ETV Bharat / entertainment

ಪಂಜುರ್ಲಿ ದೈವದ ವೇಷ ಧರಿಸಿ IPL ಪಂದ್ಯ ವೀಕ್ಷಿಸಿದ ವ್ಯಕ್ತಿ; ತುಳುನಾಡಿನ ಜನರ ಅಸಮಾಧಾನ

author img

By

Published : Apr 4, 2023, 7:49 PM IST

ತುಳುನಾಡಿನ ಜನರು ಆರಾಧಿಸುವ ಪಂಜುರ್ಲಿ ದೈವದ ವೇಷವನ್ನು ಮನರಂಜನೆಯ ವಸ್ತುವನ್ನಾಗಿ ಬಳಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

Panjurli costume
ಪಂಜುರ್ಲಿ ದೈವದ ವೇಷಧಾರಣೆ

'ಕಾಂತಾರ ಭಾಗ 2 ಮಾಡಬೇಡಿ. ನಮ್ಮ ದೈವವನ್ನು ನಿಮ್ಮ ಮನರಂಜನೆಗೆ ಬಳಸಿಕೊಳ್ಳಬೇಡಿ..' ಇದು ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡಿನ ಜನರ ಮನವಿ. ಅರೇ, ದಿಢೀರ್ ಇಂಥ ಬೆಳವಣಿಗೆಗೆ ಏನು ಕಾರಣ?. ತುಳುನಾಡಿದ ಜನರ ಆರಾಧ್ಯ ದೈವಗಳಲ್ಲೊಂದಾಗಿರುವ ಪಂಜರ್ಲಿಯ ವೇಷಧಾರಣೆ ಮಾಡಿ ಅಪಹಾಸ್ಯ ಮಾಡುತ್ತಿರುವ ಘಟನೆಗಳೇ ಇದಕ್ಕೆ ಕಾರಣವಾಗಿದೆ.

ಅಪಾರ ಜನಮನ್ನಣೆ ಗಳಿಸಿದ ಕನ್ನಡದ ಸೂಪರ್​ ಹಿಟ್ ಸಿನಿಮಾ ಕಾಂತಾರ. ಇದು ಕೇವಲ ಸಿನಿಮಾ ಮಾತ್ರವಲ್ಲ, ಭಕ್ತಿ, ಶಕ್ತಿಯೆಂದೇ ಪರಿಗಣಿಸಲ್ಪಟ್ಟಿದೆ. ಜೊತೆಗೆ ಅದೊಂದು ಸಂಸ್ಕೃತಿಯ ಪ್ರತಿಬಿಂಬವೂ ಹೌದು. ಕಾಂತಾರ ಕಥೆಯೊಂದಿಗೆ ತುಳುನಾಡಿನ ಜನರಿಗೆ ಭಾವನಾತ್ಮಕ ಸಂಬಂಧವಿದೆ. ಆದರೆ ಕರಾವಳಿ ಜಿಲ್ಲೆಯ ಆಚಾರ-ವಿಚಾರಗಳ ಬಗ್ಗೆ ಹೆಚ್ಚೇನೂ ಅರಿಯದ ಕೆಲವು ಜನರು ದೈವಗಳ ವೇಷಭೂಷಣವನ್ನು ಕೀಳು ಮಟ್ಟದ ತಮಾಷೆಗೆ, ಅಪಹಾಸ್ಯಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಹೀಗಾಗಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಕಾಂತಾರದ ಮತ್ತೊಂದು ಭಾಗ ಮಾಡಬೇಡಿ ಎಂಬ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ್ದ ಕಾಂತಾರ ಹಿಂದೂ ಸಂಸ್ಕೃತಿಯನ್ನು ಅದರಲ್ಲೂ ತುಳುನಾಡ ಪರಂಪರೆಯನ್ನು ಎತ್ತಿ ಹಿಡಿದಿದೆ. ಸಿನಿಮಾದ ಕೊನೆಯಲ್ಲಿ ರಿಷಬ್ ಶೆಟ್ಟಿ ಅವರು ಪಂಜುರ್ಲಿ ದೈವವೇ ಆವಾಹನೆಯಾದಂತೆ ನಟಿಸಿದ್ದರು. ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರಲ್ಲಿ ವಿಶೇಷ ರೀತಿಯಲ್ಲಿ ಪ್ರಭಾವ ಬೀರಿದ್ದರು. ಈ ಮೂಲಕ ನಟನಿಗೆ ಡಿವೈನ್ ಸ್ಟಾರ್ ಎಂಬ ಖ್ಯಾತಿಯೂ ಬಂದಿತ್ತು.

