ETV Bharat / international

ಸುಡಾನ್​ನಲ್ಲಿ ಸೇನಾಪಡೆಗಳ ಘರ್ಷಣೆ: ಓರ್ವ ಭಾರತೀಯ ಸೇರಿ 56 ಸಾವು

author img

By

Published : Apr 16, 2023, 12:28 PM IST

ಸುಡಾನ್​ನ ಸೇನೆ ಹಾಗೂ ಅರೆ ಸೇನಾಪಡೆಗಳ ಮಧ್ಯೆ ನಡೆಯುತ್ತಿರುವ ಭೀಕರ ಹೋರಾಟದಿಂದ 56 ಕ್ಕೂ ಹೆಚ್ಚು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Sudan Clashes: Over 27 Killed
Sudan Clashes: Over 27 Killed

ಖಾರ್ಟೂಮ್ (ಸುಡಾನ್): ಸುಡಾನ್ ರಾಜಧಾನಿ ಖಾರ್ಟೂನ್​​ನಲ್ಲಿ ಭಾನುವಾರ ಮುಂಜಾನೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ 56 ಜನ ಸಾವನ್ನಪ್ಪಿದ್ದಾರೆ ಮತ್ತು 600 ಜನ ಗಾಯಗೊಂಡಿದ್ದಾರೆ. ಅರೆಸೇನಾಪಡೆ ಮತ್ತು ಸಾಮಾನ್ಯ ಸೇನೆಯ ನಡುವೆ ನಡೆಯುತ್ತಿರುವ ಭೀಕರ ಘರ್ಷಣೆಯು ಎರಡನೇ ದಿನಕ್ಕೆ ಕಾಲಿಟ್ಟಿದೆ. ಅಧ್ಯಕ್ಷರ ನಿವಾಸ, ಖಾರ್ಟೂಮ್ ವಿಮಾನ ನಿಲ್ದಾಣ ಮತ್ತು ಇತರ ಪ್ರಮುಖ ನೆಲೆಗಳ ಮೇಲೆ ನಿಯಂತ್ರಣ ಸಾಧಿಸಿದ್ದೇವೆ ಎಂದು ಅರೆಸೇನಾಪಡೆಗಳು ಹೇಳಿವೆ. ಇದರ ನಂತರ ಖಾರ್ಟೂಮ್‌ನ ನಿರ್ಜನ ಬೀದಿಗಳಲ್ಲಿ ಸ್ಫೋಟಗಳು ಸಂಭವಿಸಿದ್ದು, ಭಾರಿ ಗುಂಡಿನ ಸದ್ದು ಮೊಳಗಿದವು.

ಆದಾಗ್ಯೂ, ಅರೆಸೇನಾಪಡೆಯ ಹೇಳಿಕೆಗಳನ್ನು ಸೇನೆಯು ತಳ್ಳಿಹಾಕಿದ್ದು, ರಾಜಧಾನಿ ನಗರಕ್ಕೆ ಹೊಂದಿಕೊಂಡಿರುವ ಓಮ್‌ಡುರ್‌ಮನ್ ನಗರದಲ್ಲಿನ ಸರ್ಕಾರದ ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳಿಗೆ (RSF) ಸೇರಿದ ನೆಲೆಯನ್ನು ಧ್ವಂಸಗೊಳಿಸಿದೆ. ಘರ್ಷಣೆಯಲ್ಲಿ ಮೃತಪಟ್ಟ ಒಟ್ಟು ನಾಗರಿಕರ ಸಂಖ್ಯೆ 56 ಕ್ಕೆ ತಲುಪಿದೆ ಎಂದು ಸುಡಾನ್ ವೈದ್ಯರ ಕೇಂದ್ರ ಸಮಿತಿ ಹೇಳಿದೆ. ಭದ್ರತಾ ಪಡೆಗಳ ಹಲವಾರು ಯೋಧರು ಕೂಡ ಸಾವಿಗೀಡಾಗಿದ್ದಾರೆ ಎಂದು ಅದು ತಿಳಿಸಿದೆ. ಆದರೆ ಈ ಸಾವಿನ ಸಂಖ್ಯೆಗಳನ್ನು ಇನ್ನೂ ಮೃತರ ಪಟ್ಟಿಗೆ ಸೇರಿಸಲಾಗಿಲ್ಲ.

