ETV Bharat / entertainment

ಸಾಮಾಜಿಕ ಸಂದೇಶ ಸಾರುವ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ತಂದೆಗೆ ತಕ್ಕ‌ ಮಗ

author img

By

Published : Oct 29, 2022, 7:01 AM IST

ಅಪ್ಪು ಎರಡು ತಿಂಗಳ ಮಗುವಾಗಿದ್ದಾಗಲೇ ಬೆಳ್ಳಿ ಪರದೆಯ ಮೇಲೆ ಮಿಂಚಿದ್ದರು. ಸಿನಿಮಾ ಲೋಕದಲ್ಲಿ ಅದ್ಬುತ ನಟನೆಯ ಮೂಲಕ ಅಭಿಮಾನಿಗಳಿಗೆ ಮನೋರಂಜನೆಯ ರಸದೌತಣ ಉಣಬಡಿಸುತ್ತಿದ್ದ ಪುನೀತ್ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಸಿನಿಮಾಗಳನ್ನು ಕೊಟ್ಟಿದ್ದಾರೆ.

ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್
ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್

ಬೆಂಗಳೂರು: ಪುನೀತ್ ರಾಜ್‌ಕುಮಾರ್ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಅಚ್ಚುಮೆಚ್ಚಿನ ನಾಯಕ. ಅಗಲಿದ ಅಪ್ಪು ನೆನೆದಷ್ಟು ನಗುವಿನ ಬಿಗಿದಪ್ಪುಗೆಯ ಬಾಂಧವ್ಯ ಬೆಸೆಯುತ್ತೆ. ಅಪ್ಪು ಅಗಲಿ ಒಂದು ವರ್ಷವಾದರೂ, ಅಸಂಖ್ಯಾತ ಅಭಿಮಾನಿಗಳ ಪಾಲಿಗೆ ಇನ್ನೂ ಅವರು ಅಜಾರಮರ. ಸಿನಿಮಾ ನಾಯಕ ಅಪ್ಪು ಮನೋರಂಜನೆ ಜೊತೆಗೆ ಸಾಮಾಜಿಕ‌‌ ಸಂದೇಶ ಸಾರುವ ಸಿನಿಮಾಗಳನ್ನು ನೀಡುವ ಮೂಲಕ ಸಮಾಜಮುಖಿ ನಾಯಕನಾಗಿ ಹೊರ ಹೊಮ್ಮಿದ್ದರು.

ಪುನೀತ್ ರಾಜ್‍ಕುಮಾರ್ ಕರುನಾಡ ಸಿನಿ ಅಭಿಮಾನಿಗಳ ಪಾಲಿನ ರಾಜಕುಮಾರ. ಜನರ ಪಾಲಿನ ಪ್ರೀತಿಯ ಅಪ್ಪು. ಅಚ್ಚುಮೆಚ್ಚಿನ ಅಪ್ಪು ಅಗಲಿ ವರ್ಷ ಕಳೆದಿದೆ. ಆದರೂ ಪುನೀತ್ ರ ನೆನಪು ಮಾತ್ರ ಇನ್ನೂ ಜೀವಂತ. ಅಪ್ಪು ಎರಡು ತಿಂಗಳ ಮಗುವಾಗಿದ್ದಾಗಲೇ ಬೆಳ್ಳಿ ಪರದೆ ಮೇಲೆ ಮಿಂಚಿದ್ದರು. ಸಿನಿಮಾ ಲೋಕದಲ್ಲಿ ಅದ್ಬುತ ನಟನೆಯ ಮೂಲಕ ಅಭಿಮಾನಿಗಳಿಗೆ ಮನೋರಂಜನೆಯ ರಸದೌತಣ ಉಣ ಬಡಿಸುತ್ತಿದ್ದ ಪುನೀತ್ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾಗಳನ್ನು ಮಾಡುವ ಮೂಲಕ ಸಮಾಜಮುಖಿ ಎನ್ನಿಸಿಕೊಂಡಿದ್ದರು.

