ಮೈಸೂರು : ನಾನು ಬರೆಯುತ್ತಿರುವ ಬಾಂಬೆ ಡೇಸ್, ಬಾಂಬೆ ಬಾಯ್ಸ್ ಪುಸ್ತಕವನ್ನ 2023ರವರೆಗೆ ಬಿಡುಗಡೆ ಮಾಡಬೇಡಿ ಎಂದು ಕೆಲವರು ಒತ್ತಡ ಹಾಕುತ್ತಿದ್ದಾರೆ. ಆ ಪುಸ್ತಕ ಬಿಡುಗಡೆಯಾದರೆ ಮೂರು ಪಕ್ಷದ ಮುಖಂಡರು ಬೆತ್ತಲೆಯಾಗುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೊಸ ಬಾಂಬ್ ಹಾಕಿದ್ದಾರೆ.
ಭಾನುವಾರ ಸಂಜೆ ಮಾನಸ ಗಂಗೋತ್ರಿಯಲ್ಲಿರುವ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಒಪ್ಪಿಕೊಂಡಿರುವ ಬೃಹತ್ ದೇಶದಲ್ಲಿ ಆಳ್ವಿಕೆ ಹೇಗೆ ನಡೆಯುತ್ತಿದೆ, ಇಲ್ಲಿ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಸಾಹಿತ್ಯ ರಚನೆಯಾಗಬೇಕು. ರಾಜಕಾರಣಿ, ರಾಜಕೀಯ ಕ್ಷೇತ್ರದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಾಹಿತ್ಯ ರಚನೆಯಾಗಬೇಕು ಎಂದರು.
![ಮಾನಸ ಗಂಗೋತ್ರಿಯಲ್ಲಿರುವ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ](https://etvbharatimages.akamaized.net/etvbharat/prod-images/kn-mys-01-hvishwanathnews-7208092_28022022113248_2802f_1646028168_834.jpg)
ನಾನು ಬಾಂಬೆ ಡೇಸ್, ಬಾಂಬೆ ಬಾಯ್ಸ್ ಎಂಬ ಪುಸ್ತಕವನ್ನ ಬರೆಯುತ್ತಿದ್ದೇನೆ. ಆ ಪುಸ್ತಕ ಶೀಘ್ರದಲ್ಲೇ ಹೊರತರುತ್ತೇನೆ. ಕೆಲವರು ದುಡ್ಡು ತೆಗೆದುಕೊಂಡು ಬಾಂಬೆಗೆ ಹೋಗಿದ್ದರು ಎಂದು ಪ್ರಚಾರ ಮಾಡಿದ್ದಾರೆ.
ಆದರೆ, ಅದಲ್ಲ ಎಲ್ಲಾ ದುಡ್ಡಿಗಾಗೇ ನಡೆಯುವುದಿಲ್ಲ. ಏನಾಯಿತು ಎಂಬುದನ್ನ ಪುಸ್ತಕದಲ್ಲಿ ದಾಖಲು ಮಾಡುತ್ತಿದ್ದೇನೆ. ಬಾಂಬೆ ಡೇಸ್ ಪುಸ್ತಕವನ್ನ 2023ರವರೆಗೆ ಬಿಡುಗಡೆ ಮಾಡಬೇಡಿ ಎಂದು ಕೆಲವರು ಒತ್ತಡ ಹಾಕುತ್ತಿದ್ದಾರೆ. ಆ ಪುಸ್ತಕ ಬಿಡುಗಡೆಯಾದರೆ ಮೂರು ಪಕ್ಷದ ಮುಖಂಡರು ಬೆತ್ತಲೆಯಾಗುತ್ತಾರೆ ಎಂದು ಹೇಳಿದರು.
ಸಾರ್ವಜನಿಕರಿಗೆ ಬಾಂಬೆಗೆ ನಾವು ಏಕೆ ಹೋಗಿದ್ದೆವು ಎಂಬ ಸತ್ಯವನ್ನು ತಿಳಿಸಲು ಪುಸ್ತಕವನ್ನು ಬರೆಯುತ್ತಿದ್ದೇನೆ. ಕರ್ನಾಟಕದ ಹಲವು ರಾಜಕೀಯ ತಿರುವುಗಳು ಹಾಗೂ ಯಡಿಯೂರಪ್ಪ ಸರ್ಕಾರ ಹೇಗೆ ಬಂತು ಎಂಬುದನ್ನ ಈ ಪುಸ್ತಕದಲ್ಲಿ ದಾಖಲಿಸುತ್ತಿದ್ದೇನೆ. ಆ ಕೃತಿ ಶೀಘ್ರವೇ ಹೊರ ಬರಲಿದೆ ಎಂದು ವಿಶ್ವನಾಥ್ ತಿಳಿಸಿದರು.
(ಇದನ್ನೂ ಓದಿ: ಉಕ್ರೇನ್ ಗಡಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಹಲ್ಲೆ, ಕಿರುಕುಳ)