ETV Bharat / city

ಮಣ್ಣಾಗುತ್ತಿರುವ ಬೇರೆಯವರ ಬಾಳು ಬೆಳಗಬೇಕಿದ್ದ ಕಣ್ಣುಗಳು!

author img

By

Published : Sep 11, 2020, 7:50 PM IST

ಈ ಮೊದಲು ನಿತ್ಯ ಕಣ್ಣಿಗೆ ಸಂಬಂಧಿತ ಹಲವು ಶಸ್ತ್ರಚಿಕಿತ್ಸೆಗಳು ಹಾಗೂ ನೇತ್ರದಾನ ನೋಂದಣಿಗಳು ನಡೆಯುತ್ತಿದ್ದವು. ಆದರೆ ಕೊರೊನಾದಿಂದ ಕಾರ್ನಿಯಾ ಕಸಿಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದು, ಇದಕ್ಕೆ ಕೋವಿಡ್ ಮಾರ್ಗಸೂಚಿಗಳೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

Corneal transplant delayed due to the lockdown
ಕಾರ್ನಿಯಾ

ಬೆಂಗಳೂರು: ಕೊರೊನಾದಿಂದ ಮನುಷ್ಯ ಕಂಡು ಕೇಳರಿಯದ ಸ್ಥಿತಿಗೆ ತಲುಪಿದ್ದಾನೆ. ಈ ಪುಟ್ಟ ಅಣು ಮಾಡಿದ ಪರಿಣಾಮ ಒಂದೆರೆಡಲ್ಲ. ಕಣ್ಣುಗಳ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳಿಗೆ ಅಡಚಣೆಯನ್ನುಂಟು ಮಾಡಿದ್ದು, ಕಾರ್ನಿಯಾ ಕಸಿಯಲ್ಲಿ ಗಣನೀಯ ಇಳಿಕೆಯಾಗಿದೆ.

ಜಗತ್ತನ್ನು ತಲ್ಲಣಗೊಳಿಸಿರುವ ಕೊರೊನಾ, ನೇತ್ರ ಶಸ್ತ್ರಚಿಕಿತ್ಸೆಯ ಮೇಲೂ‌ ಕೆಂಗಣ್ಣು ಬೀರಿದೆ. ಈ ಮೊದಲು ನಿತ್ಯ ಕಣ್ಣಿಗೆ ಸಂಬಂಧಿತ ಹಲವು ಶಸ್ತ್ರಚಿಕಿತ್ಸೆಗಳು ಹಾಗೂ ನೇತ್ರದಾನ ನೋಂದಣಿಗಳು ನಡೆಯುತ್ತಿದ್ದವು. ಆದರೆ ಕೊರೊನಾದಿಂದ ಕಾರ್ನಿಯಾ ಕಸಿಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದು, ಇದಕ್ಕೆ ಕೋವಿಡ್ ಮಾರ್ಗಸೂಚಿಗಳೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಕೊರೊನಾದಿಂದ ನೂರಾರು ಜನರ ಕಣ್ಣುಗಳು ಮಣ್ಣು ಪಾಲಾಗುತ್ತಿವೆ. ನೇತ್ರದಾನದ ನೋಂದಣಿ ಮಾಡಿದವರ ಕಣ್ಣುಗಳು ಮರಣಾನಂತರ ಜಗತ್ತನ್ನು ನೋಡುವ ಬದಲು ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿವೆ. ಕೊರೊನಾ ಸೋಂಕಿನ ಭೀತಿಯಿಂದ ನೋಂದಣಿ ಮಾಡಿಕೊಂಡ ವ್ಯಕ್ತಿ ಮೃತನಾದರೂ, ಕಣ್ಣುಗಳನ್ನು ಪಡೆಯಲು ವೈದ್ಯರು ಸಮಸ್ಯೆ ಎದುರಿಸುವಂತಾಗಿದೆ. ಸ್ವಾಭಾವಿಕವಾಗಿ ಕಾಯಿಲೆ ಅಥವಾ ಅಪಘಾತದಿಂದ ಮೃತಪಟ್ಟರೂ, ಅವರಲ್ಲಿ ಕೊರೊನಾ ಸೋಂಕು ಇರಬಹುದು ಎಂಬ ಆತಂಕ ಕಾಡುತ್ತಿದೆ.

ಯಾವುದೇ ಕಾಯಿಲೆಯಿಂದ ಮೃತಪಟ್ಟವರ ಕಾರ್ನಿಯಾ ಪಡೆಯಲು ಕೋವಿಡ್ ಪರೀಕ್ಷೆ ನಡೆಸಬೇಕು. ‌ಕೋವಿಡ್ ಇಲ್ಲ ಎಂದು ಖಚಿತವಾದ ಮೇಲೆ ಕಾರ್ನಿಯಾ ‌ಪಡೆಯಲಾಗುತ್ತಿದೆ. ಹೀಗಾಗಿ‌ ಒಂದು ಕಾರ್ನಿಯಾ ಪಡೆಯಲು ಎರಡು ದಿನ ಕಾಯಬೇಕಿದೆ. ಅದರ ಜೊತೆಗೆ ಜನರಲ್ಲಿ ಭಯದ ವಾತಾವರಣವಿದ್ದು, ಕಾರ್ನಿಯಾ ಕಸಿ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಗಣನೀಯ ‌ಇಳಿಕೆಯಾಗಿದೆ.

ಕಾರ್ನಿಯಾ ಕಸಿಯಲ್ಲಿ ಗಣನೀಯ ಇಳಿಕೆ

ಯಾವುದೇ ವ್ಯಕ್ತಿ ಮೃತಪಟ್ಟ ಆರು ಗಂಟೆಯೊಳಗೆ ಕಣ್ಣು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಬೇರೆಯವರಿಗೆ ಅಳವಡಿಸುವುದು ಕಷ್ಟ. ಈಗ ಮೃತಪಟ್ಟ ವ್ಯಕ್ತಿಯ ಕೊರೊನಾ ಪರೀಕ್ಷಾ ವರದಿ ಬರುವುದು ತಡವಾಗುತ್ತಿದ್ದು, ಸೋಂಕು‌ ತಗುಲಿದ್ದರೆ ಕಣ್ಣು ತೆಗೆಯಲು ಆಗದು. ಇದರಿಂದಾಗಿ ಕಣ್ಣು ಪಡೆದು ದೃಷ್ಟಿ ಹೀನರಿಗೆ ನೀಡಲು ಸಾಧ್ಯವಾಗುತ್ತಿಲ್ಲ.‌ ಕೆಲವರು ಗಂಭೀರ ನೇತ್ರ ಸಮಸ್ಯೆಯಿದ್ದರೂ ಆಸ್ಪತ್ರೆಗೆ ಬಂದು ಸೂಕ್ತ ಚಿಕಿತ್ಸೆ ಪಡೆಯದ ಕಾರಣ, ಕಣ್ಣು ಕಳೆದುಕೊಂಡ ಉದಾಹರಣೆ ಇವೆ ಎನ್ನುವುದು ನೇತ್ರತಜ್ಞ ಡಾ. ರವೀಂದ್ರನಾಥ್ ಮಾತು.

ಬೇರೆಯವರ ಬಾಳು ಬೆಳಗಬೇಕಿದ್ದ ಕಣ್ಣುಗಳು ಮಣ್ಣಾಗುತ್ತಿರುವುದಕ್ಕೆ ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಜನರು ಸರ್ಕಾರದ ಮಾರ್ಗಸೂಚಿ ಪಾಲಿಸಿ ಅಮೂಲ್ಯವಾದ ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.