ETV Bharat / international

ರಷ್ಯಾ-ಉಕ್ರೇನ್ ಯುದ್ಧ: ಖಾರ್ಕಿವ್ ನಗರದಿಂದ ಮಹಾ ಪಲಾಯನ

author img

By

Published : Mar 3, 2022, 6:10 PM IST

ಉಕ್ರೇನ್​ನಲ್ಲಿ ಶೆಲ್ ಅಥವಾ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ರೈಲು ನಿಲ್ದಾಣಗಳಿಗೆ ತೆರಳುತ್ತಿದ್ದಾರೆ. ಒಮ್ಮೊಮ್ಮೆ ಅವರಿಗೂ ಎಲ್ಲಿಗೆ ತೆರಳುತ್ತಿದ್ದೇವೆ ಎಂಬುದು ಗೊತ್ತಿರುವುದಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್​(ಎಪಿ) ಉಲ್ಲೇಖಿಸಿದೆ.

Ukraine refugee count tops 1 million; Russians besiege ports
ರಷ್ಯಾ-ಉಕ್ರೇನ್ ಯುದ್ಧ: ಖಾರ್ಕಿವ್ ನಗರದಿಂದ ಮಹಾ ಪಲಾಯನ

ಕೀವ್(ಉಕ್ರೇನ್): ರಷ್ಯಾದ ಆಕ್ರಮಣದ ನಂತರ ಉಕ್ರೇನ್​ ರಾಷ್ಟ್ರದಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಪಲಾಯನ ಮಾಡಿದ್ದಾರೆ. ಇದು ಈ ಶತಮಾನದಲ್ಲಿ ಅತ್ಯಂತ ವೇಗದ ಪಲಾಯನ ಎಂದು ವಿಶ್ವಸಂಸ್ಥೆ ಗುರುವಾರ ಹೇಳಿದೆ.

ಇದರ ಜೊತೆಗೆ ಉಕ್ರೇನ್​ನ ಎರಡನೇ ಅತ್ಯಂತ ದೊಡ್ಡ ನಗರವಾದ ಖಾರ್ಕಿವ್​ನಲ್ಲಿ ರಷ್ಯಾ ಬಾಂಬ್ ದಾಳಿಯನ್ನು ನಡೆಸಿದೆ. ಎರಡು ಬಂದರುಗಳಿಗೆ ಮುತ್ತಿಗೆ ಹಾಕಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.

ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯು ಪ್ರಕಾರ, ಉಕ್ರೇನ್‌ನ ಒಟ್ಟು ಜನಸಂಖ್ಯೆಯ ಶೇಕಡಾ 2ರಷ್ಟು ಮಂದಿ ಒಂದು ವಾರದೊಳಗೆ ದೇಶದಿಂದ ಹೊರಹೋಗಿದ್ದಾರೆ ಅಥವಾ ಪಲಾಯನ ಮಾಡಿದ್ದಾರೆ. ಖಾರ್ಕಿವ್​ನಲ್ಲಿ ಸಾಮೂಹಿಕವಾಗಿ ಜನರು ಪಲಾಯನ ಮಾಡುತ್ತಿರುವುದು ಕಂಡುಬಂದಿದೆ. ಶೆಲ್ ಮತ್ತು ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ರೈಲು ನಿಲ್ದಾಣಗಳಿಗೆ ತೆರಳುತ್ತಿದ್ದಾರೆ. ಒಮ್ಮೊಮ್ಮೆ ಅವರಿಗೂ ಎಲ್ಲಿಗೆ ತೆರಳುತ್ತಿದ್ದೇವೆ ಎಂಬುದು ಗೊತ್ತಿರುವುದಿಲ್ಲ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ವರದಿಯಲ್ಲಿ ತಿಳಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್​ ಉಲ್ಲೇಖಿಸಿದೆ.

