ETV Bharat / entertainment

ತಮಿಳು ನಟ ಸಿದ್ಧಾರ್ಥ್​ಗೆ ತಟ್ಟಿದ 'ಕಾವೇರಿ' ಬಿಸಿ.. 'ಚಿಕ್ಕು' ಪ್ರೆಸ್​ಮೀಟ್​ಗೆ ಕನ್ನಡ ಹೋರಾಟಗಾರರ ವಿರೋಧ

author img

By ETV Bharat Karnataka Team

Published : Sep 28, 2023, 8:00 PM IST

Updated : Sep 28, 2023, 8:46 PM IST

ತಮಿಳು ನಟ ಸಿದ್ಧಾರ್ಥ್ ನಟನೆಯ 'ಚಿಕ್ಕು' ಸಿನಿಮಾದ ಪತ್ರಿಕಾಗೋಷ್ಠಿಗೆ ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದರು.

Pro kannada activists opposed the press meet of tamil actor siddharth starrer chikku
ತಮಿಳು ನಟ ಸಿದ್ಧಾರ್ಥ್​ಗೆ ತಟ್ಟಿದ 'ಕಾವೇರಿ' ಬಿಸಿ; 'ಚಿಕ್ಕು' ಪ್ರೆಸ್​ಮೀಟ್​ಗೆ ಕನ್ನಡ ಹೋರಾಟಗಾರರ ವಿರೋಧ

ತಮಿಳು ನಟ ಸಿದ್ಧಾರ್ಥ್​ಗೆ ತಟ್ಟಿದ 'ಕಾವೇರಿ' ಬಿಸಿ.. 'ಚಿಕ್ಕು' ಪ್ರೆಸ್​ಮೀಟ್​ಗೆ ಕನ್ನಡ ಹೋರಾಟಗಾರರ ವಿರೋಧ

ರಾಜ್ಯಾದ್ಯಂತ ಕಾವೇರಿ ಕಿಚ್ಚು ಜೋರಾಗಿದೆ. ದಿನದಿಂದ ದಿನಕ್ಕೆ ರೈತರು ಹಾಗೂ ಕನ್ನಡ ಪರ ಸಂಘಟನೆಗಳ ಹೋರಾಟ ಜಾಸ್ತಿಯಾಗುತ್ತಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ನಾಳೆ ರಾಜ್ಯ ಬಂದ್ ನಡೆಯಲಿದೆ.​ ಈ ಮಧ್ಯೆ ತಮಿಳು ನಟ ಸಿದ್ಧಾರ್ಥ್​ ಅವರಿಗೂ ಕಾವೇರಿ ಬಿಸಿ ತಟ್ಟಿದೆ.

ಇಂದು ತಮ್ಮ ನಟನೆಯ 'ಚಿಕ್ಕು' ಸಿನಿಮಾದ ಪ್ರಚಾರಕ್ಕಾಗಿ ಸಿದ್ಧಾರ್ಥ್​ ಅವರು ಬೆಂಗಳೂರಿಗೆ ಬಂದಿದ್ದರು. ಮಲ್ಲೇಶ್ವರಂನ ಎಸ್​ಆರ್​ವಿ ಚಿತ್ರಮಂದಿರದಲ್ಲಿ ಸಿನಿಮಾ ಪ್ರೆಸ್​ಮೀಟ್​ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಕನ್ನಡ ಪರ ಹೋರಾಟಗಾರ ನಿಂಗರಾಜು ಗೌಡ ಹಾಗೂ ಕರವೇ ಸ್ವಾಭಿಮಾನಿ ಸೇನೆ ತಂಡ ಮಾಧ್ಯಮಗೋಷ್ಟಿಗೆ ವಿರೋಧ ವ್ಯಕ್ತಪಡಿಸಿತು.

ಕಾವೇರಿ ನೀರಿನ ವಿಚಾರವಾಗಿ ಹೋರಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಮಿಳು ಸಿನಿಮಾದ ಪ್ರೆಸ್​ಮೀಟ್ ಬೇಕಾ? ತಮಿಳು ಸಿನಿಮಾ ಪ್ರಚಾರದ ಅವಶ್ಯಕತೆ ಏನಿದೆ? ಇದಕ್ಕೆ ನಮ್ಮ ವಿರೋಧ ಇದೆ ಎಂದು ಆಕ್ರೋಶ ಹೊರಹಾಕಿದರು. ಈ ಹಿನ್ನೆಲೆಯಲ್ಲಿ ಪ್ರೆಸ್​ಮೀಟ್​ನಿಂದ ನಟ ಸಿದ್ಧಾರ್ಥ್​ ಹೊರನಡೆದರು.

ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಸ್ಯಾಂಡಲ್​ವುಡ್​ ಬೆಂಬಲ: ಸುದೀಪ್, ದರ್ಶನ್, ಶಿವಣ್ಣ ಹೇಳಿದ್ದೇನು?

ಇಂದು ತೆರೆ ಕಂಡ 'ಚಿಕ್ಕು': ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಜನಪ್ರಿಯರಾಗಿರುವ ನಟ ಸಿದ್ಧಾರ್ಥ್​. ಇವರ 'ಚಿಕ್ಕು' ಸಿನಿಮಾ ಇಂದು ಬಿಡುಗಡೆಯಾಗಿದೆ. ಇದರಲ್ಲಿ ಸಿದ್ಧಾರ್ಥ್​ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ವೃತ್ತಿಜೀವನದಲ್ಲೇ ಇದೊಂದು ಹೊಸ ಮೈಲಿಗಲ್ಲು ಎಂದು ಹೇಳಲಾಗುತ್ತಿದೆ. ಚಿತ್ರದಲ್ಲೊಂದು ಅದ್ಭುತವಾದ ಸಂದೇಶವಿದೆ.

ಈ ಹಿಂದೆ ತಮಿಳಿನಲ್ಲಿ 'ಪನ್ನೈಯಾರುಂ ಪದ್ಮಿನಿಯುಂ' ನಂತಹ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ಎಸ್​ ಯು ಅರುಣ್​ ಕುಮಾರ್​ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿದ್ಧಾರ್ಥ್​, ನಿಮಿಷಾ ಸುಜಯನ್​ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ದಿಬು ನಿನಾನ್​ ಥಾಮಸ್​ ಸಂಗೀತ ನಿರ್ದೇಶನ ಮಾಡಿದ್ದು, ಬಾಲಾಜಿ ಸುಬ್ರಹ್ಮಣ್ಯಂ ಅವರ ಛಾಯಾಗ್ರಹಣವಿದೆ. ಈ ಸಿನಿಮಾವು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ: ಕಾವೇರಿ ಮೇಲೆ ಮೊದಲ ಹಕ್ಕು ನಮ್ಮದೇ: ನಟ ಉಪೇಂದ್ರ

ನಾಳೆ ಕರ್ನಾಟಕ ಬಂದ್: ಕಳೆದ ಮಂಗಳವಾರ ಕಾವೇರಿಗಾಗಿ ನಮ್ಮ ರಾಜ್ಯ ರಾಜಧಾನಿ ಬಂದ್ ಆಗಿತ್ತು. ನಾಳೆ ಕರ್ನಾಟಕ ಬಂದ್​​ಗೆ ಸಕಲ ಸಿದ್ಧತೆ ನಡೆದಿದೆ. ಕನ್ನಡ ಒಕ್ಕೂಟಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್​​ಗೆ ಚಿತ್ರರಂಗ ಕೈ ಜೋಡಿಸಿದೆ. ಹಿರಿಯ ನಟ ಡಾ. ಶಿವರಾಜ್​ಕುಮಾರ್ ನೇತೃತ್ವದಲ್ಲಿ ಇಡೀ ಚಿತ್ರರಂಗ ನಾಳೆಯ ಹೋರಾಟದಲ್ಲಿ ಭಾಗಿಯಾಗಲಿದೆ. ಶೂಟಿಂಗ್ ಜೊತೆ ಥಿಯೇಟರ್ ಕೂಡ ಕ್ಲೋಸ್ ಆಗಲಿವೆ. ಇಂದು ಬಿಡುಗಡೆಯಾಗಿರುವ ಕೆಲವು ಸಿನಿಮಾಗಳು ನಾಳೆ ಬಂದ್​ ಹಿನ್ನೆಲೆ ಕಲೆಕ್ಷನ್​ ವಿಚಾರದಲ್ಲಿ ತೊಂದರೆ ಅನುಭವಿಸಲಿದೆ.

Last Updated : Sep 28, 2023, 8:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.