ETV Bharat / international

ಟರ್ಕಿ, ಸಿರಿಯಾ ಭೂಕಂಪನದಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿ ಸಾವು: ವಿಶ್ವ ಆರೋಗ್ಯ ಸಂಸ್ಥೆ ಕಳವಳ

author img

By

Published : Feb 8, 2023, 7:46 AM IST

Updated : Feb 8, 2023, 8:20 AM IST

ಟರ್ಕಿ ಸಿರಿಯಾದಲ್ಲಿ ಭೀಕರ ಭೂಕಂಪ- ಸಾವಿನ ಸಂಖ್ಯೆ 7 ಸಾವಿರಕ್ಕೆ ಏರಿಕೆ- ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣಾ ಕಾರ್ಯ- ನಿನ್ನೆ ಮತ್ತೆರಡು ಭೂಕಂಪನ ದಾಖಲು- ದುರಂತದ ಬಗ್ಗೆ ಡಬ್ಲ್ಯೂಎಚ್​ಒ ಕಳವಳ

quake-death-toll-in-turkey-syria
ಟರ್ಕಿ, ಸಿರಿಯಾ ಭೂಕಂಪನ

ಇಸ್ತಾಂಬುಲ್​: ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪನದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇಲ್ಲಿಯವರೆಗೂ 7 ಸಾವಿರಕ್ಕೂ ಅಧಿಕ ಜನರು ಸಮಾಧಿಯಾಗಿದ್ದಾರೆ. ಕಂಪನದೇಟಿಗೆ ಟರ್ಕಿಯ ಉತ್ತರಭಾಗ ಅಲ್ಲೋಲ ಕಲ್ಲೋಲವಾಗಿದ್ದು, 5500 ಜನರು ಇಲ್ಲೊಂದೇ ಸಾವಿಗೀಡಾಗಿದ್ದಾರೆ. ಸಿರಿಯಾದಲ್ಲಿ 1800 ಅಧಿಕ ಸಾವು ಸಂಭವಿಸಿವೆ. 10 ಸಾವಿರಕ್ಕೂ ಅಧಿಕ ಜನರು ಮರಣ ಹೊಂದಿರುವ ಬಗ್ಗೆ ಶಂಕಿಸಲಾಗಿದ್ದರೆ, ವಿಶ್ವಸಂಸ್ಥೆ 20 ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗುವ ಕುರಿತು ಆತಂಕ ವ್ಯಕ್ತಪಡಿಸಿದೆ.

ಈ ನಡುವೆ ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ನಡೆಯುತ್ತಿರುವ ಮಧ್ಯೆಯೇ ಮತ್ತೆರಡು ಭೂಕಂಪನ ಉಂಟಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಇವು ರಿಕ್ಟರ್ ಮಾಪಕದಲ್ಲಿ 7.6 ಮತ್ತು 6 ತೀವ್ರತೆಯಿಂದ ಕೂಡಿದ್ದವು. ಇದರಿಂದ ಮೊದಲ ಭೂಕಂಪನದಲ್ಲಿ ಶಿಥಿಲಾವಸ್ಥೆಯ ಅಂಚಿನಲ್ಲಿದ್ದ ಕಟ್ಟಡಗಳು ಪೂರ್ಣವಾಗಿ ಧರಾಶಾಯಿಯಾಗಿವೆ.

