ETV Bharat / sports

Ajit Agarkar: ಭಾರತ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್​ ನೇಮಕ

author img

By

Published : Jul 5, 2023, 7:14 AM IST

ಭಾರತ ಹಿರಿಯರ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮಾಜಿ ವೇಗಿ ಅಜಿತ್​ ಅಗರ್ಕರ್​ ಅವರನ್ನು ನೇಮಕ ಮಾಡಲಾಗಿದೆ. ಇವರ ನೇತೃತ್ವದ ಸಮಿತಿಯಲ್ಲಿ ಸಲೀಲ್ ಅಂಕೋಲಾ, ಸುಬ್ರೋತೋ ಬ್ಯಾನರ್ಜಿ, ಎಸ್. ಶರತ್ ಮತ್ತು ಎಸ್‌.ಎಸ್. ದಾಸ್ ಇದ್ದಾರೆ.

ಅಜಿತ್ ಅಗರ್ಕರ್​ ನೇಮಕ
ಅಜಿತ್ ಅಗರ್ಕರ್​ ನೇಮಕ

ನವದೆಹಲಿ: ಭಾರತ ಹಿರಿಯ ಪುರುಷರ ಕ್ರಿಕೆಟ್​ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮಾಜಿ ವೇಗಿ ಅಜಿತ್​ ಅಗರ್ಕರ್​ ನೇಮಕವಾಗಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಶಿಫಾರಸಿನ ಮೇರೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮಂಗಳವಾರ ಈ ವಿಚಾರವನ್ನು ಪ್ರಕಟಿಸಿದ್ದಾರೆ.

ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಪುರುಷರ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಅರ್ಜಿದಾರರನ್ನು ಸಂದರ್ಶಿಸಿತು. ಮೂವರು ಸದಸ್ಯರ ಸಿಎಸಿ ಸಮಿತಿ ಅಜಿತ್ ಅಗರ್ಕರ್ ಅವರನ್ನು ಸರ್ವಾನುಮತದಿಂದ ಶಿಫಾರಸು ಮಾಡಿದೆ ಎಂದು ಜಯ್​ ಶಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಗರ್ಕರ್ ಭಾರತ ತಂಡದ ಪರವಾಗಿ 26 ಟೆಸ್ಟ್, 191 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಿದ್ದಾರೆ. 1999, 2003 ಮತ್ತು 2007ರ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದರು. 2007ರ ಟಿ20 ವಿಶ್ವಕಪ್​ ವಿಜೇತ ತಂಡದಲ್ಲೂ ಇದ್ದರು.

ಪ್ರಧಾನ ಆಯ್ಕೆಗಾರರಾಗಿ ನೇಮಕವಾಗಿರುವ ಅಜಿತ್​ ಅಗರ್ಕರ್​ ಉತ್ತಮ ಸಂಬಳ ಪಡೆಯಲಿದ್ದಾರೆ. ಸುಮಾರು 1 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಇದಲ್ಲದೇ, ಸಮಿತಿಯ ಉಳಿದ ಸದಸ್ಯರಿಗೆ ತಲಾ 90 ಲಕ್ಷ ರೂಪಾಯಿ ವೇತನ ಸಿಗಲಿದೆ.

ವೆಸ್ಟ್​​ ಇಂಡೀಸ್​ ಸರಣಿಗೆ ತಂಡ ಆಯ್ಕೆ: ಈ ತಿಂಗಳಲ್ಲಿ ಆರಂಭವಾಗಲಿರುವ ವೆಸ್ಟ್​ ಇಂಡೀಸ್​ ಸರಣಿಗೆ ಟೆಸ್ಟ್ ಮತ್ತು ಏಕದಿನ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಎರಡು ಸರಣಿ ಪೂರ್ಣಗೊಂಡ ನಂತರ ಟಿ20 ಸರಣಿ ನಡೆಯಲಿದ್ದು, ಅಜಿತ್​ ಅಗರ್ಕರ್​ ನೇತೃತ್ವದಲ್ಲಿ ಮೊದಲ ತಂಡದ ಆಯ್ಕೆ ನಡೆಯಲಿದೆ. ಬಿಸಿಸಿಐ ಕೂಡ ಇದನ್ನೇ ಬಯಸಿದೆ ಎಂದು ವರದಿಯಾಗಿದೆ.