ನಿಜ ಜೀವನದಲ್ಲಿ ಹಲವರಿಗೆ ಪ್ರೇರಕ ಶಕ್ತಿ: ಅಪ್ಪ, ವರನಟ ರಾಜ್ ಕುಮಾರ್ ಹಾಕಿಕೊಟ್ಟ ಮೇರುಪಂಕ್ತಿಯಲ್ಲೇ ನಡೆದ ಪುನೀತ್ ಕಮರ್ಷಿಯಲ್ ಸಿನಿಮಾಗಳ ನಾಯಕನಾಗಿದ್ದಷ್ಟೇ ಅಲ್ಲ, ಸಿನಿಮಾ ಮೂಲಕ ಸಾಮಾಜಕ್ಕೆ ಒಂದು ಸಂದೇಶ ನೀಡುವ ಕೆಲಸವನ್ನೂ ಜವಾಬ್ದಾರಿಯುತವಾಗಿ ಮಾಡುತ್ತಿದ್ದರು. ತಮ್ಮ ಪ್ರತಿ ಸಿನಿಮಾದಲ್ಲೂ ಸಾಮಾಜಿಕ ಸಂದೇಶದ ಜತೆಗೆ ನವಿರಾದ ಪ್ರೇಮಕಥೆಯನ್ನೂ ತೆರೆಯ ಮೇಲೆ ಅಚ್ಚುಕಟ್ಟಾಗಿ ನಟಿಸುವುದರಲ್ಲಿ ಅಪ್ಪು ಯಾವಾಗಲೂ ಮುಂದು. ಅದಕ್ಕೆ ಸಿನಿ ಜೀವನದ ಪಯಣ ಸ್ಮರಣೀಯವಾಗಿ, ನಿಜ ಜೀವನದಲ್ಲಿ ಹಲವರಿಗೆ ಪ್ರೇರಕ ಶಕ್ತಿಯಾಗಿರುವುದು.

2015ರಲ್ಲಿ ಬಂದ ಮೈತ್ರಿ ಸಿನಿಮಾ. ಅಪ್ಪುವಿನ ಸಮಾಜಮುಖಿಯ ಚಿತ್ರದಲ್ಲೊಂದಾಗಿದೆ. ಗಿರಿರಾಜ್ ನಿರ್ದೇಶಿತ ಈ ಸಿನಿಮಾದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿದ್ದರು‌. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಡತನದಿಂದ ಬಂದ ಹುಡುಗನೊಬ್ಬ ಸಮಾಜದ ದುಷ್ಟಶಕ್ತಿಗಳ ಪ್ರಭಾವಕ್ಕೆ ಸಿಲುಕಿ, ಪರಿಸ್ಥಿತಿಗೆ ಬಲಿಯಾಗಿ ರಿಮ್ಯಾಂಡ್ ಹೋಮ್ ಸೇರಿರುವನ ಕಥೆಯಾಗಿತ್ತು. ನಿಜ ಜೀವನದ ಈ ಸಿನಿಮಾ ಕಥಾನಕದಲ್ಲಿ ಅಪ್ಪು ಮನ‌ಮುಟ್ಟುವಂತೆ ಅಭಿನಯಿಸಿದ್ದರು.

ಸಮಾಜಮುಖಿ ಸಿನಿಮಾದಲ್ಲಿ ನಟಿಸಿದ್ರು ಅಪ್ಪು: 2017ರಲ್ಲಿ ಬಿಡುಗಡೆಯಾದ ರಾಜಕುಮಾರ ಸಿನಿಮಾ ಅಪ್ಪುವಿನ ಮತ್ತೊಂದು ಸಮಾಜಮುಖಿ ಸಿನಿಮಾವಾಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಜಕುಮಾರ ಸಿನಿಮಾ ಹೆತ್ತ ತಂದೆ-ತಾಯಿಯನ್ನು ಮಕ್ಕಳು ಅನಾಥಾಶ್ರಮಗಳಿಗೆ ಸೇರಿಸುವ ಕಥನಕವನ್ನು ಮನೋಜ್ಞವಾಗಿ ಬಿಡಿಸಲಾಗಿತ್ತು. ಹೆತ್ತು ಹೊತ್ತ ಪೋಷಕರನ್ನು ಮಕ್ಕಳು ಅನಾಥಾಶ್ರಮಕ್ಕೆ ಸೇರಿಸಬೇಡಿ ಎಂಬ ಸಂದೇಶವನ್ನು ಅಪ್ಪು ಈ ಸಿನಿಮಾ‌ ಮೂಲಕ ನೀಡಿದ್ದರು. ಈ ಸಿನಿಮಾ ನೂರು ದಿನ ಯಶಸ್ವಿ ಪ್ರದರ್ಶನಗೊಂಡಿತ್ತು.

