ಶಾರೂಖ್​ ನಟನೆಯ 'ಪಠಾಣ್​' ವಿರುದ್ಧ ದೇಶದ ಕೆಲವೆಡೆ ಪ್ರತಿಭಟನೆ: ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ..

author img

By

Published : Jan 25, 2023, 1:12 PM IST

pathaan-cinema

ವಿವಾದ ಸೃಷ್ಟಿಸಿದ್ದ ಪಠಾಣ್​ ಸಿನಿಮಾ ಇಂದು ತೆರೆ ಕಂಡಿದ್ದು, ಪ್ರದರ್ಶನ ಕಾಣುತ್ತಿದೆ. ಆಕ್ಷೇಪಾರ್ಹ ದೃಶ್ಯಗಳನ್ನು ಪರಿಶೀಲಿಸಿ ವಿರೋಧಿಸಲಾಗುವುದು ಎಂದು ವಿಶ್ವ ಹಿಂದು ಪರಿಷತ್​ ಹೇಳಿದೆ. ಇನ್ನೊಂದೆಡೆ, ಅಭಿಮಾನಿಗಳು ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್​ ನಟ ಶಾರೂಖ್​ ಖಾನ್​, ದೀಪಿಕಾ ಪಡುಕೋಣೆ ಅಭಿನಯದ ಪಠಾಣ್​ ಸಿನಿಮಾ ಭಾರತ ಸೇರಿದಂತೆ ವಿಶ್ವದ 100 ದೇಶಗಳಲ್ಲಿ ಬಿಡುಗಡೆಯಾಗಿದೆ. ವಿವಾದಗಳಿಂದಲೇ ಸುದ್ದಿಯಾಗಿದ್ದ ಸಿನಿಮಾಗೆ ಪರ-ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ ವಿಶ್ವಹಿಂದು ಪರಿಷತ್​(ವಿಹೆಚ್‌ಪಿ) ಸಿನಿಮಾವನ್ನು ವೀಕ್ಷಣೆ ಮಾಡಿದ ಬಳಿಕ ಆಕ್ಷೇಪಗಳಿದ್ದಲ್ಲಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಹೇಳಿದೆ.

ವಿವಾದವೇನು?: ಹಿಂದು ಸಂಪ್ರದಾಯದ ಅವಹೇಳನ, ಅತಿಯಾದ ಅಶ್ಲೀಲತೆ, ಕೇಸರಿ ಬಣ್ಣದ ಬಿಕಿನಿಯಿಂದಾಗಿ ಸಿನಿಮಾ ವಿವಾದಕ್ಕೆ ಕಾರಣವಾಗಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಹಿಂದುಪರ ಸಂಘಟನೆಗಳು ತೀವ್ರ ಪ್ರತಿಭಟನೆಗಳು ನಡೆಸಿದ್ದವು. ಬಳಿಕ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಲಾಗುವುದು ಎಂದು ಸಿನಿಮಾ ತಂಡ ತಿಳಿಸಿತ್ತು.

ಇಂದು ಪಠಾಣ್​ ತೆರೆಗೆ ಬಂದಿದೆ. ದೇಶದ ಹಲವೆಡೆ ಹಿಂದುಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಸಿನಿಮಾ ಮಂದಿರಗಳ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಸುದ್ದಿಗಾರರಿಗೆ ಹೇಳಿಕೆ ನೀಡಿರುವ ವಿಶ್ವ ಹಿಂದು ಪರಿಷತ್​ ವಕ್ತಾರ ಶ್ರೀರಾಜ್​ ನಾಯರ್​, "ಸದ್ಯಕ್ಕೆ ಪಠಾಣ್ ಚಿತ್ರವನ್ನು ವಿಎಚ್‌ಪಿ ವಿರೋಧಿಸುವುದಿಲ್ಲ. ಚಿತ್ರವನ್ನು ವೀಕ್ಷಿಸಿದ ನಂತರ ನಮ್ಮ ಈ ಹಿಂದಿನ ಆಕ್ಷೇಪಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರದಲ್ಲಿ ಮಾಡಿದ ಬದಲಾವಣೆಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಆಕ್ಷೇಪಾರ್ಹ ದೃಶ್ಯಗಳು ಕಂಡುಬಂದರೆ ಚಿತ್ರವನ್ನು ವಿರೋಧಿಸುವ ಬಗ್ಗೆ ಮರುಪರಿಶೀಲಿಸುತ್ತೇವೆ" ಎಂದು ತಿಳಿಸಿದರು.

