ETV Bharat / international

Dalit activist Makwana dies: ಭಾಷಣ ಮಾಡುತ್ತಿದ್ದಾಗಲೇ ಹೃದಯಾಘಾತ; ದಲಿತ ಕಾರ್ಯಕರ್ತ ಮಿಲಿಂದ್ ಮಕ್ವಾನಾ ನಿಧನ

author img

By

Published : Jul 24, 2023, 2:19 PM IST

Dalit activist Makwana dies: ಅಮೆರಿಕದ ಹಿಂದೂ-ಅಮೆರಿಕನ್ ದಲಿತ ಹಕ್ಕುಗಳ ಹೋರಾಟಗಾರ ಮಿಲಿಂದ ಮಕ್ವಾನಾ ನಿಧನರಾಗಿದ್ದಾರೆ.

California: Prominent Dalit activist dies
California: Prominent Dalit activist dies

ವಾಷಿಂಗ್ಟನ್ (ಯುಎಸ್) : ಜಾತಿ ತಾರತಮ್ಯ ಮಸೂದೆಯ ವಿರುದ್ಧ ಹೋರಾಡುತ್ತಿರುವ ಖ್ಯಾತ ಭಾರತೀಯ-ಅಮೆರಿಕನ್ ದಲಿತ ಕಾರ್ಯಕರ್ತ ಮಿಲಿಂದ್ ಮಕ್ವಾನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಕ್ಯಾಲಿಫೋರ್ನಿಯಾ ಅಸೆಂಬ್ಲಿಯಲ್ಲಿ ಮಂಡನೆಯಾಗಿದ್ದ ಜಾತಿ ತಾರತಮ್ಯ ಮಸೂದೆಯ ವಿರುದ್ಧ ಅವರು ತೀವ್ರವಾಗಿ ಧ್ವನಿ ಎತ್ತಿದ್ದರು. ಕ್ಯುಪರ್ಟಿನೊದಲ್ಲಿ ನಡೆದ ಸಿಟಿ ಕೌನ್ಸಿಲ್ ಸಭೆಯಲ್ಲಿ ಅವರು ಮಸೂದೆಯ ವಿರುದ್ಧ ಭಾವೋದ್ರೇಕದಿಂದ ಮಾತನಾಡುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರುವುದು ಅಮೆರಿಕದ ಹಿಂದೂ ಸಮುದಾಯಕ್ಕೆ ಆಘಾತ ಮೂಡಿಸಿದೆ.

ಕ್ಯಾಲಿಫೋರ್ನಿಯಾ ರಾಜ್ಯ ಅಸೆಂಬ್ಲಿಯಲ್ಲಿ ಜಾತಿ ತಾರತಮ್ಯ ವಿರೋಧಿ ಮಸೂದೆ SB403 ವಿರುದ್ಧ ಸಿಟಿ ಕೌನ್ಸಿಲ್ ಸಭೆಯಲ್ಲಿ ಮಿಲಿಂದ್ ಮಕ್ವಾನಾ ಮಾತನಾಡಿದ್ದರು. ದಿನವಿಡೀ, ಕ್ಯುಪರ್ಟಿನೋ ಮೂಲದ ಕಾರ್ಯಕರ್ತರ ವಿವಿಧ ಸಭೆಗಳು ಮತ್ತು ಸಿಟಿ ಕೌನ್ಸಿಲ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಪ್ರಸ್ತಾವಿತ ಮಸೂದೆಯು ದಲಿತ ವಿರೋಧಿ ಎಂಬುದು ಅವರ ನಿಲುವಾಗಿತ್ತು.

ಕ್ಯುಪರ್ಟಿನೊ ಸಿಟಿ ಕೌನ್ಸಿಲ್‌ನಲ್ಲಿ ವಿಚಾರಣೆಯ ನಂತರ ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿದ್ದು ಸಾವನ್ನಪ್ಪಿದರು. "ದಲಿತರು ಮತ್ತು ಬಹುಜನರು ಸಹ ಹಿಂದೂಗಳು ಎಂಬ ಸ್ಪಷ್ಟ ನಿಲುವು ಮಿಲಿಂದ್ ಅವರದಾಗಿತ್ತು. ಅವರು ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವ ಬಗ್ಗೆ ಉತ್ಸುಕರಾಗಿದ್ದರು ಮತ್ತು ಎಲ್ಲಾ ಸಮುದಾಯಗಳ ನಡುವೆ ಪರಸ್ಪರ ನಂಬಿಕೆ ಮತ್ತು ಸಾಮರಸ್ಯವನ್ನು ಬಯಸಿದ್ದರು" ಎಂದು ಅವರ ಪತ್ನಿ ಪೂರ್ವಿ ಮಕ್ವಾನಾ ಹೇಳಿದ್ದಾರೆ ಎಂದು ಹಿಂದೂ ಸ್ವಯಂಸೇವಕ ಸಂಘ (ಎಚ್‌ಎಸ್‌ಎಸ್) ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ತಮ್ಮ ಜೀವನದುದ್ದಕ್ಕೂ ಅವರು ಧರ್ಮದ ಪರವಾಗಿ ನಿಂತಿದ್ದರು. ಮಿಲಿಂದ್ ಅವರ ನ್ಯಾಯ, ಸಾಮರಸ್ಯ ಮತ್ತು ಧರ್ಮದ ಕನಸನ್ನು ಬೆಂಬಲಿಸಲು ಮತ್ತು ಮುಂದಕ್ಕೆ ಕೊಂಡೊಯ್ಯಲು ನಾನು ಜನತೆಯನ್ನು ಕೋರುತ್ತೇನೆ" ಎಂದು ಪೂರ್ವಿ ಹೇಳಿದರು. ಕಳೆದ ವಾರಾಂತ್ಯದಲ್ಲಿ ಭಾರತೀಯ-ಅಮೆರಿಕನ್ ಸಮುದಾಯವು ನಿಧಿಸಂಗ್ರಹ ಪ್ರಾರಂಭಿಸಿತ್ತು ಮತ್ತು USD 280,000 ಕ್ಕಿಂತ ಹೆಚ್ಚು ನಿಧಿ ಸಂಗ್ರಹಿಸಿದೆ. ವಲಸಿಗ ಸಮುದಾಯವೊಂದು ವಿದೇಶಿ ನೆಲದಲ್ಲಿ ವಾಸಿಸುವುದು, ಬೆಳೆಯುವುದು ಮತ್ತು ಒಗ್ಗಟ್ಟಾಗುವುದು ಸವಾಲಿನ ವಿಷಯವಾಗಿದೆ ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯ ಕೂಡ ಇದಕ್ಕೆ ಹೊರತಾಗಿಲ್ಲ.

