ETV Bharat / city

ರಾಜೀನಾಮೆ ಪತ್ರ ಅಂಗೀಕಾರ ವಿಚಾರ: ಕೆಎಸ್​ಪಿಸಿಬಿ ಮಾಜಿ ಅಧ್ಯಕ್ಷರ ರಿಟ್​​ ಅರ್ಜಿ ವಜಾ

author img

By

Published : Jul 19, 2020, 12:35 AM IST

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಕೆಎಸ್​ಪಿಸಿಬಿ ಮಾಜಿ ಅಧ್ಯಕ್ಷ ಡಾ. ಸುಧೀಂದ್ರರಾವ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

high-court-dismisses-writ-petition-filed-by-sudheendra-rao
ಹೈಕೋರ್ಟ್

ಬೆಂಗಳೂರು : ತಮ್ಮ ಸಹಿಯನ್ನ ನಕಲು ಮಾಡಿ ಬರೆದಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಕೆಎಸ್​ಪಿಸಿಬಿ ಮಾಜಿ ಅಧ್ಯಕ್ಷ ಡಾ. ಸುಧೀಂದ್ರರಾವ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.

ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡಿರುವ ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಸುಧೀಂದ್ರರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಶುಕ್ರವಾರ ಪ್ರಕಟಿಸಿದೆ. ಅರ್ಜಿದಾರರ ಸಹಿಯನ್ನು ನಕಲು ಮಾಡಲಾಗಿದೆ ಎಂಬುದರ ಕುರಿತು ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇನ್ನು ರಾಜೀನಾಮೆ ಅಂಗೀಕರಿಸಿರುವ ಪ್ರಕ್ರಿಯೆಯೂ ಸರಿಯಾಗಿದೆ. ಹೀಗಾಗಿ ಅರ್ಜಿದಾರರ ಕೋರಿಕೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ತೀರ್ಪು ನೀಡಿದೆ.

ಅರ್ಜಿ ವಿಚಾರಣೆ ವೇಳೆ ಸುಧೀಂದ್ರರಾವ್ ಪರ ವಾದಿಸಿದ್ದ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ್, ಅರ್ಜಿದಾರರ ಸಹಿಗಳು ಇದ್ದಂತಹ ಖಾಲಿ ಪೇಪರ್​ಗಳನ್ನು ತೋರಿಸಿ, ತಮ್ಮ ಕಕ್ಷೀದಾರರು ಯಾವುದೇ ರಾಜೀನಾಮೆ ನೀಡಿಲ್ಲ. ಬದಲಿಗೆ ನಕಲಿ ಸಹಿ ಮಾಡಿ ರಾಜೀನಾಮೆ ಪತ್ರ ಬರೆಯಲಾಗಿದೆ. ಅದನ್ನೇ ಸರ್ಕಾರ ರಾಜೀನಾಮೆಯಂತೆ ಪರಿಗಣಿಸಿ ಹುದ್ದೆಯಿಂದ ಬಿಡುಗಡೆ ಮಾಡಿದೆ.

ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ-1974 ರ ಸೆಕ್ಷನ್ 5(4)ರ ಪ್ರಕಾರ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಕೊಡಬೇಕಿತ್ತು. ಆದರೆ, ಪತ್ರದಲ್ಲಿ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರ ಹೆಸರಿಗೆ ರಾಜೀನಾಮೆ ಕೊಡಲಾಗಿದೆ. ಇದು ಕೂಡ ನಿಯಮ ಬಾಹಿರ. ಆದ್ದರಿಂದ ಮೇ 2ರಂದು ಹುದ್ದೆಯಿಂದ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಸರ್ಕಾರದ ಪರ ವಾದಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ನಕಲಿ ಸಹಿ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮಾಡಿ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಅರ್ಜಿದಾರರೇ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿದ್ದರೂ ತಮ್ಮ ಅನುಕೂಲಕ್ಕಾಗಿ ಸಹಿಯನ್ನೇ ಮಾಡಿಲ್ಲ ಎನ್ನುತ್ತಾರೆ. ಇದೇ ವೇಳೆ ತಮ್ಮ ರಾಜೀನಾಮೆ ಪತ್ರವನ್ನು ಅಂಗೀಕರಿಸಿರುವ ಪ್ರಕ್ರಿಯೆಯೇ ಸರಿಯಿಲ್ಲ ಎನ್ನುತ್ತಾರೆ. ಇವೆಲ್ಲವೂ ಆಧಾರ ರಹಿತವಾಗಿದ್ದು ಅರ್ಜಿದಾರರಿಗೆ ದಂಡ ವಿಧಿಸಿ, ಅರ್ಜಿ ವಜಾ ಮಾಡಬೇಕು ಎಂದು ಕೋರಿದ್ದರು.

