ಹೈದರಾಬಾದ್: ಆ ಯುವ ಆಟಗಾರ ಭವಿಷ್ಯದಲ್ಲಿ ಭಾರತ ಕ್ರಿಕೆಟ್ ತಂಡ ಸ್ಟಾರ್ ವೇಗಿಯಾಗುವ ಎಲ್ಲಾ ಸಾಮರ್ಥ್ಯ ಹೊಂದಿದ್ದಾನೆ. ಆದರೆ ಕಳೆದ 2 ವರ್ಷಗಳಿಂದ ಕ್ರಿಕೆಟ್ ಆಡಲು ಸಾಧ್ಯವಾಗಿಲ್ಲ. ಅಂತಹ ಆಟಗಾರನಿಗೆ ರಾಹುಲ್ ದ್ರಾವಿಡ್ ಧೈರ್ಯ ತುಂಬಿದ್ದಾರೆ.
ರಾಜಸ್ಥಾನ ಮೂಲದ 19 ವರ್ಷದ ಯುವ ವೇಗಿ ಕಮಲೇಶ್ ನಾಗರಕೋಟಿ, ಮುಂಬರುವ ದಿನಗಳಲ್ಲಿ ಭಾರತ ತಂಡದ ಬಲಿಷ್ಠ ಬೌಲರ್ ಆಗಲಿದ್ದಾನೆ. ಹೀಗಂತ ನಾವು ಹೇಳ್ತಿಲ್ಲ ವೆಸ್ಟ್ ಇಂಡೀಸ್ ತಂಡದ ಮಾಜಿ ವೇಗಿ ಇಯಾನ್ ಬಿಷಪ್ ಹೇಳಿದ್ದಾರೆ. ಅಂತಹ ಆಟಗಾರ ಕಳೆದ 2 ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಕ್ರಿಕೆಟ್ ಆಡಲು ಸಾಧ್ಯವಾಗಿಲ್ಲ. ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ಪ್ರತಿಭಾವಂತ ಬೌಲರ್ಗೆ ದಿ ವಾಲ್ ರಾಹುಲ್ ದ್ರಾವಿಡ್ ಕಂಬ್ಯಾಕ್ ಪಾಠ ಮಾಡಿದ್ದಾರೆ.
ಈ ಬಗ್ಗೆ ಮತನಾಡಿರುವ ನಾಗರಕೋಟಿ, ನಾನು ಗಾಯದ ಸಮಸ್ಯೆಯಿಂದ ಬಳಲುತ್ತಿರುವಾಗ ದ್ರಾವಿಡ್ ಅವರು ನನ್ನ ಬಳಿ ಬಂದು ಮಾತನಾಡುತ್ತಿದ್ದರು. ಆಸ್ಟ್ರೇಲಿಯಾ ತಂಡದ ವೇಗಿ ಪ್ಯಾಟ್ ಕಮ್ಮಿನ್ಸ್ ಗಾಯದ ಸಮಸ್ಯೆಯಿಂದ ಹೊರಬರಲು 3 ರಿಂದ 4 ವರ್ಷ ಬೇಕಾಯಿತು. ಕಳೆದ 2 ವರ್ಷಗಳಿಂದ ಕ್ರಿಕೆಟ್ ಆಡಲು ಸಾಧ್ಯವಾಗಿಲ್ಲ ಎಂದು ಬೇಸರ ಮಾಡಿಕೊಳ್ಳಬೇಡ ಎಂದು ಧೈರ್ಯ ತುಂಬಿದರು, ಎಂದಿದ್ದಾರೆ.
ಅಲ್ಲದೆ ನಿನ್ನ ಗುರಿಯತ್ತ ನೀನು ಕೆಲಸ ಮಾಡು, ಆದಷ್ಟು ಹೊಸದನ್ನು ಕಲಿಯುವ ಪ್ರಯತ್ನ ಮಾಡು, ನಿನ್ನ ಸಮಯ ಬಂದೇ ಬರುತ್ತದೆ ಅಲ್ಲಿಯವರೆಗೆ ಕಾಯಬೇಕು. ಒಂದೋ, ಎರಡೋ ಐಪಿಎಲ್ ಮಿಸ್ ಆಯಿತು ಎಂದರೆ ಧೈರ್ಯ ಕಳೆದುಕೊಳ್ಳಬೇಡ. ನೀನು ಟೀಂ ಇಂಡಿಯಾ ಪರ ಆಡಬೇಕಾಗಿದೆ ಎಂದು ನನಗೆ ನವ ಚೈತನ್ಯ ತಂಬಿದ್ದರು ಎಂದು ನಾಗರಕೋಟಿ ಹೇಳಿಕೊಂಡಿದ್ದಾರೆ.
2018ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ನಾಗರಕೋಟಿ ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.