ಬೇರೆಯವರು ಬಿಂಬಿಸಿದ ಹಾಗೆ ಕಾಂಗ್ರೆಸ್​ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ: ವಿ.ಎಸ್. ಉಗ್ರಪ್ಪ

author img

By

Published : Oct 13, 2021, 1:43 PM IST

Updated : Oct 13, 2021, 3:04 PM IST

v s ugrappa

ಭ್ರಷ್ಟಾಚಾರದ ಬಗ್ಗೆ ಆಪ್ತರಿಂದಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಗ್ಗೆ ಮಾತಾಡಿದ್ದಾರೆ ಎನ್ನಲಾದ ವಿಡಿಯೋ ರಿಲೀಸ್ ಬೆನ್ನೆಲ್ಲೇ ಬಿಜೆಪಿ, ಕಾಂಗ್ರೆಸ್​ ನಡುವೆ ಅರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಇದೀಗ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಮ್ಮ ಪಕ್ಷದ, ನಾಯಕರ ಒಗ್ಗಟ್ಟಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಕಾಂಗ್ರೆಸ್​ ಮುಖಂಡ ಸಲೀಂ ಹಾಗೂ ತಮ್ಮ ಮಧ್ಯೆ ನಡೆದ ಸಂಭಾಷಣೆಯ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಮಾಜಿ ಸಂಸದ ಉಗ್ರಪ್ಪ ಇಂದು ಸ್ಪಷ್ಟನೆ ನೀಡಿದ್ದಾರೆ. ಅನೇಕರು ಬಿಂಬಿಸಿದ ಹಾಗೆ ಕಾಂಗ್ರೆಸ್​ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಹೇಳಿದ್ದಾರೆ.

ಮಾಜಿ ಸಂಸದ ವಿ.ಎಸ್. ಉಗ್ರಪ್ಪ

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಒಡಕು ಇದೆ ಎಂಬುದನ್ನು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಸಿದ್ದರಾಮಯ್ಯ, ಪರಮೇಶ್ವರ್, ಡಿಕೆಶಿ ಹಾಗೂ ಖರ್ಗೆ ಸೇರಿದಂತೆ ಎಲ್ಲ ಕಾಂಗ್ರೆಸ್​ ನಾಯಕರು ಒಮ್ಮತದ ಮನಸ್ಸಿನಿಂದ, ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಬಿಂಬಿಸಿದ ಹಾಗೆ ಗುಂಪುಗಾರಿಕೆ ರಾಜ್ಯ ಕಾಂಗ್ರೆಸ್​​ನಲ್ಲಿ ಇಲ್ಲ ಎಂದು ತಿಳಿಸಿದರು.

