ಬಿಹಾರದಲ್ಲಿ ಜೆಡಿಯು- ಬಿಜೆಪಿ ಸರ್ಕಾರದ ನಿದ್ದೆ ಕದಿಯಲಿದ್ದಾರೆ ಪಿಕೆ- ಲಾಲೂ

author img

By

Published : May 7, 2022, 10:09 PM IST

PK and Lalu to remain centre of attention in Bihar

ಗುರುವಾರ ಪಾಟ್ನಾದಲ್ಲಿ ಸುದ್ಧಿಗೋಷ್ಠಿ ನಡೆಸಿ ಸಂಚಲನ ಸೃಷ್ಟಿಸಿರುವ ಪ್ರಶಾಂತ ಕಿಶೋರ್​, ಕಳೆದ 30 ವರ್ಷಗಳಿಂದ ಲಾಲೂ - ನಿತೀಶ್​ ಆಡಳಿತದಿಂದ ಬಿಹಾರದ ಜನ ತತ್ತರಿಸಿದ್ದಾರೆ. ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದ್ದಾರೆ. ಪಿಕೆ ಎರಡೂ ಪಕ್ಷಗಳನ್ನು ಟೀಕಿಸಿದ್ದು, ಇಲ್ಲಿ ಹೊಸ ಶಕ್ತಿ ಉದಯಿಸುವುದಂತೂ ಗ್ಯಾರಂಟಿ

ಪಾಟ್ನಾ( ಬಿಹಾರ): ಬಿಹಾರದಲ್ಲಿ ಈಗ ಪ್ರಶಾಂತ ಕಿಶೋರ್​​ ಹವಾ ಜೋರಾಗುತ್ತಿದೆ. ಸದ್ಯಕ್ಕೆ ರಾಜಕೀಯ ಪಕ್ಷ ಕಟ್ಟುವುದಿಲ್ಲ. ಆದರೆ 3 ಸಾವಿರ ಕಿ.ಮೀ ಯಾತ್ರೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಇದು ಬಿಹಾರ ಅಷ್ಟೇ ಏಕೆ ದೇಶದ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನು ಏಮ್ಸ್​​ನಲ್ಲಿ ಚಿಕಿತ್ಸೆ ಪಡೆದು ಲವಲವಿಕೆಯಿಂದ ಇರುವ ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್​​ ಪಾಟ್ನಾ ಮರಳುವ ಸನ್ನಾಹದಲ್ಲಿದ್ದಾರೆ. ಈ ಎರಡೂ ದಿಗ್ಗಜರ ನಡೆಗಳು ಇನ್ಮುಂದೆ ಬಿಹಾರದ ರಾಜಕೀಯ ಬದಲು ಮಾಡುವ ಸಾಧ್ಯತೆ ಹೆಚ್ಚಿಸಿವೆ.

ಪಿಕೆ ಜನ್ ಸುರಾಜ್​ ಹವಾ: ಹಾಗಾಗಿ ಬಿಹಾರ ರಾಜಕೀಯ ಈಗ ಪಿಕೆ ಹಾಗೂ ಲಾಲೂ ಸುತ್ತವೇ ಸುತ್ತಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸುತ್ತವೇ ಕೇಂದ್ರೀಕೃತವಾಗಲಿದೆ. ಈಗಾಗಲೇ, ಲಾಲೂ ಪ್ರಸಾದ್​ ಯಾದವ್​ ದೆಹಲಿ ಏಮ್ಸ್‌ನಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ವಾರ ಪಾಟ್ನಾಗೆ ಬಂದಿಳಿಯುವ ನಿರೀಕ್ಷೆಯಿದೆ. ಆದರೆ ಪಿಕೆ ಈಗಾಗಲೇ ಅಕ್ಟೋಬರ್ 2 ರಂದು ಪಾದಯಾತ್ರೆ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಜನ್​ ಸುರಾಜ್​ ಹೆಸರಿನಲ್ಲಿ ಬಿಹಾರದಾದ್ಯಂತ ಅವರು ಸಂಚರಿಸಲಿದ್ದಾರೆ.