ಮುರಿದ ಸಂಪ್ರದಾಯ: ಅಜಿತ್​ ಅಗರ್ಕರ್​ ಅವರು ಪ್ರಧಾನ ಆಯ್ಕೆಗಾರ ಹುದ್ದೆಗೆ ಏಕೈಕ ಅಭ್ಯರ್ಥಿಯಾಗಿದ್ದರು. ಪ್ರಸ್ತುತ ಅವರು ಕುಟುಂಬದೊಂದಿಗೆ ವಿದೇಶ ಪ್ರವಾಸದಲ್ಲಿದ್ದಾರೆ. ಅಲ್ಲಿಂದಲೇ ಅವರು ಸಂದರ್ಶನಕ್ಕೆ ಹಾಜರಾಗಿದ್ದಾರೆ. ಬೇರೆ ಯಾವೊಬ್ಬ ಪ್ರಮುಖರೂ ಕೂಡಾ ಹುದ್ದೆಗೆ ಅರ್ಜಿ ಸಲ್ಲಿಸದ ಕಾರಣ ಅಜಿತ್​ ಅವಿರೋಧವಾಗಿ ಆಯ್ಕೆಯಾದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕಾಗಿ ಈ ಹಿಂದೆ ಅನುಸರಿಸಿಕೊಂಡು ಬರುತ್ತಿದ್ದ ದೇಶದ ಐದು ವಲಯಗಳಿಂದ ತಲಾ ಒಬ್ಬ ಆಯ್ಕೆಗಾರರನ್ನು ನೇಮಿಸುವ ಹಳೆಯ ಸಂಪ್ರದಾಯ ಮುರಿಯಿತು. ಅಗರ್ಕರ್​ ಅವರು ಮಾತ್ರ ಈ ಹುದ್ದೆಗೆ ಅರ್ಜಿ ಹಾಕಿದ್ದರು. ಅಗರ್ಕರ್ ಅವರ ನೇಮಕದ ಬಳಿಕ ಆಯ್ಕೆ ಸಮಿತಿಯಲ್ಲಿ ಪಶ್ಚಿಮ ವಲಯದಿಂದ ಇಬ್ಬರು ಆಯ್ಕೆಗಾರರನ್ನು ಹೊಂದಿದಂತಾಗುತ್ತದೆ.

ಆಯ್ಕೆ ಸಮಿತಿಯಲ್ಲಿರುವ ಸಲೀಲ್ ಅಂಕೋಲಾ ಅವರು ಕೂಡ ಪಶ್ಚಿಮ ವಲಯದ ಪ್ರತಿನಿಧಿಯಾಗಿದ್ದಾರೆ. ಉಳಿದಂತೆ ಕೇಂದ್ರ ವಲಯದಿಂದ ಸುಬ್ರೋತೋ ಬ್ಯಾನರ್ಜಿ, ದಕ್ಷಿಣದಿಂದ ಎಸ್. ಶರತ್ ಮತ್ತು ಪೂರ್ವದಿಂದ ಎಸ್‌.ಎಸ್. ದಾಸ್ ಅವರು ಆಯ್ಕೆ ಸಮಿತಿಯಲ್ಲಿದ್ದಾರೆ.

ಇದನ್ನೂ ಓದಿ: Mark Taylor: 50 ವರ್ಷಗಳ ಟಾಪ್ 5 ಕ್ರಿಕೆಟಿಗರ ಪಟ್ಟಿಯಲ್ಲಿ ಇಬ್ಬರು ಭಾರತೀಯ ಬ್ಯಾಟರ್​ಗಳ ಹೆಸರು ಸೂಚಿಸಿದ ಟೇಲರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.