ETV Bharat / city

ನಾನು ದಲಿತರ ಬಗ್ಗೆ ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ: ಸಿದ್ದರಾಮಯ್ಯ

author img

By

Published : Nov 3, 2021, 6:23 PM IST

ದಲಿತ ಸಮಾವೇಶದಲ್ಲಿ ನೂರಾರು ಜನ ಎಡಗೈ ಸಮುದಾಯದವರಿದ್ದರು. ನಾನೇದರೂ ಅವಹೇಳನಕಾರಿ ಹೇಳಿಕೆ ನೀಡಿದ್ದರೆ ಅಂದೇ ಪ್ರತಿಭಟಿಸಬೇಕಿತ್ತು ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Opposition leader siddaramaiah on dalit's protest
ನಾನು ದಲಿತರ ಬಗ್ಗೆ ಎಲ್ಲಿಯೂ ಅವಹೇಳನಕಾರಿ ಮಾತನ್ನು ಮಾಡಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ನಾನು ದಲಿತರ ಬಗ್ಗೆ ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಬಿಜೆಪಿಯವರು ಈ ವಿಚಾರವನ್ನು ತಿರುಚುವ ಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರು ಸಂವಿಧಾನ ಬದಲಾಯಿಸ್ತೇವೆ ಅಂತಾರೆ. ಸಂವಿಧಾನದಲ್ಲಿ ಸಮಸಮಾಜದ ಬಗ್ಗೆ ಹೇಳಿದೆ. ಅಂತಹ ಸಂವಿಧಾನವನ್ನು ಅವರು ತೆಗೆಯೋಕೆ ಹೊರಟಿದ್ದಾರೆ. ಅದಕ್ಕೆ ನಾನು ದಲಿತರು ಸ್ವಾರ್ಥಕ್ಕೆ ಅಲ್ಲಿಗೆ ಹೋಗಿದ್ದಾರೆ ಎಂದಿದ್ದೆ. ಸಿಂದಗಿ ಪ್ರಚಾರದ ವೇಳೆ ಆ ಮಾತು ಹೇಳಿದ್ದೆ. ನಾನು ದಲಿತರ ಬಗ್ಗೆ ಎಲ್ಲೂ ಹೇಳಿಲ್ಲ. ಕಾರಜೋಳ ಸೇರಿ ಕೆಲವರ ಬಗ್ಗೆ ಮಾತನಾಡಿದ್ದೆ. ಅದನ್ನೇ ತಿರುಚಿ ಎತ್ತಿಕಟ್ಟೋಕೆ ನೋಡ್ತಿದ್ದಾರೆ ಎಂದರು.

ಅಂದು ದಲಿತ ಸಮಾವೇಶದಲ್ಲಿ ನೂರಾರು ಜನ ಎಡಗೈ ಸಮುದಾಯದವರಿದ್ದರು. ನಾನು ದಲಿತರ ಬಗ್ಗೆ ಹೇಳಿದ್ದರೆ ಅಲ್ಲೇ ಪ್ರತಿಭಟನೆ ಮಾಡಬೇಕಿತ್ತಲ್ಲ. ಅಲ್ಲಿದ್ದವರೇ ನನ್ನ ಮಾತಿಗೆ ಜೈಕಾರ ಹಾಕಿದ್ದಾರೆ. ಈಗ ಬಿಜೆಪಿಯವರು ಬಣ್ಣ ಕಟ್ಟುತ್ತಿದ್ದಾರೆ. ಬಿಜೆಪಿ ಪ್ರತಿಭಟನೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಲೀಡರ್ಸ್ ಸಾಕಷ್ಟು ಮಂದಿ ಇದ್ದಾರೆ. ದಲಿತರ ಬಗ್ಗೆ ಅಪಾರ ಅಭಿಮಾನ ನನಗಿದೆ. ಅವರು ಮೇಲೆ ಬರಬೇಕೆಂಬುದು ನನ್ನ ಇಚ್ಚೆ. ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಏನಿದೆ?. ಅಂಬೇಡ್ಕರ್ ಕಾರ್ಮಿಕ ಮಂತ್ರಿ ಮಾಡಿದ್ದು ಯಾವ ಪಕ್ಷ? ಆಗ ಬಿಜೆಪಿ ಪಕ್ಷ ಇತ್ತಾ? ಅಂಬೇಡ್ಕರ್ ಅವರದ್ದೂ ರಿಪಬ್ಲಿಕ್ ಪಾರ್ಟಿ ಇತ್ತು. ಆದರೂ ನೆಹರು ಅವರನ್ನು ಸಚಿವರನ್ನಾಗಿ ಮಾಡಿದ್ದರು ಎಂದರು.

