ETV Bharat / entertainment

ರಿಷಬ್ ಬಗ್ಗೆ 'ಅಸೂಯೆ' ವ್ಯಕ್ತಪಡಿಸಿದ ನವಾಜುದ್ದೀನ್ ಸಿದ್ದಿಕಿ: ಶೆಟ್ರು ಹೇಳಿದ್ದೇನು?

author img

By

Published : Dec 13, 2022, 7:23 PM IST

ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿ ಅವರು 'ಕಾಂತಾರ' ಚಿತ್ರ ಮತ್ತು ನಟ ರಿಷಬ್ ಶೆಟ್ಟಿ ಬಗ್ಗೆ 'ಅಸೂಯೆ' ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಿಷಬ್ ಶೆಟ್ಟಿ ಹೇಗೆ ಪ್ರತಿಕ್ರಿಯಿಸಿದ್ರು ಗೊತ್ತೇ?

Nawazuddin Siddiqui statement on Rishab shetty
ರಿಷಬ್ ಬಗ್ಗೆ 'ಅಸೂಯೆ' ವ್ಯಕ್ತಪಡಿಸಿದ ನವಾಜುದ್ದೀನ್ ಸಿದ್ದಿಕಿ

ಕನ್ನಡ ಚಿತ್ರ 'ಕಾಂತಾರ'ಕ್ಕೆ ಜಗತ್ತಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಕನ್ನಡದಲ್ಲಿ ತೆರೆಕಂಡು ಪರಭಾಷೆಗಳಿಗೆ ಡಬ್ಬಿಂಗ್ ಆಗಿದೆ. ದಕ್ಷಿಣ ಚಿತ್ರರಂಗದಿಂದ ಹಿಡಿದು ಬಾಲಿವುಡ್‌ವರೆಗೆ ನಟ ರಿಷಬ್ ಶೆಟ್ಟಿ ಮತ್ತು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಕೂಡ 'ಕಾಂತಾರ' ನೋಡಿ, ರಿಷಬ್ ಶೆಟ್ಟಿಯನ್ನು ಮನೆಗೆ ಕರೆದು, ಇಂತಹ ಅದ್ಭುತ ಸಿನಿಮಾ ಮಾಡಿದ್ದಕ್ಕೆ ಧನ್ಯವಾದ ಹೇಳಿದ್ದರು.

ನಿನ್ನೆ ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ಕೂಡ 'ಕಾಂತಾರ' ನೋಡಿ ಟ್ವಿಟ್ಟರ್​ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಕಲಿಯುವುದು ಬಹಳಷ್ಟಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಬಾಲಿವುಡ್‌ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಅವರು 'ಕಾಂತಾರ' ಮತ್ತು ರಿಷಬ್ ಶೆಟ್ಟಿ ಬಗ್ಗೆ 'ಅಸೂಯೆ' ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಿಷಬ್ ಶೆಟ್ಟಿ ಕೂಡ ಪ್ರತಿಕ್ರಿಯಿಸಿದರು.

ಕಾರ್ಯಕ್ರಮವೊಂದರಲ್ಲಿ​ ಮಾತನಾಡಿದ ಸಿದ್ದಿಕಿ, ಇಡೀ ದೇಶವೇ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರವನ್ನು ನೋಡಿದೆ. ಸಿನಿಮಾ ನೋಡಿದ ನಂತರ ಪ್ರೇಕ್ಷಕರು ಮಾತ್ರವಲ್ಲ, ಸಿನಿರಂಗದವರು ಕೂಡಾ ಶಾಕ್ ಆಗಿದ್ದಾರೆ. ಚಿತ್ರಕ್ಕೆ ಹೆಚ್ಚಿನ ಪ್ರಚಾರವೂ ಇರಲಿಲ್ಲ. ನಟರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಅವರು ಎಲ್ಲವನ್ನೂ ಮಾಡಿ ತೋರಿಸಿದರು. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಆಗ 'ಅಸೂಯೆ' ಎಂಬ ಭಾವನೆ ಬರುತ್ತದೆ. ಅದೇ ಅಸೂಯೆ ಚಿತ್ರರಂಗದಲ್ಲಿ ನಮ್ಮನ್ನು ಮುಂದುವರಿಯುವಂತೆಯೂ ಪ್ರೇರೇಪಿಸುತ್ತದೆ ಎಂದರು.

