ಧಾರವಾಡ: ನವಲಗುಂದ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಧಾರವಾಡ ಜಿಲ್ಲೆ ನವಲಗುಂದದ ರೈತ ಭವನದಲ್ಲಿ ಆಯೋಜಿಸಿದ್ದ ಮಹದಾಯಿ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ಮಹದಾಯಿಗಾಗಿ ಹಲವಾರು ರೀತಿಯ ಹೋರಾಟಗಳು ನಡೆದವು. ಎಲ್ಲರೂ ವಾಸ್ತವಿಕತೆ ತಿಳಿಯಬೇಕಿದೆ. ಮನಮೋಹನ್ ಸಿಂಗ್ ಇದ್ದಾಗಲೇ ಟ್ರಿಬ್ಯುನಲ್ ರಚನೆ ವಿಚಾರ ಬಂದಿತ್ತು. ಆದರೆ, ಕಳಸಾ ಬಂಡೂರಿ ಮೋದಿ ಬಂದ ಮೇಲೆಯೇ ಹುಟ್ಟಿದೆ ಎನ್ನುವಂತೆ ಕೆಲವರು ಅಪ್ರಚಾರ ಮಾಡಿದ್ರು ಎಂದು ಟಾಂಗ್ ನೀಡಿದರು.
ನರ್ಮದಾ, ಕಾವೇರಿ, ಕೃಷ್ಣಾ ನದಿ ವಿವಾದಗಳು ಅನೇಕ ವರ್ಷಗಳಿಂದ ನಡೆದಿವೆ. ಯಡಿಯೂರಪ್ಪ ಸರ್ಕಾರ ಬಂದ ಬಳಿಕ ಸುಪ್ರೀಂಕೋರ್ಟ್ಗೆ ನಾವು ಅರ್ಜಿ ಸಲ್ಲಿಸಿದ್ದೆವು. ಅಧಿಸೂಚನೆಗಾಗಿ ಬಿಎಸ್ವೈ ಸರ್ಕಾರ ಕೋರ್ಟ್ನಲ್ಲಿ ಹೋರಾಟ ಮಾಡಿತು. ಅದರ ಫಲವಾಗಿ ಅಧಿಸೂಚನೆ ಆಗಿದೆ ಎಂದರು. ನವಲಗುಂದದಲ್ಲಿ ಕೆಲವರು ಹಸಿರು ಶಾಲು ಹಾಕಿಕೊಂಡು ರಾಜಕಾರಣ ಮಾಡುವವರಿದ್ದಾರೆ. ಅವರಿಗೆ ನೋಟಿಫಿಕೇಷನ್ ಆಗೋದಿಲ್ಲ ಅನ್ನೋ ವಿಚಾರ ಇತ್ತು. ಯಾಕೆಂದರೆ, ಅವರು ಅಂತಹದೇನು ಮಾಡಿಯೇ ಇರಲಿಲ್ಲ.
ನಮ್ಮ ಸರ್ಕಾರ ಬಂದ ಬಳಿಕ ಆರೇಳು ತಿಂಗಳಲ್ಲಿ ವಿವಾದ ಬಗೆಹರಿಸಿದ್ದೇವೆ. ಯಾರು ಬಹಳ ಭಾಷಣ ಮಾಡಿದ್ರೋ ಅವರೆಲ್ಲ ನಮ್ಮ ವಿರುದ್ಧ ಮೋದಿ, ಜೋಶಿಗೆ ಧಿಕ್ಕಾರ ಅಂತಾ ಬೋರ್ಡ್ ಬರೆಸಿಟ್ಟಿದ್ರು. ರಾಜಕಾರಣಕ್ಕಾಗಿ ಹೋರಾಟ ಮಾಡಿದವರು ಈಗ ನಿರುದ್ಯೋಗಿ ಆಗ್ತಾರೆ. ಕೆಲವರು ಬಿಜೆಪಿಯವರಿಗೆ ನೀರು ಕುಡಿಸಬೇಕು ಅಂತಾ ಮಾಡಿದ್ರು. ಆದರೆ, ನಾವು ನೀರು ಕುಡಿಸುವುದಿಲ್ಲ, ನೀರು ಕೊಡುತ್ತೇವೆ. ನೀರು ಕೊಟ್ಟ ಮನೆಯಲ್ಲೇ ಚಹಾ ಮಾಡಿ ಕುಡಿಯುವ ಬಿಜೆಪಿಯವರು ನಾವು. ಹಿಂದಿನವರು ಒಬ್ಬರು ನವಲಗುಂದದಲ್ಲಿ ಇದ್ರು, ಅವರೇ ರೈತರನ್ನು ಹೋರಾಟ ಮಾಡಲು ಕುಂಡ್ರಿಸಿದ್ದರು. ಮತ್ತೇ ಅವರ ಆಪ್ತರೇ ಸಿಎಂ ಇದ್ದಾಗ ಅವರ ಪೊಲೀಸರಿಂದ ಹೊಡಿಸಿದ್ದರು ಎಂದು ಹರಿಹಾಯ್ದರು.