ಕಾಂಗ್ರೆಸ್ ಮಾಡಿದ್ದು: ಚತುರ್ವಣ ವ್ಯವಸ್ಥೆ ಮಾಡಿದವರು ಅವರು. ಇಂತವರಿಂದ ನಾವು ಪಾಠ ಕಲಿಯಬೇಕಾ? ರಾಜಕೀಯಕ್ಕಾಗಿ ಈ ರೀತಿ ಮಾಡಿದ್ದಾರೆ. ಬಿಜೆಪಿಯವರು ದಲಿತ ನಾಯಕರನ್ನ ಮುಗಿಸಿದ ವಿಚಾರ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಬಿಜೆಪಿಗೆ ಹೋದರು. ಶ್ರೀನಿವಾಸ್ ಪ್ರಸಾದ್ ಮಿನಿಸ್ಟರ್ ಮಾಡಿದ್ದು ಯಾರು? ಪರಮೇಶ್ವರ್ ಡಿಸಿಎಂ ಮಾಡಿದ್ದು ಯಾರು? ಆಂಜನೇಯಗೆ ಸಚಿವ ಸ್ಥಾನ ನೀಡಿದ್ದು ಯಾರು?. ಗುತ್ತಿಗೆ ಮೀಸಲಾತಿ ತಂದಿದ್ದು ಯಾರು? ಇದೆಲ್ಲವನ್ನೂ ಮಾಡಿದ್ದು ಕಾಂಗ್ರೆಸ್ ಪಕ್ಷ. ಛಲವಾದಿ ಇಲ್ಲಿದ್ದಾಗ ಕಾಂಗ್ರೆಸ್​ ಅನ್ನು ಹೊಗಳುತ್ತಿದ್ದರು. ಈಗ ಅಲ್ಲಿಗೆ ಹೋಗಿದ್ದಾರೆ ಅಲ್ಲಿ ಹೊಗಳ್ತಿದ್ದಾರೆ. ಅದಕ್ಕೆಲ್ಲ ಕಿಮ್ಮತ್ತಿಲ್ಲ ಬಿಡಿ. ನಾನು ದಲಿತರ ಬಗ್ಗೆ ಕಾಳಜಿ ಇಟ್ಟವನು. ಅವರಿಗೆ ಆರ್ಥಿಕ ಶಕ್ತಿ ಬರಬೇಕೆಂದು ಪ್ರತಿಪಾದಿಸಿದವನು ಎಂದರು.

ಮೀಸಲಾತಿ ವಿರೋಧ ಮಾಡಿದವರು ಯಾರು? ರಥ ಯಾತ್ರೆ ಮಾಡಿದವರು ಯಾರು? ರಾಮಾಜೋಯಿಸ್ ಮೀಸಲಾತಿ ವಿರುದ್ಧ ಹೋದವರು. ಅಂತವರಿಂದ ನಾವು ಪಾಠ ಕಲಿಯಬೇಕಾ? ನಾವು ಅವಕಾಶ ವಂಚಿತರ ಬಗ್ಗೆ ಇರುವವರು. ದಲಿತರು ಹೊಟ್ಟೆಪಾಡಿಗೆ ಹೋದವರು ಎಂದಿಲ್ಲ ಎಂದರು.

