ETV Bharat / international

ಸುಡಾನ್​ನಲ್ಲಿ​​ ಮೇ 4 ರಿಂದ 7 ದಿನ ಕದನ ವಿರಾಮ: 3 ಲಕ್ಷ ಮಂದಿ ದೇಶದಿಂದ ಸ್ಥಳಾಂತರ

author img

By

Published : May 3, 2023, 8:02 AM IST

ಸುಡಾನ್​ನಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಅಲ್ಲಿನ ಜನರು ನಿರಾಶ್ರಿತರಾಗಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ದೇಶ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಕದನ ವಿರಾಮ
ಕದನ ವಿರಾಮ

ಜುಬಾ (ದಕ್ಷಿಣ ಸುಡಾನ್): ಅಧಿಕಾರಕ್ಕಾಗಿ ಸೇನೆ ಮತ್ತು ಅರೆಸೇನಾ ಪಡೆಗಳ ಮಧ್ಯೆ ಸುಡಾನ್ ದೇಶದಲ್ಲಿ​ ನಡೆಯುತ್ತಿರುವ ಸಂಘರ್ಷ ತಾರಕಕ್ಕೇರಿದ್ದು, ಅಲ್ಲಿನ ಜನರು ಹೈರಾಣಾಗಿದ್ದಾರೆ. ಹಲವು ದಿನಗಳಿಂದ ನಡೆಯುತ್ತಿರುವ ಆಂತರಿಕ ಯುದ್ಧಕ್ಕೆ 2ನೇ ಬಾರಿಗೆ ಕದನ ವಿರಾಮ ಘೋಷಿಸಲಾಗಿದೆ. ಮೇ 4 ರಿಂದ 11 ರವರೆಗೆ 7 ದಿನಗಳ ಕಾಲ ಕದನ ವಿರಾಮಕ್ಕೆ ಉಭಯ ಸೇನೆಗಳು ಒಪ್ಪಿಕೊಂಡಿವೆ. ಇದೇ ವೇಳೆ ಮಾತುಕತೆಯ ಮೂಲಕ ಸಂಘರ್ಷ ಕೊನೆಗಾಣಿಸಲು ಶಾಂತಿ ಸಂಧಾನದ ಒತ್ತಾಯ ಕೇಳಿಬಂದಿದೆ.

ಸುಡಾನ್ ಸಶಸ್ತ್ರ ಪಡೆಗಳ ಕಮಾಂಡರ್ ಇನ್ ಚೀಫ್ ಜನರಲ್ ಅಬ್ದೆಲ್ ಫತಾಹ್ ಅಲ್ ಬುರ್ಹಾನ್ ಮತ್ತು ಕ್ಷಿಪ್ರ ಪಡೆಗಳ ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೊ ಅವರು ಏಳು ದಿನಗಳ ಕದನ ವಿರಾಮವನ್ನು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ ಎಂದು ದಕ್ಷಿಣ ಸುಡಾನ್‌ನ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಕದನ ವಿರಾಮದ ಜೊತೆಗೆ ಮಾತುಕತೆ ನಡೆಸಲು ತಮ್ಮ ಪ್ರತಿನಿಧಿಗಳನ್ನು ಹೆಸರಿಸಿದ್ದಾರೆ. ಸುದೀರ್ಘ ಕದನದಿಂದಾಗುವ ಪರಿಣಾಮಗಳನ್ನೂ ಉಭಯ ಸೇನೆಗಳ ಮುಖ್ಯಸ್ಥರು ಅರಿತಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆಯ ಪರಿಣಾಮವಾಗಿ ಸುಡಾನ್ ರಕ್ತಪಾತವನ್ನು ಎದುರಿಸುತ್ತಿದೆ. ಹೀಗಾಗಿ ಉಭಯ ಸೇನೆಗಳ ನಾಯಕರು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡಲು ಅಸೆಂಬ್ಲಿ ಆಫ್ ಹೆಡ್ಸ್ ಆಫ್ ಸ್ಟೇಟ್‌ನ ನಾಯಕ, ಅಧ್ಯಕ್ಷ ಸಾಲ್ವಾ ಕಿರ್ ಒತ್ತಾಯಿಸಿದ್ದಾರೆ. ಖಾರ್ಟೂಮ್​ನಲ್ಲಿ ಪರಿಸ್ಥಿತಿಯಲ್ಲಿ ತೀರಾ ಹದಗೆಟ್ಟಿದೆ. ನಾಯಕರ ನಡುವಣ ಮಾತುಕತೆ ಅನಿವಾರ್ಯವಾಗಿದೆ. ಕದನ ವಿರಾಮಕ್ಕಾಗಿ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಒತ್ತಡ ಕೇಳಿಬಂದಿತ್ತು. ಇದಕ್ಕೆ ಜನರಲ್ ಅಲ್ ಬುರ್ಹಾನ್ ಮತ್ತು ಜನರಲ್ ದಗಾಲೊ ಒಪ್ಪಿದ್ದಾರೆ. ಕದನ ವಿರಾಮದ ನಡುವೆ ಮಾತುಕತೆ ನಡೆಸಲು ಪ್ರತಿನಿಧಿಗಳನ್ನು ಕಳುಹಿಸಿ ಎಂದು ಅಧ್ಯಕ್ಷರು ಮನವಿ ಮಾಡಿದ್ದಾರೆ.

