ETV Bharat / city

ಎನ್‌ಇಟಿ ಪರೀಕ್ಷೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಡೆಸುವಂತೆ ಟಿ ಎಸ್ ನಾಗಾಭರಣ ಒತ್ತಾಯ

author img

By

Published : Mar 11, 2022, 3:17 PM IST

ವರ್ಷದಿಂದ ವರ್ಷಕ್ಕೆ ಹಿಂದಿ ಮತ್ತು ಸಂಸ್ಕೃತ ಅಭ್ಯರ್ಥಿಗಳ ಆಯ್ಕೆಯಲ್ಲಿ ಗಣನೀಯ ಏರಿಕೆ ಕಂಡು ಬಂದರೆ ಕನ್ನಡದ ಅಭ್ಯರ್ಥಿಗಳ ಆಯ್ಕೆಯಲ್ಲಿ ಆಶ್ಚರ್ಯಕರ ಇಳಿಕೆ ಇದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಹಿಂದಿ ಭಾಷೆಗೆ ಅಂದಾಜು 182 ಕೋಟಿ ರೂ. ಹಾಗೂ ಸಂಸ್ಕೃತ ಭಾಷೆಗೆ ಅಂದಾಜು 47 ಕೋಟಿ ರೂ. ಅನ್ನು ಮೀಸಲಿಡಲಾಗಿದೆ. ಕನ್ನಡ ಭಾಷೆಗೆ ಕೇವಲ 3.3 ಕೋಟಿಯನ್ನು ಮೀಸಲಿಟ್ಟಿದೆ..

T.S.Nagabharana
ಟಿ.ಎಸ್.ನಾಗಾಭರಣ

ಬೆಂಗಳೂರು : ಯುಜಿಸಿ ಇನ್ಮುಂದೆ ಎನ್‌ಇಟಿ ಪರೀಕ್ಷೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಒತ್ತಾಯ ಮಾಡಿದ್ದಾರೆ.

The Letter written by T.S.Nagabharana to UGC
ಯುಜಿಸಿಗೆ ಟಿ ಎಸ್ ನಾಗಾಭರಣ ಅವರು ಬರೆದ ಪತ್ರ

ಹಿಂದಿಯೇತರ ಮಕ್ಕಳಿಗೆ ವಂಚನೆ : ಕನ್ನಡದ ಮಕ್ಕಳು ಈ ಪರೀಕ್ಷೆಗಳನ್ನು ಅವರಿಗೆ ಬರದ ಭಾಷೆಗಳಲ್ಲಿ ಬರೆಯುವ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಫೆಲೋಶಿಪ್​ಗೆ ಆಯ್ಕೆಯಾಗುತ್ತಿಲ್ಲ. ಯುಜಿಸಿ ಕನ್ನಡದಲ್ಲಿ (ಪ್ರಾದೇಶಿಕ ಭಾಷೆಯಲ್ಲಿ) ಪರೀಕ್ಷೆಗಳನ್ನು ನಡೆಸದೇ ಇರುವುದರಿಂದ ಹಿಂದಿಯೇತರ ಭಾಷೆಯ ಮಕ್ಕಳು ತಮ್ಮ ಹಕ್ಕುಗಳಿಂದ ಭಾಷಾ ಕಾರಣಕ್ಕಾಗಿ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಯುಜಿಸಿ ಇನ್ನು ಮುಂದೆ ಎನ್‌ಇಟಿ ಪರೀಕ್ಷೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ (ಪ್ರಾದೇಶಿಕ ಭಾಷೆ) ನಡೆಸುವಂತೆ ಒತ್ತಾಯಿಸಿದ್ದಾರೆ.

ಈ ಬಾರಿಯ ಎನ್‌ಇಟಿ/ಜೆಆರ್‌ಎಫ್ ಪರೀಕ್ಷೆಯಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರರು ಎದುರಿಸಿದ ಸಮಸ್ಯೆಗಳು ತೀವ್ರ ಸ್ವರೂಪದವು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ಬಂದವು. ಕೆಲವು ಅಭ್ಯರ್ಥಿಗಳಿಗೆ ಕಂಪ್ಯೂಟರ್ ಪರದೆಯಲ್ಲಿ ಪ್ರಶ್ನೆಪತ್ರಿಕೆಯೇ ತೆರೆದುಕೊಳ್ಳಲಿಲ್ಲ. ಯುಜಿಸಿಯು ಹಲವು ಕನ್ನಡದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯ ಅವಕಾಶವನ್ನು ನಿರಾಕರಿಸಿತು. ಕೊನೆಗೆ ಪ್ರಕಟವಾದ ಕೀ ಉತ್ತರಗಳಲ್ಲೂ ಈ ಸಮಸ್ಯೆ ಉಂಟಾಯಿತು.

ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಎರಡು ಮೂರು ಬಾರಿ ಪತ್ರ ಬರೆದು ತಮ್ಮ ಗಮನ ಸೆಳೆದಿತ್ತು. ಈ ಕುರಿತು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯನವರು ಕೂಡ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಆದರೆ, ಇವೆಲ್ಲವನ್ನು ಕಡೆಗಣಿಸಿದ ಯುಜಿಸಿ, ಫೆ.19ರಂದು ಫಲಿತಾಂಶವನ್ನು ಪ್ರಕಟಿಸಿತು. ಕನ್ನಡದಲ್ಲಿ 100 ಅಭ್ಯರ್ಥಿಗಳು ಬೋಧನೆಯ ಅರ್ಹತೆ ಗಳಿಸಿದರೆ, ಕೇವಲ 15 ಅಭ್ಯರ್ಥಿಗಳು ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ.

ಕನ್ನಡಕ್ಕೆ ಬರೀ ₹3.3 ಕೋಟಿ ಅನುದಾನ : ವರ್ಷದಿಂದ ವರ್ಷಕ್ಕೆ ಹಿಂದಿ ಮತ್ತು ಸಂಸ್ಕೃತ ಅಭ್ಯರ್ಥಿಗಳ ಆಯ್ಕೆಯಲ್ಲಿ ಗಣನೀಯ ಏರಿಕೆ ಕಂಡು ಬಂದರೆ ಕನ್ನಡದ ಅಭ್ಯರ್ಥಿಗಳ ಆಯ್ಕೆಯಲ್ಲಿ ಆಶ್ಚರ್ಯಕರ ಇಳಿಕೆ ಇದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಹಿಂದಿ ಭಾಷೆಗೆ ಅಂದಾಜು 182 ಕೋಟಿ ರೂ. ಹಾಗೂ ಸಂಸ್ಕೃತ ಭಾಷೆಗೆ ಅಂದಾಜು 47 ಕೋಟಿ ರೂ. ಅನ್ನು ಮೀಸಲಿಡಲಾಗಿದೆ.

ಕನ್ನಡ ಭಾಷೆಗೆ ಕೇವಲ 3.3 ಕೋಟಿಯನ್ನು ಮೀಸಲಿಟ್ಟಿದೆ. ಎನ್‌ಇಟಿ ಕಟ್ ಆಫ್ ಅನ್ನು ದಾಟಿದ ಸಾಮಾನ್ಯ ವರ್ಗದ ಹಿಂದಿ ಅಭ್ಯರ್ಥಿಗಳಲ್ಲಿ ಶೇ. 14.96 ಜನರನ್ನೂ ಸಂಸ್ಕೃತ ಅಭ್ಯರ್ಥಿಗಳಲ್ಲಿ ಶೇ.13.24ರಷ್ಟು ಜನರನ್ನೂ ಫೆಲೋಶಿಫ್‌ಗೆ ಆಯ್ಕೆ ಮಾಡಿದ್ದರೆ, ಕನ್ನಡದಲ್ಲಿ ಶೇ.7.14ರಷ್ಟು ಮಂದಿಯನ್ನಷ್ಟೇ ಆಯ್ಕೆ ಮಾಡಲಾಗಿದೆ. ಕನ್ನಡವೂ ಸೇರಿದಂತೆ ಇತರ ದೇಶಭಾಷೆಗಳ ಅಧ್ಯಯನಗಳ ಅವಕಾಶಗಳನ್ನು ಹೀಗೆ ಮುಚ್ಚುತ್ತಾ ಬರುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಹಾನಿಯೇ ಆಗಿದೆ.

ವಿವಿಗಳ ಮೌಲ್ಯಾಂಕನ ಕುಸಿತ : ಯುಜಿಸಿಯಿಂದ ಕನ್ನಡ ಸಂಶೋಧನೆಗೆ ಪ್ರೋತ್ಸಾಹವೇ ಇಲ್ಲವಾದಲ್ಲಿ ಸಹಜವಾಗಿಯೇ ಕರ್ನಾಟಕದ ವಿಶ್ವವಿದ್ಯಾಲಯಗಳ ಮೌಲ್ಯಾಂಕನವೂ ಕುಸಿದು, ಯುಜಿಸಿಯಿಂದ ಬರುವ ಧನಸಹಾಯವೂ ಕಡಿಮೆಯಾಗಿ ವಿಶ್ವವಿದ್ಯಾಲಯಗಳು ದುರ್ಬಲಗೊಳ್ಳುತ್ತವೆ. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಯುಜಿಸಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.