ದುರಂತದ ಬಗ್ಗೆ ಡಬ್ಲ್ಯೂಎಚ್​ಒ ಆತಂಕ: ಸಿರಿಯಾ ಮತ್ತು ಟರ್ಕಿಯಲ್ಲಿ ಉಂಟಾದ ಭೂಕಂಪನದ ಭೀಕರತೆ ಕಂಡರೆ 20 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಳ್ಳುವ ಆತಂಕವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಈಗಾಗಲೇ 7 ಸಾವಿರಕ್ಕೂ ಅಧಿಕ ಸಾವಾಗಿದೆ. ದಿನವೂ ಭೂಮಿ ಕಂಪಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಇದು ಅಡ್ಡಿಯಾಗಿದೆ. ಶೀತಗಾಳಿ, ಚಳಿ, ಗಾಯದ ಸಮಸ್ಯೆ, ಆಹಾರ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ಸಾವು ಇನ್ನಷ್ಟು ಹೆಚ್ಚಾಗಲಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಡಬ್ಲ್ಯುಎಚ್​ಒ ಪ್ರಧಾನ ನಿರ್ದೇಶಕ ಡಾ.ಟೆಡ್ರೋಸ್​ ಅಧನೋಮ್​ ಘೇಬ್ರಿಯೇಸಸ್​, ಟರ್ಕಿ, ಸಿರಿಯಾದಲ್ಲಿ ಪ್ರಕೃತಿಯ ಮುನಿಸು ಅನಾಹುತವನ್ನೇ ಸೃಷ್ಟಿಸಿದೆ. ಇದರಿಂದ 2.3 ಕೋಟಿ ಜನರು ಬಾಧಿತರಾಗಿದ್ದಾರೆ. ಇದರಲ್ಲಿ 1.4 ಕೋಟಿ ಮಕ್ಕಳೂ ಇದ್ದಾರೆ. ಅನಾಹುತವನ್ನು ನೋಡುತ್ತಿದ್ದರೆ, ಸಾವಿನ ಸಂಖ್ಯೆ 20 ಸಾವಿರಕ್ಕೂ ಅಧಿಕ ಆಗುವ ಸಾಧ್ಯತೆಯಿದೆ ಎಂದಿದ್ದಾರೆ.

ಕೆಲ ಪ್ರದೇಶಗಳು ತೀವ್ರ ಹಾನಿಯಿಂದಾಗಿ ಅಲ್ಲಿಗೆ ತೆರಳಲೂ ಸಾಧ್ಯವಾಗುತ್ತಿಲ್ಲ. ಇದು ಸಾವಿನ ಸಂಖ್ಯೆ ಹೆಚ್ಚು ಮಾಡುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಬಳಿಕ ಕರಾಳ ವಿಷಯಗಳು ನಮ್ಮ ಮುಂದೆ ಬರಬಹುದು. ಲಘು ಕಂಪನ, ಶೀತಗಾಳಿ, ಮಂಜುಗಡ್ಡೆ ಬೀಳುತ್ತಿರುವುದೂ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಟರ್ಕಿಯಲ್ಲಿ ಕನಿಷ್ಠ 11 ಸಾವಿರ ಕಟ್ಟಡಗಳು, 3 ವಿಮಾನ ನಿಲ್ದಾಣಗಳು ಹಾನಿಗೊಳಗಾಗಿವೆ ಎಂದು ಟರ್ಕಿಯ ಅಧಿಕಾರಿಗಳು ತಿಳಿಸಿದ್ದಾರೆ.

ನೆರವಿಗೆ ಭಾರತದ ನಾಲ್ಕು ವಿಮಾನ: ಭಾರತದ ಮೇಲೆ ಕತ್ತಿ ಮಸೆಯುವ ಟರ್ಕಿ ಭೂಕಂಪನಕ್ಕೆ ತೀವ್ರ ಹಾನಿಗೀಡಾಗಿದ್ದು, ಮಾನವೀಯ ನೆಲೆಯಿಂದ ಆ ದೇಶಕ್ಕೆ ಭಾರತ ನೆರವಿಗೆ ಧಾವಿಸಿದೆ. 4 ವಿಮಾನಗಳಲ್ಲಿ ರಕ್ಷಣಾ, ಮೂಳೆ ತಜ್ಞರು, ಶಸ್ತ್ರಚಿಕಿತ್ಸಕರು ಸೇರಿದಂತೆ ವೈದ್ಯರ ತಂಡ ಎಕ್ಸ್​ರೇ ಯಂತ್ರ, ಆಕ್ಸಿಜನ್​ ಸಮೇತ ತೆರಳಿದೆ. ಇದರ ಜೊತೆಗೆ ಪರಿಹಾರ ಕಾರ್ಯಾಚರಣೆಗೆ ನೆರವಾಗಲು 101 ಸಿಬ್ಬಂದಿ ಇರುವ ಎನ್​ಡಿಆರ್​ಎಫ್​ ತಂಡವನ್ನು ಕಳುಹಿಸಲಾಗಿದೆ.

ಓದಿ: ಟರ್ಕಿಯಲ್ಲಿ ಅವಶೇಷದಡಿಯಿಂದ ಕೇಳಿ ಬಂತು ದ್ವನಿ.. ತಾಯಿಯನ್ನು ರಕ್ಷಿಸಲು ಅಂಗಲಾಚಿದ ಮಗಳು!

Last Updated : Feb 8, 2023, 8:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.