ಪೂರ್ವಜರ ಆಧಾರದ ಮೇಲೆ ತಾರತಮ್ಯ ಮಾಡುವುದು, ಹಿಂದೂ-ಅಮೆರಿಕನ್ ಸಮುದಾಯವನ್ನು ಜಾತಿಗಳ ಆಧಾರದ ಮೇಲೆ ಬ್ರಾಂಡ್ ಮಾಡುವ ಕ್ಯಾಲಿಫೋರ್ನಿಯಾದ SB403 ಬಿಲ್ ಅನ್ನು ಮಿಲಿಂದ್ ತೀವ್ರವಾಗಿ ವಿರೋಧಿಸುತ್ತಿದ್ದರು ಎಂದು HSS ಹೇಳಿಕೆಯಲ್ಲಿ ತಿಳಿಸಿದೆ. ಮಿಲಿಂದ್ ಅವರು ಹಿಂದೂ ಸಮುದಾಯದ ಪ್ರತಿನಿಧಿಯಾಗಿದ್ದರು.

ದಮನಿತ ಸಮುದಾಯದ ರಕ್ಷಕ ಎಂಬ ಹೆಸರಿನಲ್ಲಿ ತರಲಾಗುತ್ತಿರುವ ಕ್ಯಾಲಿಫೋರ್ನಿಯಾದ SB403 ಬಿಲ್ ವಾಸ್ತವದಲ್ಲಿ ಪ್ರತಿಕೂಲ ಹಾಗೂ ಪ್ರತಿಗಾಮಿಯಾಗಿದೆ ಎಂಬುದು ಮಿಲಿಂದ್ ಅವರ ಸ್ಪಷ್ಟ ನಿಲುವಾಗಿತ್ತು. ಈ ಕಾನೂನು ಹಿಂದೂ-ಅಮೆರಿಕನ್ ಸಮುದಾಯದ ನಡುವೆ ಸಾಮಾಜಿಕ ವಿಭಜನೆಗೆ ಕಾರಣವಾಗಬಹುದು ಎಂಬ ಆತಂಕ ಅವರಿಗೆ ಇತ್ತು ಎಂದು ಎಚ್‌ಎಸ್‌ಎಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮಿಲಿಂದ್ ಅವರು ಸೇವಾ ಇಂಟರ್ನ್ಯಾಷನಲ್ USA ಹೆಸರಿನ ಸಂಘಟನೆಯಲ್ಲಿ ಸಕ್ರಿಯ ಸ್ವಯಂಸೇವಕರಾಗಿದ್ದರು.

2015 ರಲ್ಲಿ ತಮಿಳುನಾಡಿನಲ್ಲಿ ಸಂಭವಿಸಿದ ಭಾರಿ ಪ್ರವಾಹದ ಸಮಯದಲ್ಲಿ ಮಿಲಿಂದ್ ಅಲ್ಲಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ನಿಯಮಿತವಾಗಿ ಕ್ಯಾಲಿಫೋರ್ನಿಯಾ ಬೇ ಏರಿಯಾ ಸೇವಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಭಾಗವಹಿಸುತ್ತಿದ್ದರು. ಅಂಬೇಡ್ಕರ್-ಫುಲೆ ನೆಟ್‌ವರ್ಕ್ ಆಫ್ ಅಮೇರಿಕನ್ ದಲಿತರು ಮತ್ತು ಬಹುಜನ (APNADB) ಸಂಘಟನೆಯ ಸದಸ್ಯರೂ ಆಗಿದ್ದರು.

ಇದನ್ನೂ ಓದಿ : ಕೆನಡಾ: ಕಾರು ಕಳ್ಳರ ಹಲ್ಲೆಯಿಂದ ಭಾರತೀಯ ವಿದ್ಯಾರ್ಥಿ ದಾರುಣ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.