ಮತ್ತೆ ಖಾಕಿ ತೊಟ್ಟ ಆ್ಯಕ್ಷನ್​​ ಕ್ವೀನ್​ ಮಾಲಾಶ್ರೀ.. ಕೆಂಡದ ಸೆರಗು ಟೀಸರ್ ಬಿಡುಗಡೆ

author img

By

Published : Jan 24, 2023, 2:07 PM IST

kendada seragu

ಮಾಲಾಶ್ರೀ ಮತ್ತು ಭೂಮಿ ಶೆಟ್ಟಿ ಅಭಿನಯದ ಕೆಂಡದ ಸೆರಗು ಟೀಸರ್ ರಿಲೀಸ್​ ಆಗಿದೆ.

ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್ ಕ್ವೀನ್ ಅಂತಾ ಕರೆಸಿಕೊಂಡಿರುವ ಏಕೈಕ ನಟಿ ಎಂದರೆ ಅದು ಮಾಲಾಶ್ರೀ. ಗ್ಲ್ಯಾಮರ್ ಜೊತೆಗೆ ಪೊಲೀಸ್ ಪಾತ್ರಗಳಲ್ಲಿ ಕನ್ನಡಿಗರ ಮನಗೆದ್ದಿರುವ ನಟಿ ಮಾಲಾಶ್ರೀ ಅವರು ಬಹಳ ದಿನಗಳ ಬಳಿಕ ಮತ್ತೆ ಖಾಕಿ ತೊಟ್ಟಿದ್ದಾರೆ. ಯುವ ನಿರ್ದೇಶಕ ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕೆಂಡದ‌ ಸೆರಗು ಚಿತ್ರದಲ್ಲಿ ಆ್ಯಕ್ಷನ್ ಕ್ವೀನ್ ಖಾಕಿ ತೊಟ್ಟು ಅಬ್ಬರಿಸಲಿದ್ದಾರೆ‌. ಇತ್ತೀಚೆಗೆ ಈ ಕೆಂಡದ ಸೆರಗು ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.

kendada seragu
ಕೆಂಡದ ಸೆರಗು ತಂಡ

ಕೆಂಡದ ಸೆರಗು ಟೀಸರ್: ಈ ಚಿತ್ರ ನಿರ್ದೇಶಕ ರಾಕಿ ಸೋಮ್ಲಿ ಬರೆದ 'ಕೆಂಡದ ಸೆರಗು' ಕಾದಂಬರಿ ಆಧಾರಿತ ಸಿನಿಮಾ. ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ. ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸಿನಿಮಾದ‌ ವಿಶೇಷತೆಗಳನ್ನು ಹಂಚಿಕೊಂಡಿದೆ.

ಕುಸ್ತಿ, ಹೆಣ್ಣುಮಗಳೊಬ್ಬರ ನೋವಿನ ಕಥೆ: ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಮಾಲಾಶ್ರೀ, ಒಂದೊಳ್ಳೆ ಸಬ್ಜೆಕ್ಟ್ ಚಿತ್ರದಲ್ಲಿದೆ. ಸಿನಿಮಾ ಕೆಲಸ ಆದ ಮೇಲೆ ಒಮ್ಮೆ ನನಗೆ ತೋರಿಸಿ ಎಂದು ಹೇಳಿದ್ದೆ. ರಫ್ ಸ್ಕೆಚ್ ನೋಡಿದ್ದೀನಿ, ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾನು ಪೊಲೀಸ್ ಪಾತ್ರಗಳನ್ನು ಮಾಡಿದ್ದೇನೆ. ಆದರೆ ಈವರೆಗೆ ಮಾಡಿರುವ ಪಾತ್ರಕ್ಕಿಂತ ಡಿಫ್ರೆಂಟ್ ಫೀಲ್ ಈ ಪಾತ್ರ ನೀಡಿದೆ. ಈ ಚಿತ್ರ ಕೇವಲ ಕುಸ್ತಿ ಬಗ್ಗೆ ಅಲ್ಲ, ಹೆಣ್ಣುಮಗಳೊಬ್ಬಳ ನೋವಿನ ಕಥೆಯೂ ಚಿತ್ರದಲ್ಲಿದೆ. ಒಂದೊಳ್ಳೆ ಸಂದೇಶ ನಮ್ಮ ಈ ಚಿತ್ರದಲ್ಲಿದೆ. ಈ ಸಿನಿಮಾದ ಭಾಗವಾಗಿದ್ದಕ್ಕೆ ಬಹಳ ಖುಷಿ ಇದೆ. ನಾನೇ ಈ ಚಿತ್ರಕ್ಕೆ ಡಬ್ ಮಾಡುತ್ತಿದ್ದೇನೆ ಎಂದು ಮಾಲಾಶ್ರೀ ತಿಳಿಸಿದರು.