ರಾತ್ರಿಯಿಡೀ ಉಕ್ರೇನ್ ರಾಜಧಾನಿ ಕೀವ್ ಮೇಲೆ ದಾಳಿ ನಡೆಸಲಾಗಿದೆ. ಸರ್ಕಾರದ ಪ್ರಧಾನ ಕಚೇರಿಯಿಂದ ದಕ್ಷಿಣಕ್ಕೆ 7 ಕಿಲೋಮೀಟರ್ ದೂರದಲ್ಲಿರುವ ಲೈಸಾ ಹೋರಾ ಜಿಲ್ಲೆಯಲ್ಲಿ ಪ್ರಸಾರ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ ಈ ದಾಳಿಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರಷ್ಯಾ ಹೇಳುತ್ತಿದೆ.

ಗೊಂದಲದಲ್ಲಿರುವ ಮಕ್ಕಳು: ಉಕ್ರೇನ್ ಸೈನಿಕರು ರಷ್ಯಾ ಸೈನಿಕರ ವಿರುದ್ಧ ಹೋರಾಡುವುದನ್ನು ಮುಂದುವರೆಸಬೇಕು. ರಷ್ಯಾ ಆಕ್ರಮಣಕಾರರು ಶಾಂತಿಯನ್ನು ಬಯಸುವುದಿಲ್ಲ. ಆಕ್ರಮಣಕಾರರು ಶಾಂತಿಯಿಂದಿರಲು ಬಿಡಬಾರದು ಎಂದಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಸೈನಿಕರನ್ನು'ಗೊಂದಲದಲ್ಲಿರುವ ಮಕ್ಕಳು' ಎಂದು ಹೋಲಿಕೆ ಮಾಡಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್​ ಮೇಲೆ ರಷ್ಯಾ ಆಕ್ರಮಣದ ವಿಚಾರವಾಗಿ ವೋಟಿಂಗ್ ವೇಳೆ 141 ರಾಷ್ಟ್ರಗಳು ರಷ್ಯಾ ದಾಳಿಯ ವಿರುದ್ಧ ಮತ ಚಲಾಯಿಸಿದರೆ, ಐದು ರಾಷ್ಟ್ರಗಳು ರಷ್ಯಾ ಪರವಾಗಿ ಮತ ಚಲಾಯಿಸಿವೆ. ಇನ್ನು ಭಾರತ ಸೇರಿ 35 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿದ್ದು, ಇದಾದ ನಂತರವೂ ರಷ್ಯಾ ದಾಳಿಯನ್ನು ತೀವ್ರಗೊಳಿಸಿದೆ.

'ಯುದ್ಧಕ್ಕೆ ಹಣವಿಲ್ಲ': ರಷ್ಯಾದ ಆರ್ಥಿಕತೆಯು ಈಗಾಗಲೇ ಸಂಕಷ್ಟದಲ್ಲಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧವನ್ನು ಶೀಘ್ರವಾಗಿ ಕೊನೆಗೊಳಿಸಲು ಒಂದು ಮಾರ್ಗವನ್ನು ಕಂಡುಕೊಳ್ಳದಿದ್ದರೆ ಗಂಭೀರವಾದ ಆಂತರಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ ಎಂದು ರಷ್ಯಾ ರಕ್ಷಣಾ ಸಲಹೆಗಾರ ಫೆಲ್ಗೆನ್‌ಹೌರ್ ಹೇಳಿದ್ದಾರೆ.

ಈ ಯುದ್ಧವನ್ನು ಮುಂದುವರೆಸಲು ಹಣವಿಲ್ಲ ಎಂದಿರುವ ಫೆಲ್ಗೆನ್‌ಹೌರ್ ಈ ದಾಳಿಯನ್ನು ಆದಷ್ಟು ಬೇಗ ಮುಗಿಸದಿದ್ದರೆ, ವಿಜಯಶಾಲಿಯಾಗದಿದ್ದರೆ, ಸಂಕಷ್ಟ ಎದುರಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಂದರು ನಗರಗಳಿಗೂ ಮುತ್ತಿಗೆ: ಉಕ್ರೇನ್‌ನಾದ್ಯಂತ ಯುದ್ಧ ಮುಂದುವರೆದಿದೆ. ಅಜೋವ್ ಸಮುದ್ರದ ಬಳಿಯಿರುವ ದೊಡ್ಡ ನಗರವಾದ ಮರಿಯುಪೋಲ್ ಅನ್ನು ರಷ್ಯಾದ ಪಡೆಗಳು ಸುತ್ತುವರೆದಿದೆ ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯವು ಎಂದು ಹೇಳಿದೆ. ಮತ್ತೊಂದು ಪ್ರಮುಖ ಬಂದರು ಆದ ಹಡಗು ನಿರ್ಮಾಣದ ಕೇಂದ್ರವಾದ ಕಪ್ಪು ಸಮುದ್ರದ ಬಳಿಯಿರುವ ಖೇರ್ಸನ್ ಸ್ಥಿತಿ ಈಗ ಅಸ್ಪಷ್ಟವಾಗಿದೆ.

