ETV Bharat / entertainment

'ವೈದ್ಯೆಯಾದ ನನಗೆ ಜೀವದ ಬೆಲೆ ಗೊತ್ತು': ವಿವಾದದ ಬೆನ್ನಲ್ಲೇ ನಟಿ ಸಾಯಿ ಪಲ್ಲವಿ ಸ್ಪಷ್ಟನೆ

author img

By

Published : Jun 19, 2022, 7:34 AM IST

"ಬೇರೆಯವರ ಜೀವವನ್ನು ತೆಗೆದುಕೊಳ್ಳುವ ಹಕ್ಕು ನಮಗೆ ಇಲ್ಲ. ನಾನು ಎಂಬಿಬಿಎಸ್​ ಪದವೀಧರೆಯಾಗಿ ಎಲ್ಲರ ಜೀವವೂ ಮುಖ್ಯ ಎಂದು ನಂಬಿದ್ದೇನೆ'- ನಟಿ ಸಾಯಿ ಪಲ್ಲವಿ.

Sai Pallavi
ನಟಿ ಸಾಯಿ ಪಲ್ಲವಿ

ಮುಂಬೈ: 'ವಿರಾಟ ಪರ್ವಂ' ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ನಟಿ ಸಾಯಿ ಪಲ್ಲವಿ ನೀಡಿದ ಒಂದು ಹೇಳಿಕೆ ವಿವಾದಕ್ಕೆ ನಾಂದಿ ಹಾಡಿತ್ತು. ಧರ್ಮ ಮತ್ತು ದೇವರ ಹೆಸರಿನಲ್ಲಿ ಜನರ ಮೇಲೆ ಹಲ್ಲೆ ಮಾಡುವುದು ತಪ್ಪು ಎಂದು ಹೇಳಿರುವ ಅವರು, 'ದಿ ಕಾಶ್ಮೀರ್​ ಫೈಲ್ಸ್' ಸಿನಿಮಾ ಮತ್ತು ಮುಸ್ಲಿಂ ಚಾಲಕನ ಮೇಲಿನ ಹಲ್ಲೆಯ ಘಟನೆಯನ್ನು ಪರಸ್ಪರ ಹೋಲಿಸಿ ಮಾತನಾಡಿದ್ದರು.

ಈ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಸಾಯಿ ಪಲ್ಲವಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಇದರ ಬಗ್ಗೆ ನಟಿ ವಿಡಿಯೋ ಪೋಸ್ಟ್ ಮಾಡಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

"ಹೃದಯದಿಂದ ಮಾತನಾಡುವಾಗ ನಾನು ಎರಡು ಬಾರಿ ಯೋಚಿಸುತ್ತೇನೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನನಗೆ ಎಡವೋ ಅಥವಾ ಬಲವೋ ಎಂದು ಪ್ರಶ್ನೆ ಮಾಡಲಾಯಿತು. ಆಗ ನಾನು ತಟಸ್ಥ ಎನ್ನುವ ಉತ್ತರ ಕೊಟ್ಟೆ. ನಾವು ಮೊದಲು ಮನುಷ್ಯರಾಗಬೇಕು ಎಂದು ಹೇಳಿದ್ದೆ. ನಾನು ವಿಚಾರಗಳನ್ನು ಹೇಗೆ ನೋಡುತ್ತೇನೆ ಎನ್ನುವುದನ್ನು ಹೇಳಿದ್ದೆ.

