ಮೈಸೂರಿಗೆ ಬರಲಿರುವ ರಾಷ್ಟ್ರಪತಿ: ದಸರಾ ಸಿದ್ಧತೆಯಲ್ಲಿರುವ ಅಧಿಕಾರಿಗಳಿಗೆ ಮತ್ತಷ್ಟು ಒತ್ತಡ

author img

By

Published : Sep 23, 2021, 4:50 PM IST

ಮೈಸೂರಿಗೆ ಬರಲಿರುವ ರಾಷ್ಟ್ರಪತಿ

ಅಕ್ಟೋಬರ್ 7 ಅಥವಾ 9ರಂದು ರಾಷ್ಟ್ರಪತಿ ಮೈಸೂರಿಗೆ ಆಗಮಿಸಲಿದ್ದು, ಅವರಿಗೆ ಭದ್ರತೆ ಒದಗಿಸುವ ಹೊಣೆ ಜಿಲ್ಲಾಡಳಿತಕ್ಕೆ ಇರುವುದರಿಂದ ದಸರಾ ಜೊತೆ ಮತ್ತಷ್ಟು ಕೆಲಸದ ಒತ್ತಡ ಬೀಳಲಿದೆ.

ಮೈಸೂರು: ರಾಷ್ಟ್ರಪತಿ ಭವನದಿಂದ ಬಂದ ದಿಢೀರ್ ಕರೆಯಿಂದ ದಸರಾ ಸಿದ್ಧತೆಯಲ್ಲಿದ್ದ ಮೈಸೂರಿನ ಅಧಿಕಾರಿಗಳಿಗೆ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಏಕೆಂದರೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಮುಂದಿನ ತಿಂಗಳು ಮೈಸೂರು ಪ್ರವಾಸ ಕೈಗೊಂಡಿದ್ದಾರೆ.

ಅಕ್ಟೋಬರ್ 7 ಅಥವಾ 9ಕ್ಕೆ ಕೋವಿಂದ್ ಅವರು ಜಿಲ್ಲೆಗೆ ಬರಲಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ‌ ಗೌತಮ್‌ ಅವರಿಗೆ ರಾಷ್ಟ್ರಪತಿ ಭವನದ ಅಧಿಕಾರಿಗಳು ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.

ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಉದ್ಘಾಟನೆ ನಂತರ, ಐತಿಹಾಸಿಕ ಮಲೆಮಹದೇಶ್ವರ ಬೆಟ್ಟಕ್ಕೆ ರಾಷ್ಟ್ರಪತಿ ಭೇಟಿ ನೀಡಲಿದ್ದಾರೆ‌. ಚಾಮರಾಜನಗರ ಪ್ರವಾಸ ಮುಗಿದ ನಂತರ ಮೈಸೂರಿಗೆ ಆಗಮಿಸಲು ಕೋವಿಂದ್​ ಅವರು ಚಿಂತನೆ ಮಾಡಿದ್ದು, ವಿಶ್ವವಿಖ್ಯಾತ ಮೈಸೂರು ಅಂಬಾ ವಿಲಾಸ ಅರಮನೆ ವೀಕ್ಷಿಸಲಿದ್ದಾರೆ. ಅರಮನೆ ವೀಕ್ಷಿಸಿ ನಂತರ ನವದೆಹಲಿಗೆ ರಾಷ್ಟ್ರಪತಿ ವಾಪಸ್​ ತೆರಳಲಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಚಾಮರಾಜನಗರ ಪ್ರವಾಸ

ಈಗಾಗಲೇ ದಸರಾ ಆಚರಣೆ ಸಿದ್ಧತೆಯ ಒತ್ತಡದಲ್ಲಿರುವ ಮೈಸೂರಿನ ಅಧಿಕಾರಿಗಳಿಗೆ ಅಕ್ಟೋಬರ್ 7 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನೋಡಿಕೊಳ್ಳಬೇಕಿದೆ. ಆನಂತರ ಅಕ್ಟೋಬರ್ 15 ರವರೆಗೆ ನಿರಂತರ ಕಾರ್ಯಕ್ರಮಗಳು ಜರುಗಲಿವೆ. ಅಕ್ಟೋಬರ್ 7 ಅಥವಾ 9ರಂದು ರಾಷ್ಟ್ರಪತಿ ಮೈಸೂರಿಗೆ ಆಗಮಿಸಿದರೆ, ಅವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ಅಲ್ಲದೇ ದಸರಾ ಮಹೋತ್ಸವವನ್ನು ಮತ್ತಷ್ಟು ಅಚ್ಚುಕಟ್ಟಾಗಿ ಮಾಡಬೇಕು. ರಾಷ್ಟ್ರಪತಿ ಅವರಿಗೆ ಭದ್ರತೆ ಒದಗಿಸುವ ಹೊಣೆ ಜಿಲ್ಲಾಡಳಿತಕ್ಕೆ ಇರುವುದರಿಂದ ದಸರಾ ಜೊತೆ ಮತ್ತಷ್ಟು ಕೆಲಸದ ಒತ್ತಡ ಬೀಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.