ಡಿಕೆಶಿ ಉತ್ತಮ ರಾಜಕಾರಣಿ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಮ್ಮ ಪಕ್ಷದ ನಾಯಕರು. ಮೂರು - ನಾಲ್ಕು ದಶಕಗಳಿಂದ ನಾನು ಅವರನ್ನು ಬಲ್ಲೆ. ಅವರು ಒಬ್ಬ ಕ್ರಿಯಾಶೀಲ. ಜನಪರವಾದ, ಬದ್ಧತೆಯಿರುವ ರಾಜಕಾರಣಿ. ರೈತ ಕುಟುಂಬದಲ್ಲಿ ಹುಟ್ಟಿ, ರಾಜ್ಯದ ಹಿರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಒಳ್ಳೆಯ ಆಡಳಿತಗಾರ ಹಾಗೂ ಜನಪರ ಕಾಳಜಿ ಹೊಂದಿದ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ನಿನ್ನೆ(ಮಂಗಳವಾರ) ನಾನು ಮಾಧ್ಯಮಗೋಷ್ಠಿ ಆರಂಭಿಸುವುದಕ್ಕೆ ಮುನ್ನ, ಕೆಲ ವಿಚಾರಗಳನ್ನು ಸಲೀಂ ತಿಳಿಸಿದರು. ನೀರಾವರಿ ಇಲಾಖೆಯಲ್ಲಿ ಆಗಿರುವ ಹಗರಣಗಳ ವಿಚಾರವಾಗಿ ಹಾಗೂ ಬಿಜೆಪಿಯವರು ಈ ರೀತಿ ಮಾತನಾಡುತ್ತಿದ್ದಾರೆ ಎಂಬ ವಿಚಾರ ಬಿಚ್ಚಿಟ್ಟರು. ನಮ್ಮ ಪಕ್ಷದ ನಾಯಕರ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಮಾಧ್ಯಮಗೋಷ್ಠಿ ನಂತರ ಅವರಿಗೆ ವಿವರ ನೀಡಿದ್ದೇನೆ. ಡಿಕೆಶಿ ವಿಚಾರವಾಗಿ ನಾವು ಯಾವುದೇ ಅಪಪ್ರಚಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಡಿಕೆಶಿ ಭ್ರಷ್ಟಾಧ್ಯಕ್ಷ ಎನ್ನುವ ಹ್ಯಾಷ್ ಟ್ಯಾಗ್​​ನೊಂದಿಗೆ ಬಿಜೆಪಿ ಸರಣಿ ಟ್ವೀಟ್!

ವ್ಯಾಪಾರ ವಹಿವಾಟಿನಿಂದ ಅವರು ಹಣ ಸಂಪಾದಿಸಿದ್ದಾರೆ. ರಾಜಕಾರಣದಿಂದ ಡಿಕೆಶಿ ಹಣ ಗಳಿಸಿಲ್ಲ. ಬದಲಾಗಿ ಕಳೆದುಕೊಂಡಿದ್ದಾರೆ. ಸಲೀಂ ಅರ್ಧಂಬರ್ದ ಮಾಹಿತಿಯನ್ನು ನನಗೆ ನೀಡಿದಾಗ, ನಾನು ಅವರ ಮಾತನ್ನು ತಡೆದು ಸ್ಪಷ್ಟೀಕರಣ ನೀಡಿದ್ದೇನೆ. 1,800 ಕೋಟಿ ರೂಪಾಯಿ ನೀರಾವರಿ ಇಲಾಖೆಯ ಭ್ರಷ್ಟಾಚಾರದಲ್ಲಿ ಉಮೇಶ್ ಎಂಬ ವ್ಯಕ್ತಿ ಗುರುತಿಸಿಕೊಂಡಿದ್ದು, ಅವರ ವಿಚಾರವಾಗಿ ಪ್ರಸ್ತಾಪಿಸಿದ್ದಾರೆ. ನಮ್ಮ ನಾಯಕರು ಯಾವುದೇ ಕಾರಣಕ್ಕೂ ಕಮಿಷನ್ ಪ್ರವೃತ್ತಿಯನ್ನು ಬೆಳೆಸಿದವರಲ್ಲ. ಪಕ್ಷದ ರಾಜ್ಯಾಧ್ಯಕ್ಷರು ಯಾವುದೇ ಕಾರಣಕ್ಕೂ ಇಂತಹ ಕಾರ್ಯ ಮಾಡಿಲ್ಲ. ಅನಗತ್ಯವಾಗಿ ಭ್ರಷ್ಟಾಚಾರ ನಡೆದಿದೆ ಎಂದು ಬಿಂಬಿಸುವುದು ಮಾಧ್ಯಮಗಳ ಮೌಲ್ಯಕ್ಕೆ ಶೋಭೆ ತರುವಂತದ್ದಲ್ಲ ಎಂದು ಉಗ್ರಪ್ಪ ತೇಪೆ ಹಚ್ಚಿದರು.

