ಮಹದೇವಪುರ/ಬೆಂಗಳೂರು: ಕ್ಷೇತ್ರದ ದೊಡ್ಡನೆಕ್ಕುಂದಿ ವಾರ್ಡ್ನ ಎ.ಕೆ. ಕಾಲೋನಿ ಹಾಗೂ ದೊಡ್ಡನೆಕ್ಕುಂದಿ ಗ್ರಾಮದ ರಾಮ ಮಂದಿರ ಬಳಿ ಕಟ್ಟಡ ಕಾರ್ಮಿಕರು ಹಾಗೂ ಬಡವರಿಗೆ ದಿನಸಿ ಸಾಮಾಗ್ರಿಗಳ ಕಿಟ್ಗಳನ್ನು ಶಾಸಕ ಅರವಿಂದ ಲಿಂಬಾವಳಿ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಕೋವಿಡ್-19 ಕುರಿತು ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದ್ದು, ನಾಗರಿಕರು ಮನೆಯಲ್ಲೇ ಇದ್ದು ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದರು. ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ದೊಡ್ಡನೆಕ್ಕುಂದಿ ಗ್ರಾಮದ ಮುಖಂಡ ಶ್ರೀಧರ್ ರೆಡ್ಡಿ ನೇತೃತ್ವದಲ್ಲಿ ಶಾಸಕ ಅರವಿಂದ್ ಲಿಂಬಾವಳಿ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ದಿನಸಿ ವಸ್ತುಗಳು, ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ಸಂಘ ಸಂಸ್ಥೆಗಳು ಹಾಗೂ ಆರ್ಥಿಕವಾಗಿ ಸಬಲರಾಗಿರುವವರು ಸಂಕಷ್ಟ ಸಮಯದಲ್ಲಿ ಬಡವರ ನೆರವಿಗೆ ಮುಂದೆ ಬಂದು ಸಹಾಯ ಮಾಡಬೇಕೆಂದು ಮನವಿ ಮಾಡಿದರು.