ಇಬ್ಬರದ್ದೂ ಇತಿಹಾಸವೇ: ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರವೀಣರಾಗಿದ್ದು, ಜೆಡಿಯು ಮತ್ತು ಬಿಜೆಪಿ ನಾಯಕತ್ವಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವುದಂತೂ ಶತ ಸಿದ್ಧ. ಈ ಇಬ್ಬರು ನಾಯಕರು ಸಕ್ರಿಯರಾದರೆ, ರಾಜ್ಯ ರಾಜಕೀಯದಲ್ಲಿ ಯಾವಾಗಲೂ ಸಂಚಲನ ಇರುವುದು ಗ್ಯಾರಂಟಿ ಅಂತಾ ರಾಜಕೀಯ ನಿಪುಣರು ಅಭಿಪ್ರಾಯಪಟ್ಟಿದ್ದಾರೆ. ಈಗ ಬಿಹಾರದಲ್ಲಿ ಪಿಕೆ ಮತ್ತು ಲಾಲೂ ಅವರ ಹವಾ ತಡೆಯುವುದು ಜೆಡಿಯು ಮತ್ತು ಬಿಜೆಪಿಯಂತಹ ಆಡಳಿತ ಪಕ್ಷಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.

ಗುರುವಾರ ಪಾಟ್ನಾದಲ್ಲಿ ಸುದ್ಧಿಗೋಷ್ಠಿ ನಡೆಸಿ ಸಂಚಲನ ಸೃಷ್ಟಿಸಿರುವ ಪ್ರಶಾಂತ ಕಿಶೋರ್​, ಕಳೆದ 30 ವರ್ಷಗಳಿಂದ ಲಾಲೂ - ನಿತೀಶ್​ ಆಡಳಿತದಿಂದ ಬಿಹಾರದ ಜನ ತತ್ತರಿಸಿದ್ದಾರೆ. ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದ್ದಾರೆ. ಹೀಗಾಗಿ ಪಿಕೆ ಎರಡೂ ಪಕ್ಷಗಳನ್ನು ಟೀಕಿಸಿದ್ದು, ಇಲ್ಲಿ ಹೊಸ ಶಕ್ತಿ ಉದಯಿಸುವುದಂತೂ ಗ್ಯಾರಂಟಿ

ಪಿಕೆ ಹೇಳಿಕೆಗೆ ಪ್ರಾಮುಖ್ಯತೆ ನೀಡಲ್ಲ ಎಂದ ನಿತೀಶ್​: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಸಿಎಂ ನಿತೀಶ್​ ಕುಮಾರ್​, ಕಿಶೋರ್​ ಅವರ ಮಾತಿಗೆ ಪ್ರಾಮುಖ್ಯತೆ ನೀಡುವುದಿಲ್ಲಎಂದು ಹೇಳಿದ್ದಾರೆ. ಅವರು ಏನೇನೋ ಹೇಳ್ತಾರೆ ಅವಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತಾ ಕುಳಿತುಕೊಳ್ಳಲು ಆಗೋದಿಲ್ಲ ಎಂದು ನಿತೀಶ್​ ಕುಮಾರ್ ಹೇಳಿದ್ದಾರೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಕೂಡ ಪಿಕೆ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶಾಂತ ಕಿಶೋರ್​ ಒಬ್ಬ ಉದ್ಯಮಿ ಎಂದು ಅವರ ಮಾತನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​, ಅವರಿಗೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ನಾನು ನೋಡುವುದಿಲ್ಲ ಅಥವಾ ಕೇಳುವುದಿಲ್ಲ ಎಂದು ಹೇಳಿದ್ದಾರೆ. ಇದೇನೇ ಇರಲಿ ಪ್ರಶಾಂತ್​ ಕಿಶೋರ್​​​ ಬಿಹಾರದ ಜನರ ಲಕ್ಷ್ಯ ಸೆಳೆಯಲು ಸನ್ನದ್ಧರಾಗಿದ್ದಾರೆ. ಅಷ್ಟೇ ಅಲ್ಲ ಅವರ ಸುದ್ದಿಗೋಷ್ಠಿ ರಾಜಕೀಯ ನಾಯಕರ ಗಮನ ಸೆಳೆದಿದೆ ಕೂಡಾ.