kendada seragu
ಕೆಂಡದ ಸೆರಗು ತಂಡ

ಕುಸ್ತಿಗೆ ಹೆಚ್ಚು ಫೋಕಸ್: ನಿರ್ದೇಶಕ ರಾಕಿ ಸೋಮ್ಲಿ ಮಾತನಾಡಿ, ಕೆಂಡದ ಸೆರಗು ಕಾದಂಬರಿ ಆಧಾರಿತ ಸಿನಿಮಾ. ನಾನೇ ಈ ಕಥೆ ಬರೆದಿದ್ದೇನೆ. ನಿರ್ಮಾಪಕ ಕೊಟ್ರೇಶ್ ಹಾಗು ನಾನು ಸ್ನೇಹಿತರು. ಅವರಿಗೆ ನಾನು ಈ ಕಾದಂಬರಿ ಬಗ್ಗೆ ಹೇಳಿದಾಗ ಸಿನಿಮಾ ಮಾಡೋಣ ಎಂದು ಹೇಳಿದ್ರು. ಇನ್ನು ಭೂಮಿ ಶೆಟ್ಟಿ ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಸಿನಿಮಾ ಮಾಡುವಾಗ ಮಾಲಾಶ್ರೀ ಮೇಡಂ ಜೊತೆ ಒಂದು ಪಾತ್ರ ಮಾಡಿಸಬೇಕು ಎಂದು ಒಂದು ಆಲೋಚನೆ ಬಂತು. ಕಥೆ ಕೇಳಿದ ಮೇಲೆ ಒಪ್ಪಿಕೊಂಡರು. ಸಿನಿಮಾ ಚಿತ್ರೀಕರಣದಲ್ಲೂ ಸಪೋರ್ಟ್ ಮಾಡಿದ್ರು. ಕಮರ್ಶಿಯಲ್ ಆಗಿ ಮೂಡಿ ಬಂದಿದೆ. ಕುಸ್ತಿಗೆ ಹೆಚ್ಚು ಫೋಕಸ್ ನೀಡಲಾಗಿದೆ. ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ ಆರು ಹಾಡುಗಳಿವೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

