಗೇ ನಾನಾ ಕ್ರಮಾಂಕಗಳಲ್ಲಿ ಅವರು ತಂಡಕ್ಕೆ ಬ್ಯಾಟಿಂಗ್​ನಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಹೀಗಾಗಿ ಎಲ್ಲಾ ಸ್ಥಾನದಲ್ಲೂ ಆಡುವ ಅವರ ಸಾಮರ್ಥ್ಯವೇ ವಿಶ್ವಕಪ್​ ತಂಡಕ್ಕೆ ಸೇರಿಸಿಕೊಳ್ಳಲು ಕಾರಣವಾಗಿದೆ.

ಭಾರತದ ಮಾಜಿ ವಿಕೆಟ್ ಕೀಪರ್ ನಯನ್ ಮೊಂಗಿಯಾ ಅವರು ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಆಡಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೆ, ರೋಹಿತ್ ಶರ್ಮಾ ನೇತೃತ್ವದ ತಂಡವು ವಿಶ್ವಕಪ್​ನ ಪ್ರತಿ ಹಂತದಲ್ಲೂ ಒತ್ತಡ ನಿಭಾಯಿಸಲು ಪ್ರಯತ್ನಿಸಬೇಕು. ನಿರೀಕ್ಷೆಗಳ ಒತ್ತಡವನ್ನು ಪಂದ್ಯಗಳಲ್ಲಿ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

ಕಿಶನ್​ ನನ್ನ ಆಯ್ಕೆ: "ಭಾರತಕ್ಕೆ ಒಬ್ಬ ಸಾಮಾನ್ಯ ವಿಕೆಟ್‌ ಕೀಪರ್ ಇರಬೇಕು. ನಾನು ಈ ಪಾತ್ರಕ್ಕೆ ಇಶಾನ್ ಕಿಶನ್​ಗೆ ಆದ್ಯತೆ ನೀಡುತ್ತೇನೆ. ಏಕೆಂದರೆ, ಅದು ಬೌಲರ್‌ಗಳಿಗೆ ಆತ್ಮವಿಶ್ವಾಸ ನೀಡುತ್ತದೆ. ಇಶಾನ್ ಕಿಶನ್ ಕೂಡಾ ಗುಣಮಟ್ಟದ ಎಡಗೈ ಬ್ಯಾಟರ್. ಆದರೆ, ಇಶನ್ ಕಿಶನ್ ಮತ್ತು ಕೆ.ಎಲ್.ರಾಹುಲ್ ತಂಡಕ್ಕೆ ಉತ್ತಮ ಕೊಡುಗೆ ನೀಡುವುದಂತೂ ಖಂಡಿತಾ. ಬಿಕ್ಕಟ್ಟಿನ ಸಮಯದಲ್ಲಿ ಈ ಆಟಗಾರರು ತಂಡಕ್ಕೆ ಸಹಾಯ ಮಾಡುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೊಂಗಿಯಾ ತಿಳಿಸಿದರು.

"ಸರಣಿಯಲ್ಲಿ ಪ್ರತಿಯೊಬ್ಬರೂ ನಿರ್ಣಾಯಕ ಪಾತ್ರ ವಹಿಸುತ್ತಾರೆ. ತಂಡವು ಆಕ್ರಮಣಕಾರಿ ಬ್ಯಾಟರ್‌ಗಳು, ಆಲ್‌ರೌಂಡರ್‌ಗಳು ಮತ್ತು ಗುಣಮಟ್ಟದ ಬೌಲರ್‌ಗಳನ್ನು ಒಳಗೊಂಡಿದೆ. ಇಡೀ ವಿಶ್ವಕಪ್ ಅ​ನ್ನು ಗಮನದಲ್ಲಿಟ್ಟುಕೊಂಡು ಆಡಬಾರದು. ಪ್ರತಿ ಪಂದ್ಯವನ್ನು ಕೇಂದ್ರೀಕರಿಸಿ ಆಡಬೇಕು. ಆಗ ತಂಡಕ್ಕೆ ಒತ್ತಡಗಳು ಕಡಿಮೆ ಆಗುತ್ತವೆ. ಭಾರತ ತಮ್ಮ ತವರು ಮೈದಾನದಲ್ಲಿ ಮತ್ತು ತವರಿನ ಪ್ರೇಕ್ಷಕರ ಮುಂದೆ ಆಡುತ್ತದೆ. ಆದ್ದರಿಂದ ಈ ಅಂಶಗಳನ್ನು ಲಾಭವಾಗಿ ಬಳಸಿಕೊಳ್ಳಬೇಕು. ಈ ಬಾರಿ ಪ್ರಶಸ್ತಿ ಎತ್ತಿ ಹಿಡಿಯಲು ಮತ್ತು 2011ರ ನಂತರ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲಲು ಭಾರತ ಪ್ರಬಲ ಸ್ಪರ್ಧಿ" ಎಂದು ಅಭಿಪ್ರಾಯಪಟ್ಟರು.