'ಅಸೂಯೆ' ಎಂಬ ಪದದ ಬಗ್ಗೆ ಅವರಲ್ಲೇ ಕೇಳಿದಾಗ, 'ಖಂಡಿತವಾಗಿ, ಅವರು ಚೆನ್ನಾಗಿ ಕೆಲಸ ಮಾಡುತ್ತಿರುವುದರಿಂದ ಇದು ಸಂಭವಿಸುತ್ತದೆ. ನನ್ನ ಅಸೂಯೆ ನಕಾರಾತ್ಮಕವಲ್ಲ. ಒಳ್ಳೆಯ ಕೆಲಸಕ್ಕದು ಅಭಿನಂದನೆ. ಆ ಭಾವನೆ ನನ್ನನ್ನು ಚಿತ್ರರಂಗದಲ್ಲಿ ನಿಲ್ಲುವಂತೆ ಮಾಡುತ್ತದೆ. ನಾನು ಕೂಡ ತುಂಬಾ ಕಷ್ಟಪಟ್ಟು ಮೇಲೆ ಬಂದವನು' ಎಂದು ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಕೂಡ ಉಪಸ್ಥಿತರಿದ್ದರು. ನವಾಜುದ್ದೀನ್​​ ಅವರ ಈ ಎಲ್ಲಾ ವಿಷಯಗಳನ್ನು ಕೇಳಿದ ನಂತರ, 'ನವಾಜ್ ಭಾಯ್, ನಾನು ನಿಮ್ಮ ಅನೇಕ ಚಿತ್ರಗಳನ್ನು ನೋಡಿದ್ದೇನೆ. ನಿಮ್ಮ ವೃತ್ತಿಜೀವನವನ್ನು ಸಹ ನೋಡಿದ್ದೇನೆ. ಅದು ಕಠಿಣ ಪರಿಶ್ರಮದಿಂದ ಕೂಡಿದೆ. ಚಿತ್ರರಂಗದಲ್ಲಿ ಪೋಷಕರಿಲ್ಲದ ನಮ್ಮಂತಹ ಮಧ್ಯಮ ವರ್ಗದ ಜನರಿಗೆ ನೀವು ಸ್ಫೂರ್ತಿ. ಸ್ಟಾರ್ ಆಗುವ ಮೊದಲು ರಂಗಭೂಮಿಯ ಹಂತವನ್ನು ದಾಟಿದವರು ನೀವು. ನಾನು ಅನೇಕ ಸಣ್ಣ ಪಾತ್ರಗಳನ್ನು ಮಾಡಿದ್ದೇನೆ, ನೀವು ನಮ್ಮ ಹಿರಿಯರು ಮತ್ತು ನಮ್ಮ ಪ್ರಯಾಣವು ನಿಮ್ಮ ರೀತಿಯೇ ಇದೆ' ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಇದನ್ನೂ ಓದಿ: 'ಅವಳಾಗಿ' ನವಾಜುದ್ದೀನ್ ಸಿದ್ದಿಕಿ.. ತೃತೀಯಲಿಂಗಿ ಪಾತ್ರಕ್ಕೆ ಜೀವ ತುಂಬಿದ ನಟ

ನವಾಜುದ್ದೀನ್ ತಮ್ಮ ಮುಂಬರುವ ಚಲನಚಿತ್ರ 'ಹಡ್ಡಿ'ಯ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ತೃತೀಯಲಿಂಗಿ ಪಾತ್ರಕ್ಕೆ ಅವರು ಜೀವ ತುಂಬುತ್ತಿದ್ದಾರೆ. ಮೇಕಪ್ ಮತ್ತು ಹೇರ್ ಆರ್ಟಿಸ್ಟ್‌ಗಳ ತಂಡವು ನವಾಜುದ್ದೀನ್ ಸಿದ್ದಿಕಿ ಸುತ್ತಲೂ ಕೆಲಸ ಮಾಡುತ್ತಿರುವ, ಅವರು ಶೂಟಿಂಗ್​​ಗೆ ತಯಾರಾಗುತ್ತಿರುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ನೋಡಬಹುದು. ಹಡ್ಡಿಯ ಇತ್ತೀಚಿನ ತೆರೆಮರೆಯ ವಿಡಿಯೋ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ಮೇಕಪ್​ಗೆ 3 ಗಂಟೆ ಸಮಯ ಹಿಡಿಯುತ್ತದೆ ಎಂದು ತಯಾರಕರು ಬಹಿರಂಗಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.