ಮರಿಯುಪೋಲ್ ಅನ್ನು ವಶಕ್ಕೆ ತೆಗೆದುಕೊಳ್ಳಬೇಕೆಂಬ ತನ್ನ ಗುರಿಯನ್ನು ರಷ್ಯಾ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದ್ದು, ಖೆರ್ಸನ್ ನಗರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ರಷ್ಯಾ ಪಡೆಗಳು ಖೇರ್ಸನ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಹೇಳಿಕೊಂಡಿವೆ.

ಖೇರ್ಸನ್​​ನಲ್ಲಿ ಕರ್ಫ್ಯೂ: ಖೇರ್ಸನ್​ನಲ್ಲಿ ಹೋರಾಟ ಇನ್ನೂ ಮುಂದುವರೆಯುತ್ತಿದ್ದು, ಖೇರ್ಸನ್​ ನಗರದ ಕುರಿತು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಹೇಳಿಕೊಂಡಿದೆ. ಖೆರ್ಸನ್‌ನ ಮೇಯರ್ ಆದ ಇಗೊರ್ ಕೊಲಿಖೇವ್ ಹೇಳುವಂತೆ ರಷ್ಯಾದ ಸೈನಿಕರು ಖೇರ್ಸನ್​ ನಗರದಲ್ಲಿದ್ದಾರೆ ಎಂದು ಹೇಳಿದ್ದಾರೆ. ನಾವು ಖೇರ್ಸನ್ ನಗರದಲ್ಲಿ ಉಕ್ರೇನ್ ಪಡೆಗಳನ್ನು ಹೊಂದಿಲ್ಲ. ಇಲ್ಲಿರುವುದು ಜನರು ಮಾತ್ರ ಎಂದು ಫೇಸ್​ಬುಕ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಖೇರ್ಸನ್ ನಗರದಲ್ಲಿ ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಆಹಾರ ಮತ್ತು ಔಷಧಿಗಾಗಿ ನಗರದೊಳಗೆ ತೆರಳುವುದನ್ನು ನಿರ್ಬಂಧಿಸಲಾಗಿದೆ. ಇಬ್ಬರು ಮಾತ್ರವೇ ಗುಂಪುಗೂಡಲು ಅವಕಾಶ ನೀಡಲಾಗಿದೆ. ನಗರದಲ್ಲಿರುವ ರಷ್ಯಾ ಸೇನೆಯನ್ನು ಪ್ರಚೋದಿಸಬಾರದು ಎಂಬ ನಿಯಮಗಳನ್ನು ಹೇರಲಾಗಿದೆ.

ಸಾವು-ನೋವಿನ ರಷ್ಯಾದ ಮೊದಲ ವರದಿ: ಯುದ್ಧ ಆರಂಭವಾದಾಗಿನಿಂದ ಮೊದಲ ಬಾರಿಗೆ ತನ್ನ ಕಡೆಯ ಮಿಲಿಟರಿ ಸಾವುನೋವುಗಳನ್ನು ರಷ್ಯಾ ವರದಿ ಮಾಡಿದೆ. ಸುಮಾರು 500 ಸೈನಿಕರು ಸಾವನ್ನಪ್ಪಿ, 1,600 ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾ ಹೇಳಿಕೊಂಡಿದೆ. ಉಕ್ರೇನ್ ಕೂಡಾ ಆಗಾಗ ಮಿಲಿಟರಿ ಸಾವು- ನೋವುಗಳ ಬಗ್ಗೆ ಹೇಳಿಕೊಳ್ಳುತ್ತಿದ್ದು, ಸ್ವತಂತ್ರವಾಗಿ ಪರಿಶೀಲನೆ ನಡೆಸಲು ಸ್ವತಂತ್ರ ಸುದ್ದಿಸಂಸ್ಥೆಗಳಿಂದ ಸಾಧ್ಯವಾಗುತ್ತಿಲ್ಲ.

