ದೊಡ್ಡಬಳ್ಳಾಪುರ : ಕಳೆದ 10 ದಿನದಲ್ಲಿ ಮಧುರನಹೊಸಹಳ್ಳಿ ಗ್ರಾಮದಲ್ಲಿ ಎರಡು ಕಳ್ಳತನ ಪ್ರಕರಣ ನಡೆದಿವೆ. ಜನವರಿ 12ರಂದು ಹಾಡಹಗಲೇ ವೃದ್ಧೆಯ ಚಿನ್ನಾಭರಣ ಕಳ್ಳತನ ಮಾಡಿದ್ರೆ, ಇಂದು ಮುಂಜಾನೆ ಕೊಟ್ಟಿಗೆಯಲ್ಲಿದ್ದ 5 ಮೇಕೆಗಳನ್ನ ಖದೀಮರು ಕದ್ದೊಯ್ದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದ ಪ್ರವೀಣ್ ಕುಮಾರ್ ಎಂಬುವರ ಕೊಟ್ಟಿಗೆಯಲ್ಲಿದ್ದ 5 ಮೇಕೆಗಳನ್ನ ಇಂದು ಮುಂಜಾನೆ 3 ಗಂಟೆಗೆ ಕಳ್ಳರು ಕದ್ದೊಯ್ದಿದ್ದಾರೆ.
ಪ್ರವೀಣ್ಕುಮಾರ್ ಅವರು ಮನೆಯ ಪಕ್ಕದಲ್ಲಿನ ಕೊಟ್ಟಿಗೆಯಲ್ಲಿ 8 ಮೇಕೆಗಳನ್ನ ಕೂಡಿ ಹಾಕಿ ನಿದ್ದೆಗೆ ಜಾರಿದ್ದರು. ಮುಂಜಾನೆ 3 ಗಂಟೆ ಸಮಯದಲ್ಲಿ ಟಾಟಾ ಏಸ್ ವಾಹನದಲ್ಲಿ ಬಂದಿದ್ದ ಕಳ್ಳರ ಗ್ಯಾಂಗ್, ಮನೆಯ ಬಾಗಿಲಿಗೆ ಚಿಲಕ ಹಾಕಿ 5 ಮೇಕೆಗಳನ್ನ ಕದ್ದೊಯ್ದಿದ್ದಾರೆ.
ಮನೆ ಮಾಲೀಕ ನಸುಕಿನ ಜಾವ 3 ಗಂಟೆಗೆ ಎಚ್ಚರಗೊಂಡು ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಕಳ್ಳರು ಹೊರಗಿನಿಂದ ಬಾಗಿಲು ಲಾಕ್ ಮಾಡಿರುವುದು ಗಮನಕ್ಕೆ ಬಂದಿದೆ.
ಕೂಡಲೇ ಮಾಲೀಕ ಪ್ರವೀಣ್ ಸಂಬಂಧಿಕರಿಗೆ ಫೋನ್ ಮಾಡಿದ್ದಾರೆ. ನಂತರ ಬಾಗಿಲು ತೆಗೆದು ನೋಡಿದಾಗ 5 ಮೇಕೆಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸುಮಾರು ಒಂದು ಲಕ್ಷ ರೂ. ಮೌಲ್ಯದ ಮೇಕೆಗಳು ಕಳ್ಳತನವಾಗಿವೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಜನವರಿ 12 ರಂದು ಇದೇ ಗ್ರಾಮದಲ್ಲಿ ವೃದ್ಧ ಮಹಿಳೆಯ ಚಿನ್ನಾಭರಣ ದೋಚಿ ದುಷ್ಕರ್ಮಿ ಪರಾರಿಯಾಗಿದ್ದ. ಕಳೆದ 10 ದಿನದಲ್ಲಿ ಎರಡು ಕಳ್ಳತನ ಪ್ರಕರಣ ನಡೆದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