ETV Bharat / international

ಸೆ.3 ರಂದು 'ಸನಾತನ ಧರ್ಮ ದಿನ' ಆಚರಣೆ; ಭಾರತದಲ್ಲಿ ಅಲ್ಲ, ಇದು ಅಮೆರಿಕದಲ್ಲಿ!

author img

By ETV Bharat Karnataka Team

Published : Sep 7, 2023, 12:04 PM IST

ಅಮೆರಿಕದ ಕೆಂಟುಕಿ ರಾಜ್ಯದ ನಗರವೊಂದರಲ್ಲಿ ಸೆಪ್ಟೆಂಬರ್​ 3 ರಂದು ಸನಾತನ ಧರ್ಮ ದಿನ ಆಚರಣೆಗೆ ಅಧಿಕೃತ ಘೋಷಣೆ ಮಾಡಲಾಗಿದೆ.

Sanatan Dharma Diwas to be celebrated on September 3
Sanatan Dharma Diwas to be celebrated on September 3

ವಾಷಿಂಗ್ಟನ್ (ಅಮೆರಿಕ) : ಸೆಪ್ಟೆಂಬರ್​ 3 ರಂದು 'ಸನಾತನ ಧರ್ಮ ದಿನ' ಆಚರಣೆಗೆ ಅಧಿಕೃತವಾಗಿ ಘೋಷಿಸಲಾಗಿದೆ. ಆದರೆ ಇದು ಭಾರತದಲ್ಲಿ ಅಲ್ಲ, ಬದಲಾಗಿ ಅಮೆರಿಕದಲ್ಲಿ. ಅಮೆರಿಕದ ಕೆಂಟುಕಿ ರಾಜ್ಯದ ನಗರವೊಂದರಲ್ಲಿ ಸೆಪ್ಟೆಂಬರ್ 3ನ್ನು 'ಸನಾತನ ಧರ್ಮ ದಿನ' ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಭಾರತದಲ್ಲಿನ ರಾಜ್ಯವೊಂದರ ಸಚಿವರೊಬ್ಬರು ಸನಾತನ ಧರ್ಮವನ್ನು ಹೀಯಾಳಿಸಿ ಮಾತನಾಡಿದ ಮಧ್ಯೆ ದೂರದ ಅಮೆರಿಕದಲ್ಲಿ ಅದೇ ಹಿಂದೂ ಸನಾತನ ಧರ್ಮದ ಬಗ್ಗೆ ಒಲವು ಬೆಳೆಯುತ್ತಿರುವುದು ಗಮನಾರ್ಹ.

ಲೂಯಿಸ್​ವಿಲ್ಲೆ ಮೇಯರ್ ಕ್ರೇಗ್ ಗ್ರೀನ್​ಬರ್ಗ್​ ಇತ್ತೀಚೆಗೆ ಕೆಂಟುಕಿಯ ಹಿಂದೂ ದೇವಾಲಯದಲ್ಲಿ ನಡೆದ ಪುನರ್ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಉಪಮೇಯರ್ ಬಾರ್ಬರಾ ಸೆಕ್ಸ್​ಟನ್ ಸ್ಮಿತ್ ಸೆಪ್ಟೆಂಬರ್ 3 ರಂದು ಸನಾತನ ಧರ್ಮ ದಿನವನ್ನಾಗಿ ಆಚರಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.