ಕೇಸರಿ ಬಿಕಿನಿಗಿಲ್ಲ ಕತ್ತರಿ: ಸಿನಿಮಾದ ರಿವ್ಯೂ​ ಪ್ರಕಾರ, ವಿವಾದಕ್ಕೆ ಕಾರಣವಾಗಿ ಭೇಷರಂ ಹಾಡಿನಲ್ಲಿ ನಟಿ ಹಾಕಿಕೊಂಡಿರುವ ಕೇಸರಿ ಬಣ್ಣದ ಬಿಕಿನಿ ದೃಶ್ಯವನ್ನು ತೆಗೆದು ಹಾಕಿಲ್ಲ ಎಂದು ತಿಳಿದುಬಂದಿದೆ. ಇದು ಸಿನಿಮಾ ಬಿಡುಗಡೆಗೂ ಮೊದಲು ದೊಡ್ಡ ವಿರೋಧಕ್ಕೆ ಕಾರಣವಾಗಿತ್ತು. ನಿರ್ಮಾಪಕ, ನಿರ್ದೇಶಕರು, ನಟ ಶಾರೂಖ್​​ ಆಕ್ಷೇಪಾರ್ಹ ದೃಶ್ಯ ತೆಗೆಯುವುದಾಗಿ ಹೇಳಿದ್ದರು.

ಟ್ವಿಟರ್‌ನಲ್ಲಿ ರೇಟಿಂಗ್​: ಪಠಾಣ್​ ಹೈವೋಲ್ಟೇಜ್​ ಆ್ಯಕ್ಷನ್​ ಸಿನಿಮಾವಾಗಿದೆ. ಮಾಜಿ ಯೋಧನ ಪಾತ್ರದಲ್ಲಿ ಶಾರೂಖ್​ ಮಿಂಚಿದ್ದಾರೆ. ದೀಪಿಕಾ ಪಾತ್ರ ಕೂಡ ಕುತೂಹಲಕರವಾಗಿದೆ ಎಂದೆಲ್ಲಾ ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಚಿತ್ರಕ್ಕೆ 5 ಕ್ಕೆ 4.5 ಸ್ಟಾರ್​ ನೀಡಿದ್ದಾರೆ.

ಪಠಾಣ್​ನಲ್ಲಿ ನಟನೆ, ಆ್ಯಕ್ಷನ್, ಸ್ಕ್ರೀನ್ ಪ್ಲೇ, ಹಿನ್ನೆಲೆ ಸಂಗೀತ, ಸಂಭಾಷಣೆ, ಟ್ವಿಸ್ಟ್ ಎಲ್ಲವೂ ಅದ್ಭುತವಾಗಿವೆ. ನಿರ್ದೇಶಕ ಸಿದ್ಧಾರ್ಥ್ ಆನಂದ್, ಶಾರುಖ್ ಖಾನ್ ಅವರಿಗೆ ಭರ್ಜರಿ ಕಮ್​ಬ್ಯಾಕ್ ನೀಡಿದ್ದಾರೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಪ್ರತಿಭಟನೆ: ಶಾರುಖ್ ಖಾನ್-ದೀಪಿಕಾ ಪಡುಕೋಣೆ ನಟನೆಯ ಬಹುನಿರೀಕ್ಷಿತ ಪಠಾಣ್ ಚಿತ್ರಕ್ಕೆ ಬೆಳಗಾವಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಗರದ ಚಿತ್ರಮಂದಿರಗಳ ಮೇಲೆ ಬೆಳಗ್ಗೆ ದಾಳಿ ಮಾಡಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಚಿತ್ರದ ಬ್ಯಾನರ್​​ಗಳನ್ನು ಹರಿದು ಹಾಕಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಪೊಲೀಸರು ಕೆಲವು ಹಿಂದೂಪರ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಪೋಸ್ಟರ್​​ ಹರಿಯಲು ಯತ್ನಿಸಿದ ಹಿನ್ನೆಲೆಯಲ್ಲಿ 30 ಹಿಂದೂಪರ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಚಿತ್ರಮಂದಿರ ಬಳಿ ಉದ್ವಿಗ್ನ ಪರಿಸ್ಥಿತಿ ಇದೆ. ಮುಂಜಾಗ್ರತಾ ಕ್ರಮವಾಗಿ ಓರ್ವ ಸಿಪಿಐ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದ್ದು, ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿದೆ.

ಇದನ್ನೂ ಓದಿ: ‘ಪಠಾಣ್’ಗೆ ಬೆಳಗಾವಿಯಲ್ಲಿ ಆಕ್ರೋಶ: ಚಿತ್ರಮಂದಿರದ ಮೇಲೆ ದಾಳಿ, 30 ಹಿಂದೂಪರ ಕಾರ್ಯಕರ್ತರ ವಿರುದ್ಧ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.