ಪಿಕೆಯಷ್ಟೇ ಹವಾ ಕ್ರಿಯೇಟ್ ಮಾಡಿದ ಲಾಲೂ ಪ್ರಸಾದ್​ ಯಾದವ್​: ದೆಹಲಿ ಏಮ್ಸ್​ನಿಂದ ಲಾಲೂ ಪ್ರಸಾದ್​ ಯಾದವ್ ಬಿಡುಗಡೆಗೊಂಡಿದ್ದಾರೆ. ಇದೇ ವೇಳೆ, ಅವರು ಲೌಡ್​ ಸ್ಪೀಕರ್​( ಧ್ವನಿವರ್ಧಕ) ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಈ ವಿವಾದ ದೇಶಕ್ಕೆ ಮಾರಕ ಎಂದು ಹೇಳಿದ್ದಾರೆ. ಇದೇ ವೇಳೆ, ಕೇಂದ್ರದ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದೆ. ಲಾಲೂ ಪ್ರಸಾದ್​ ಯಾದವ್​ ಅವರ ಹೇಳಿಕೆಗೆ ಹಲವು ಬಿಜೆಪಿ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಾತನಾಡಿ, ಸ್ವಲ್ಪ ಶಾಂತ ಮನಸ್ಸಿನಿಂದ ಕುಳಿತು, ಲಾಲೂ ಪ್ರಸಾದ್ ಯಾದವ್​ ಹನುಮಾನ್ ಚಾಲೀಸಾವನ್ನು ಪಠಿಸುವಂತೆ ಸಲಹೆ ನೀಡಿದ್ದಾರೆ.

ಇದನ್ನು ಓದಿ: ಬಿಹಾರ ಸುಧಾರಣೆಗೋಸ್ಕರ 3 ಸಾವಿರ ಕಿ.ಮೀ ಪಾದಯಾತ್ರೆ: ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಘೋಷಣೆ

ಇಬ್ಬರು ನಾಯಕರ ಬಗ್ಗೆ ರಾಜಕೀಯ ವಿಶ್ಲೇಷಕರು ಹೇಳುವುದೇನು?: ಪಿಕೆ ಮತ್ತು ಲಾಲೂ ಪ್ರಸಾದ್​ ಯಾದವ್​, ಬಿಹಾರ ರಾಜಕೀಯದಲ್ಲಿ ಬೀರಲಿರುವ ಪ್ರಭಾವದ ಕುರಿತು ಪಾಟ್ನಾ ಮೂಲದ ರಾಜಕೀಯ ತಜ್ಞ ಡಾ. ಸಂಜಯ್ ಕುಮಾರ್ ಹೇಳುವುದಿಷ್ಟು. ಇತ್ತೀಚಿಗೆ ಪಾಟ್ನಾದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ನಿತೀಶ್ ಕುಮಾರ್​ ಕೂಡ ಭಾಗವಹಿಸಿದ್ದರು. ಈ ವೇಳೆ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿ ಗಮನ ಸೆಳೆದಿದ್ದಾರೆ. ಈ ವೇಳೆ ಮಾಜಿ ಸಿಎಂ ರಾಬ್ರಿ ದೇವಿ ಕೂಡಾ ಇದ್ದರು ಎಂಬುದು ಗಮನಾರ್ಹ.