'ಯುವರತ್ನ' ಶಿಕ್ಷಣ ವ್ಯವಸ್ಥೆ ಬಗ್ಗೆ ದೊಡ್ಡ ಮಟ್ಟದಲ್ಲಿ ಬೆಳಕು ಚೆಲ್ಲಿದ ಸಿನಿಮಾ. ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಪಾಠ ಹೇಳುವ ಗುರುವಿನ ಪಾತ್ರದಲ್ಲಿ ನಟಿಸಿದ್ದರು. ಸರ್ಕಾರಿ ಕಾಲೇಜುಗಳ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನಿಟ್ಟುಕೊಂಡು ಮಾಡಿರುವ ಚಿತ್ರದಲ್ಲಿ ಸಮಾಜದ ಕಾಳಜಿ ಇದೆ. ಕಾಲೇಜು ವಿದ್ಯಾರ್ಥಿಗಳಿಗೆ ಸಪ್ಲೈ ಆಗುತ್ತಿದ್ದ ಡ್ರಗ್ಸ್ ಕುರಿತು ಸಿನಿಮಾದಲ್ಲಿ ವಿವರಿಸಲಾಗಿದೆ. ಸಿನಿಮಾದಲ್ಲಿ ಸದ್ಯದ ಶಿಕ್ಷಣ ವ್ಯವಸ್ಥೆ ಬಗ್ಗೆ ಮನ‌ಮುಟ್ಟುವಂತೆ ತೋರಿಸಲಾಗಿದೆ.

ಜಿಲ್ಲಾಧಿಕಾರಿ ಎದುರಿಸುವ ಸಂಕಟ ಚಿತ್ರಣ: ಅಪ್ಪು ಅವರ ಮತ್ತೊಂದು ಸಾಮಾಜಿಕ ಕಳಕಳಿ ಹೊಂದಿದ್ದ ಸಿನಿಮಾ 'ಪೃಥ್ವಿ'. ಪುನೀತ್ ಮೊದಲ ಬಾರಿಗೆ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಸಿನಿಮಾ ಪೃಥ್ವಿ. ಬಳ್ಳಾರಿ ಗಣಿದಣಿಗಳ ವಿರುದ್ಧ ಹೋರಾಡುವ ಜಿಲ್ಲಾಧಿಕಾರಿ ಪಾತ್ರದಲ್ಲಿ ಪುನೀತ್ ಮಿಂಚಿದ್ದರು. ವಿಪರೀತ ಬಿಸಿಲು, ಧೂಳಿನಿಂದ ಕೂಡಿದ ವಾತಾವರಣ, ಎಲ್ಲೆಲ್ಲೂ ಜೆಸಿಬಿ, ಲಾರಿಗಳ ಓಡಾಟ, ಚಾಲಕರ ದರ್ಪ, ರಾಜಕಾರಣಿಗಳ ಮದವೇರಿದ ಮಾತು ಇಂಥ ವಾತಾವರಣದಲ್ಲಿ ನ್ಯಾಯಕ್ಕಾಗಿ ಹೋರಾಡುವ ಜಿಲ್ಲಾಧಿಕಾರಿ ಎದುರಿಸುವ ಸಂಕಟ ಇದರಲ್ಲಿ ಉತ್ತಮವಾಗಿ ಚಿತ್ರಿಸಲಾಗಿದೆ. ಇಡೀ ಚಿತ್ರ ಬಳ್ಳಾರಿಯ ಇಂದಿನ ಸ್ಥಿತಿಗೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡುತ್ತದೆ. ಗಣಿ ದಣಿಗಳ ದರ್ಪ, ದುರಾಡಳಿತವನ್ನು ಇಂಚಿಂಚೂ ಬಿಚ್ಚಿಡುತ್ತದೆ.

ಸಾಮಾಜಿಕ ಸಂದೇಶ ಸಾರಿದ ಪುನೀತ್ ರಾಜಕುಮಾರ್ ರ ಮತ್ತೊಂದು ಸಿನಿಮಾ 'ಆಕಾಶ್'. ರಮ್ಯಾ ನಾಯಕಿ ನಟಿಯಾಗಿದ್ದ ಈ ಸಿನಿಮಾ ಕಲ್ಮಶಗಳೇ ಇಲ್ಲದ ಎಲ್ಲರಿಗೂ ಒಳಿತನ್ನೇ ಬಯಸುವ ಮಧ್ಯಮ ವರ್ಗದ ಆಕಾಶನ ಕಥೆಯಾಗಿತ್ತು. ಆಕಾಶ್​ನಲ್ಲೂ ಸಾಮಾಜಿಕ ಸಂದೇಶ ಸಾರುವ ಹಲವು ಅಂಶಗಳನ್ನು ಸೇರಿಸಲಾಗಿತ್ತು.‌