ಇತರೆ ದೇಶಗಳೊಂದಿಗೆ ಚರ್ಚೆ: ಸಂಘರ್ಷವನ್ನು ಕೊನೆಗಾಣಿಸುವ ಮತ್ತು ಅದರ ಪರಿಣಾಮಗಳ ಬಗ್ಗೆ ಸುಡಾನ್​ ಸರ್ಕಾರ ಈಜಿಪ್ಟ್, ಉಗಾಂಡಾ, ಕೀನ್ಯಾ ಮತ್ತು ಕೆನಡಾದ ವಿದೇಶಾಂಗ ವ್ಯವಹಾರಗಳ ಮಂತ್ರಿಗಳ ಜೊತೆ ಚರ್ಚೆ ನಡೆಸಿದೆ. ಕದನ ವಿರಾಮ, ಯುದ್ಧ ನಿಲುಗಡೆ, ದೇಶವಾಸಿಗಳ ಪರಿಸ್ಥಿತಿಯ ವಿಷಯಗಳ ಕುರಿತೂ ಕಳವಳ ವ್ಯಕ್ತವಾಗಿದೆ. ಸಂಘರ್ಷ ಪೀಡಿತ ಸುಡಾನ್ ಮತ್ತು ವಿದೇಶಿ ಪ್ರಜೆಗಳ ಸ್ಥಳಾಂತರಿಸುವಿಕೆ ಹಾಗೂ ವಿವಿಧ ಹಂತಗಳಲ್ಲಿ ಸಮನ್ವಯ ಪ್ರಯತ್ನಗಳು ನಡೆಯುತ್ತಿವೆ.

3 ಲಕ್ಷ ಜನರ ಸ್ಥಳಾಂತರ: ಸಂಘರ್ಷಪೀಡಿತ ಸುಡಾನ್​ನಿಂದ ನಿರಾಶ್ರಿತರಾದ 3.30 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿದೆ. 1 ಲಕ್ಷಕ್ಕೂ ಹೆಚ್ಚು ಮಂದಿ ಗಡಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ತಿಳಿಸಿದೆ. ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಸುಡಾನ್‌ನಲ್ಲಿ ಘರ್ಷಣೆ ಮುಂದುವರೆದಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ನೆರೆಯ ದೇಶಗಳಿಗೆ ಪಲಾಯನ ಮಾಡಬಹುದು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಅಂದಾಜಿಸಿದೆ.

ಏಪ್ರಿಲ್ 15 ರಿಂದ ಭುಗಿಲೆದ್ದ ಹೋರಾಟದಿಂದಾಗಿ ಅಂದಾಜು 3,34,000 ಮಂದಿ ಬೇರೆ ದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ. 1 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಸುಡಾನ್‌ನಿಂದ ನೆರೆಯ ದೇಶಗಳಿಗೆ ಕಾಲ್ಕಿತ್ತಿದ್ದಾರೆ ಎಂದು ತಿಳಿದುಂದಿದೆ.

ಇದನ್ನೂ ಓದಿ: ಸುಡಾನ್ ಸಂಘರ್ಷದಲ್ಲಿ ಮೃತರ ಸಂಖ್ಯೆ 528ಕ್ಕೇರಿಕೆ: 4500 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.