ಪಾಕ್​ ವಿರುದ್ಧದ ಪಂದ್ಯ ವಿಶೇಷವಲ್ಲ: ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಮೊಂಗಿಯಾ, ಈ ಪಂದ್ಯವನ್ನು "ಯುದ್ಧ" ಎಂದು ಪರಿಗಣಿಸಬೇಡಿ. ಇತರ ಪಂದ್ಯಗಳಂತೆಯೇ ಪರಿಗಣಿಸಿ ಎಂದು ಅಭಿಮಾನಿಗಳಿಗೆ ವಿನಂತಿಸಿದರು.

"ಭಾರತ-ಪಾಕಿಸ್ತಾನ ಪಂದ್ಯ ಯಾವಾಗಲೂ ಹೆಚ್ಚು ಕೂತೂಹಲಕ್ಕೆ ಕಾರಣವಾಗುತ್ತದೆ. ಆದರೆ, ಜನರು ಇದನ್ನು ಸಾಮಾನ್ಯ ಪಂದ್ಯವಾಗಿಯೇ ನೋಡಬೇಕು. ಆಟಗಾರರು ಎರಡು ಪಂದ್ಯಗಳ ನಡುವೆ ಸಾಕಷ್ಟು ಸಮಯದ ವಿಶ್ರಾಂತಿ ಪಡೆಯುವುದು ಮುಖ್ಯ. ವಾತಾವರಣದ ಜೊತೆಗೆ ಸಾಕಷ್ಟು ಪಂದ್ಯಗಳಿಂದ ಆಟಗಾರರು ಆಯಾಸಗೊಳ್ಳುತ್ತಾರೆ. ಪಂದ್ಯಾವಳಿಯ ಅಂತಿಮ ಹಂತಕ್ಕೆ ಆಟಗಾರರಿಗೆ ಸರಿಯಾದ ವಿಶ್ರಾಂತಿ ನೀಡಿ, ಹೆಚ್ಚು ಬಳಲದಂತೆಯೂ ನೋಡಿಕೊಳ್ಳುವುದು ಮುಖ್ಯ" ಎಂದರು.

ತಂಡದ ಸಂಯೋಜನೆಯ ಬಗ್ಗೆ ಮಾತನಾಡಿದ ನಯನ್ ಮೊಂಗಿಯಾ, ಭಾರತದ ಸ್ಪಿನ್ ದಾಳಿಯನ್ನು ಶ್ಲಾಘಿಸುತ್ತಾ, ಇದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಆತಿಥೇಯ ದೇಶಕ್ಕೆ ಅಸಾಧಾರಣ ಸ್ಪಿನ್ ತ್ರಿವಳಿಗಳು. ಸ್ಪಿನ್‌ಸ್ನೇಹಿ ಪಿಚ್‌ಗಳಲ್ಲಿ ತಮ್ಮ ಎದುರಾಳಿಗಳಿಗೆ ಅವರು ಸಿಂಹಸ್ವಪ್ನರು" ಎಂದಿದ್ದಾರೆ.

ಇದನ್ನೂ ಓದಿ: ಜಾವೆಲಿನ್ ಥ್ರೋ: ಚಿನ್ನ ಗೆದ್ದ ಅನ್ನು ರಾಣಿ, ಭಾರತಕ್ಕೆ 15ನೇ ಬಂಗಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.