ETV Bharat / city

ವಿಧಾನ ಪರಿಷತ್‌ನಲ್ಲಿ ಕರ್ನಾಟಕ ಧನ ವಿನಿಯೋಗ ವಿಧೇಯಕ ಅಂಗೀಕಾರ

author img

By

Published : Dec 10, 2020, 5:21 PM IST

Updated : Dec 10, 2020, 5:28 PM IST

ಸಾಲ ಮಾಡಿ ಸರ್ಕಾರ ನಡೆಸುವ ಸ್ಥಿತಿ ಎದುರಾಗಿದೆ. ಇದು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಎಲ್ಲಾ ರಾಜ್ಯಗಳೂ ಸಾಲ ಮಾಡಬೇಕಾದ ಸ್ಥಿತಿಯಲ್ಲಿಯೇ ಇವೆ. ಕೇಂದ್ರದಿಂದ ಜಿಎಸ್​ಟಿ ಪಾಲು ಬಂದಿಲ್ಲ, 3 ಸಾವಿರ ಕೋಟಿ ರೂ. ಕೊರತೆ ಎದುರಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವರಣೆ ನೀಡಿದರು.

ಬೊಮ್ಮಾಯಿ
ಬೊಮ್ಮಾಯಿ

ಬೆಂಗಳೂರು: ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 3,320.40 ಕೋಟಿ ರೂ.ಗಳ ಕರ್ನಾಟಕ ಧನವಿನಿಯೋಗ (ಸಂಖ್ಯೆ 4)ವಿಧೇಯಕ 2020ಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.

4ನೇ ದಿನದ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಧನವಿನಿಯೋಗ ವಿಧೇಯಕ ಮಂಡಿಸಿದರು. ನಂತರ ವಿಧೇಯಕ ಕುರಿತು ಮಾತನಾಡಿದ ಗೃಹ ಸಚಿವರು, 3,220 ಕೋಟಿ ರೂ. ಮೊತ್ತದ ಧನವಿನಿಯೋಗದಲ್ಲಿ 110 ಕೋಟಿ ರೂ. ರೆವೆನ್ಯೂ ಕ್ಯಾಪಿಟಲ್, 2210 ಎಕ್ಸ್​ಪೆಂಡಿಚರ್ ಕ್ಯಾಪಿಟಲ್​ಗೆ ವಿನಿಯೋಗ ಆಗಲಿದೆ. ಧನವಿನಿಯೋಗದ ಮೂರನೇ ಎರಡು ಭಾಗ ಎಕ್ಸ್​ಪೆಂಡಿಚರ್ ಕ್ಯಾಪಿಟಲ್​ಗೆ ಬಳಕೆಯಾಗಲಿದೆ ಎಂದರು.

ಸಾಲ ಮಾಡಿ ಸರ್ಕಾರ ನಡೆಸುವ ಸ್ಥಿತಿ ಎದುರಾಗಿದೆ, ಇದು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಎಲ್ಲಾ ರಾಜ್ಯಗಳೂ ಸಾಲ ಮಾಡಬೇಕಾದ ಸ್ಥಿತಿಯಲ್ಲಿಯೇ ಇವೆ. ಕೇಂದ್ರದಿಂದ ಜಿಎಸ್​ಟಿ ಪಾಲು ಬಂದಿಲ್ಲ, 3 ಸಾವಿರ ಕೋಟಿ ರೂ. ಕೊರತೆ ಎದುರಾಗಿದೆ ಎಂದು ವಿವರಣೆ ನೀಡಿದರು.