ಜನರಿಗೆ ಸತ್ಯ ಗೊತ್ತಾಗಲಿ: ಬಿಟ್ ಕಾಯಿನ್ ಡೈವರ್ಟ್ ಮಾಡೋಕೆ ದಲಿತ ವಿಚಾರ ತಂದಿದ್ದಾರೆಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಜನರನ್ನ ಡೈವರ್ಟ್ ಮಾಡೋಕೆ ಇದನ್ನ ತಂದಿದ್ದಾರೆ. ಬಿಟ್ ಕಾಯಿನ್ ಚಾರ್ಜ್ ಶೀಟ್ ಹಾಕಿರೋರು ಯಾರು? ಶ್ರೀಕಿ ಅರೆಸ್ಟ್ ಮಾಡಿರುವವರು ಯಾರು? ಅವನು ಹೇಳಿರೋದನ್ನು ಅವರು ಹೇಳಲಿ. ಇಡಿ ತನಿಖೆಗೆ ಕೊಟ್ಟಿದ್ದೇವೆ ಅಂತಾರೆ. ಇವರು ಕಲೆಕ್ಟ್ ಮಾಡಿರೋ ಎವಿಡೆನ್ಸ್ ಹೇಳಲಿ. ಇವರು ತನಿಖೆ ಮಾಡಿಸಲಿ. ಸತ್ಯ ಜನರಿಗೆ ಗೊತ್ತಾಗಲಿ, ಯಾಕೆ ಮಾಡ್ತಿಲ್ಲ? ಎಂದು ಪ್ರಶ್ನಿಸಿದರು.

ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಆರೋಪ ವಿಚಾರ ಮಾತನಾಡಿ, ಮೈತ್ರಿ ಸರ್ಕಾರದಲ್ಲಿ ಅವನನ್ನ ಮಿನಿಸ್ಟರ್ ಮಾಡಲಿಲ್ಲ. ಮಾಡಿದ್ದಿದ್ದರೆ ಇನ್ನಷ್ಟು ಹೇಳುತ್ತಿದ್ದರು. ಫಾರೂಕ್ ಸಚಿವ ಸ್ಥಾನ ಕೇಳುತ್ತಿದ್ದರು. ಅಪ್ಪ-ಮಗ ಮಾಡಲೇ ಇಲ್ಲ. ಕುಮಾರಸ್ವಾಮಿ ಕುರಿತು ನಾನು ರಿಯಾಕ್ಟ್ ಮಾಡಲ್ಲ. ಸುಳ್ಳು ಹೇಳುವವರಿಗೆಲ್ಲ ನಾನು ಮಾತನಾಡಲ್ಲ ಎಂದರು.

ಸದನದಲ್ಲಿ ಬಿಟ್​ಕಾಯಿನ್ ಪ್ರಸ್ತಾಪ: ಛಲವಾದಿಗೆ ನಾನೇ ಚೇರ್ಮನ್ ಮಾಡಿದ್ದು. ಖರ್ಗೆಯವರು ಹೇಳಿ ಮಾಡಿಸಿದ್ರು. ಅಸೆಂಬ್ಲಿಯಲ್ಲಿ ಬಿಟ್ ಕಾಯಿನ್ ಬಗ್ಗೆ ಮಾತನಾಡ್ತೇನೆ. ಅಲ್ಲೇ ಇದರ ವಿಚಾರ ಪ್ರಸ್ತಾಪಿಸ್ತೇನೆ. ಬೆಳಗಾವಿಯಲ್ಲಿ ಅಧಿವೇಶನ ಕರೆಯಬೇಕು. ಚುನಾವಣೆಗೆ ಒಂದೂಕಾಲು ವರ್ಷವಿದೆ. ರಾಜ್ಯ ಪ್ರವಾಸ ಮಾಡಬೇಕು, ಮಾಡ್ತೇನೆ ಎಂದು ವಿವರಿಸಿದರು.

ಇದನ್ನೂ ಓದಿ: ರಾಯಚೂರಿನಲ್ಲಿ ಪ್ರತಿಭಟನೆ ವೇಳೆ ಮಾಜಿ ಶಾಸಕರಿಂದ ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.