ಸುಡಾನ್ ಸೇನೆ ಮತ್ತು ಅರೆಸೇನಾಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಯಿಂದ ಸುಡಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದಾರೆ. ಸುಡಾನ್‌ನ ದಾಲ್ ಗ್ರೂಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆ ಆಲ್ಬರ್ಟ್ ಆಗಸ್ಟಿನ್ ದಿಕ್ಕು ತಪ್ಪಿ ಬಂದ ಗುಂಡಿನಿಂದ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ ಎಂದು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಖಾರ್ಟೂಮ್​ನಾದ್ಯಂತ ಗುಂಡೇಟು ಮತ್ತು ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ. ಹಲವಾರು ನಗರಗಳಲ್ಲಿ ಸ್ಫೋಟಗಳು ಸಂಭವಿಸಿದ್ದು, ಅಲ್ಲಲ್ಲಿ ಬೆಂಕಿಯಿಂದ ಭಾರಿ ಹೊಗೆ ಮೇಲೇಳುತ್ತಿರುವುದನ್ನು ಟಿವಿ ಮಾಧ್ಯಮಗಳು ವರದಿ ಮಾಡಿವೆ. ಸುಡಾನ್‌ನಿಂದ ಸೌದಿ ಅರೇಬಿಯಾಕ್ಕೆ ಟೇಕ್ ಆಫ್ ಮಾಡಲು ತಯಾರಿ ನಡೆಸುತ್ತಿದ್ದ ಪ್ರಯಾಣಿಕ ವಿಮಾನವು ಶನಿವಾರದಂದು ಘರ್ಷಣೆಯ ಸಮಯದಲ್ಲಿ ಗುಂಡಿನ ದಾಳಿಗೆ ಒಳಗಾಗಿದೆ. ಸೌದಿ ಅರೇಬಿಯಾಕ್ಕೆ ತೆರಳುವ ಏರ್‌ಬಸ್ A330 ರಿಯಾದ್‌ಗೆ ಹೊರಡುವ ಮುನ್ನ ಗುಂಡಿನ ದಾಳಿಗೆ ಒಳಗಾಗಿತ್ತು. ಆದಾಗ್ಯೂ ವಿಮಾನದ ಕ್ಯಾಬಿನ್ ಸಿಬ್ಬಂದಿಯು ಹೇಗೋ ಪಾರಾಗಿ ಸುಡಾನ್​ನಲ್ಲಿರುವ ಸೌದಿ ರಾಯಭಾರ ಕಚೇರಿ ತಲುಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸುಡಾನ್‌ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಂತೆ ಭಾರತೀಯ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ಭಾರತೀಯರು ಬೀದಿಗಿಳಿಯದೆ ತಮ್ಮನ್ನು ತಾವು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು. ತಾಳ್ಮೆ ಹಾಗೂ ಶಾಂತಿಯಿಂದ ಇದ್ದು, ತಾನು ಮುಂದೆ ನೀಡಬಹುದಾದ ಸೂಚನೆಗಳಿಗಾಗಿ ಕಾಯಬೇಕೆಂದು ರಾಯಭಾರ ಕಚೇರಿ ಹೇಳಿದೆ. ಸುಡಾನ್‌ನಲ್ಲಿ ನಡೆಯುತ್ತಿರುವ ಸೇನೆ ಮತ್ತು ಅರೆಸೈನಿಕ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಯನ್ನು ಕೊನೆಗೊಳಿಸಲು ತುರ್ತು ಕ್ರಮಕ್ಕೆ ಮುಂದಾಗಬೇಕೆಂದು ರಷ್ಯಾದ ವಿದೇಶಾಂಗ ಸಚಿವಾಲಯ ಕರೆ ನೀಡಿದೆ. ರಷ್ಯಾದ ಕನಿಷ್ಠ ಮೂವರು ನಾಗರಿಕರು ಸಂಘರ್ಷದಲ್ಲಿ ಸಾವಿಗೀಡಾಗಿದ್ದಾರೆ.

ಇದನ್ನೂ ಒದಿ : ಸುಡಾನ್​ನಲ್ಲಿ ಬುಡಕಟ್ಟು ಜನಾಂಗದವರ ನಡುವೆ ಘರ್ಷಣೆ: 48 ಜನ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.