ಎರಡು ಘಟನೆ ನನ್ನನ್ನು ವಿಚಲಿತವಾಗಿಸಿತ್ತು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದ ನಂತರ ನಾನು ಡಿಸ್ಟರ್ಬ್​ ಆಗಿದ್ದೆ. ಅಲ್ಲಿ ನಡೆದ ಹತ್ಯೆಗಳಿಗೆ ಮರುಗಿದ್ದೆ. ನಿರ್ದೇಶಕರ (ವಿವೇಕ್​ ಅಗ್ನಿಹೋತ್ರಿ) ಜತೆ ಈ ಬಗ್ಗೆ ಮಾತನಾಡಿದ್ದೆ. ಅದೇ ರೀತಿ ಕೊವಿಡ್ ಸಂದರ್ಭದಲ್ಲಿ ಆದ ಗುಂಪು ಹಲ್ಲೆ ವಿಡಿಯೋ ನೋಡಿ ವಿಚಲಿತಗೊಂಡೆ. ಹಿಂಸೆ ತಪ್ಪು. ಯಾವುದೇ ಧರ್ಮದ ಹೆಸರಲ್ಲಿ ಹಿಂಸೆ ಮಾಡುವುದು ಪಾಪ. ಗುಂಪು ಹಲ್ಲೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದರು. ನಿಜಕ್ಕೂ ಅದು ಬೇಸರದ ವಿಚಾರ. ಬೇರೆಯವರ ಜೀವವನ್ನು ತೆಗೆದುಕೊಳ್ಳುವ ಹಕ್ಕು ನಮಗೆ ಇಲ್ಲ. ನಾನು ಎಂಬಿಬಿಎಸ್​ ಪದವೀಧರೆಯಾಗಿ ಎಲ್ಲರ ಜೀವವೂ ಮುಖ್ಯ ಎಂದು ನಂಬಿದ್ದೇನೆ" ಎಂದಿದ್ದಾರೆ.

ಇದನ್ನೂ ಓದಿ: ಧಾರ್ಮಿಕ ಸಂಘರ್ಷ: ಕಮೆಂಟ್​ ಮಾಡಿ ಟ್ರೋಲ್​ ಸುಳಿಗೆ ಸಿಲುಕಿದ ನಟಿ ಸಾಯಿಪಲ್ಲವಿ

"ಎಲ್ಲಾ ಭಾರತೀಯರು ಸಹೋದರರಿದ್ದಂತೆ ಎಂದು ಹೇಳುತ್ತಾ ಬೆಳೆದವರು ನಾವು. ನನ್ನ ಮನಸ್ಸಲ್ಲಿ ಅದು ಆಳವಾಗಿ ಕೂತಿದೆ. ನಾನು ಮಾತನಾಡುವಾಗ ತಟಸ್ಥವಾಗಿ ಮಾತನಾಡುತ್ತೇನೆ. ನಾನು ಮಾತನಾಡಿದ್ದನ್ನು ಬೇರೆಯದ್ದೇ ರೀತಿ ಅರ್ಥೈಸಿದ್ದು, ನಿಜಕ್ಕೂ ಬೇಸರ ತರಿಸುವಂಥದ್ದು. ಪೂರ್ತಿ ಸಂದರ್ಶನ ನೋಡದೆ ಕೆಲವರು ಮಾತನಾಡಿದ್ದಾರೆ. ನನ್ನ ಪರವಾಗಿ ನಿಂತವರಿಗೆ ಧನ್ಯವಾದ" ಎಂದು ನಟಿ ಸಾಯಿ ಪಲ್ಲವಿ ಹೇಳಿದರು.

ಏನಿದು ವಿವಾದ?: ಸಿನಿಮಾದ ಪ್ರಚಾರದ ವೇಳೆ ಸಾಯಿ ಪಲ್ಲವಿ, ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಬಗ್ಗೆ ಮಾತನಾಡಿದ್ದರು. "ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಎರಡೂ ಒಂದೇ ಅಲ್ಲವೇ" ಎಂದು ಪ್ರಶ್ನಿಸಿದ್ದರು.

ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಟಿಯ ವಿರುದ್ಧ ಹಲವಾರು ಟೀಕೆಗಳು ವ್ಯಕ್ತವಾಗಿದ್ದವು.

ಇದನ್ನೂ ಓದಿ: 'ಧರ್ಮಕ್ಕಿಂತಲೂ ಮನುಷ್ಯತ್ವ ದೊಡ್ಡದು' ಎಂದಿದ್ದ ನಟಿ ಸಾಯಿ ಪಲ್ಲವಿ ವಿರುದ್ಧ ಎಫ್​ಐಆರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.