ETV Bharat / entertainment

Bombat Bhojana: ಸಾವಿರ ಕಂತುಗಳತ್ತ ಬೊಂಬಾಟ್ ಭೋಜನ; 'ಅಂಗೈಯಲ್ಲಿ ಆರೋಗ್ಯ' ಅಂತಿದ್ದಾರೆ ಸಿಹಿಕಹಿ ಚಂದ್ರು

author img

By

Published : Jul 27, 2023, 12:05 PM IST

Bombat Bhojana: ಜನಪ್ರಿಯ 'ಬೊಂಬಾಟ್ ಭೋಜನ' ಶೋ ಯಶಸ್ವಿ 850 ಕಂತುಗಳನ್ನು ಪೂರೈಸಿ, ಸಾವಿರದತ್ತ ಮುನ್ನುಗ್ಗುತ್ತಿದೆ.

Bombat Bhojana program
ಬೊಂಬಾಟ್ ಭೊಜನ ಕಾರ್ಯಕ್ರಮ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ‌ ಸಿಹಿಕಹಿ ಚಂದ್ರು. ನಟ, ನಿರ್ದೇಶಕನಾಗಿ ಸಕ್ಸಸ್ ಕಂಡಿರುವ ಸಿಹಿಕಹಿ ಚಂದ್ರು ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಡೆಸಿಕೊಡುವ 'ಬೊಂಬಾಟ್ ಭೋಜನ' ಕಾರ್ಯಕ್ರಮ ಯಶಸ್ವಿ 850 ಕಂತುಗಳನ್ನು ಪೂರೈಸಿ, ಸಾವಿರದತ್ತ ಹೆಜ್ಜೆ ಹಾಕುತ್ತಿದೆ. ಈ ಸಂಭ್ರಮದ ಜೊತೆ 'ಅಂಗೈಯಲ್ಲಿ ಆರೋಗ್ಯ'ದ ಬಗ್ಗೆ ಸಿಹಿಕಹಿ ಚಂದ್ರು ಆ್ಯಂಡ್ ಫ್ಯಾಮಿಲಿ ಮಾಹಿತಿ ಹಂಚಿಕೊಂಡಿದೆ.

ಬೊಂಬಾಟ್ ಭೋಜನದ ಬಗ್ಗೆ ಮಾತು ಶುರು ಮಾಡಿದ ಸಿಹಿಕಹಿ ಚಂದ್ರು, "ನಮ್ಮ ಕಾರ್ಯಕ್ರಮ ಯಶಸ್ವಿ 850 ಕಂತುಗಳನ್ನು ಪೂರೈಸಿ ಸಾವಿರದತ್ತ ಸಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಬಯಲೂಟ, ಮನೆಯೂಟ, ಸವಿಯೂಟ, ನಮ್ಮೂರ ಊಟ, ಅತಿಥಿ ದೇವೋಭವ ಎಂಬ ವಿಭಾಗಗಳಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಆರೋಗ್ಯ ಆಹಾರ ಹಾಗೂ ಅಂಗೈಯಲ್ಲಿ ಆರೋಗ್ಯ ಎಂಬ ಹೆಸರಿನಲ್ಲಿ ಮನೆಮದ್ದುಗಳ ಕುರಿತಾಗಿ ಡಾ.ಗೌರಿ ಸುಬ್ರಹ್ಮಣ್ಯ ಮಾಹಿತಿ ನೀಡುತ್ತಾರೆ. ಬೊಂಬಾಟ್ ಭೋಜನದಲ್ಲಿ ಎಂ.ಎನ್.ನರಸಿಂಹಮೂರ್ತಿ ಹೇಳುವ 'ಟೈಮ್ ಪಾಸ್ ಜೋಕ್ಸ್' ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಖುಷಿ ಚಂದ್ರಶೇಖರ್ ನೀಡುವ 'ಬ್ಯೂಟಿ ಟಿಪ್ಸ್' ಮಹಿಳೆಯರ ಮನಗೆದ್ದಿದೆ".

Bombat Bhojana program
'ಅಂಗೈಯಲ್ಲಿ ಆರೋಗ್ಯ'ದ ಬಗ್ಗೆ ಮಾಹಿತಿ ಹಂಚಿಕೊಂಡ ಸಿಹಿಕಹಿ ಚಂದ್ರು ತಂಡ

"ಯಶಸ್ವಿ ಎರಡು ವರ್ಷಗಳನ್ನು ಪೂರೈಸಿರುವ 'ಬೊಂಬಾಟ್ ಭೋಜನ' ಮೂರನೇ ವರ್ಷದಲ್ಲಿ ಮೂರನೇ ಸೀಸನ್​​ನಲ್ಲಿ ಮುಂದುವರೆಯುತ್ತಿದೆ.‌ ನಾನು ಈ ಸೀಸನ್​ನಲ್ಲಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಆಯಾ ಊರಿನ ಕೆಲ ಮನೆಗಳಿಗೆ ಹಾಗೂ ಹೋಟೆಲ್​ಗಳಿಗೆ ಭೇಟಿ ನೀಡಿ, ಅಲ್ಲಿನ ವಿಶೇಷ ಖಾದ್ಯ ಸವಿದಿದ್ದೇನೆ. ಹೋದ ಕಡೆಯೆಲ್ಲ ಸಿಗುತ್ತಿರುವ ಜನಮನ್ನಣೆಗೆ ಮನಸ್ಸು ತುಂಬಿ ಬಂದಿದೆ. ಸಾವಿರ ಕಂತಿಗೆ ದೊಡ್ಡ ಸಮಾರಂಭ ಆಯೋಜಿಸುವ ಯೋಚನೆಯಿದೆ" ಎಂದು ತಿಳಿಸಿದರು.