ಲಾಲೂ ಪ್ರಸಾದ್​ ಯಾದವ್​ ಇನ್ನೇನು ಕೆಲವೇ ದಿನಗಳಲ್ಲಿ ಪಾಟ್ನಾಕ್ಕೆ ಮರಳಲಿದ್ದಾರೆ. ಇದು ಬಿಹಾರ ರಾಜಕೀಯದಲ್ಲಿ ಮತ್ತೆ ಹಿಂದಿನ ಚಾರ್ಮ್​ಗೆ ಮರಳುವ ಸಾಧ್ಯತೆಯನ್ನು ತೆರೆದಿಟ್ಟಿದೆ. ಅಷ್ಟೇ ಅಲ್ಲ ಲಾಲೂ ಪ್ರಸಾದ್​ ಯಾದವ್​​ ಬಿಹಾರ ರಾಜಕೀಯದಲ್ಲಿ ಗೇಮ್​ ಚೇಂಜರ್​ ಪಾತ್ರವನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಸಂಜಯ್​ ಕುಮಾರ್​ ವಿಶ್ಲೇಷಿಸಿದ್ದಾರೆ.

ಪ್ರಶಾಂತ್​ ಕಿಶೋರ್​ ಈಗ ಬಿಹಾರದ ಕೇಂದ್ರ ಬಿಂದು: ಇನ್ನು ಪ್ರಶಾಂತ್ ಕಿಶೋರ್ ಕುರಿತು ಮಾತನಾಡಿದ ಅವರು, ಗಾಂಧಿ ಜಯಂತಿಯಂದು ಪಶ್ಚಿಮ ಚಂಪಾರಣ್‌ನಿಂದ ಬಿಹಾರದಾದ್ಯಂತ 3000 ಕಿಲೋಮೀಟರ್ ಪಾದಯಾತ್ರೆ ಕೈಗೊಳ್ಳುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಈ ಕಾರಣದಿಂದ ಬಿಹಾರದಲ್ಲಿ ಪಿಕೆ ಹವಾ ಸೃಷ್ಟಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆ ಸುತ್ತಲೇ ರಾಜಕೀಯ ಚರ್ಚೆಗಳು ಆರಂಭವಾಗಲಿವೆ ಎಂದು ಸಂಜಯ್​ ಕುಮಾರ್​ ಹೇಳಿದ್ದಾರೆ.

ಸದ್ಯಕ್ಕೆ ಪ್ರಶಾಂತ್​ ಕಿಶೋರ್​, ಯಾವುದೇ ರಾಜಕೀಯ ಪಕ್ಷದ ರಚನೆಯನ್ನು ತಳ್ಳಿಹಾಕಿರಬಹುದು, ಆದರೆ ಆದಷ್ಟು ಬೇಗ ಅಥವಾ ನಂತರ ಅವರು ಸಕ್ರಿಯ ರಾಜಕೀಯಕ್ಕೆ ಧುಮುಕುವ ಎಲ್ಲ ಸಾಧ್ಯತೆಗಳಿವೆ. ಆಗ ಅವರು ರಾಜ್ಯದಲ್ಲಿ ತೃತೀಯ ರಂಗಕ್ಕೆ ಹೊಸ ರೂಪ ನೀಡಬಹುದು. ಇದೇ ಕಾರಣದಿಂದ ಎಲ್ಲಾ ರಾಜಕೀಯ ನಾಯಕರು ಪ್ರಶಾಂತ ಕಿಶೋರ್​ ಅವರ ಮುಂದಿನ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.

