ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಕುಟುಂಬಕ್ಕೆ ದೊಡ್ಮನೆ ಕುಟುಂಬ ಅಂತಾನೇ ಹೆಸರಿದೆ. ಆ ಹೆಸರಿಗೆ ಯಾವುದೇ ಕಪ್ಪು ಚುಕ್ಕಿ ಬಾರದಂತೆ ಕುಟುಂಬದವರು ನೋಡಿಕೊಂಡಿದ್ದಾರೆ. ಅಣ್ಣಾವ್ರ ಹಾದಿಯಲ್ಲಿ ಪರಮಾತ್ಮ ಅಪ್ಪು ಕೂಡ ಸಾಗಿದವರು. ಅವರು ಇಹಲೋಕ ತ್ಯಜಿಸಿದ ಬಳಿಕ ಪತ್ನಿ ಅಶ್ವಿನಿ ಕೂಡ ಮಾವ ಮತ್ತು ಪತಿಯ ಹಾದಿಯಲ್ಲೇ ಸಾಗುತ್ತಿದ್ದಾರೆ. ದೊಡ್ಮನೆ ಗೌರವ, ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.
ಡಾ.ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗ ಕಂಡ ಅದ್ಭುತ ವ್ಯಕ್ತಿತ್ವ. ಇವರು ಸರಳತೆಯ ಸಾಮ್ರಾಟನಾಗಿ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದರು. ಅನ್ನ ಕೊಟ್ಟ ನಿರ್ಮಾಪಕನನ್ನು ಅನ್ನದಾತ ಎಂದು ಪೂಜಿಸಿದ್ರೆ, ಸಿನಿಮಾ ನೋಡಿ ಕೈ ಹಿಡಿದ ಅಭಿಮಾನಿಗಳಿಗೆ ದೇವರೆಂದು ಕೈ ಮುಗಿಯುತ್ತಿದ್ದರು. ಅಭಿಮಾನಿಗಳಿಗಾಗಿಯೇ ಬದುಕಿದ ಬಂಗಾರದ ಮನುಷ್ಯ ಅಣ್ಣಾವ್ರು.
![ashwini-puneeth-rajkumar-rejected-the-political-opportunity](https://etvbharatimages.akamaized.net/etvbharat/prod-images/kn-bng-04-drraju-puneethrajkumar-adharashadali-ashwinipuneethrajkumar-7204735_08122022160624_0812f_1670495784_245.jpg)
ಇವರು ಮನಸ್ಸು ಮಾಡಿದ್ರೆ ಎನ್ಟಿಆರ್ ಮತ್ತು ಎಂಜಿಆರ್ ಅವರಂತೆ ಮುಖ್ಯಮಂತ್ರಿ ಆಗಬಹುದಾಗಿತ್ತು. ಆದರೆ ರಾಜ್ಕುಮಾರ್ ಅವರಿಗೆ ಅದ್ಯಾವುದೂ ಇಷ್ಟವಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅಭಿಮಾನಿಗಳ ಪ್ರೀತಿಯನ್ನು ವೋಟಾಗಿಸಿಕೊಳ್ಳುವುದಕ್ಕೆ ಸುತರಾಂ ಮನಸ್ಸಿರಲಿಲ್ಲ. ತನಗಾಗಿ ಬಂದ ಎಲ್ಲಾ ರಾಜಕೀಯ ಆಫರ್ಗಳನ್ನು ನಯವಾಗಿ ತಿರಸ್ಕರಿಸಿಬಿಟ್ಟಿದ್ದರು.
