ETV Bharat / city

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ 5 ವರ್ಷದಿಂದ ಲೆಕ್ಕ ಪರಿಶೋಧನೆಯೇ ನಡೆದಿಲ್ಲ: ಸಿಎಂಗೆ ದೂರು

author img

By

Published : Apr 26, 2021, 7:27 AM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರಸಿದ್ಧ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯಕ್ಕೆ ಕಳೆದ 5 ವರ್ಷಗಳಲ್ಲಿ 100 ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹವಾದರೂ ಲೆಕ್ಕ ಪರಿಶೋಧನೆ ಆಗಿಲ್ಲ. ಆಡಳಿತ ಮಂಡಳಿ ಪ್ರತಿವರ್ಷ ಕ್ಷೇತ್ರದ ಅಂದಾಜಿನ ಮಾಹಿತಿಯನ್ನು ನೀಡುತ್ತಿದೆ. ಇದು ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಬೆಂಗಳೂರು ಮೂಲದ ವಕೀಲರೊಬ್ಬರು ಮುಖ್ಯಮಂತ್ರಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದಾರೆ.

kukke subrahmanya temple
ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ 5 ವರ್ಷಗಳಿಂದ ಲೆಕ್ಕ ಪರಿಶೋಧನೆಯೇ ನಡೆದಿಲ್ಲ: ಸಿಎಂಗೆ ದೂರು

ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದ ಆದಾಯದ ಲೆಕ್ಕಾಚಾರ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ಐದು ವರ್ಷಗಳಿಂದ ದೇವಸ್ಥಾನದ ಆದಾಯದ ಲೆಕ್ಕಪರಿಶೋಧನೆಯೇ ನಡೆದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ಪೀಪಲ್ ಫಾರ್ ಧರ್ಮ ಎಂಬ ಸಂಘಟನೆಯು ಬೆಂಗಳೂರು ಮೂಲದ ವಕೀಲ ಶ್ರೀಹರಿ ಕುತ್ಸ ಮೂಲಕ ಮುಖ್ಯಮಂತ್ರಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದಾರೆ.

ವಿವರ ನೀಡಿದ ವಕೀಲ ಶ್ರೀಹರಿ ಕುತ್ಸ

ಆಡಳಿತ ಮಂಡಳಿ ಪ್ರತಿವರ್ಷ ಕ್ಷೇತ್ರದ ಅಂದಾಜಿನ ಮಾಹಿತಿಯನ್ನು ನೀಡುತ್ತಿದೆ. ಕಳೆದ 5 ವರ್ಷಗಳಲ್ಲಿ 100 ಕೋಟಿಗೂ ಹೆಚ್ಚು ಹಣ ಸಂಗ್ರಹವಾದರೂ ಲೆಕ್ಕ ಪರಿಶೋಧನೆ ಆಗಿಲ್ಲ. ಇದು ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕ್ಷೇತ್ರದ ಆಡಳಿತ ಮಂಡಳಿ‌ 60 ಕೋಟಿ ರೂ.ಗೂ ಅಧಿಕ ಹಣವನ್ನು ವ್ಯರ್ಥ ಮಾಡಿದೆ. ಧಾರ್ಮಿಕೇತರ ಚಟುವಟಿಕೆಗಳಿಗಾಗಿ ಸಾಕಷ್ಟು ಹಣವನ್ನು ಪೋಲು ಮಾಡಿದೆ.

ದೇಗುಲಕ್ಕೆ ಸಂಬಂಧಪಡದ ಕೆಲವು ವ್ಯಕ್ತಿಗಳು ದೇವಸ್ಥಾನದ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಕ್ಷೇತ್ರಕ್ಕೆ ಹರಕೆ ರೂಪದಲ್ಲಿ‌ ಬಂದ ಚಿನ್ನ ಮತ್ತು ಬೆಳ್ಳಿ ಆಭರಣಗಳ ಬಗ್ಗೆ ಸಮರ್ಪಕವಾದ ಮಾಹಿತಿಯೇ ಇಲ್ಲ. ರಿಜೆಕ್ಟ್ ಆದ ಚಿನ್ನಾಭರಣಗಳ ಲೆಕ್ಕಾಚಾರ ತೋರಿಸಲಾಗಿಲ್ಲ. ದೇಗುಲಕ್ಕೆ ಬಂದ ಚಿನ್ನಾಭರಣಗಳನ್ನು ಕರಗಿಸಲಾಗುತ್ತದೆ. ಕರಗಿಸಿದ ವೇಳೆ ರಿಜೆಕ್ಟ್ ಆದ ಚಿನ್ನಾಭರಣಗಳ ಲೆಕ್ಕಾಚಾರವನ್ನು ಎಲ್ಲಿಯೂ ತೋರಿಸಿಲ್ಲ. ಈ ಲೆಕ್ಕವೇ ಲಕ್ಷಾಂತರ ರೂಪಾಯಿ ರೂಪದಲ್ಲಿ ಇರಬಹುದು ಎಂದು ವಕೀಲರು ದೂರಿನಲ್ಲಿ ತಿಳಿಸಿದ್ದಾರೆ.

ಮಾತ್ರವಲ್ಲದೆ, ದೇವಸ್ಥಾನಕ್ಕೆ ಸಂಬಂಧಿಸಿದ ಅಂಗಡಿ ಬಾಡಿಗೆ, ಕಟ್ಟಡ ನಿರ್ವಹಣೆ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಪ್ರತಿವರ್ಷ ಹರಾಜು ಪ್ರಕ್ರಿಯೆ ಮಾಡಬೇಕು‌. ಆದರೆ, ಸುಬ್ರಹ್ಮಣ್ಯದಲ್ಲಿ ಈ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಸಮರ್ಪಕವಾಗಿ ಬಾಡಿಗೆಯನ್ನೂ ಯಾರೂ ದೇಗುಲಕ್ಕೆ ಪಾವತಿ ಮಾಡುತ್ತಿಲ್ಲ. ಕ್ಷೇತ್ರದಲ್ಲಿ ಹಲವಾರು ಕಾನೂನು ಬಾಹಿರ ಚಟುವಟಿಕೆಗಳು ನಡೆದಿದ್ದು, ಸರ್ಕಾರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೊದಲು ಜೀವ ಭದ್ರತೆ, ನಂತರ ಜೀವನದ ಭದ್ರತೆ ; ಕೋವಿಡ್ ತಡೆ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ.. ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.