ಉಕ್ರೇನ್‌ನ ಮಿಲಿಟರಿ ಜನರಲ್ ಸಿಬ್ಬಂದಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ರಷ್ಯಾದ ಪಡೆಗಳ ಕಡೆಗೆ ಸುಮಾರು 9 ಸಾವಿರ ಮಂದಿ ಸಾವು-ನೋವಿಗೆ ಒಳಗಾಗಿದ್ದಾರೆ ಎಂದು ಉಲ್ಲೇಖಿಸಿದ್ದು, ಈ ಅಂಕಿ ಅಂಶ ಮೃತಪಟ್ಟವರೋ? ಅಥವಾ ಗಾಯಾಳುಗಳೋ? ಅಥವಾ ಮೃತಪಟ್ಟವರು ಮತ್ತು ಗಾಯಾಳುಗಳ ಒಟ್ಟು ಮೊತ್ತವೋ ಎಂಬುದನ್ನು ಸ್ಪಷ್ಟ ಪಡಿಸಿಲ್ಲ.

ಇದನ್ನೂ ಓದಿ: ರಾಜಧಾನಿ ಕೀವ್ ಪರಿಸ್ಥಿತಿ ಕಠಿಣವಾಗಿದ್ದು, ನಮ್ಮ ನಿಯಂತ್ರಣದಲ್ಲಿದೆ: ಉಕ್ರೇನ್‌

ಅದೇ ಪೋಸ್ಟ್​ನಲ್ಲಿ ರಷ್ಯಾ 217 ಯುದ್ಧ ಟ್ಯಾಂಕ್​ಗಳನ್ನು ಮತ್ತು 30 ಯುದ್ಧ ವಿಮಾನಗಳನ್ನು ಮತ್ತು ಹೆಲಿಕಾಪ್ಟರ್​ಗಳನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ. ಈ ಮಾಹಿತಿಯನ್ನು ಸುದ್ದಿಸಂಸ್ಥೆಗಳು ದೃಢೀಕರಿಸಲು ಈವರೆಗೂ ಸಾಧ್ಯವಾಗಿಲ್ಲ.

ಝೆಲೆನ್ಸ್ಕಿ ಶ್ಲಾಘನೆ: ಗುರುವಾರ ಮುಂಜಾನೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಡಿದ ಭಾಷಣದಲ್ಲಿ ಉಕ್ರೇನ್​ ಸೇನೆಯ ಪ್ರತಿರೋಧವನ್ನು ಶ್ಲಾಘಿಸಿದ್ದಾರೆ. ನಾವು ಒಂದು ವಾರದಲ್ಲಿ ಶತ್ರುಗಳ ಯೋಜನೆಗಳನ್ನು ನಾಶಪಡಿಸಿದ್ದೇವೆ.

ಆಕ್ರಮಣಕಾರರಿಗೆ ಇಲ್ಲಿ ಶಾಂತಿ ಇರುವುದಿಲ್ಲ. ಅವರಿಗೆ ಆಹಾರ ಕೂಡಾ ಇರುವುದಿಲ್ಲ. ಒಂದು ಕ್ಷಣವೂ ಅವರನ್ನು ಶಾಂತವಾಗಿರಲು ಬಿಡುವುದಿಲ್ಲ ಎಂದಿದ್ದಾರೆ. ಇದರ ಜೊತೆಗೆ ಆಹಾರಕ್ಕಾಗಿ ಅಂಗಡಿಗಳಿಗೆ ತೆರಳುತ್ತಿರುವ ರಷ್ಯಾ ಸೈನಿಕರ ಕುರಿತು ವ್ಯಂಗ್ಯವಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.