kendada seragu
ಕೆಂಡದ ಸೆರಗು ತಂಡ

ಮಹಿಳಾ ಪ್ರಧಾನ ಸಿನಿಮಾ: ನಾಯಕಿ ಭೂಮಿ ಶೆಟ್ಟಿ ಮಾತನಾಡಿ, ಮಹಿಳೆ ಎಲ್ಲಿ ಪ್ರಧಾನವಾಗಿರುತ್ತಾಳೆ ಆ ರೀತಿಯ ಪಾತ್ರ ಮಾಡಲು ನಾನು ಕಾತುರದಿಂದ ಕಾಯುತ್ತಿದ್ದೆ. ಅದೇ ಸಮಯದಲ್ಲಿ ಕೆಂಡದ ಸೆರಗು ಸಿನಿಮಾ ಸಿಕ್ತು. ಕಥೆ, ಅದರ ಸುತ್ತಮುತ್ತ ಇರುವ ಪಾತ್ರಗಳು, ಸಿನಿಮಾದಲ್ಲಿನ ಶೇಡ್ ಎಲ್ಲವನ್ನೂ ಕೇಳಿ ಇಷ್ಟವಾಯ್ತು. ಚಾಲೆಂಜಿಂಗ್ ಪಾತ್ರ ನಾನು ಮಾಡಲೇಬೇಕು ಎಂದು ಒಪ್ಪಿಕೊಂಡೆ. ಕುಸ್ತಿಗೆ ಸಂಪೂರ್ಣ ಶ್ರಮ ಹಾಕಿದ್ದೇನೆ. ನನ್ನ ಪಾತ್ರಕ್ಕಿರುವ ಶೇಡ್ಸ್ ತುಂಬಾ ಚೆನ್ನಾಗಿದೆ. ಸಮಾಜದಲ್ಲಿ ವೇಶ್ಯೆ ಹಾಗೂ ಆಕೆಯ ಮಗಳನ್ನು ಬೇರೆಯದ್ದೇ ರೀತಿ ನೋಡುತ್ತಾರೆ. ಆದರೆ ಆಕೆಗೂ ಅವಕಾಶ ನೀಡಿದ್ರೆ, ಏನ್ ಬೇಕಿದ್ರು ಸಾಧಿಸುತ್ತಾಳೆ ಎನ್ನುವ ಎಳೆ ಚಿತ್ರದ್ದು. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.

  • " class="align-text-top noRightClick twitterSection" data="">

ಆಸ್ತಿ ಮಾರಿ ಚಿತ್ರ ನಿರ್ಮಾಣ: ನಿರ್ಮಾಪಕ ಕೆ. ಕೊಟ್ರೇಶ್ ಗೌಡ ಮಾತನಾಡಿ ದಾವಣಗೆರೆಯಲ್ಲಿ ನನ್ನದೊಂದು ಬೀಡ ಅಂಗಡಿ ಇದೆ. ಸಿನಿಮಾ ಮಾಡಬೇಕು ಎಂದು ನಾನು ಮತ್ತು ರಾಕಿ ಸೋಮ್ಲಿ ಮಾತನಾಡುತ್ತಿದ್ದೆವು. ಪ್ರೊಡ್ಯೂಸರ್​ಗಾಗಿ ಒಂದು ವರ್ಷ ಹುಡುಕಾಟ ನಡೆಸಿದೆವು. ನಂತರ ನನ್ನ ಸೈಟ್, ಬಂಗಾರ ಮಾರ ಈ ಚಿತ್ರ ನಿರ್ಮಿಸಿದ್ದೇನೆ. ರಾಕಿ ನನ್ನ ಸ್ನೇಹಿತ. ಅತನಿಗೆ ಸಪೋರ್ಟ್ ಮಾಡಬೇಕು ಎಂದುಕೊಂಡೆ, ಜೊತೆಗೆ ಕೆಂಡದ ಸೆರಗು ಕಾದಂಬರಿಯಲ್ಲಿ ಕುಸ್ತಿ ಬಗ್ಗೆ ತುಂಬಾ ಡಿಟೈಲ್ ಆಗಿ ಬರೆದಿದ್ದಾರೆ. ಸಿನಿಮಾ ಮಾಡಿದ್ರೆ ಕ್ಲಿಕ್ ಆಗುತ್ತೆ ಎಂದು ಬಂಡವಾಳ ಹಾಕಿದ್ದೀನಿ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದ್ರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ 'ಲವ್ ಬರ್ಡ್ಸ್'ಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಬೆಂಬಲ

ಶ್ರೀ ಮುತ್ತು ಟಾಕೀಸ್ ಮತ್ತು ಎಸ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೆ. ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ಮಾಲಾಶ್ರೀ ಹಾಗು ಭೂಮಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ‘ಕೆಂಡದ ಸೆರಗು ಚಿತ್ರ ಸದ್ಯದಲ್ಲೇ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.