ಕನ್ನಡ ಚಿತ್ರರಂಗದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಇಷ್ಟ ಆಗುವ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ದೊಡ್ಮನೆ ರಾಜಕುಮಾರನ ನಿಧನರಾದ ದಿನದಿಂದ ಹಿಡಿದು ಈವರೆಗೂ ಅಪ್ಪು ನೆನೆದುಕೊಂಡು ಅಭಿಮಾನಿಗಳು ಕಣ್ಣೀರು ಹಾಕುತ್ತಲೇ ಇದ್ದಾರೆ. ಎಷ್ಟೋ ಜನರು ದೂರದ ಊರುಗಳಿಂದ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ಕುಮಾರ್ ಸಮಾಧಿ ದರ್ಶನ ಪಡೆಯುತ್ತಿದ್ದಾರೆ.
ಇನ್ನು ಕೆಲ ಅಭಿಮಾನಿಗಳು ಪಾದಯಾತ್ರೆ ಹಾಗೂ ಬೈಕ್ ರ್ಯಾಲಿ ಮೂಲಕ ಸಮಾಧಿ ಹತ್ತಿರ ಬರುತ್ತಿದ್ದಾರೆ. ಇದೀಗ ಧಾರವಾಡ ಜಿಲ್ಲೆಯ ಮನಗುಂಡಿಯ ದ್ರಾಕ್ಷಾಯಿಣಿ ಪಾಟೀಲ್ ಎಂಬ ಮಹಿಳೆ, ಪುನೀತ್ ರಾಜ್ಕುಮಾರ್ ಅಪ್ಪಟ ಅಭಿಮಾನಿ.
ಹೀಗಾಗಿ, ಪುನೀತ್ ಸಮಾಧಿಗೆ 14 ದಿನಗಳ ಕಾಲ ಬರೋಬ್ಬರಿ 550 ಕಿಲೋ ಮೀಟರ್ ಮ್ಯಾರಥಾನ್ ಮೂಲಕ ಧಾರವಾಡದಿಂದ ಬೆಂಗಳೂರಿನ ಪುನೀತ್ ರಾಜ್ಕುಮಾರ್ ಸ್ಮಾರಕಕ್ಕೆ ಇಂದು ಬಂದು ತಲುಪಿದ್ದಾರೆ.
ಬಾಲ್ಯದಿಂದಲೇ ಪುನೀತ್ ರಾಜ್ಕುಮಾರ್ ಸಿನಿಮಾಗಳನ್ನ ನೋಡುತ್ತಾ ಬೆಳೆದ 30 ವರ್ಷದ ದ್ರಾಕ್ಷಾಯಿಣಿ. ಅಪ್ಪುವಿನ ಕಟ್ಟಾ ಅಭಿಮಾನಿ. ದ್ರಾಕ್ಷಿಯಿಣಿ ತನ್ನ ಮೂವರು ಮಕ್ಕಳೊಂದಿಗೆ ಮ್ಯಾರಥಾನ್ ಆರಂಭಿಸಿ, ಮಾರ್ಗಮಧ್ಯೆ ಪುನೀತ್ ರಾಜ್ಕುಮಾರ್ ಅವರ ಸಮಾಜ ಸೇವೆ ಹಾಗೂ ನೇತ್ರದಾನ ಕುರಿತಂತೆ ಅರಿವು ಮೂಡಿಸುತ್ತಾ ಬೆಂಗಳೂರಿಗೆ ಬಂದು ತಲುಪಿದ್ದಾರೆ.
ಈ ಅಪರೂಪದ ಅಭಿಮಾನಿಯನ್ನ, ಡಾ ರಾಜ್ ಕುಮಾರ್ ಅಭಿಮಾನಿ ಸಂಘ, ಶಿವರಾಜ್ ಕುಮಾರ್ ಅಭಿಮಾನಿ ಸಂಘ ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗ, ಕಂಠೀರವ ಸ್ಟುಡಿಯೋಗೆ ಆಗಮಿಸುತ್ತಿದ್ದಂತೆ ಅದ್ದೂರಿಯಾಗಿ ಅವರನ್ನ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೊಡ್ಮನೆಯಿಂದ ಯುವ ರಾಜ್ ಕುಮಾರ್, ದ್ರಾಕ್ಷಿಯಾಣಿ ಅವರನ್ನ ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಬರಮಾಡಿಕೊಂಡಿದ್ದಾರೆ.
ದ್ರಾಕ್ಷಿಯಾಣಿ ಜೊತೆಗೆ ಮನಗುಂಡಿಯ ಉಮೇಶ್ ಪಾಟೀಲ್ ಕುಟುಂಬ ಕೂಡ ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದಾರೆ. ಕಳೆದ 14 ದಿನಗಳ ಹಿಂದೆ ಓಟ ಆರಂಭ ಮಾಡಿದ್ದ ದ್ರಾಕ್ಷಾಯಿಣಿ, ಪುನೀತ್ ರಾಜ್ಕುಮಾರ್ ಸ್ಮಾರಕಕ್ಕೆ ಇಂದು ಬಂದು ತಲುಪಿದ್ದಾರೆ.