ಇನ್ನು ಕೆಎಸ್ ಪಿಸಿಬಿ ಪರ ವಾದಿಸಿದ್ದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ರಾಜೀನಾಮೆ ಪತ್ರದಲ್ಲಿರುವ ಸಹಿ ತಮ್ಮದಲ್ಲ ಎಂದು ವಾದಿಸುತ್ತಿರುವ ಅರ್ಜಿದಾರ ಅನಕ್ಷರಸ್ಥ ಅಲ್ಲ. ಅನಕ್ಷರಸ್ಥರು ಹೀಗೆ ವಾದಿಸುತ್ತಾರೆ. ಜಲಮಾಲಿನ್ಯ ನಿಯಂತ್ರಣ ಕಾಯ್ದೆ ಸೆಕ್ಷನ್ 5(4)ರ ಪ್ರಕಾರವೂ ಮುಖ್ಯಮಂತ್ರಿಗಳ ಹೆಸರಿಗೆ ರಾಜೀನಾಮೆ ನೀಡಿರುವ ಮತ್ತು ಅದನ್ನು ಅಂಗೀಕರಿಸಿರುವ ಕ್ರಮ ಸರಿಯಾಗಿದೆ. ಸಂವಿಧಾನದ ಪ್ರಕಾರ ಮುಖ್ಯ ಮಂತ್ರಿಗಳು ಕೂಡ ಸರ್ಕಾರದ ಮುಖ್ಯ ಕಾರ್ಯ ನಿರ್ವಾಹಕರು. ಸುಪ್ರೀಂ ಕೋರ್ಟ್ ಹಿಂದಿನ ಆದೇಶಗಳ ಪ್ರಕಾರವೂ ರಾಜೀನಾಮೆ ಅಂಗೀಕರಿಸಿರುವ ಕ್ರಮ ಸರಿಯಾಗಿದೆ ಎಂದು ವಾದಿಸಿದ್ದರು.

ವಾದ ಪುರಸ್ಕರಿಸಿರುವ ಪೀಠ, ಅರ್ಜಿದಾರರ ಕೋರಿಕೆಯನ್ನು ಯಾವ ಮಾನದಂಡಗಳ ಆಧಾರದಲ್ಲೂ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ವಜಾಗೊಳಿಸಿ ಆದೇಶಿಸಿದೆ. ಇನ್ನು ಅರ್ಜಿದಾರರು ನಕಲಿ ಸಹಿ ಕುರಿತು ಕೆಲ ವಕೀಲರ ವಿರುದ್ಧ ಆರೋಪ ಮಾಡಿದ್ದಾರೆ. ಈ ವಿಚಾರದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸುವುದಿಲ್ಲ, ರಾಜ್ಯ ವಕೀಲರ ಪರಿಷತ್ತು ಈ ಕುರಿತು ನಿರ್ಣಯಿಸಬಹುದು ಎಂದು ಸ್ಪಷ್ಟಪಡಿಸಿದೆ. ಇನ್ನು ನಕಲಿ ಸಹಿ ಕುರಿತು ಬಿ ರಿಪೋರ್ಟ್ ಹಾಕಿರುವ ಪೊಲೀಸರ ಕ್ರಮದ ಬಗ್ಗೆ ಕ್ರಿಮಿನಲ್ ಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಈ ಆದೇಶ ಅಡ್ಡಿಯಲ್ಲ ಎಂದು ಕೂಡ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಗೆ ಡಾ. ಎಂ. ಸುಧೀಂದ್ರರಾವ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಕಳೆದ 2019ರ ಡಿಸೆಂಬರ್ 30ರಂದು ಆದೇಶಿಸಿತ್ತು. ಆದರೆ, ಈ ವೇಳೆ ಸುಧೀಂದ್ರ ರಾವ್ ತಾಂತ್ರಿಕ ಅರ್ಹತೆ ಹೊಂದಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಜತೆಗೆ ಮಾರ್ಗಸೂಚಿಗಳಿಲ್ಲದೇ ಅಧ್ಯಕ್ಷರನ್ನು ನೇಮಕ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ವಕೀಲ ಎಸ್. ಉಮಾಪತಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಮೇ 2ರಂದು ಸುಧೀಂದ್ರರಾವ್ ಸಿಎಂಗೆ ರಾಜೀನಾಮೆ ಪತ್ರ ಬರೆದು, ಸರ್ಕಾರ ಅದನ್ನು ಅಂಗೀಕರಿಸಿ, ಹುದ್ದೆಯಿಂದ ಬಿಡುಗಡೆ ಮಾಡಿತ್ತು. ಕೆಲ ದಿನಗಳ ನಂತರ ತಮ್ಮ ಸಹಿಯನ್ನು ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದ ರಾವ್ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಸಹಿ ನಕಲು ಮಾಡಿದ್ದಾರೆನ್ನಲಾದ ಆರೋಪ ಸುಳ್ಳು ಎಂದು ಪೊಲೀಸರು ಬಿ ರಿಪೋರ್ಟ್ ಹಾಕಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.