ಬೆಂಗಳೂರು: ರಾಜ್ಯದಲ್ಲಿ ಮತದಾರರ ಒಲವು ಕಾಂಗ್ರೆಸ್ ಪರವಾಗಿದೆ. ಪರಿಷತ್ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಪರಿಷತ್ ಚುನಾವಣೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳನ್ನು ಸಶಕ್ತ ಮಾಡಿದ್ದು ಕಾಂಗ್ರೆಸ್. ಅನುದಾನ, ಸಾಮಾಜಿಕ ನ್ಯಾಯ ಕೊಟ್ಟಿದ್ದು ಕಾಂಗ್ರೆಸ್. ಬಿಜೆಪಿ ಆಗಲಿ, ಸಮ್ಮಿಶ್ರ ಸರ್ಕಾರವಾಗಲಿ ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪರ ಒಲವಿದೆ ಎಂದರು.
ರಾಜ್ಯದಲ್ಲಿ ಒಮಿಕ್ರಾನ್ ಆತಂಕ ವಿಚಾರ ಮಾತನಾಡಿ, ಒಮಿಕ್ರಾನ್ ಹರಡದಂತೆ ನೋಡಿಕೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿಯಾಗಿದೆ. ಈ ವೈರಸ್ ಅತೀ ವೇಗವಾಗಿ ಹರಡುತ್ತದೆ ಎಂದು ತಜ್ಞರು ಹೇಳ್ತಾರೆ. ಅದನ್ನು ತಡೆಯುವ ಕೆಲಸ ಸರ್ಕಾರದ ಜವಾಬ್ದಾರಿ. ಎರಡನೇ ಅಲೆಯಲ್ಲಿ ಮಾಡಿದ ಮೂರ್ಖತನ ಮಾಡಬಾರದು. ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಟಫ್ ರೂಲ್ಸ್ ಆದರೂ ಮಾಡಲಿ, ಯಾವುದೇ ರೂಲ್ಸ್ ಆದರೂ ಮಾಡಲಿ. ಹರಡದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಪರಂಪರಾಗತ ಆಹಾರ ಕ್ರಮ ಬದಲಿಸಬಾರದು : ಮೊಟ್ಟೆ ವಿತರಣೆಗೆ ಪೇಜಾವರ ಶ್ರೀಗಳ ಆಕ್ಷೇಪ
ಕ್ಷೇತ್ರ ಬಿಟ್ಟು ಕೊಡಲ್ಲ ಎಂಬ ಚಿಮ್ಮನಕಟ್ಟಿ ಹೇಳಿಕೆ ಹಿಂದೆ ಯಾರೋ ಇದ್ದಾರೆ ಎಂಬ ಸಿ ಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದ ಬಗ್ಗೆ ಮಾತನಾಡಲು ಅವರು ಯಾರು. ನಮ್ಮ ಪಕ್ಷದಲ್ಲಿ ನಾವು ಮಾತನಾಡಿಕೊಳ್ಳುತ್ತೇವೆ. ಸಿಟಿ ರವಿಗೆಲ್ಲ ಉತ್ತರ ಕೊಡಲು ಆಗುವುದಿಲ್ಲ. ನಮ್ಮ ಪಕ್ಷದಲ್ಲಿ ಚರ್ಚೆ ಮಾಡಿಕೊಂಡು ತೀರ್ಮಾನ ಮಾಡ್ತೇವೆ ಎಂದರು.
ಚಾಮರಾಜಪೇಟೆಯಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಆಗಾಗ ಚಾಮರಾಜಪೇಟೆಗೆ ಬರ್ತಾ ಇರುತ್ತೇನೆ. ಆದ್ದರಿಂದ ಆ ರೀತಿ ಹೇಳ್ತಾರೆ ಅಷ್ಟೇ. ನಾನು ಬಾದಾಮಿ ಕ್ಷೇತ್ರದ ಶಾಸಕ. ನನ್ನನ್ನು ಕೋಲಾರ, ಕೊಪ್ಪಳ, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಅರಕಲಗೂಡು, ಹುಣಸೂರಿನಿಂದ ಸ್ಪರ್ಧೆ ಮಾಡಲು ಆಹ್ವಾನಿಸಿದ್ದಾರೆ. ಎಲ್ಲಾ ಕಡೆ ನಿಲ್ಲಲು ಆಗುವುದಿಲ್ಲ. ಹೈಕಮಾಂಡ್ ಎಲ್ಲಿ ನಿಲ್ಲಿ ಅಂತಾರೆ, ಅಲ್ಲಿ ಸ್ಪರ್ಧೆ ಮಾಡ್ತೇನೆ ಎಂದರು.