ಅಭಿಮಾನಿಗಳು ಡಾ.ರಾಜ್ಕುಮಾರ್ಗೆ ಕೊಟ್ಟಷ್ಟೇ ಪ್ರೀತಿಯನ್ನು ಅವರ ಮಕ್ಕಳಿಗೂ ನೀಡಿದ್ದರು. ಅದರಲ್ಲಿ ಸ್ವಲ್ಪ ಹೆಚ್ಚೇ ಪ್ರೀತಿ ಸಿಕ್ಕಿದ್ದು ಕನ್ನಡಿಗರ ಕೂಸು ಅಪ್ಪುಗೆ. ಇವರು ಅಣ್ಣಾವ್ರಂತೆ ಸದಾ ನಗುಮುಖದಲ್ಲೇ ಕನ್ನಡಿಗರ ಮನಸ್ಸನ್ನು ಕದ್ದವರು. ಅವರನ್ನು ಪ್ರೀತಿಸೋ ಅಭಿಮಾನಿ ದೇವರುಗಳಿಗೆ ಯಾವುದೇ ನೋವುಂಟು ಮಾಡದ ಅಪ್ಪು ಸಿನಿಮಾದಲ್ಲಿ ಪರಮಾತ್ಮನಾಗಿ ಕಾಣಿಸಿ ಬಳಿಕ ಕಾಣಿಸದ ಪರಮಾತ್ಮನಲ್ಲಿ ಲೀನರಾದರು. ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರಾಜಕುಮಾರನಿಗೆ ರಾಜಕೀಯದ ಆಫರ್ಗಳು ಬಂದಿದ್ದವು. ಆದರೆ ಅಂತಹ ಅವಕಾಶಗಳನ್ನು ರಿಜೆಕ್ಟ್ ಮಾಡಿ ಸಿನಿಮಾ ಸೇವೆ, ಸಮಾಜ ಸೇವೆ ಎಂಬುದರಲ್ಲೇ ಖುಷಿ ಕಾಣುತ್ತಿದ್ದರು.
![ashwini-puneeth-rajkumar-rejected-the-political-opportunity](https://etvbharatimages.akamaized.net/etvbharat/prod-images/kn-bng-04-drraju-puneethrajkumar-adharashadali-ashwinipuneethrajkumar-7204735_08122022160624_0812f_1670495784_456.jpg)
ಇನ್ನೂ ಅಪ್ಪು ಅಗಲಿಕೆ ನಂತರ ಅಭಿಮಾನಿಗಳ ಅದೇ ಪ್ರೀತಿ ಸಿಕ್ಕಿದ್ದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ. ತಮ್ಮ ಮಾವ ಡಾ.ರಾಜ್ಕುಮಾರ್, ಅತ್ತೆ ಪಾರ್ವತಮ್ಮ ಮತ್ತು ಪತಿ ಪುನೀತ್ ಹಾದಿಯಲ್ಲೇ ಸಾಗುವ ಮೂಲಕ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ಅಲ್ಲದೇ ಅಶ್ವಿನಿ ಅವರಲ್ಲಿ ಅಭಿಮಾನಿ ದೇವರುಗಳು ಅಪ್ಪುವನ್ನು ಕಾಣುತ್ತಿದ್ದಾರೆ.
ಹೀಗಾಗಿಯೇ ರಾಜಕೀಯ ಪಕ್ಷಗಳು ಅಶ್ವಿನಿ ಅವರನ್ನು ಪಕ್ಷಕ್ಕೆ ಕರೆತಂದು ವೋಟ್ ಬ್ಯಾಂಕ್ ಮಾಡಿಕೊಳ್ಳುವ ಎಲ್ಲಾ ತಯಾರಿಗಳನ್ನು ಮಾಡುತ್ತಿದ್ದಾರೆ ಎಂಬ ಲೇಟೆಸ್ಟ್ ಸುದ್ದಿ ಬೆಂಗಳೂರಿನ ಗಾಂಧಿನಗರದಲ್ಲಿ ಕೇಳುಬರುತ್ತಿತ್ತು. ಆದರೆ ಇಂತಹ ಆಫರ್ ಅನ್ನು ಅಶ್ವಿನಿಯವರು ನಯವಾಗಿ ತಿರಸ್ಕರಿಸಿದ್ದಾರೆ. ರಾಜಕೀಯದಿಂದ ದೂರ ಉಳಿದು ದೊಡ್ಮನೆ ಗೌರವ ಮತ್ತು ಅಭಿಮಾನಿಗಳ ಪ್ರೀತಿ ಎರಡಕ್ಕೂ ದಕ್ಕೆ ಬಾರದಂತೆ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಅಶ್ವಿನಿ ಮೇಲಿನ ಅಭಿಮಾನ, ಪ್ರೀತಿ ಮತ್ತು ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.
![ashwini-puneeth-rajkumar-rejected-the-political-opportunity](https://etvbharatimages.akamaized.net/etvbharat/prod-images/kn-bng-04-drraju-puneethrajkumar-adharashadali-ashwinipuneethrajkumar-7204735_08122022160624_0812f_1670495784_315.jpg)
ಇದನ್ನೂ ಓದಿ:ಲೇಡಿ ಸಿಂಗಂ ಅವತಾರದಲ್ಲಿ ದೀಪಿಕಾ; ಮುಂದಿನ ಚಿತ್ರ ಘೋಷಿಸಿದ ನಿರ್ದೇಶಕ ರೋಹಿತ್ ಶೆಟ್ಟಿ