ಅಷ್ಟಕ್ಕೂ ಪ್ರಶಾಂತ್​ ಕಿಶೋರ್​, ಬಿಜೆಪಿ ಹಾಗೂ ಜೆಡಿಯು ಜತೆ ಈಗಾಗಲೇ ಕೆಲಸ ಮಾಡಿರುವುದರಿಂದ ಅಲ್ಲಿನ ರಾಜಕೀಯ ನಾಯಕರ ಬಲ- ದೌರ್ಬಲ್ಯವನ್ನು ಕಂಡುಕೊಂಡಿದ್ದಾರೆ. ಇದು ಅವರಿಗೆ ರಾಜಕೀಯ ತಂತ್ರಗಾರಿಕೆ ರೂಪಿಸಲು ನೆರವಾಗಬಹುದು. ಆದರೆ ಬಿಹಾರದ ಜಾತಿ-ಪ್ರೇರಿತ ರಾಜಕೀಯ ಸನ್ನಿವೇಶವನ್ನು ಮರು ವ್ಯಾಖ್ಯಾನಿಸುವುದು ಅವರಿಗೆ ತುಸು ತೊಂದರೆ ಆಗಬಹುದು, ಇದೊಂದು ಸವಾಲು ಕೂಡಾ ಹೌದು ಎಂದಿದ್ದಾರೆ.

ಪಿಕೆಗಿಂತ ಲಾಲೂ ವಿಭಿನ್ನ: ಇತರ ರಾಜಕಾರಣಿಗಳಿಗಿಂತ ಲಾಲೂ ಪ್ರಸಾದ್​ ಯಾದವ್​ ವಿಭಿನ್ನವಾಗಿ ನಿಲ್ಲುತ್ತಾರೆ. ಅವರು ಎದುರಾಳಿಗಳ ದೌರ್ಬಲ್ಯ ಹಾಗೂ ಬಲವನ್ನು ತಿಳಿದವರಾಗಿದ್ದಾರೆ. ಅದನ್ನು ಅವರು ಸಂದರ್ಭಕ್ಕೆ ತಕ್ಕಂತೆ ಬಳಸುವಲ್ಲಿ ನಿಪುಣರು ಅಂತಾರೆ ರಾಜಕೀಯ ವಿಶ್ಲೇಷಕರು.

ಪಿಕೆ ರಾಜಕೀಯ ಪ್ರವೇಶ ಮತ್ತು ಲಾಲೂ ಅವರ ಮರು ಪ್ರವೇಶದ ಬಗ್ಗೆ ಮಾತನಾಡಿರುವ ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯ ಮತ್ತು ಪಕ್ಷದ ವಕ್ತಾರ ಕುಂತಲ್ ಕೃಷ್ಣ, ಪಿಕೆ ರಾಜಕೀಯ ಚಳವಳಿಗಳನ್ನು ಯೋಜಿಸುತ್ತಿಲ್ಲ. ಅವರು ಮಾಡುತ್ತಿರುವುದು ಕೇವಲ ಪೂರ್ವ ತಯಾರಿಯಷ್ಟೇ. ಪಿಕೆ ಲೆಕ್ಕ ಹಾಕಿದಷ್ಟು ಬಿಹಾರ ರಾಜಕೀಯ ಸುಲಭವಲ್ಲ ಎಂದು ಹೇಳಿದ್ದಾರೆ. ಲಾಲೂ ಪ್ರಸಾದ್ ಯಾದವ್ ಅವರ ಮಟ್ಟಿಗೆ ಹೇಳುವುದಾದರೆ, ಅವರು ಬಿಹಾರದಲ್ಲಿ ಇನ್ನೂ ರಾಜಕೀಯದ ಆಧಾರ ಸ್ತಂಭವಾಗಿದ್ದಾರೆ ಎಂದಿದ್ದಾರೆ ಕುಂತಲ್​ ಕೃಷ್ಣ. ಬಿಹಾರಿಗಳು ಅವರನ್ನು ವಿರೋಧಿಸಬಹುದು ಅಥವಾ ಬೆಂಬಲಿಸಬಹುದು. ಆದರೆ ಯಾರೂ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಕುಂತಲ್​ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ:ಬಹುಕೋಟಿ ಮೇವು ಹಗರಣ: ಲಾಲೂ ಪ್ರಸಾದ್​ಗೆ ಜಾಮೀನು ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.