ಹೈದರಾಬಾದ್: ತಮ್ಮ ಮೇಲೆ ನಂಬಿಕೆಯಿಟ್ಟು, ನನ್ನಲ್ಲಿ ವಿಶ್ವಾಸ ಹೆಚ್ಚಿಸಿ ಇಲ್ಲಿಯವರೆಗೆ ಬರಲು ಕಾರಣವಾದ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ನಾಯಕ ವಿರಾಟ್ ಕೊಹ್ಲಿಗೆ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ ಎಂದು ಭಾರತ ತಂಡದ ಯುವ ವೇಗಿ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಸಿರಾಜ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಆದರೂ ತವರಿಗೆ ಮರಳದೆ ತಂದೆಯ ಕನಸಾದ ಟೆಸ್ಟ್ ಕ್ರಿಕೆಟ್ನಲ್ಲಿ ಆಡುವುದಕ್ಕಾಗಿ ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡಿದ್ದರು.
"2018ರಲ್ಲಿ ಅತ್ಯಂತ ಕೆಟ್ಟ ಪ್ರದರ್ಶನದ ಹೊರತಾಗಿಯೂ ನನ್ನನ್ನು ರೀಟೈನ್ ಮಾಡಿಕೊಂಡರು. ವಿರಾಟ್ ಭಾಯ್ ಮತ್ತು ಆರ್ಸಿಬಿಗೆ ನನ್ನ ಮೇಲೆ ಸಾಕಷ್ಟು ನಂಬಿಕೆ ಇತ್ತು. ಆರ್ಸಿಬಿ ಟೂರ್ನಿಯುದ್ದಕ್ಕೂ ನನ್ನ ಬೆನ್ನಿಗೆ ನಿಂತಿತು. ವಿರಾಟ್ ಭಾಯ್ ಸದಾ ನನಗೆ ಪ್ರೋತ್ಸಾಹ ನೀಡುತ್ತಿದ್ದರು. ನಿನ್ನಿಂದ ದೊಡ್ಡ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಿದೆ ಎಂದು ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿದ್ದರು" ಎಂದು ಹೈದರಾಬಾದ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮಾತು ಮುಂದುವರಿಸಿ, "ಆಸೀಸ್ ವಿರುದ್ಧದ ಸರಣಿಯಿಂದ ನಾನು ಮುಂದಿನ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆತ್ಮವಿಶ್ವಾಸ ತೆಗೆದುಕೊಂಡಿದ್ದೇನೆ. ಶಮಿ ಮತ್ತು ಉಮೇಶ್ ಯಾದವ್ ಹಿಂತಿರುಗಿದರೆ ಏನಾಗುತ್ತದೆ ಎಂದು ನಾನು ಯೋಚಿಸುತ್ತಿಲ್ಲ. ಟೀಮ್ ಮ್ಯಾನೇಜ್ಮೆಂಟ್ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ" ಎಂದು ಸಿರಾಜ್ ಹೇಳಿದ್ದಾರೆ.
ಸಿರಾಜ್ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಅವರು ಮೂರು ಪಂದ್ಯಗಳಿಂದ ಒಟ್ಟು 13 ವಿಕೆಟ್ ಪಡೆದು ಭಾರತದ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅದರಲ್ಲೂ ಸರಣಿ ನಿರ್ಣಾಯಕವೆನಿಸಿದ್ದ ಬ್ರಿಸ್ಬೇನ್ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಸ್ಟೀವ್ ಸ್ಮಿತ್, ಲಾಬುಶೇನ್ ಸೇರಿದಂತೆ 5 ವಿಕೆಟ್ ಪಡೆದು ಮಿಂಚಿದ್ದರು.
ಇದನ್ನು ಓದಿ:ಸಾವಿರಾರು ಜನರ ಸಮ್ಮುಖದಲ್ಲಿ ನಟರಾಜನ್ಗೆ ಸಿಕ್ತು ಭರ್ಜರಿ ಸ್ವಾಗತ: ವಿಡಿಯೋ