ಆದ್ರೆ ಆ ನಂತರದಲ್ಲಿ ಕೆಲವರಿಂದ ಹುಚ್ಚಾಟ ಆರಂಭವಾಗಿದೆ. ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ ವೇಷ ಧರಿಸಿ ಅನೇಕರು ಪ್ರತ್ಯಕ್ಷರಾದರು. ಈ ಕುರಿತು ಮನಬಂದಂತೆ ರೀಲ್ಸ್ ಮಾಡಿದ್ದಾರೆ. ಇದು ಭಾವನೆಗಳಿಗೆ ಧಕ್ಕೆ ತರುವ ಕೆಲಸ ಎಂದು ತುಳುನಾಡಿನ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ರಿಷಬ್ ಶೆಟ್ಟಿ ಎಷ್ಟೇ ಮನವಿ ಮಾಡಿಕೊಂಡರೂ ಇಂಥ ಬೆಳವಣಿಗೆಗಳು ನಿಂತಿಲ್ಲ. ಇದಕ್ಕೆ ಉದಾಹರಣೆಯಂಬಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಆರ್.ಸಿ.ಬಿ ಮತ್ತು ಮುಂಬೈ ಇಂಡಿಯನ್ಸ್‌ ಮುಖಾಮುಖಿಯಾದಾಗ ವ್ಯಕ್ತಿಯೊಬ್ಬ ಪಂಜುರ್ಲಿ ದೈವದ ವೇಷ ಧರಿಸಿ ಆಗಮಿಸಿ, ಮೈದಾನದಲ್ಲಿ ಕೂಗಿದ್ದ. ಫೋಟೋ ಕ್ಲಿಕ್ಕಿಸಿಕೊಂಡಿದ್ದ. ದೈವದ ವೇಷ ಧರಿಸಿದ್ದ ವ್ಯಕ್ತಿಯ ಫೋಟೋವನ್ನು ಆರ್.ಸಿ.ಬಿ ತಂಡ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿತ್ತು. ಕಾಂತಾರ ನಿರ್ಮಾಣ ಸಂಸ್ಥೆ ಹೊಂಬಾಳೆ ಆರ್.ಸಿ.ಬಿಯ ಡಿಜಿಟಲ್ ಪಾರ್ಟ್​​ನರ್ ಕೂಡಾ ಹೌದು. ಆದರೂ ಈ ರೀತಿಯ ಘಟನೆ ನಡೆದಿದೆ.

ಇದನ್ನೂ ಓದಿ: ಮದುವೆಯಾಗಿ 10 ವರ್ಷಗಳ ಬಳಿಕ ಗರ್ಭಧಾರಣೆ: ಕಾರಣ ಬಹಿರಂಗಪಡಿಸಿದ ರಾಮ್​ ಚರಣ್ ಪತ್ನಿ

ಹೀಗಾಗಿಯೇ ಆಕ್ರೋಶಗೊಂಡಿರುವ ತುಳುನಾಡ ಜನತೆ ಇದೀಗ ಪಂಜುರ್ಲಿ ವೇಷವನ್ನು ನಿಮ್ಮ ಖುಷಿಗೆ, ಮನರಂಜನೆಗೆ ಅಥವಾ ಬೇರೆಯವರ ಗಮನ ಸೆಳೆಯಲು ಬಳಸಿಕೊಳ್ಳಬೇಡಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಕಾಂತಾರ ಮೊದಲ ಭಾಗ (ಕಾಂತಾರ 2) ಮಾಡ್ಲೇಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮೂಲಕ ಚಿತ್ರತಂಡಕ್ಕೆ ಮನವಿ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: 'ರೈನ್​ಬೋ' ಸಮಂತಾ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ.. ಶಾಕುಂತಲಂ ತಾರೆಯ ಅಭಿಮಾನಿಗಳ ಅಸಮಾಧಾನ

ರಿಷಬ್ ಶೆಟ್ಟಿ ಕಾಂತಾರ ಮಾಡುವ ಮುನ್ನ ದೈವದ ಅನುಮತಿ ಕೇಳಿದ್ದರು. ಚಿತ್ರದ ಮೊದಲ ಭಾಗ ಮಾಡುವ ಮನಸ್ಸು ಮಾಡಿದಾಗಲೂ ಕೂಡಾ ಹೋಗಿ ಇನ್ನೊಮ್ಮೆ ದೈವದ ಅಪ್ಪಣೆ ಪಡೆದೇ ಬಂದಿದ್ದರು. ಇದನ್ನು ಅವರೇ ಸ್ವತ: ಹೇಳಿದ್ದಾರೆ. ಆದರೆ ಇದ್ಯಾವುದನ್ನೂ ಗಮನಿಸದ ಕೆಲವರು ಕೇವಲ ರಿಷಬ್ ಶೆಟ್ಟಿ ತೊಟ್ಟಿದ್ದ ದೈವದ ವೇಷವನ್ನು ಮನರಂಜನೆಯ ವಸ್ತುವನ್ನಾಗಿಸಿದ್ದಾರೆ ಅನ್ನೋದು ಕರಾವಳಿಯ ಜನರ ಬೇಸರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.