ಮನೆ ಮದ್ದು ಕುರಿತಾಗಿ ಮಾಹಿತಿ ನೀಡುವ ಗೌರಿ ಸುಬ್ರಹ್ಮಣ್ಯ ಮಾತನಾಡಿ, "2014ರಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, 'ತಥಾಸ್ತು' ನನ್ನ ಮೊದಲ ಕಾರ್ಯಕ್ರಮ. ಆ ನಂತರ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಕೆಲವು ಮನೆಮದ್ದುಗಳನ್ನು ಪೇಪರ್​ನಲ್ಲಿ ಬರೆದುಕೊಂಡು ಹೋಗಿ ಕಾರ್ಯಕ್ರಮದಲ್ಲಿ ಹೇಳುತ್ತಿದ್ದೆ. ಆ ಕಾಗದ ಎಷ್ಟೋ ಬಾರಿ ಕಳೆದು ಹೋಗುತ್ತಿತ್ತು. ನನ್ನ ಯಜಮಾನರ ಸಲಹೆ ಮೇರೆಗೆ ಆ ಮನೆ ಮದ್ದುಗಳನ್ನು ಡೈರಿಯಲ್ಲಿ ಬರೆಯುತ್ತಾ ಬಂದೆ. ಅದು ನಂತರ ಪುಸ್ತಕ ರೂಪದಲ್ಲಿ ಹೊರ ಬಂತು. 'ಬೊಂಬಾಟ್ ಭೋಜನ'ದಲ್ಲೂ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳುತ್ತಾ ಬರುತ್ತಿದ್ದೇನೆ. ಅದರಿಂದ ಸಾಕಷ್ಟು ಜನರಿಗೆ ಉಪಯೋಗವಾಗುತ್ತಿದೆ" ಎಂದು ತಿಳಿಸಿದರು.

Bombat Bhojana program
'ಬೊಂಬಾಟ್ ಭೋಜನ' ಯಶಸ್ಸಿನಲೆಯಲ್ಲಿ ಸಿಹಿಕಹಿ ಚಂದ್ರು

ಇದನ್ನೂ ಓದಿ: Karnataka Rains: ರಾಜ್ಯಾದ್ಯಂತ ಮುಂಗಾರು ಮಳೆ ಹನಿಗಳ ಲೀಲೆ! PHOTOಗಳಲ್ಲಿ ನೋಡಿ..

ಸ್ಟಾರ್ ಸುವರ್ಣ ವಾಹಿನಿ ಮುಖ್ಯಸ್ಥ ವರ್ಷ ಮಾತನಾಡಿ, "ನಾನು ಸುವರ್ಣ ವಾಹಿನಿ ಸೇರಿ ಮೂರು ವರ್ಷಗಳಾಯಿತು. ವಾಹಿನಿ ಸೇರಿದ ಕೆಲವೇ ತಿಂಗಳಲ್ಲಿ ಈ ಕಾರ್ಯಕ್ರಮ ಆರಂಭಿಸಿದ್ದೆವು. ಕಾರ್ಯಕ್ರಮದ ಬಗ್ಗೆ ಚಂದ್ರು ಅವರ ಬಳಿ ಹೇಳಿದಾಗ ಕೇವಲ ಎರಡು ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿದರು. ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ 'ಬೊಂಬಾಟ್ ಭೋಜನ' ನಂಬರ್ 1 ಕಾರ್ಯಕ್ರಮ ಅಂತ ಹೇಳಬಹುದು.‌ ಈ ಸೀಸನ್ ವಿಶೇಷವೆಂದರೆ ಚಂದ್ರು ಅವರು ವಿಶೇಷವಾದ 'ಬೊಂಬಾಟ್ ಹಲ್ವ' ಎಂಬ ಸಿಹಿತಿಂಡಿಯನ್ನು ಹಾಗೂ 'ಬೊಂಬಾಟ್ ಕಾಫಿ' ಎಂಬ ಫಿಲ್ಟರ್ ಕಾಫಿ ಕಂಡು ಹಿಡಿದಿದ್ದಾರೆ" ಎಂದರು. ಇದೇ ವೇಳೆ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ: HBD Kriti Sanon: ಜನ್ಮದಿನದ ಸಂಭ್ರಮದಲ್ಲಿ ಕೃತಿ ಸನೋನ್​ - 'ಆದಿಪುರುಷ'ನ ಸೀತೆಗೆ ಶುಭಾಶಯಗಳ ಸುರಿಮಳೆ

ಸಾಹಿತಿ ಎಂ.ಎಸ್ ನರಸಿಂಹಮೂರ್ತಿ, ಸಿಹಿಕಹಿ ಗೀತಾ ಹಾಗೂ ಖುಷಿ ಚಂದ್ರಶೇಖರ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬೊಂಬಾಟ್ ಭೋಜನ 2 ಹಾಗೂ ಆರೋಗ್ಯ ಆಹಾರ ಎಂಬೆರಡು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.