ETV Bharat / entertainment

ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ, ಹೊಸಪೇಟೆ ಘಟನೆ ನನ್ನನ್ನು ಘಾಸಿಗೊಳಿಸಿದೆ: ಕಿಚ್ಚ ಸುದೀಪ್​

author img

By

Published : Dec 20, 2022, 11:34 AM IST

Updated : Dec 20, 2022, 2:43 PM IST

ನಟ ದರ್ಶನ್​ ವಿರುದ್ಧ ನಡೆದ ಅಮಾನವೀಯ ಘಟನೆ ವಿರುದ್ಧ ಕಿಚ್ಚ ಸುದೀಪ್​ ಅವರು ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

Darshan and Sudeep
ನಟರಾದ ದರ್ಶನ್​ ಹಾಗೂ ಸುದೀಪ್​

ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡು ಬಿಡುಗಡೆ ಸಮಾರಂಭದಲ್ಲಿ ನಟ ದರ್ಶನ್​ ಮೇಲೆ ನಡೆದ ಅಮಾನವೀಯ ಘಟನೆಯನ್ನು ಕನ್ನಡ ಚಿತ್ರರಂಗದ ಬಹುತೇಕ ತಾರೆಗಳು ಖಂಡಿಸಿದ್ದರು. ಇದೀಗ ಕನ್ನಡ ಚಿತ್ರರಂಗದ ಬಾದ್​ಶಾ ಸುದೀಪ್​ ಅವರು ಕೂಡ 'ಬಂಡಾಯ ಯಾವಾಗಲೂ ಸಮಸ್ಯೆಗೆ ಉತ್ತರ ಅಲ್ಲ' ಎಂದು ಟ್ವೀಟ್​ ಮಾಡುವ ಮೂಲಕ ದರ್ಶನ ಅವರ ಮೇಲೆ ನಡೆದ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಮೂರು ಪುಟಗಳ ಟ್ವೀಟ್​ ಮಾಡಿರುವ ಕಿಚ್ಚ, ಪ್ರತಿಯೊಂದು ಸಮಸ್ಯೆಗೂ ಒಂದಲ್ಲಾ ಒಂದು ಪರಿಹಾರ ಇದ್ದೇ ಇರುತ್ತದೆ. ಯಾವುದೇ ಸಮಸ್ಯೆಯನ್ನು ಶಾಂತ ರೀತಿಯಲ್ಲಿ ಪರಿಹರಿಸಬಹುದು. ಅದರಲ್ಲೂ ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಘನತೆ ಇರುತ್ತದೆ. ಹೊಸಪೇಟೆ ವಿಡಿಯೋ ನೋಡಿದ ಮೇಲೆ ನನ್ನ ಮನಸ್ಸಿಗೆ ತೀರಾ ನೋವಾಗಿದೆ. ಒಬ್ಬ ವ್ಯಕ್ತಿಯ ಘನತೆಯನ್ನು ವಧೆ ಮಾಡುವಂತಹ ಕೃತ್ಯ ಅದು. ಅಲ್ಲಿ ಚಿತ್ರದ ನಾಯಕಿ ಸೇರಿದಂತೆ ಅನೇಕರು ಸಮಾರಂಭದ ಭಾಗವಾಗಿ ನಿಂತಿದ್ದರು. ಆಗ ಅಲ್ಲಿದ್ದ ಕೋಪಕ್ಕೂ ಅವರಿಗೂ ಯಾವುದೇ ಸಂಬಂಧವಿರಲಿಲ್ಲ. ಅವರನ್ನು ಸಾರ್ವಜನಿಕವಾಗಿ ಅವಮಾನಿಸಿರುವುದನ್ನು ನೋಡಿದರೆ, ನಾವು ಕನ್ನಡಿಗರು ಹೌದೇ? ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯ ಒಂದು ಮೂರ್ಖತನದ ವರ್ತನೆ ಒಬ್ಬ ನಟನ ಇಡೀ ಅಭಿಮಾನಿಗಳ ಬಳಗಕ್ಕೆ ಕೆಟ್ಟ ಹೆಸರು ತರಬಾರದು. ದರ್ಶನ್​ ಹಾಗೂ ಅಲ್ಲಿದ್ದ ಅಭಿಮಾನಿ ಬಳಗಗಳ ನಡುವೆ ಆಹ್ಲಾದಕರ ವಾತಾವರಣ ಇರಲಿಲ್ಲ. ಆದರೆ ಆ ರೀತಿಯ ವರ್ತನೆಯನ್ನು ನಿಮ್ಮ ನೆಚ್ಚಿನ ನಟ ಮೆಚ್ಚುತ್ತಿದ್ದರೇ? ಎಂದು ಅಭಿಮಾನಿಗಳನ್ನು ಕಿಚ್ಚ ಪ್ರಶ್ನಿಸಿದ್ದಾರೆ.

