ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಸಲಹೆಯಂತೆ ಭಾರತ ಚಿತ್ರರಂಗದ ಪ್ರಮುಖವಾದ ಸಮಸ್ಯೆಗಳನ್ನು ಬಗೆಹರಿಸುವ ಉದ್ಧೇಶದಿಂದ ಇಂದು ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಷನ್ ಸ್ಥಾಪನೆ ಆಗುತ್ತಿದೆ. ಇಂದು ಸಂಜೆ 4 ಗಂಟೆಗೆ ಇದು ಉದ್ಘಾಟನೆಯಾಗಲಿದೆ.
ಕನ್ನಡ ಚಿತ್ರರಂಗದ ಖ್ಯಾತ ಸಾಹಿತಿ, ಪದ್ಮಶ್ರೀ ಪ್ರೊ. ದೊಡ್ಡರಂಗೇಗೌಡ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಎಸ್ಆರ್ವಿ ಸಭಾಂಗಣದಲ್ಲಿ ಇಂದು ಸಂಜೆ ಐಎಫ್ಎಂಎ ಚಾಲನೆ ಆಗುತ್ತಿದೆ. ಹಿಂದುಳಿದ ವರ್ಗದ ನೇತಾರ, ಡಾ. ಬಿ.ಆರ್. ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ. ಮೂರ್ತಿ, ಖ್ಯಾತ ನಟರು, ನಿರ್ಮಾಪಕರು ಕರ್ನಾಟಕದ ಶಾಖೆಯ ಮುಂಚೂಣಿಯಲ್ಲಿ ಇರುತ್ತಾರೆ ಎನ್ನಲಾಗಿದೆ.
ಐಎಫ್ಎಂಎ ಸಂಸ್ಥೆಯ ವೆಬ್ ಸೈಟ್ ಕೂಡಾ ಇಂದೇ ಉದ್ಘಾಟನೆ ಆಗಲಿದೆ. ಇಂದಿನ ಸಮಾರಂಭದಲ್ಲಿ ಪ್ರೊ. ದೊಡ್ಡರಂಗೇಗೌಡರ ಜೊತೆಗೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಸಂಗೀತ ನಿರ್ದೇಶಕ ವಿ. ಮನೋಹರ್, ಸಾಹಿತಿ ಡಾ.ವಿ. ನಾಗೇಂದ್ರ ಪ್ರಸಾದ್, ಡಿಎಸ್ಪಿ ಎಸ್.ಕೆ. ಉಮೇಶ್ ಹಾಗೂ ಇನ್ನಿತರರು ಹಾಜರಿರುತ್ತಾರೆ.
ಲಾಕ್ ಡೌನ್ ಆರಂಭವಾದಾಗಿನಿಂದ ನಿರ್ಮಾಪಕರ ಸಂಘ, ವಾಣಿ ಮಂಡಳಿಯಿಂದ ಬೆರಳೆಣಿಕೆಯಷ್ಟು ಪತ್ರಿಕಾಗೋಷ್ಠಿ ನಡೆದಿದೆ. ಇದನ್ನು ಹೊರತು ಪಡಿಸಿದರೆ ಬಹಳ ದಿನಗಳ ನಂತರ ಆರಂಭವಾಗುತ್ತಿರುವ ಮೊದಲ ಪ್ರತಿಕಾಗೋಷ್ಠಿ ಇದು. 45 ವರ್ಷಗಳಲ್ಲಿ ಸುಮಾರು 2500 ಕನ್ನಡ ಚಿತ್ರಗಳಿಗೆ ಪಿಆರ್ಒ ಆಗಿ ಕೆಲಸ ಮಾಡುತ್ತಿರುವ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಈ ಸುದ್ದಿಗೋಷ್ಠಿಯನ್ನು ಆಯೋಜಿಸಿದೆ.
ಕೊರೊನಾ ಸಮಸ್ಯೆ ಇರುವುದರಿಂದ ಸುಧೀಂದ್ರ ವೆಂಕಟೇಶ್, ಡಿ.ಎಸ್, ಸುನಿಲ್ ಹಾಗೂ ಡಿ.ಜಿ. ವಾಸು ಸೇರಿ ಎಲ್ಲಾ ಮುನ್ನೆಚರಿಕೆ ಕ್ರಮಗಳ ಬಗ್ಗೆ ವ್ಯವಸ್ಥೆ ಮಾಡಿದ್ದಾರೆ.