ETV Bharat / sports

ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿಂದು ರೋಚಕ ಕದನಕ್ಕೆ ಭೂಮಿಕೆ ಸಿದ್ಧ: ಭಾರತ-ಪಾಕ್ ಪಂದ್ಯದತ್ತ ಎಲ್ಲರ ಚಿತ್ತ

author img

By

Published : Aug 28, 2022, 9:47 AM IST

Updated : Aug 28, 2022, 10:03 AM IST

ಏಷ್ಯಾ ಕಪ್​ ಟೂರ್ನಿಯ ಎರಡನೇ ಪಂದ್ಯ ಇಂದು ನಡೆಯಲಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ರಾತ್ರಿ 7.30 ಕ್ಕೆ ನಡೆಯುವ ಈ ಕಾಳಗಕ್ಕೆ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

overview-of-india-pak-match
ಕ್ರಿಕೆಟ್​ ಮಹಾಯುದ್ಧಕ್ಕೆ ಭೂಮಿಕೆ ಸಿದ್ಧ

ದುಬೈ: ಭಾರತ-ಪಾಕಿಸ್ತಾನ ನಡುವಣ ಪಂದ್ಯವೇ ಹಾಗೇ. ಅದರ ಬಿಸಿ ಅಷ್ಟಿಷ್ಟಲ್ಲ. ಉಭಯ ತಂಡಗಳ ನಡುವಿನ ಸೆಣಸಾಟವನ್ನು ಬರೀ ಎರಡು ದೇಶವಲ್ಲ, ವಿಶ್ವದ ಗಮನ ಸೆಳೆಯುತ್ತದೆ. ಇಂದು ರಾತ್ರಿ ನಡೆಯುವ "ಕ್ರಿಕೆಟ್​ ಮಹಾಯುದ್ಧ"ಕ್ಕೆ ದುಬೈ ಭೂಮಿಕೆ ಸಿದ್ಧಪಡಿಸಿದೆ. ವರ್ಷಗಳ ಬಳಿಕ ನಡೆಯುತ್ತಿರುವ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯದ ಮೇಲೆ ಎಲ್ಲರ ಚಿತ್ತವೂ ನೆಟ್ಟಿದೆ.

ಕ್ರಿಕೆಟ್​ ಮಹಾಯುದ್ಧಕ್ಕೆ ಭೂಮಿಕೆ ಸಿದ್ಧ
ಕ್ರಿಕೆಟ್​ ಮಹಾಯುದ್ಧಕ್ಕೆ ಭೂಮಿಕೆ ಸಿದ್ಧ

ದುಬೈನಲ್ಲಿ ಬೀಡುಬಿಟ್ಟಿರುವ ಉಭಯ ತಂಡಗಳ ಸದಸ್ಯರು ಬಿಡುವಿನ ವೇಳೆ ಪರಸ್ಪರ ಭೇಟಿ ಕೂಡ ಮಾಡಿದ್ದಾರೆ. ಮೊನ್ನೆಯಷ್ಟೇ ಭಾರತದ ವಿರಾಟ್​ ಕೊಹ್ಲಿ ಪಾಕಿಸ್ತಾನದ ನಾಯಕ ಬಾಬರ್​ ಅಜಮ್​ರನ್ನು ಅಭ್ಯಾಸದ ಅವಧಿಯಲ್ಲಿ ಭೇಟಿ ಮಾಡಿ ಕೈ ಕುಲುದ್ದರು. ನಿನ್ನೆ ನಾಯಕ ರೋಹಿತ್​ ಶರ್ಮಾ-ಬಾಬರ್​ ಅಜಂ ಸಂಧಿಸಿದ್ದರು.

ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ರೋಹಿತ್​ ಶರ್ಮಾರಿಗೆ ಪ್ರಶ್ನೆಯೊಂದು ಎದುರಾದಾಗ, ಪಾಕಿಸ್ತಾನ ಮತ್ತು ಭಾರತದ ನಡುವಿನ ಪಂದ್ಯ ಮೈದಾನದ ಹೊರಗೆ ಭಾರಿ ಸದ್ದು ಮಾಡುತ್ತಿರುತ್ತದೆ. ಆದರೆ, ಮೈದಾನದಲ್ಲಿ ಎಲ್ಲವೂ ಸಹಜವಾಗಿರುತ್ತದೆ. ಆಟಗಾರರು ಪರಸ್ಪರ ಭೇಟಿ ಮಾಡಿ ಮಾತನಾಡುವುದರಲ್ಲಿ ವಿಶೇಷವೇನಿಲ್ಲ ಎಂದಿದ್ದರು.

ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂಗೆ ವಾತಾವರಣ ಬಿಸಿಯಾಗಿದೆಯಾ ಎಂದು ಪ್ರಶ್ನೆ ಕೇಳಲಾಗಿತ್ತು. ತಕ್ಷಣವೇ ಬಾಬರ್​ ಹೌದು, ದುಬೈ ವಾತಾವರಣ ಸ್ಪಲ್ಪ ಬಿಸಿ ಎಂದರು. ಬಳಿಕ ಪ್ರಶ್ನೆಯ ಆಳ ಅರಿತು, ನಾವು ಬಿಸಿಯನ್ನು ಹೆಚ್ಚಾಗಿ ಪರಿಗಣಿಸುವುದಿಲ್ಲ. ಭಾರತ ನಮ್ಮ ನಡುವಿನ ಪಂದ್ಯ ಸಹಜವಾಗಿರುತ್ತದೆ ಎಂದು ನಸುನಕ್ಕರು.

1. ಕೊಹ್ಲಿ ಬೆಂಬಲಿಸಿದ್ದ ಬಾಬರ್​: ವಿರಾಟ್​ ಕೊಹ್ಲಿ ಅವರ ಬ್ಯಾಟಿಂಗ್​ ವೈಫಲ್ಯದ ಬಗ್ಗೆ ನಿರಂತರ ಟೀಕೆ ವ್ಯಕ್ತವಾದಾಗ ಈ ಬಗ್ಗೆ ಟ್ವೀಟ್​ ಮಾಡಿದ್ದ ಪಾಕ್​ ನಾಯಕ ಬಾಬರ್​ ಅಜಂ, "ಈ ದಿನಗಳು ಕಳೆದು ಹೋಗಲಿವೆ. ದೃಢವಾಗಿರಿ" ಎಂದು ಧೈರ್ಯ ತುಂಬುವ ಮಾತನ್ನಾಡಿದ್ದರು. ಇದಕ್ಕೆ ಕೊಹ್ಲಿ ಕೂಡ ಟ್ವೀಟ್‌ನಲ್ಲೇ ಧನ್ಯವಾದ ಹೇಳಿದ್ದರು.

ಕ್​- ಭಾರತ ಪಂದ್ಯದತ್ತ ಎಲ್ಲರ ಚಿತ್ತ
ಕೊಹ್ಲಿ ಬೆಂಬಲಿಸಿದ್ದ ಬಾಬರ್

2. ಬಾಬರ್​ ಹೊಗಳಿದ ಕೊಹ್ಲಿ: ನಿನ್ನೆಯಷ್ಟೇ ವಿರಾಟ್​ ಕೊಹ್ಲಿ, ಬಾಬರ್​ ಅಜಂ ವಿಶ್ವ ಕ್ರಿಕೆಟ್​ನ ಅಗ್ರ ಬ್ಯಾಟರ್ ಎಂದು ಗುಣಗಾನ ಮಾಡಿದ್ದರು. ಅವರ ಜೊತೆಗಿನ ಮಾತುಕತೆ ವೇಳೆ ಸಾಕಷ್ಟು ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಬಾಬರ್​ ಕ್ರಿಕೆಟ್​ ಬುನಾದಿ ಗಟ್ಟಿಯಾಗಿದೆ. ಮೂರೂ ಫಾರ್ಮೆಟ್​ಗಳಲ್ಲಿ ಅವರ ಸ್ಥಿರ ಪ್ರದರ್ಶನವೇ ಅವರನ್ನು ಉನ್ನತ ಹಂತಕ್ಕೆ ಕರೆತಂದಿದೆ ಎಂದು ಹೊಗಳಿದ್ದರು.

3. ಕೊಹ್ಲಿಗೆ ಶಾಹೀನ್​ ಆಲ್​ ದ ಬೆಸ್ಟ್​: ಇಷ್ಟಲ್ಲದೇ, ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿರುವ ಪಾಕ್​ ವೇಗಿ ಶಾಹೀನ್ ಆಫ್ರಿದಿ ಕೂಡ ಕೊಹ್ಲಿಗೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ. "ನೀವು ಮತ್ತೆ ಹಳೆಯ ಲಯಕ್ಕೆ ಮರಳಿ ಬನ್ನಿ. ಇದಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ನೀವು ಮತ್ತೆ ಅಬ್ಬರಿಸುವುದನ್ನು ನೋಡಲು ನಾನು ಬಯಸುತ್ತೇನೆ" ಎಂದು ಟ್ವೀಟಿಸಿದ್ದರು.

