ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಟರಲ್ಲಿ ಒಬ್ಬರು. ಇಂದು ಇವರು 39ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನೆಚ್ಚಿನ ನಟನಿಗೆ ಸಿನಿಮಾ ಲೋಕದ ಗಣ್ಯರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. RRR ಚಿತ್ರದ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ನಟನಿಗೆ ಇತ್ತೀಚೆಗೆ ಗುಡ್ ಮಾರ್ನಿಂಗ್ ಅಮೆರಿಕ ಶೋನಲ್ಲಿ ಭಾಗವಹಿಸುವ ಅಪರೂಪದ ಅವಕಾಶ ಸಿಕ್ಕಿತ್ತು. ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿ ಸಮಾರಂಭದಲ್ಲಿಯೂ ಇವರು ಅತಿಥಿಯಾಗಿ ಭಾಗವಹಿಸಿದ್ದರು. ಈ ಮೂಲಕ ಜಾಗತಿಕ ತಾರೆಯಾಗಿ ಹೊರಹೊಮ್ಮಿದ್ದಾರೆ.
2007ರಲ್ಲಿ 'ಚಿರುತಾ' ಚಿತ್ರದ ಮೂಲಕ ತಮ್ಮ ಬಣ್ಣದ ಲೋಕಕ್ಕೆ ಕಾಲಿಟ್ಟ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಂತರ ಮಗಧೀರ, ರಂಗಸ್ಥಳಂ, ಆರ್ಆರ್ಆರ್ ನಂತಹ ಹಲವಾರು ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದ್ರೆ, ಈ ಮೂರು ಚಿತ್ರಗಳಲ್ಲಿ ಅವರು ನಟಿಸಿರುವ ಪಾತ್ರಗಳು ಮಾತ್ರ ವೃತ್ತಿಜೀವನದ ಅತ್ಯುತ್ತಮ ಆಯ್ಕೆ ಎಂದೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
![Ram Charan](https://etvbharatimages.akamaized.net/etvbharat/prod-images/rangasthalam_2603newsroom_1679827063_281.jpg)
2009ರಲ್ಲಿ ಬಿಡುಗಡೆಯಾದ 'ಮಗಧೀರ' ರಾಮ್ ಚರಣ್ ನಟನೆಯ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದು. ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಚಿತ್ರವು 17ನೇ ಶತಮಾನದ ಯೋಧನ ಕಥೆ ಒಳಗೊಂಡಿದೆ. ಅಷ್ಟೇ ಅಲ್ಲ, ರಾಮ್ ಚರಣ್ ಕಾಲ ಭೈರವನ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ರಾಜ್ಯಕ್ಕಾಗಿ ಹೋರಾಡುವ ತನ್ನ ಪ್ರಾಣವನ್ನೇ ತ್ಯಜಿಸುವ ವೀರ ಯೋಧನ ಕಥೆ ಇದಾಗಿದೆ.
ಇದನ್ನೂ ಓದಿ: ಆರ್ಆರ್ಆರ್ ಖ್ಯಾತಿಯ ನಟ ರಾಮ್ ಚರಣ್,ಚಿರಂಜೀವಿ ಭೇಟಿ ಮಾಡಿದ ಅಮಿತ್ ಶಾ
"ರಂಗಸ್ಥಳಂ" 2018 ರಲ್ಲಿ ಬಿಡುಗಡೆಯಾದ ಸಿನಿಮಾ. ಇದು ತೆಲುಗು ಚಿತ್ರರಂಗದಲ್ಲಿ ಅಗ್ರ ನಟರ ಸ್ಥಾನದಲ್ಲಿ ರಾಮ್ ಚರಣ್ ಹೆಸರನ್ನು ಮತ್ತಷ್ಟು ಭದ್ರಪಡಿಸಿತು. ಸುಕುಮಾರ್ ನಿರ್ದೇಶನದ ಸಿನಿಮಾವು 1980 ರ ದಶಕದಲ್ಲಿ ಹಳ್ಳಿಯೊಂದರಲ್ಲಿ ನಡೆಯುವ ಕಥೆ ಆಧರಿಸಿದೆ. ಗ್ರಾಮದ ಅಧ್ಯಕ್ಷರ ದೌರ್ಜನ್ಯದ ವಿರುದ್ಧ ತುಳಿತಕ್ಕೊಳಗಾದವರ ಧ್ವನಿಯಾಗುವ ಶ್ರವಣದೋಷವುಳ್ಳ ಚಿಟ್ಟಿ ಬಾಬು ಕಥೆ ಇದರಲ್ಲಿದೆ.
ಎಸ್.ಎಸ್.ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಇಡೀ ಜಗತ್ತಿಗೆ ನಟ ರಾಮ್ ಚರಣ್ ಹೆಸರನ್ನು ಪರಿಚಯಿಸಿತು. ಇಬ್ಬರು ಮಹಾನ್ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಕಾಲ್ಪನಿಕ ಕಥೆಯಲ್ಲಿ ರಾಮ್ ಚರಣ್ ಅವರು 20ನೇ ಶತಮಾನದ ಆರಂಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮತ್ತು ದೇಶಭಕ್ತ ನಾಯಕ ಅಲ್ಲೂರಿ ಸೀತಾರಾಮ ರಾಜು ಪಾತ್ರ ನಿರ್ವಹಿಸಿದ್ದಾರೆ. ಈ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ನಟ, ಜೇಮ್ಸ್ ಕ್ಯಾಮರೂನ್ ಅವರಿಂದಲೂ ಪ್ರಶಂಸೆ ಗಳಿಸಿಕೊಂಡರು.
ಇದನ್ನೂ ಓದಿ: ತಾಯ್ನಾಡಿಗೆ ಹಿಂತಿರುಗಿದ RRR ಖ್ಯಾತಿಯ ನಟ ರಾಮ್ಚರಣ್ಗೆ ಅದ್ದೂರಿ ಸ್ವಾಗತ
![Ram Charan](https://etvbharatimages.akamaized.net/etvbharat/prod-images/magadheeras_2603newsroom_1679827063_501.jpg)
16 ವರ್ಷಗಳ ವೃತ್ತಿಜೀವನದಲ್ಲಿ ತೆಲುಗು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ರಾಮ್ ಚರಣ್ಗೆ ಸಿನಿಮಾ ತಾರೆಯರು ಸೇರಿದಂತೆ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಅಷ್ಟೇ ಅಲ್ಲದೇ, 'ಆರ್ಸಿ 15' ಚಿತ್ರತಂಡ ಕೇಕ್ ಕತ್ತರಿಸುವ ಮೂಲಕ ಚೆರ್ರಿ ಹುಟ್ಟುಹಬ್ಬ ಆಚರಿಸಿದೆ. ಈ ಸೆಲೆಬ್ರೇಷನ್ ವೇಳೆ ದಿಲ್ ರಾಜು, ಪ್ರಭುದೇವ, ನಿರ್ದೇಶಕ ಶಂಕರ್, ಕಿಯಾರಾ ಅಡ್ವಾಣಿ ಸೇರಿದಂತೆ ಇತರರು ಭಾಗವಹಿಸಿದ್ದರು.