"ಹಿಂದೂ ದೇವಾಲಯದಲ್ಲಿ ನಡೆದ ಮಹಾಕುಂಭಾಭಿಷೇಕ ಸಮಾರಂಭದಲ್ಲಿ ಭಾಗವಹಿಸುವ ಗೌರವ ನನಗೆ ಸಿಕ್ಕಿದೆ. ದೇವಾಲಯವನ್ನು ನವೀಕರಿಸಲು ಮತ್ತು ಪುನಃಸ್ಥಾಪಿಸಲು ನಡೆಸುವ ಆಚರಣೆಗಳು ಸಾಂಸ್ಕೃತಿಕ ಮಹತ್ವ ಹೊಂದಿವೆ. ನಮ್ಮ ಕಚೇರಿ ಸೆಪ್ಟೆಂಬರ್ 3 ಅನ್ನು ಅಧಿಕೃತವಾಗಿ 'ಸನಾತನ ಧರ್ಮ ದಿನ' ಎಂದು ಘೋಷಿಸಿದೆ" ಎಂದು ಮೇಯರ್ ಗ್ರೀನ್​ಬರ್ಗ್​ ಬುಧವಾರ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬರೆದಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಿಷಿಕೇಶದ ಪರಮಾರ್ಥ ನಿಕೇತನದ ಅಧ್ಯಕ್ಷ ಚಿದಾನಂದ ಸರಸ್ವತಿ, ಶ್ರೀ ಶ್ರೀ ರವಿಶಂಕರ್ ಮತ್ತು ಭಗವತಿ ಸರಸ್ವತಿ, ಲೆಫ್ಟಿನೆಂಟ್ ಗವರ್ನರ್ ಜಾಕ್ವೆಲಿನ್ ಕೋಲ್ಮನ್, ಡೆಪ್ಯೂಟಿ ಚೀಫ್ ಆಫ್ ಸ್ಟಾಫ್ ಕೀಶಾ ಡಾರ್ಸೆ ಸೇರಿದಂತೆ ಹಲವಾರು ಆಧ್ಯಾತ್ಮಿಕ ಮುಖಂಡರು ಮತ್ತು ಗಣ್ಯರು ಭಾಗವಹಿಸಿದ್ದರು.

"ಸೆಪ್ಟೆಂಬರ್ 3 ರಂದು ಸನಾತನ ಧರ್ಮ ದಿನ ಆಚರಣೆಯನ್ನು ಘೋಷಣೆ ಮಾಡುವ ಮೂಲಕ ಲೂಯಿಸ್​ವಿಲ್ಲೆ ಮೇಯರ್ ಅವರು ಕೆಂಟುಕಿಯ ಹಿಂದೂ ದೇವಾಲಯದ ಮರು ಪ್ರತಿಷ್ಠಾಪನೆ ಮತ್ತು ಮಹಾಕುಂಭ ಅಭಿಷೇಕ ಕಾರ್ಯಕ್ರಮಕ್ಕೆ ಬಹುದೊಡ್ಡ ಗೌರವ ಸಲ್ಲಿಸಿದ್ದಾರೆ. ಇದು ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿಅದ್ಭುತವಾದ ಹೊಸ ಅಧ್ಯಾಯವಾಗಿದೆ" ಸ್ವಾಮಿ ಚಿದಾನಂದ ಸರಸ್ವತಿಯವರು X ನಲ್ಲಿ ಬರೆದಿದ್ದಾರೆ. ಈ ಹಿಂದೆ, ಜುಲೈ 20 ಅನ್ನು ಕೆಂಟುಕಿಯಲ್ಲಿ 'ಎನ್ಸೈಕ್ಲೋಪೀಡಿಯಾ ಆಫ್ ಹಿಂದೂಯಿಸಂ' ದಿನವೆಂದು ಲೂಯಿಸ್​ವಿಲ್ಲೆ ಮಾಜಿ ಮೇಯರ್ ಗ್ರೆಗ್ ಫಿಶರ್ ಘೋಷಿಸಿದ್ದರು.

ಕಳೆದ ವಾರ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, "ಸೊಳ್ಳೆಗಳು, ಮಲೇರಿಯಾ, ಡೆಂಗ್ಯೂ ಮತ್ತು ಕೊರೊನಾದಂತೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕಾಗಿದೆ" ಎಂದು ಹೇಳಿದ್ದರು. ಪ್ರಚೋದನಕಾರಿ ಹೇಳಿಕೆಗೆ ಮೊದಲ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡುವುದು ಅಗತ್ಯವಿದೆ ಎಂದು ಹೇಳಿದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ ಮತ್ತು ಅದಕ್ಕಾಗಿ ಯಾವುದೇ ಕಾನೂನು ಕ್ರಮ ಎದುರಿಸಲು ಸಿದ್ಧ ಎಂದು ಪದೇ ಪದೆ ಹೇಳಿದ್ದಾರೆ.

ಇದನ್ನೂ ಓದಿ : ಬ್ರಿಟನ್​ ಪ್ರಧಾನಿಯಾಗಿ ರಿಷಿ ಸುನಕ್​ ಮೊದಲ ಭಾರತ ಭೇಟಿ; ಅದ್ದೂರಿ ಸ್ವಾಗತಕ್ಕೆ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.