ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ದ್ವಿಪತ್ನಿತ್ವದ ಕುರಿತು ಬಿಜೆಪಿಯ ಟ್ವೀಟ್ ಬಗ್ಗೆ ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ಅವರು ಆರ್ಎಸ್ಎಸ್(RSS) ಬಗ್ಗೆ ಟೀಕೆ ಮಾಡೋದು ಸರಿನಾ.?. ಹೀಗಾಗಿ ನಾವು ಈ ರೀತಿ ಪ್ರತಿಕ್ರಿಯೆ ನೀಡಿದ್ದೇವೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ರಾಜ್ಯ ಬಿಜೆಪಿ ಟ್ವಿಟ್ಟರ್ನಲ್ಲಿ ವೈಯಕ್ತಿಕ ಮಟ್ಟದ ವಾಗ್ದಾಳಿ ನಡೆಸಿದೆ. ಸಿಗ್ನಲ್ ಜಂಪ್, ವಿಶ್ವಾಸ ದ್ರೋಹ ( ಬ್ರೀಚ್ ಆಫ್ ಟ್ರಸ್ಟ್ ), ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ (ದ್ವಿ ಪತ್ನಿತ್ವ) ವಿಚಾರವಾಗಿ ಬಿಜೆಪಿ ಟೀಕೆ ಮಾಡಿದ್ದು 'ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ ಕುಮಾರಸ್ವಾಮಿ ಅವರೇ ಇದೆಲ್ಲದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕಲ್ಲವೇ? ಎಂದು ಟೀಕಿಸಿತ್ತು.
ಯಾರು ಟ್ವೀಟ್ ಮಾಡಿಸಿದ್ದಾರೆ ಎಂದು ಗೊತ್ತಿಲ್ಲ:
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್, ಹೆಚ್ಡಿಕೆ ಸ್ವಲ್ಪ ಯೋಚನೆ ಮಾಡಬೇಕು. ನಾನು ಟೀಕೆ ಮಾಡಿದ್ರೆ, ಯಾವ ರೀತಿ ಪ್ರತಿಯಾಗಿ ಟೀಕೆ ವ್ಯಕ್ತವಾಗುತ್ತದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಅದರ ಆಧಾರದ ಮೇಲೆ ಅವರು ಟೀಕೆ ಮಾಡಬೇಕು. ಆದರೆ ಯಾರೇ ಆಗಲಿ ಸಭ್ಯತೆಯಿಂದ ಟ್ವೀಟ್ ಮಾಡಬೇಕು. ಈ ಬಗ್ಗೆ ನಮ್ಮಲ್ಲಿ ಯಾರು ಟ್ವೀಟ್ ಮಾಡಿಸಿದ್ದಾರೆ ಅನ್ನೋದು ಗೊತ್ತಿಲ್ಲ. ಇದನ್ನು ನೋಡಿ ಆ ನಂತರ ನಾವು ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.
ಹೆಚ್ಡಿಕೆ ಕ್ಷಮೆ ಕೇಳಲಿ
ಸಿಂದಗಿ, ಹಾನಗಲ್ನಲ್ಲಿ ಜೆಡಿಎಸ್ಗೆ ಜನ ಛೀಮಾರಿ ಹಾಕ್ತಾರೆ. ಜನರಿಗೂ ಜೆಡಿಎಸ್ ಬಂಡವಾಳ ಬಂಡವಾಳ ಗೊತ್ತಿದೆ. ಸಿದ್ದರಾಮಯ್ಯ, ಹೆಚ್ಡಿಕೆ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಎಂದು ಅವರವರ ಪಕ್ಷದ ಕಾರ್ಯಕರ್ತರಿಗೂ ಗೊತ್ತಿದೆ. ಸಾಧನೆಗಳನ್ನು ಹೇಳಿಕೊಂಡು ಮತ ಕೇಳಿ. ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳ್ಕೊಂಡಿದ್ದಾರೆ. ಆರ್ಎಸ್ಎಸ್ ಬಗ್ಗೆ ಹೇಳಿಕೆ ಕೊಟ್ಟಿದ್ದಕ್ಕೆ ಹೆಚ್ಡಿಕೆ ಕ್ಷಮೆ ಕೇಳಲಿ. ಅವರು ತಮ್ಮ ಹೇಳಿಕೆ ವಾಪಸ್ ಪಡೆಯಲಿ ಎಂದು ಅಶ್ವಥ್ ನಾರಾಯಣ್ ಒತ್ತಾಯಿಸಿದರು.
ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಮಾತನಾಡಿ, ಇದ್ದಿದ್ದನ್ನು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದ ಹಾಗಾಗಿದೆ ಕಾಂಗ್ರೆಸ್ನ ಕತೆ. 2016 ರಲ್ಲಿ ನಡೆದ ಘಟನೆ ಬಗ್ಗೆ ವರದಿಯಾಗಿತ್ತು. ಅದರ ಬಗ್ಗೆ ಕಟೀಲ್ ಅವರು ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಬಿಜೆಪಿಯ ಹಿರಿಯ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಖಾಸಗಿ ಚಾನಲ್ ನಲ್ಲಿ ರಾಹುಲ್ ಗಾಂಧಿಯವರ ಮಾದಕ ವಸ್ತುಗಳ ಬಳಕೆ ಬಗ್ಗೆ ಪ್ರಸ್ತಾಪ ಮಾಡಿದ್ರು ಎಂದರು.
ಸುಬ್ರಹ್ಮಣ್ಯಂ ಸ್ವಾಮಿಯವರ ಹೇಳಿಕೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ವರದಿಗಳ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರು ಮಂಗಳವಾರ ಭಾಷಣದಲ್ಲಿ ಉಲ್ಲೇಖಿಸಿದ್ರು. ಕಟೀಲ್ ಅವರ ಹೇಳಿಕೆಗೆ ಅನಗತ್ಯ ವಿರೋಧ ಮಾಡುತ್ತಿದ್ದಾರೆ. ಖುದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರೇ ಕಟೀಲ್ ಹೇಳಿಕೆಗೆ ವಿರೋಧ ಮಾಡಿಲ್ಲ. ಅಲ್ಲಿಗೆ ಆ ಆರೋಪ ನಿಜ ಅನ್ಸುತ್ತೆ ಅಲ್ವಾ.? ಎಂದು ಪ್ರಶ್ನಿಸಿದರು.
2001 ರಲ್ಲಿ 1.60 ಲಕ್ಷ ಡಾಲರ್ ಮೌಲ್ಯದ ಡ್ರಗ್ಸ್ ರಾಹುಲ್ ಗಾಂಧಿ ಬಳಿ ಪತ್ತೆ ಆಗಿತ್ತು. ಇದರ ಬಗ್ಗೆ ಇಲ್ಲ ಅಂತ ಯಾರೂ ಹೇಳಿಲ್ಲ. ಕಟೀಲ್ ಹೇಳಿಕೆ ಸುಳ್ಳು ಅಂತ ಯಾರೂ ಹೇಳಿಲ್ಲ. ಕಾಂಗ್ರೆಸ್ ನವರು ಅನಗತ್ಯ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಾರ್ಣಿಕ್ ಹೇಳಿದ್ರು.