4. ಕೊಹ್ಲಿ ಲಯದ ಕತೆ ಏನು?: ಮೂರು ವರ್ಷಗಳಿಂದ ಲಯದ ಸಮಸ್ಯೆ ಎದುರಿಸುತ್ತಿರುವ ವಿರಾಟ್​ ಕೊಹ್ಲಿ, ಈಚೆಗಷ್ಟೇ ತಾವು ಮಾನಸಿಕವಾಗಿ ಕುಗ್ಗಿರುವ ಬಗ್ಗೆ ಹೇಳಿಕೊಂಡಿದ್ದರು. ಫಾರ್ಮ್​ಗೆ ಮರಳಲು ತಾವು ಪಡುತ್ತಿರುವ ಕಷ್ಟ ಮತ್ತು ಅದರಿಂದಾಗುತ್ತಿರುವ ಮಾನಸಿಕ ವೇದನೆ ಬಗ್ಗೆ ಹೇಳಿಕೊಂಡಿದ್ದರು.

5. 'ನಾನು ಒಂದು ತಿಂಗಳು ಬ್ಯಾಟ್ ಮುಟ್ಟಿರಲಿಲ್ಲ': 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಾನು ಒಂದು ತಿಂಗಳು ಬ್ಯಾಟ್ ಮುಟ್ಟಿರಲಿಲ್ಲ. ಇತ್ತೀಚೆಗೆ ನಾನು ದೃಢವಾಗಿದ್ದೇನೆ ಎಂಬುದನ್ನು ತೋರಿಕೆ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೆ. ಅದು ಎಷ್ಟು ಕಷ್ಟ ಎಂಬುದು ನನಗೆ ಮಾತ್ರ ಗೊತ್ತು ಎಂದು ಕೊಹ್ಲಿ ಹೇಳಿದ್ದರು. ಇದರಿಂದಾಗಿ ಅವರು ಏಷ್ಯಾ ಕಪ್​ ಟೂರ್ನಿಯಲ್ಲಾದರೂ ಲಯ ಕಂಡುಕೊಂಡು ಹಳೆಯ ಖದರ್​ ತೋರುತ್ತಾರಾ ಎಂಬ ಬಗ್ಗೆಯೂ ಅಭಿಮಾನಿಗಳ ಕಣ್ಣಿದೆ.

6. ಎಲ್ಲ ಟಿಕೆಟ್​ಗಳು ಬಿಕರಿ: ಭಾರತ- ಪಾಕಿಸ್ತಾನ ನಡುವಣ ಪಂದ್ಯದ ಟಿಕೆಟ್​ಗಳು ಎಂದಿಗೂ ಖಾಲಿ ಬಿದ್ದಿದ್ದಿಲ್ಲ. ಪಂದ್ಯ ಎಲ್ಲೇ ನಡೆದರೂ ಇನ್ನಿಲ್ಲದ ಬೇಡಿಕೆ ಇರುತ್ತದೆ. ಇಂದಿನ ಪಂದ್ಯದ ಎಲ್ಲಾ ಟಿಕೆಟ್​ಗಳು ಬಿಕರಿಯಾಗಿವೆ. ಅಭಿಮಾನಿಗಳು ಪಂದ್ಯವನ್ನು ಚಿಯರ್​ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಟಿಕೆಟ್​ ಸಿಗದವರಿಗೆ ಅನುಕೂಲವಾಗಲು ರೆಸ್ಟೋರೆಂಟ್‌ಗಳು ಮತ್ತು ಶಾಪಿಂಗ್ ಮಾಲ್‌ಗಳ ಮುಂದೆ ದೊಡ್ಡ ಪರದೆಯ ಮೇಲೆ ಪಂದ್ಯದ ನೇರಪ್ರಸಾರಕ್ಕೆ ಏರ್ಪಾಟು ಮಾಡಲಾಗಿದೆ.

7. ತಂಡಗಳ ಮುಖಾಮುಖಿ: ಭಾರತ ಪಾಕ್​ ಈವರೆಗೂ 9 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಪಾರಮ್ಯ ಮೆರೆದು 7 ಬಾರಿ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ 2 ಬಾರಿ ಮಾತ್ರ ಜಯಿಸಿದೆ. ಕಳೆದ ಟಿ-20 ವಿಶ್ವಕಪ್​ನಲ್ಲಿ ಪಾಕಿಸ್ತಾನ, ಭಾರತದ ವಿರುದ್ಧ 10 ವಿಕೆಟ್​ ಗೆಲುವು ಸಾಧಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ಈ ಪಂದ್ಯದಲ್ಲಿ ಗೆದ್ದು ಮುಯ್ಯಿ ತೀರಿಸಿಕೊಳ್ಳಲು ಕಣಕ್ಕಿಳಿಯಲಿದೆ.

ಇದನ್ನೂ ಓದಿ: ಬಾಬರ್​​ ಆಜಂ ವಿಶ್ವದ ಅತ್ಯುತ್ತಮ ಬ್ಯಾಟರ್​​: ವಿರಾಟ್​ ಕೊಹ್ಲಿ

Last Updated :Aug 28, 2022, 10:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.