ಸಿಡ್ನಿ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಸರಣಿಯ 3ನೇ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡ ನಂತರ ನಾಯಕ ರಹಾನೆ ಈ ಪಂದ್ಯದಲ್ಲಿ ಡ್ರಾ ಸಾಧಿಸಿರುವುದು ಗೆಲುವು ಪಡೆದಷ್ಟೇ ಖುಷಿಯಿದೆ ಎಂದು ತಿಳಿಸಿದ್ದಾರೆ.
407 ಬೃಹತ್ ಟಾರ್ಗೆಟ್ ಬೆನ್ನತ್ತಿದ್ದ ಭಾರತ ನಾಲ್ಕನೆಯ ಇನ್ನಿಂಗ್ಸ್ನಲ್ಲಿ ದಾಖಲೆಯ 131 ಓವರ್ಗಳನ್ನು ಎದುರಿಸುವ ಮೂಲಕ 334 ರನ್ಗಳಿಸಿ ಡ್ರಾ ಸಾಧಿಸಿತು. ಈ ಪಂದ್ಯದಲ್ಲಿ ರೋಹಿತ್ 52, ಪೂಜಾರ 77, ಪಂತ್ 97 ರನ್ಗಳಿಸಿ ಕಾಂಗರೂಗಳ ದಾಳಿಯನ್ನು ಪುಡಿಗಟ್ಟಿದರೆ, ಕೊನೆಯಲ್ಲಿ ಹನುಮ ವಿಹಾರಿ ಮತ್ತು ಅಶ್ವಿನ್ ಬರೋಬ್ಬರಿ ಎರಡೂವರೆ ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ ಸೋಲಿನಿಂದ ಪಾರು ಮಾಡಿದರು.
ಪಂದ್ಯದ ನಂತರ ಮಾತನಾಡಿದ ರಹಾನೆ, ಈ ಟೆಸ್ಟ್ ಪಂದ್ಯ ಗೆದ್ದಷ್ಟೇ ಉತ್ತಮವಾಗಿತ್ತು. ನೀವು ವಿದೇಶಕ್ಕೆ ಬಂದು ಈ ರೀತಿ ಆಡುವುದು ವಿಶೇಷವಾಗಿದೆ. ಈ ಪಂದ್ಯದ ಸಂಪೂರ್ಣ ಶ್ರೇಯ ಅಶ್ವಿನ್ ಮತ್ತು ವಿಹಾರಿಗೆ ಸಲ್ಲಬೇಕು.
ಜೊತೆಗೆ ಪಂತ್, ರೋಹಿತ್ ಮತ್ತು ಪೂಜಾರ ಸೇರಿದಂತೆ ಎಲ್ಲರ ಆಟ ಉತ್ತಮವಾಗಿತ್ತು. ಆದರೆ, ಕೊನೆಯ 2.5 ಗಂಟೆಗಳಲ್ಲಿ ಬ್ಯಾಟಿಂಗ್ ಮಾಡಿದ ವಿಹಾರಿ ಮತ್ತು ಅಶ್ವಿನ್ ಅವರ ಆಟವನ್ನು ಮೆಚ್ಚಲೇಬೇಕು ಎಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾವು ಈ ಪಂದ್ಯವನ್ನ ಗೆಲ್ಲುವ ಆಲೋಚನೆಯಲ್ಲಿರಲಿಲ್ಲ. ಪೂಜಾರ ಮತ್ತು ಪಂತ್ ಉತ್ತಮವಾಗಿ ಆಡುತ್ತಿದ್ದರು. ಆದರೆ, ಅವರು ಔಟಾದ ನಂತರ ಮತ್ತು ವಿಹಾರಿ ಗಾಯಕ್ಕೊಳಗಾಗಿದ್ದರಿಂದಾಗಿ ನಮ್ಮ ಆಲೋಚನೆ ಪಂದ್ಯ ಉಳಿಸಿಕೊಳ್ಳುವ ಕಡೆಗೆ ಬದಲಾಯಿತು. ಅದಕ್ಕೆ ಅಶ್ವಿನ್ ಮತ್ತು ವಿಹಾರಿ ಆಟ ನೆರವಾಯಿತು ಎಂದು ತಿಳಿದ್ದಾರೆ.
ವಿಹಾರಿ ಈ ಪಂದ್ಯದಲ್ಲಿ 161 ಎಸೆತಗಳಲ್ಲಿ 23 ರನ್ಗಳಿಸಿದ್ದರ ಬಗ್ಗೆ ಮಾತನಾಡಿದ ರಹಾನೆ, ವಿಹಾರಿ ಮೂರು ಟೆಸ್ಟ್ ಪಂದ್ಯಗಳಲ್ಲೂ ಉತ್ತಮವಾಗಿ ಆಡಿದ್ದಾರೆ. ಆದರೆ, ಅವರಿಂದ ದೊಡ್ಡ ಮೊತ್ತ ಬಂದಿರಲಿಲ್ಲ. ಆದರೆ, ಇಂದು ಅವರ ವಿಶೇಷ ಪ್ರದರ್ಶನ ಹೊರ ಬಂದಿತು. ನನ್ನ ಪ್ರಕಾರ ಈ ಆಟ ಶತಕಕ್ಕೆ ಸಮವಾಗಿದೆ ಎಂದು ರಹಾನೆ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ:ಅಶ್ವಿನ್, ಹನುಮನಾಟಕ್ಕೆ ಬಸವಳಿದ ಆಸೀಸ್: ಸಿಡ್ನಿ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