'ಜೇಮ್ಸ್' ಪುನೀತ್​ ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ. ಆ ಕಾರಣಕ್ಕೆ ಸಿನಿಮಾ ಭಾವನಾತ್ಮಕವಾಗಿ ಅಭಿಮಾನಿಗಳಿಗೆ ಕನೆಕ್ಟ್​ ಆಗಿತ್ತು. ಜೆ ವಿಂಗ್ಸ್ ಹೆಸರಿನ ಸೆಕ್ಯೂರಿಟಿ ಏಜೆನ್ಸಿಯಲ್ಲಿನ ಪವರ್‌ಫುಲ್ ವ್ಯಕ್ತಿ ಸಂತೋಶ್ (ಪುನೀತ್ ರಾಜ್‌ಕುಮಾರ್) ಅಂತರಾಷ್ಟ್ರೀಯ ಡ್ರಗ್ ಮಾಫಿಯಾ ಗ್ಯಾಂಗ್‌ಸ್ಟರ್‌ ಒಬ್ಬನಿಗೆ ಭದ್ರತೆ ಒದಗಿಸಲು ನೇಮಕವಾಗುತ್ತಾನೆ. ಅವನ ಕೆಲಸ ಭದ್ರತೆ ನೀಡುವುದಷ್ಟೆ. ಆದರೆ ಭದ್ರತೆ ಕೊಡಲು ಹೋದವನನ್ನೇ ಹೇಗೆ ಆತ ಕಾನೂನು ಕೈವಶ ಮಾಡುತ್ತಾನೆ. ಡ್ರಗ್ಸ್ ಮಾಫಿಯಾ ದಂಧೆಯನ್ನು ಹೇಗೆ ನಿರ್ನಾಮ ಮಾಡುತ್ತಾನೆ ಎಂಬುದು ಸಿನಿಮಾದ ಕತೆ. ವೈರಿಗಳನ್ನು ರಕ್ಷಣೆ ಮಾಡಿ, ಆ ಬಳಿಕ ಅವರಿಗೆ ದುಸ್ವಪ್ನವಾಗಿ ಕಾಡುವ ಮೇಜರ್​ ಸಂತೋಷ್​ ಆಗಿ ಪುನೀತ್​ ಗಮನ ಸೆಳೆಯುತ್ತಾರೆ.

ಗಂಧದಗುಡಿ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ. ಇದು ಅಪ್ಪು ಅವರ ಕನಸಿನ ಡಾಕ್ಯುಮೆಂಟರಿ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕರುನಾಡಿನ ಅರಣ್ಯ ಸೌಂದರ್ಯ, ವನ್ಯಜೀವಿ, ಪ್ರಾಕೃತಿಕ ಸಂಪತ್ತನ್ನು ಬಿಂಬಿಸಿದ ಪುನೀತ್ ರಾಜ್‍ಕುಮಾರ್ ರ ಕೊನೆಯ ಸಾಕ್ಷ್ಯ ಚಿತ್ರ 'ಗಂಧದ ಗುಡಿ'.

ಪರಿಸರ ಸಂರಕ್ಷಣೆ ಬಗ್ಗೆ ಸಂದೇಶ: ನಿರ್ದೇಶಕ ಅಮೋಘವರ್ಷ ನಿರ್ದೇಶನದಲ್ಲಿ ರೂಪುಗೊಂಡ ಈ ಸಿನಿಮಾದಲ್ಲಿ ಅಪ್ಪು ಕರುನಾಡ ಅರಣ್ಯ, ವನ್ಯಜೀವಿ, ನೈಸರ್ಗಿಕ ಶ್ರೀಮಂತಿಕೆಯನ್ನು ಹೃದಯಸ್ಪರ್ಶಿಯಾಗಿ ತೋರಿಸಿದ್ದಾರೆ. ಕಾಡನ್ನು ಉಳಿಸಿ, ಪ್ರಾಣಿಗಳನ್ನು ಉಳಿಸಿ ಎಂಬಿತ್ಯಾದಿ ಸಂದೇಶಗಳನ್ನು ಪುನೀತ್ ಅವರು ಅಭಿಮಾನಿಗಳಿಗೆ ಮನ ಮುಟ್ಟುವಂತೆ ಹೇಳಿದ್ದಾರೆ. ಕಾಡನ್ನು ರಕ್ಷಿಸುತ್ತಿರುವ ಅರಣ್ಯ ಸಿಬ್ಬಂದಿಗೂ ಇಲ್ಲಿ ವಿಶೇಷ ಗೌರವ ಸಲ್ಲಿಕೆ ಮಾಡಲಾಗಿದೆ.

ಒಟ್ಟಾರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಾಯಕನಾಗಿ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೇರು ನಟನಾಗಿ ಪುನೀತ್ ರಾಜ್​ಕುಮಾರ್ ಮನರಂಜನೆ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾ ಮೂಲಕ ಜನಮಾನಸದಲ್ಲೂ ನಾಯಕನಾಗಿ ಉಳಿದುಕೊಂಡಿದ್ದಾರೆ.

ಓದಿ: ಮರಣೋತ್ತರ ಕರ್ನಾಟಕ ರತ್ನ ಪಡೆಯಲಿರುವ ಮೊದಲ ವ್ಯಕ್ತಿ ಪುನೀತ್: ರಾಜ್ಯೋತ್ಸವದಂದು ಪ್ರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.