ದರ್ಶನ್ ಅವರು ಕನ್ನಡ ಇಂಡಸ್ಟ್ರಿಗೆ ಮತ್ತು ನಮ್ಮ ಭಾಷೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದಾಕ್ಷಣ ನನ್ನ ಮನಸ್ಸಿಗೆ ತಟ್ಟಿದ ವಾಸ್ತವ ವಿಷಯಗಳ ಬಗ್ಗೆ ಮಾತನಾಡುವುದನ್ನು ನಾನೆಂದಿಗೂ ನಿಲ್ಲಿಸುವುದಿಲ್ಲ. ಅವರ ಮೇಲೆ ಈ ರೀತಿ ಕೃತ್ಯ ನಡೆಯಬಾರದಿತ್ತು. ಇದು ನನಗೆ ನಿಜವಾಗಿಯೂ ಬೇಸರ ತಂದಿದೆ. ಈ ಘಟನೆ ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ಕನ್ನಡ ಉದ್ಯಮ ಮತ್ತು ನಮ್ಮ ನೆಲದ ಜನರು ಒಳ್ಳೆಯ ಕಾರಣಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಅದಕ್ಕಾಗಿ ಕನ್ನಡ ಮತ್ತು ಕರ್ನಾಟಕವನ್ನು ಎಲ್ಲಾ ರಾಜ್ಯಗಳಲ್ಲಿ ಗೌರವಿಸಲಾಗುತ್ತದೆ. ನಾವು ಈ ರೀತಿಯ ಸಂದೇಶವನ್ನು ಹರಡಬಾರದು. ಈ ರೀತಿಯ ಬಂಡಾಯ ಯಾವುದೇ ಪರಿಸ್ಥಿತಿಗೆ ಉತ್ತರ ಅಥವಾ ಪ್ರತಿಕ್ರಿಯೆ ಅಲ್ಲ ಎಂದು ಕಿಚ್ಚ ಬರೆದುಕೊಂಡಿದ್ದಾರೆ.

ನಟರು, ಅಭಿಮಾನಿಗಳು ನಡುವೆ ಹಲವು ಕಾರಣಗಳಿಗೆ ಭಿನ್ನಾಭಿಪ್ರಾಯಗಳಿವೆ ಎಂಬುದು ನನಗೆ ಗೊತ್ತಿದೆ. ಅದರ ನಡುವೆ ಬಂದು ಮಾತನಾಡಲು ನಾನು ಯಾರೂ ಅಲ್ಲ. ಆದರೆ ನಾನು ದರ್ಶನ್ ಮತ್ತು ಪುನೀತ್ ಇಬ್ಬರಿಗೂ ಆತ್ಮೀಯನಾಗಿದ್ದೆ. ಅವರ ಜೀವನದಲ್ಲಿ ನನಗೆ ನೀಡಿದ್ದ ಸ್ಥಾನವನ್ನು ಉಳಿಸಿಕೊಂಡು ನನ್ನ ಭಾವನೆಗಳನ್ನು ನಾನು ಹಂಚಿಕೊಂಡಿದ್ದೇನೆ. ಯಾರನ್ನಾದರೂ, ಯಾವುದೇ ಪರಿಸ್ಥಿತಿಯನ್ನಾದರೂ ಗೆಲ್ಲಲು ಪ್ರೀತಿ ಏಕೈಕ ಮಾರ್ಗ. ಈ ರೀತಿಯ ದಾರಿ ನಮ್ಮ ಕನ್ನಡ ಚಿತ್ರರಂಗ ಮಾತ್ರವಲ್ಲ, ಇಡೀ ಕನ್ನಡ ನಾಡಿಗೆ ಶೋಭೆಯಲ್ಲ. ನಾನೇನಾದರೂ ಹೆಚ್ಚು ಮಾತನಾಡಿದ್ದರೆ ಕ್ಷಮಿಸಿ ಎಂದು ಬಾದ್​ ಶಾ ಟ್ವಿಟರ್​ನಲ್ಲಿ ಪತ್ರದ ಮೂಲಕ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ: ನಟ ಶಿವರಾಜ್​ ಕುಮಾರ್

Last Updated :Dec 20, 2022, 2:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.