ಭ್ರಷ್ಟಾಚಾರ ಕಾಂಗ್ರೆಸ್​​​ಗೆ ದೂರ:

ಕಮಿಷನ್ ಆಗಲಿ, ಭ್ರಷ್ಟಾಚಾರವಾಗಲಿ ಕಾಂಗ್ರೆಸ್​​​ಗೆ ದೂರ. ಅದರಲ್ಲೂ ಪಕ್ಷದ ಅಧ್ಯಕ್ಷರಿಗೆ ಅದು ದೂರ. ಭ್ರಷ್ಟಾಚಾರವನ್ನು ಯಾರು ಮಾಡಿದರೂ ತಪ್ಪೇ. ಮುಖ್ಯಮಂತ್ರಿ, ಪ್ರಧಾನಿ, ನಮ್ಮ ಪಕ್ಷದ ಯಾವುದೇ ನಾಯಕರು ಭ್ರಷ್ಟಾಚಾರದಲ್ಲಿ ಭಾಗಿಯಾದರೂ ಅದು ತಪ್ಪು. ನಮ್ಮ ನಾಯಕರು ಯಾರು ಇಂತಹ ಪ್ರಯತ್ನ ಮಾಡಿಲ್ಲ. ಇದನ್ನು ಅನಗತ್ಯವಾಗಿ ಬಿಂಬಿಸುವ ಹಾಗೂ ಮುಂದುವರಿಸುವ ಪ್ರಯತ್ನ ಬೇಡ ಎಂದು ಉಗ್ರಪ್ಪ ಮನವಿ ಮಾಡಿದರು.

ಮಾಜಿ ಸಂಸದ ವಿ.ಎಸ್. ಉಗ್ರಪ್ಪ

ನಿನ್ನೆ ನನ್ನ ಮತ್ತು ಸಲೀಂ ನಡುವೆ ನಡೆದ ವಿಚಾರದಲ್ಲಿ ಎರಡು ಮಾಹಿತಿ ಇದೆ. ನಾವು ಮಹಾತ್ವಾಕಾಂಕ್ಷೆಯಿಂದ ಅವರು ಅಧ್ಯಕ್ಷರಾಗಲಿ ಎಂದು ಬಯಸಿದ್ದೆವು. ಆದರೆ ಆ ಪ್ರಕಾರ ನಡೆಯುತ್ತಿಲ್ಲ ಎಂದು ಸಲೀಂ ಹೇಳಿರುವುದು ನಿಜ. ಅಧ್ಯಕ್ಷರು ಮುಂಬರುವ ದಿನಗಳಲ್ಲಿ ತಮ್ಮನ್ನು ಸುಧಾರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ಇದೆ. ಪ್ರಚಾರ ವಿಚಾರವಾಗಿ ಆಡಿರುವ ಮಾತು ಸತ್ಯಕ್ಕೆ ದೂರವಾದದ್ದು. ಈ ವಿಚಾರವಾಗಿ ನಾನು ಕೆಪಿಸಿಸಿ ಅಧ್ಯಕ್ಷರಿಗೆ ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಮಾಹಿತಿ ನೀಡಿದ್ದೇನೆ.

ನಮ್ಮ ನಾಯಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ:

ಮತ್ತೊಮ್ಮೆ ಸ್ಪಷ್ಟೀಕರಿಸುತ್ತೇನೆ, ನಮ್ಮ ಪಕ್ಷದ ಯಾವ ನಾಯಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ವೇದಿಕೆಯಲ್ಲಿ ಸಲೀಂ ಆಡಿರುವ ಮಾತಿಗೆ ಆನಂತರ ಸೃಷ್ಟೀಕರಣ ನೀಡಿದ್ದೇನೆ. ನಿನ್ನೆ ಸಲೀಂ ಹೇಳಿದ್ದನ್ನು ನಾನು ಕೇಳುತ್ತಾ ಹೋಗಿದ್ದೇನೆ. ಅವರ ಮಾತನ್ನು ನಗುತ್ತಾ ಕೇಳಿರುವುದು ದೊಡ್ಡ ಸಮಸ್ಯೆ ಅಲ್ಲ. ಸಲೀಂ ಆಡಿದ ಮಾತಿಗೆ ನಾನು ತುಟಿಪಿಟಕ್ ಎಂದಿಲ್ಲ. ಅದಕ್ಕೆ ಸೂಕ್ತ ಸ್ಪಷ್ಟೀಕರಣವನ್ನು ಈಗ ನೀಡುತ್ತಿದ್ದೇನೆ ಎಂದರು.

