ETV Bharat / city

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ಮೂಲ ಉದ್ದೇಶಕ್ಕೆ ಧಕ್ಕೆ: ಶಾಸಕ ರಘುಪತಿ ಭಟ್

author img

By

Published : Dec 19, 2021, 7:54 PM IST

ನಿಜವಾದ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಬ್ಯಾಡ್ಮಿಂಟನ್ ಕ್ಲಬ್ ಉಪಯೋಗವಾಗದೇ ಬೇರೆಯವರು ಇದರ ಸದಸ್ಯತ್ವ ಹೊಂದಿ ಇದರ ಮೂಲ ಉದ್ದೇಶಕ್ಕೆ ಧಕ್ಕೆಯಾಗುವ ಕಾರ್ಯ ನಡೆಯುತ್ತಿದೆ. ರಾಜ್ಯ ಸರ್ಕಾರ ಲೀಸ್ ಆಧಾರದ ಮೇಲೆ ಬೆಂಗಳೂರಿನಲ್ಲಿ ಆಯಕಟ್ಟಿನ ಜಾಗದಲ್ಲಿ ಭೂಮಿಯನ್ನು 100 ರೂಪಾಯಿಗಳಿಗೆ ಗುತ್ತಿಗೆ ದರವನ್ನು ನಿಗದಿ ಪಡಿಸಿ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ..

Karnataka Badminton Association damaging to original purpose: MLA Raghupathi Bhat
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ಮೂಲ ಉದ್ದೇಶಕ್ಕೆ ಧಕ್ಕೆ: ಶಾಸಕ ರಘುಪತಿ ಭಟ್

ಬೆಂಗಳೂರು : ನಿಜವಾದ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಬ್ಯಾಡ್ಮಿಂಟನ್ ಕ್ಲಬ್ ಉಪಯೋಗವಾಗದೇ ಬೇರೆಯವರು ಇದರ ಸದಸ್ಯತ್ವ ಹೊಂದಿದ್ದಾರೆ. ಇದರಿಂದ ಇದರ ಮೂಲ ಉದ್ದೇಶಕ್ಕೆ ಧಕ್ಕೆಯಾಗುವ ಕಾರ್ಯ ನಡೆಯುತ್ತಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್‌ ಇಂಡಿಯಾದ ಬೈಲಾ ಹಾಗೂ ಕೇಂದ್ರ ಸರ್ಕಾರದ ಕ್ರೀಡಾ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್‌ ಇಂಡಿಯಾ ಬೈಲಾ ಪ್ರಕಾರ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಡೆದುಕೊಳ್ಳಬೇಕು. ಆದರೆ, ಅದರ ಬೈಲಾಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆಯ ಮಾರ್ಗ ಸೂಚಿಗಳ ಪ್ರಕಾರ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಗೆ ಅಫೀಲಿಯೆಟೆಡ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸದಸ್ಯರು ಮಾತ್ರ ಮತ ಚಲಾಯಿಸುವ ಅಧಿಕಾರ ಇರುತ್ತದೆ.

ಆದರೆ, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ತನ್ನ ಬೈಲಾವನ್ನು ತಿದ್ದುಪಡಿ ಮಾಡಿಕೊಂಡು 10 ಅಜೀವ ಸದಸ್ಯರು ಹಾಗೂ 9 ಸದಸ್ಯರು ಜಿಲ್ಲಾ ಅಸೋಸಿಯೇಷನ್‌ನಿಂದ ಆಯ್ಕೆ ಮಾಡುವಂತೆ ತಿದ್ದುಪಡಿ ಮಾಡಿಕೊಂಡಿದೆ. ಅಸೋಸಿಯೇಷನ್ ಸದಸ್ಯರನ್ನು ಮತದಾರರನ್ನಾಗಿ ನೇಮಕ ಮಾಡಿಕೊಂಡಿರುವುದು ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ದೂರಿದರು.

