ETV Bharat / city

ಇದಪ್ಪಾ ಕನ್ನಡ ಪ್ರೇಮ: ಈ ದರ್ಗಾದಲ್ಲಿ ಪ್ರಾರ್ಥನೆ, ಸಂದೇಶಗಳೆಲ್ಲಾ ಕನ್ನಡದಲ್ಲೇ

author img

By

Published : Oct 24, 2021, 12:30 PM IST

Updated : Oct 24, 2021, 1:20 PM IST

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಹಜರತ್ ಸೈದಾನಿ ಬಿಬಿಮಾ ದರ್ಗಾದಲ್ಲಿ ಕನ್ನಡದಲ್ಲೇ ಸಂದೇಶ ನೀಡಿ, ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಜೊತೆಗೆ ಕನ್ನಡ ಪ್ರೇಮವನ್ನು ಸಾರಲಾಗುತ್ತಿದೆ.

Dargah
ಹಜರತ್ ಸೈದಾನಿ ಬಿಬಿಮಾ ದರ್ಗಾ

ಮೈಸೂರು: ಮಸೀದಿ, ದರ್ಗಾಗಳಲ್ಲಿ ಬರೀ ಉರ್ದು ಭಾಷೆಗೆ ಮಾತ್ರ ಆದ್ಯತೆ ನೀಡುವುದು ಸಹಜ. ಆದ್ರೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಬೆಳಲೆ ಗೇಟ್ ಬಳಿ ಇರುವ ದರ್ಗಾ ಇದಕ್ಕೆ ತದ್ವಿರುದ್ದ. ಅದೇನು ವಿಶೇಷ ಅಂತೀರಾ, ಇಲ್ಲಿದೆ ನೋಡಿ.

ಬೆಳಲೆ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಹಜರತ್ ಸೈದಾನಿ ಬಿಬಿಮಾ ದರ್ಗಾದಲ್ಲಿ ಕನ್ನಡದಲ್ಲೇ ಸಂದೇಶ ನೀಡಿ, ಪ್ರಾರ್ಥನೆ ಮಾಡಲಾಗುತ್ತದೆ. ಹಾಗಾಗಿ ಇದು ರಾಜ್ಯದಲ್ಲೇ ಪ್ರಥಮ 'ಕನ್ನಡ ದರ್ಗಾ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಜರತ್ ಸೈದಾನಿ ಬಿಬಿಮಾ ದರ್ಗಾದಲ್ಲಿ ಕನ್ನಡದಲ್ಲೇ ಪ್ರಾರ್ಥನೆ ಮಾಡುತ್ತಿರುವುದು

ಹೌದು, ಪ್ರತಿ ಗುರುವಾರ ಕನ್ನಡದಲ್ಲಿ ಪ್ರಾರ್ಥನೆ ಮಾಡುವ ಮೂಲಕ ಇಲ್ಲಿನ ಮುಸ್ಲಿಮರು ಕನ್ನಡ ಭಾಷಾ ಪ್ರೇಮ ಮೆರೆದಿದ್ದಾರೆ. ಧರ್ಮಸ್ಥಳ ಮೂಲದ ಅಂಬಟಿ ಉಸ್ತಾದ್ ಅವರು ಕನ್ನಡದಲ್ಲಿ ದುವಾ(ಶುಭ ಸಂದೇಶ) ನೀಡುತ್ತಾರೆ. ಸಾಮರಸ್ಯ ಹಾಗೂ ಭಾವೈಕ್ಯತೆಗೆ ಒತ್ತು ನೀಡಿರುವ ಈ ದರ್ಗಾಗೆ ಎಲ್ಲಾ ಸಮುದಾಯದವರು ಸಂಕಷ್ಟಗಳ ಪರಿಹಾರಕ್ಕಾಗಿ ಬರುತ್ತಾರೆ. ಉರ್ದು ಭಾಷೆಯಲ್ಲಿ ಪ್ರಾರ್ಥನೆ ಮಾಡಿದ್ರೆ ಕನ್ನಡಿಗರಿಗೆ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ಪ್ರತಿ ಗುರುವಾರ ಒಂದು ದಿನ ಕನ್ನಡದಲ್ಲೇ ಪ್ರಾರ್ಥನೆ ಮಾಡಲಾಗುತ್ತದೆ.

ಒಟ್ಟಿನಲ್ಲಿ ಹಜರತ್ ಸೈದಾನಿ ದರ್ಗಾದಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಕನ್ನಡದಲ್ಲೇ ಶುಭ ಸಂದೇಶಗಳನ್ನ ಸಾರುವ ಪದ್ಧತಿ ಜಾರಿಯಲ್ಲಿದ್ದು, ಇವರ ಕನ್ನಡ ಪ್ರೇಮಕ್ಕೆ ಭಕ್ತರು ಫಿದಾ ಆಗಿದ್ದಾರೆ.

Last Updated :Oct 24, 2021, 1:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.