ದೊಡ್ಡ ಹಗರಣಗಳ ತನಿಖೆ ಆಗುವುದು ಸೂಕ್ತ:

ಕಾಂಗ್ರೆಸ್​ ಮಾಧ್ಯಮ ಸಂಯೋಜಕರು ನನ್ನ ಜೊತೆ ನಡೆಸಿದ ಮಾತುಕತೆಯ ತನಿಖೆ ನಡೆಸುವುದು ಸರಿಯಲ್ಲ. ಸಾಕಷ್ಟು ವಿಚಾರವನ್ನು ಹಾಗೂ ಆಡಿಯೋ ವೈರಲ್ ಆಗಿರುವುದನ್ನು ನಾನು ತನಿಖೆ ನಡೆಸುವಂತೆ ಕೇಳಿದ್ದೇನೆ. ಆದರೆ ಈ ವಿಚಾರ ತನಿಖೆ ಆಗುವುದು ಸರಿಯಲ್ಲ. ಯಾರೋ ಒಬ್ಬರು ಪಿಸುಗುಟ್ಟಿದ್ದನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸುವುದು ಎಷ್ಟು ಸರಿ? ಯಾವುದೇ ರೀತಿಯ ತನಿಖೆಗೂ ನಾನು ಸಿದ್ಧ. ಆದರೆ ಸಾಕಷ್ಟು ದೊಡ್ಡ ಹಗರಣಗಳು ರಾಜ್ಯದಲ್ಲಿ ನಡೆದಿವೆ. ಅಂತಹ ವಿಚಾರಗಳ ತನಿಖೆ ಆಗುವುದು ಸೂಕ್ತ ಎಂದರು.

ಕಿವಿಯಲ್ಲಿ ಹೇಳಿದ ಮಾತು ಅಧಿಕೃತವಲ್ಲ:

ಆಡಿಯೋದಲ್ಲಿ ಬಂದಿರುವ ಆರೋಪಗಳು, ಬಿಜೆಪಿಯವರು ಮಾಡುತ್ತಿರುವ ಆರೋಪ ಎಂದು ಸಲೀಂ ನನ್ನ ಬಳಿ ಹೇಳಿರುವುದು. ಇದ್ಯಾವುದೂ ಅವರು ಮಾಡಿರುವ ಆರೋಪ ಅಲ್ಲ. ಸಲೀಂ ಕಿವಿಯಲ್ಲಿ ಹೇಳಿದ ಮಾತು ಅಧಿಕೃತ ಅಲ್ಲ. ನಾವು ಮಾಧ್ಯಮಗೋಷ್ಠಿಯಲ್ಲಿ ಇಂತಹ ಆರೋಪ ಮಾಡಿದರೆ ಅದನ್ನು ತನಿಖೆಗೆ ಒಳಪಡಿಸಬಹುದಿತ್ತು. ಪಕ್ಷದ ವಿಚಾರಗಳನ್ನು ಎಲ್ಲಿ ಆಡಬೇಕು ಎಂಬುದನ್ನು ತಿಳಿಯದೇ ಆಡಿರುವುದು ನಿಜ. ಇದರಿಂದ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆ ಪಕ್ಷ ಸಲೀಂ ವಿರುದ್ಧ ಕ್ರಮ ಕೈಗೊಂಡಿದೆ ಎಂದರು.

Last Updated :Oct 13, 2021, 3:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.