ಬೆಂಗಳೂರು: ಇಂದು ಅಂಬರೀಶ್ ಅವರ ಮೂರನೇ ಪುಣ್ಯ ಸ್ಮರಣೆ ಅವರು ನಮ್ಮೊಂದಿಗಿಲ್ಲ ಎಂಬ ನೋವು ಶಾಶ್ವತ. ಅವರು ಜೀವನದಲ್ಲಿ ನಡೆದುಕೊಂಡು ಬಂದಿರುವ ಹಾದಿ ನಮಗೆ ಶಕ್ತಿ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಅಂಬರೀಶ್ ಪುಣ್ಯಸ್ಮರಣೆ ವೇಳೆ ಮಾತನಾಡಿದ ಅವರು, ಅಂಬಿ ಅಂಥವರನ್ನು ಕಳೆದುಕೊಂಡ ಮೇಲೆ ಧೈರ್ಯ ಬೇಕಾಗುತ್ತದೆ, ಅವರೊಂದಿಗೆ ಕಳೆದ ಸಮಯ ನೆನಪಿಸಿಕೊಂಡ್ರೆ ಆ ಧೈರ್ಯ ಬರುತ್ತೆ ಎಂದರು.
ಅಂಬರೀಶ್ ಅವರು ಸಮಾಜಮುಖಿ ಕೆಲಸಗಳನ್ನು ತೋರಿಕೆಗಾಗಿ ಮಾಡದೇ, ಕಷ್ಟದಲ್ಲಿ ಇದ್ದವರಿಗೆ ಸ್ಪಂದಿಸಿದ್ದರು. ಅಂತಹ ಕಾರ್ಯಗಳನ್ನು ಮುಂದುವರಿಸಲು ಡಾ.ಅಂಬರೀಶ್ ಚಾರಿಟಬಲ್ ಟ್ರಸ್ಟ್ ಮಾಡಿದ್ದೇವೆ. ಅಂಬಿ ಕನಸು ಈ ಟ್ರಸ್ಟ್ ಮೂಲಕ ಮುಂದುವರೆಸುತ್ತಿದ್ದೇವೆ ಎಂದು ಹೇಳಿದರು.
ಈ ಫೌಂಡೇಶನ್ ಮೂಲಕ ಕ್ರೀಡೆ, ಕಲಾವಿದರನ್ನು ಪ್ರೋತ್ಸಾಹಿಸುತ್ತೇವೆ. ಗ್ರಾಮೀಣ ಪ್ರತಿಭೆಗಳನ್ನು ಹೊರತರುವ ಕೆಲಸ ಮಾಡುತ್ತೇವೆ. ಕೋವಿಡ್ ಸಂದರ್ಭದಲ್ಲಿ ಏನೂ ಮಾಡಲು ಆಗಿಲ್ಲ. ಈ ಫೌಂಡೇಶನ್ ಮೂಲಕ ಅಂಬರೀಶ್ ಮಾಡುವ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. ಅಂಬರೀಶ್ ಯಾವುದೇ ಸ್ಥಾನ, ಪ್ರಶಸ್ತಿಯನ್ನು ಲಾಬಿ ಮಾಡಿ ಪಡೆದುಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ಹೋರಾಟ ಎಂಬ ಪದ ಉಪಯೋಗಿಸಬಾರದು ಎಂದರು.
ಒಳ್ಳೆಯ ಅಭ್ಯರ್ಥಿಗೆ ಬೆಂಬಲ:
ಮಂಡ್ಯ ವಿಧಾನಪರಿಷತ್ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮದು ಯಾರ ಪರವಾಗಿ ಬೆಂಬಲ ಅಂತಾ ಹೇಳುವುದಿಲ್ಲ. ಮಂಡ್ಯ ಜಿಲ್ಲೆಗೆ ಯಾರು ಒಳ್ಳೆಯ ಅಭ್ಯರ್ಥಿಯೋ ಅವರಿಗೆ ಬೆಂಬಲಿಸುತ್ತೇನೆ ಎಂದ ಸುಮಲತಾ ಇದೇ ವೇಳೆ, ಕೆಆರ್ಎಸ್ ಭಾಗದಲ್ಲಿನ ಗಣಿಗಾರಿಕೆ ವಿಚಾರದಲ್ಲಿ ನನ್ನ ಹೋರಾಟ ನಿಲ್ಲಿಸಲ್ಲ ಎಂದು ಹೇಳಿದರು.
ಇದನ್ನೂ ಓದಿ: ಅಂಬಿ 3ನೇ ವರ್ಷದ ಪುಣ್ಯಸ್ಮರಣೆ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