'ಅಸೋಸಿಯೇಷನ್ ನಡೆಯಿಂದ ಕ್ರೀಡೆಗೆ ಹಿನ್ನಡೆ'

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ರಾಜ್ಯ ಸರ್ಕಾರದಿಂದ ಕನಿಷ್ಠ ದರದಲ್ಲಿ ಗರಿಷ್ಠ 99 ವರ್ಷಗಳಿಗೆ ಭೂಮಿಯನ್ನು ಲೀಸ್ ಪಡೆದಿದ್ದರಿಂದ ಸರ್ಕಾರದ ತತ್ಸಂಬಂಧಿತ ಮಾರ್ಗಸೂಚಿ ನಿಯಮಗಳಿಗೆ ಬದ್ಧವಾಗಿ ಇರಬೇಕಾಗುತ್ತದೆ. ಆದರೆ, ಬ್ಯಾಡ್ಮಿಂಟನ್ ಅಸೋಸಿಯೇಷನ್ ಕೇಂದ್ರ ಸರ್ಕಾರದ ಕ್ರೀಡಾಭಿವೃದ್ಧಿ ಸಂಹಿತೆಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಬೈಲಾವನ್ನು ಪರಿಷ್ಕರಣೆ ಮಾಡಿದೆ. ಈ ರೀತಿಯ ನಡತೆಯಿಂದ ಜಿಲ್ಲೆಗಳ ಪ್ರಾತಿನಿದ್ಯತೆಗೆ ಕೊರತೆ ಉಂಟಾಗುವುದರ ಜೊತೆಗೆ ಕ್ರೀಡೆಗೆ ಹಿನ್ನಡೆ ಉಂಟಾಗಲಿದೆ ಎಂದು ಆರೋಪಿಸಿದರು.

ನಿಜವಾದ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಬ್ಯಾಡ್ಮಿಂಟನ್ ಕ್ಲಬ್ ಉಪಯೋಗವಾಗದೇ ಬೇರೆಯವರು ಇದರ ಸದಸ್ಯತ್ವ ಹೊಂದಿ ಇದರ ಮೂಲ ಉದ್ದೇಶಕ್ಕೆ ಧಕ್ಕೆಯಾಗುವ ಕಾರ್ಯ ನಡೆಯುತ್ತಿದೆ. ರಾಜ್ಯ ಸರ್ಕಾರ ಲೀಸ್ ಆಧಾರದ ಮೇಲೆ ಬೆಂಗಳೂರಿನಲ್ಲಿ ಆಯಕಟ್ಟಿನ ಜಾಗದಲ್ಲಿ ಭೂಮಿಯನ್ನು 100 ರೂಪಾಯಿಗಳಿಗೆ ಗುತ್ತಿಗೆ ದರವನ್ನು ನಿಗದಿ ಪಡಿಸಿ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ.

ಆದರೆ, ಮೂಲ ನಿಯಮಗಳನ್ನು ಉಲಂಘಿಸಿ ಕ್ಲಬ್ ನಡೆಯುತ್ತಿದೆ. ಇದನ್ನು ತಪ್ಪಿಸಿ ಜಿಲ್ಲಾ ಕ್ಲಬ್‌ಗಳಿಗೆ ಅನುಕೂಲವಾಗುವಂತೆ ಮಾಡಬೇಕು. ಈ ಕುರಿತಂತೆ ಸದನದಲ್ಲಿ ಪ್ರಸ್ತಾಪಿಸಲಾಗಿದೆ. ನಾಳೆ ಸದನದಲ್ಲಿ ಉತ್ತರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಇನ್ನೊಬ್ಬರ ಹಣ, ಆಸ್ತಿ ಲೂಟಿ ಮಾಡಿ ಜೈಲಿಗೆ ಹೋಗಿಲ್ಲ: ಡಿಕೆಶಿ ವಿರುದ್ಧ ಸಿಟಿ ರವಿ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.