ವಿಧೇಯಕದ‌ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್‌. ಪಾಟೀಲ್, ಸರ್ಕಾರದಲ್ಲಿ ಹಣ ಇಲ್ಲ, ನಿಗಮ ಮಂಡಳಿ ನೇಮಕ ಮಾಡಿದ್ದೀರಿ, ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡೋಕೂ ಆಗಲ್ಲ, ನೋಟ್ ಬ್ಯಾನ್, ಜಿಎಸ್​ಟಿ, ಪ್ರವಾಹಗಳ ಜೊತೆಗೆ ಕೇಂದ್ರ ಸರ್ಕಾರದ ಅನುದಾನ ಕೂಡ ರಾಜ್ಯಕ್ಕೆ ಸರಿಯಾಗಿ ಬಿಡುಗಡೆ ಆಗಿಲ್ಲ. ಅಬಕಾರಿ ತೆರಿಗೆ ಹೊರತು ಪಡಿಸಿ, ವಾಣಿಜ್ಯ, ಮೋಟಾರು ವಾಹನ, ಮುದ್ರಾಂಕ ತೆರೆಗೆಗಳೂ ಕಡಿಮೆ ಆಗಿವೆ. ರಾಜಸ್ವ ಸ್ವೀಕೃತಿ ಪ್ರಮಾಣ ಕೂಡ ಕಡಿಮೆ ಆಗಿದೆ. 18,847 ಕೋಟಿ ರೂ. ಜಿಎಸ್​ಟಿ ಹಣ ಬಾಕಿಯಿದೆ. ಈವರೆಗೂ ಬಿಡುಗಡೆ ಆಗಿಲ್ಲ ಎಂದು ಟೀಕಿಸಿದರು.

ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಗೃಹ ಸಚಿವರು, ರಾಜ್ಯದಲ್ಲಿ ಹಣಕಾಸು ಕೊರತೆ ಎದುರಾಗಿದ್ದರೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸುವುದಿಲ್ಲ. ಶಾಲಾ ಕಾಲೇಜು ಆರಂಭವಾದ ನಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪಿಎಚ್​ಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಕೊಡಲಾಗುತ್ತದೆ ಎಂದರು.

ವಾಣಿಜ್ಯ ತೆರಿಗೆ, ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗುತ್ತಿದೆ ಹಾಗಾಗಿ ಸರ್ಕಾರ ನೌಕರರ ವೇತನ ಕಡಿತದಂತಹ ಪ್ರಯತ್ನಕ್ಕೆ ಮುಂದಾಗುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ತಮಿಳುನಾಡಿನಲ್ಲಿ ಶಿಕ್ಷಕರ ನೇಮಕಾತಿಗೆ ಹೊಸ ನಿಯಮ ಇದೆ ಅದೇ ರೀತಿಯಲ್ಲಿ ರಾಜ್ಯದಲ್ಲೂ ಶಿಕ್ಷಕರ ನೇಮಕಕ್ಕೆ ಚಿಂತನೆ ನಡೆಸುತ್ತಿದ್ದೇವೆ, ಆಯಾ ವರ್ಷದಲ್ಲಿ ನಿವೃತ್ತಿಯಾಗುವಷ್ಟು ಶಿಕ್ಷಕರನ್ನು ಆಯಾ ವರ್ಷದಲ್ಲೇ ನೇಮಕ ಮಾಡಲಾಗುತ್ತದೆ ಎಂದರು.

ಪರಿಷತ್ ಸದಸ್ಯರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿದಿ ಬಾಕಿ ಇದೆ, ಐದು ಕೋಟಿ ರೂ. ಹಣದಲ್ಲಿ ಸದ್ಯ 2 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿ, ಧನವನಿಯೋಗ ವಿಧೇಯಕಕ್ಕೆ ಅನುಮತಿ ನೀಡುವಂತೆ ಸದನಕ್ಕೆ ಮನವಿ ಮಾಡಿದರು.

ನಂತರ ಕರ್ನಾಟಕ ಧನ ವಿನಿಯೋಗ (ಸಂಖ್ಯೆ 4) ವಿಧೇಯಕ 2020ನ್ನು ಮತಕ್ಕೆ ಹಾಕಲಾಯಿತು. ಧ್ವನಿ ಮತದ ಮೂಲಕ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.

Last Updated : Dec 10, 2020, 5:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.